Site icon Vistara News

MLC Bye Election: ಪರಿಷತ್‌ ಉಪಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ: ಕದನಕ್ಕೂ ಮುನ್ನವೇ ಕಣದಿಂದ ಹಿಂದೆ ಸರಿದ ಬಿಜೆಪಿ

Legislative Council Nomination Congress

#image_title

ಬೆಂಗಳೂರು: ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ನಡೆಯುವ ಉಪಚುನಾವಣೆಗೆ ಕಾಂಗ್ರೆಸ್‌ನ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ವಿಧಾನಪರಿಷತ್‌ ಕಾರ್ಯದರ್ಶೀಯವರಿಗೆ ಮಾಜಿ ಸಿಎಂ ಜಗದೀಶ ಶೆಟ್ಟರ್‌, ಸಚಿವ ಎನ್‌.ಎಸ್‌. ಬೋಸರಾಜು ಹಾಗೂ ತಿಪ್ಪಣ್ಣ ಕಮಕನೂರು ನಾಮಪತ್ರ ಸಲ್ಲಿಕೆ ಮಾಡಿದರು.

ನಾಮಪತ್ರ ಸಲ್ಲಿಕೆ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌, ಸಚಿವ ಕೆ.ಎಚ್‌. ಮುನಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.

ಮೂರು ವಿಧಾನ ಪರಿಷತ್‌ ಸ್ಥಾನಗಳಿಗೂ ಒಟ್ಟಿಗೆ ಚುನಾವಣೆ ನಡೆಯುತ್ತಿದೆಯಾದರೂ ಮೂರನ್ನೂ ಪ್ರತ್ಯೇಕ ಚುನಾವಣೆ ಎಂದೇ ಪರಿಗಣಿಸಲಾಗುತ್ತಿದೆ. ಆರ್‌. ಶಂಕರ್‌, ಲಕ್ಷ್ಮಣ ಸವದಿ ಹಾಗೂ ಬಾಬುರಾವ್‌ ಚಿಂಚನಸೂರು ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಚುನಾವಣೆಯು ಜೂನ್‌ 30ರಂದು ನಡೆಯಲಿದೆ. ಜಗದೀಶ ಶೆಟ್ಟರ್‌ ಅವರು ನಾಮಪತ್ರ ಸಲ್ಲಿಸಿರುವ ಸ್ಥಾನದ ಅವಧಿ 2028ರ ಜೂನ್‌ 14ರವರೆಗೂ ಇದೆ. ಎನ್‌.ಎಸ್‌. ಬೋಸರಾಜು ನಾಮಪತ್ರ ಸಲ್ಲಿಸಿರುವ ಸ್ಥಾನದ ಅವಧಿ 2024ರ ಜೂನ್‌ 17ರವರೆಗೆ ಇದೆ. ತಿಪ್ಪಣ್ಣ ಕಮಕನೂರು ನಾಮಪತ್ರ ಸಲ್ಲಿಸಿರುವ ಸ್ಥಾನದ ಅವಧಿ 2026ರ ಜೂನ್‌ 30ರವರೆಗೆ ಇದೆ.

ಕಣದಿಂದ ಹಿಂದೆ ಸರಿದ ಬಿಜೆಪಿ
ಮೂರೂ ಕ್ಷೇತ್ರಗಳಿಗೆ ಒಟ್ಟಿಗೆ ಚುನಾವಣೆ ನಡೆಯುತ್ತಿದ್ದರೂ, ವಿಧಾನಸಭೆ ಸದಸ್ಯರು ಮೂರೂ ಸ್ಥಾನಗಳಿಗೆ ಪ್ರತ್ಯೇಕವಾಗಿ ಮತ ಚಲಾವಣೆ ಮಾಡಲಿದ್ದಾರೆ. ಸರಳ ಬಹುಮತ ಹೊಂದಿರುವ ಕಾಂಗ್ರೆಸ್‌ ಪಕ್ಷಕ್ಕೇ ಮೂರೂ ಸ್ಥಾನಗಳು ಸಿಗುತ್ತವೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ಇರಲು ಬಿಜೆಪಿ ನಿರ್ಧಾರ ಮಾಡಿ ಕಣದಿಂದ ಹಿಂದೆ ಸರಿದಿದೆ.

ಇದನ್ನೂ ಓದಿ: Karnataka By Election: ವಿಧಾನ ಪರಿಷತ್‌ನ 3 ಸ್ಥಾನಗಳಿಗೆ ಜೂ.30ಕ್ಕೆ ಉಪ ಚುನಾವಣೆ

Exit mobile version