Site icon Vistara News

Security Breach in Loksabha: ಪ್ರತಾಪ್‌ ಸಿಂಹ ಕಚೇರಿಗೆ ಕಾಂಗ್ರೆಸ್‌ ಮುತ್ತಿಗೆ ಯತ್ನ, ಗಲಾಟೆ

Congress protests in front of Pratap Simha's office

ಮೈಸೂರು: ಸಂಸತ್‌ನಲ್ಲಿ ಭದ್ರತಾ ಲೋಪಕ್ಕೆ (Security Breach in Loksabha) ಕಾರಣವಾದ ಸಂಸದ ಪ್ರತಾಪ್‌ ಸಿಂಹ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ನಗರದ ಸಂಸದರ ಕಚೇರಿ ಎದುರು ಕಾಂಗ್ರೆಸ್‌ ಕಾರ್ಯಕರ್ತರು ಬುಧವಾರ ಸಂಜೆ ಪ್ರತಿಭಟನೆ ನಡೆಸಿದರು. ಈ ವೇಳೆ ಮೈಸೂರು-ಹುಣಸೂರು ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಪ್ರತಾಪ್‌ ಸಿಂಹ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ನಗರದ ಜಲದರ್ಶಿನಿ ಮುಂಭಾಗವಿರುವ ಪ್ರತಾಪ್ ಸಿಂಹ ಕಚೇರಿ ಎದುರು ಮೈಸೂರು ನಗರ ಹಾಗೂ ಗ್ರಾಮಾಂತರ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾಂಗ್ರೆಸ್‌ ಕಾರ್ಯಕರ್ತರು ಭಾಗಿಯಾಗಿದ್ದರು. ಪಾರ್ಲಿಮೆಂಟಿಗೆ ನುಗ್ಗಿ ಭಯೋತ್ಪಾದನಾ ಕೃತ್ಯ ನಡೆಸುವ ಸಂಚಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಈ ಅವಾಂತರಕ್ಕೆ ಪ್ರತಾಪ್ ಸಿಂಹ ಅವರೇ ನೇರ ಹೊಣೆ ಆಕ್ರೋಶ ಹೊರಹಾಕಿದರು.

ಮೈಸೂರು-ಹುಣಸೂರು ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಕೆಲ ಕಾರ್ಯಕರ್ತರು ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ಈ ವೇಳೆ ಅವರನ್ನು ಪೊಲೀಸರು ವಶಕ್ಕೆ ಪಡೆದು ಪರಿಸ್ಥಿತಿ ನಿಯಂತ್ರಣ ಮಾಡಿದರು.

ಸಂಸದ ಪ್ರತಾಪ್ ಸಿಂಹ ವಿರುದ್ಧ ತನಿಖೆಯಾಗಲಿ

ಸಂಸತ್ ಒಳಗೆ ನುಗ್ಗಿರುವ ದುಷ್ಕರ್ಮಿಗಳು ಪ್ರತಾಪ್ ಸಿಂಹ ಕಚೇರಿಯಿಂದ ಪಾಸ್ ಪಡೆದಿದ್ದಾರೆ. ಹಾಗಾಗಿ ಪ್ರತಾಪ್ ಸಿಂಹಗೆ ದುಷ್ಕರ್ಮಿಗಳ ಪರಿಚಯ ಇದ್ದೇ ಇರುತ್ತೆ. ಈ ಘಟನೆ ಬೇರೆ ಯಾರಾದರೂ ಮಾಡಿದರೆ ಪ್ರತಾಪ್ ಸಿಂಹ ವೀರಾವೇಷ ತಾಳುತ್ತಿದ್ದರು. ಕೂಡಲೇ ಪ್ರತಾಪ್ ಸಿಂಹಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಬೇಕು. ಅವರ ವಿರುದ್ಧವೂ ತನಿಖೆಯಾಗಬೇಕು ಎಂದು ಮೈಸೂರಿನಲ್ಲಿ ಎಸ್‌ಡಿಪಿಐ ಪಾರ್ಟಿ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಒತ್ತಾಯಿಸಿದರು.

ಇದನ್ನೂ ಓದಿ | Security Breach in Lok Sabha: ಪ್ರತಾಪ್‌ ಸಿಂಹಗೆ ಬುದ್ಧಿ ಹೇಳಿ ಎಂದ ಡಿಕೆಶಿ; ತಿರುಗಿಬಿದ್ದ ಬಿಜೆಪಿ

ದಾಳಿಕೋರರಿಗೆ ಪಾಸ್‌ ಕೊಟ್ಟ ಪ್ರತಾಪ್‌ ಪದಚ್ಯುತಿಗೆ ಕಾಂಗ್ರೆಸ್‌ ಆಗ್ರಹ

ಬೆಂಗಳೂರು: ಅತಿ ಭದ್ರತೆಯ ನೂತನ ಸಂಸತ್‌ ಭವನದಲ್ಲಿ (New Parliament Building) ಲೋಕಸಭಾ ಕಲಾಪ ನಡೆಯುತ್ತಿರುವಾಗಲೇ ಭದ್ರತೆಯನ್ನು ಭೇದಿಸಿ ಇಬ್ಬರು ಒಳಪ್ರವೇಶಿಸಿದ್ದಲ್ಲದೆ (Security breach in Loksabha), ಕಲರ್‌ ಬಾಂಬ್‌ ಸಿಡಿಸಿದ ಘಟನೆಯ ಬಳಿಕ ದೇಶದಲ್ಲಿ ಎರಡು ವಿಚಾರಗಳು ಗಂಭೀರವಾಗಿ ಚರ್ಚೆಗೆ ಒಳಗಾಗಿವೆ. ಒಂದು ಗ್ಯಾಲರಿಯಿಂದ ಕಲಾಪ ಪ್ರದೇಶಕ್ಕೆ ಜಿಗಿದು ಮೇಜುಗಳ ಮೇಲೆ ಜಿಗಿಯುತ್ತಾ ಸಾಗಿದ ಸಾಗರ್‌ ಶರ್ಮಾ ಎಂಬ ಹರ್ಯಾಣದ ದುಷ್ಕರ್ಮಿಗೆ ಸಂಸತ್‌ ಪ್ರವೇಶಕ್ಕೆ ಪಾಸ್‌ ನೀಡಿದ ಮೈಸೂರಿನ ಸಂಸದ ಪ್ರತಾಪ್‌ ಸಿಂಹ (MP Pratapsimha) ಅವರ ಬಗ್ಗೆ, ಇನ್ನೊಂದು ಲೋಕಸಭೆಯಲ್ಲಿ ಸಂಸದರಿಗೇ‌ ಭದ್ರತೆ ನೀಡಲಾಗದು ಚೌಕಿದಾರರು ದೇಶ ಕಾಯುವರೇ ಎಂಬ ಪ್ರಶ್ನೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಚುಚ್ಚುವ ಪ್ರಯತ್ನ.

ದೇಶಾದ್ಯಂತ ಮಾಧ್ಯಮಗಳು ದುಷ್ಕರ್ಮಿಯ ಸಂಸತ್‌ ಪ್ರವೇಶಕ್ಕೆ ಪಾಸ್‌ ನೀಡಿದ ಪ್ರತಾಪ್‌ ಸಿಂಹ ಅಂದರೆ ಯಾರು ಎಂದು ಜಾಲಾಡುತ್ತಾ ಮಾಹಿತಿ ಒದಗಿಸುತ್ತಿವೆ. ಆ ಮಟ್ಟಿಗೆ ಪ್ರತಾಪ್‌ ಸಿಂಹ ಅವರು ಚರ್ಚೆಯ ವಸ್ತುವಾಗಿದ್ದಾರೆ. ಶಶಿ ತರೂರ್‌ ಸೇರಿದಂತೆ ಕೆಲವು ಕಾಂಗ್ರೆಸ್‌ ನಾಯಕರಂತೂ ಪ್ರತಾಪ್‌ ಸಿಂಹ ಅವರನ್ನು ಸಂಸತ್‌ ಸದಸ್ಯತ್ವದಿಂದ ಪದಚ್ಯುತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Security breach in Lok Sabha: ಲೋಕಸಭೆಗೆ ನುಗ್ಗಿದವರನ್ನು ಹಿಗ್ಗಾಮುಗ್ಗಾ ಥಳಿಸಿದ ಸಂಸದರು!

ಈ ಮಧ್ಯ ಕರ್ನಾಟಕ ಕಾಂಗ್ರೆಸ್‌ ಮೋದಿ ಮತ್ತು ಪ್ರತಾಪ್‌ ಸಿಂಹ ಅವರನ್ನು ಟಾರ್ಗೆಟ್‌ ಮಾಡಿಕೊಂಡು ಸರಣಿ ಪೋಸ್ಟ್‌ಗಳನ್ನು ಹಾಕಿದೆ. ಇದರಲ್ಲಿ ಪುಲ್ವಾಮಾ ಉಗ್ರದಾಳಿಯೂ ಸೇರಿದಂತೆ ಹಲವು ವಿಚಾರಗಳನ್ನು ಉಲ್ಲೇಖಿಸಲಾಗಿದೆ. ಮತ್ತು 2001ರಲ್ಲಿ ಉಗ್ರ ದಾಳಿ ನಡೆದಾಗಲೂ ಬಿಜೆಪಿ ಸರ್ಕಾರವಿತ್ತು, ಈಗಲೂ ಬಿಜೆಪಿ ಸರ್ಕಾರವಿರುವಾಗಲೇ ಈ ರೀತಿಯ ದಾಳಿ ನಡೆದಿದೆ ಎಂದು ಉಲ್ಲೇಖಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version