Site icon Vistara News

Crime News | KRSನಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ಕಲ್ಲು ಹೊತ್ತು ಹಾಕಿ ಭೀಕರ ಹತ್ಯೆ: ಇಲ್ಲೇ ನಡೆದಿತ್ತು ಸಾಮೂಹಿಕ ಕೊಲೆ!

KRS Murder

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್‌.ಎಸ್‌ ಗ್ರಾಮದಲ್ಲಿ ವ್ಯಕ್ತಿಯೊಬ್ಬರನ್ನು ಭೀಕರವಾಗಿ ಕೊಲೆ (Crime News) ಮಾಡಲಾಗಿದೆ. ನೆಲ್ಲೂರ್ ಫೈಲ್ ನಿವಾಸಿ ಶ್ರೀನಿವಾಸ್(32) ಎಂಬವರನ್ನು ತಲೆ ಮೇಲೆ ಕಲ್ಲು ಹೊತ್ತು ಹಾಕಿ ಸಾಯಿಸಲಾಗಿದೆ.

ಶ್ರೀನಿವಾಸ್‌ ಅವರು ಮನೆಯಲ್ಲಿ ಮಲಗಿದ್ದ ವೇಳೆ ಯಾರೋ ಕಲ್ಲು ಹೊತ್ತು ಹಾಕಿ ಈ ಕೃತ್ಯ ಎಸಗಿದ್ದಾರೆ. ಕೊಲೆ ಮಾಡಿದವರು ಯಾರು ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ, ಯಾವುದೋ ವೈಯಕ್ತಿಕ ದ್ವೇಷದಿಂದ ಈ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ನೆಲ್ಲೂರು ಫೈಲ್‌ ಎನ್ನುವುದು ಹಲವಾರು ಮನೆಗಳಿರುವ ಒಂದು ಪ್ರದೇಶವಾಗಿದ್ದು, ಮನೆಗಳ ನಡುವೆ ಇಕ್ಕಟ್ಟಾದ ಜಾಗವಿದೆ. ಅಕ್ಕಪಕ್ಕದಲ್ಲೇ ಮನೆಗಳಿರುವುದರಿಂದ ಇಲ್ಲಿ ಜಗಳಗಳು ಸಾಮಾನ್ಯ ಅನಿಸಿಬಿಟ್ಟಿವೆ. ಸಣ್ಣ ಪುಟ್ಟ ಕಾರಣಗಳಿಗಾಗಿ ಹಲವು ಗಲಾಟೆಗಳು ನಡೆದಿವೆ. ಇದೀಗ ಈ ವಠಾರದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಸ್ಥಳಕ್ಕೆ ಕೆ.ಆರ್.ಎಸ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಫೆಬ್ರವರಿಯಲ್ಲಿ ನಡೆದಿತ್ತು ಐವರ ಕೊಲೆ
ಕೆಆರ್‌ಎಸ್‌ ಗ್ರಾಮದಲ್ಲಿ ಕಳೆದ ಫೆಬ್ರವರಿ ಆರರಂದು ನಾಲ್ವರು ಮಕ್ಕಳು ಮತ್ತು ಒಬ್ಬ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಲಕ್ಷ್ಮಿ (೨೬), ರಾಜ್‌ (೧೨), ಕೋಮಲ್‌ (೭), ಕುನಾಲ್‌ (೪), ಗೋವಿಂದ (೮) ಎಂಬವರನ್ನು ಮಧ್ಯರಾತ್ರಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು ದುಷ್ಕರ್ಮಿಗಳು. ಇವರಲ್ಲಿ ಲಕ್ಷ್ಮಿ ಗಂಗಾರಾಮ್‌ನ ಹೆಂಡತಿ. ಮೃತರಲ್ಲಿ ಮೂವರು ಗಂಗಾರಾಮ್‌ನ ಮಕ್ಕಳು. ಮತ್ತೊಬ್ಬ ಹುಡುಗ ಗಂಗಾರಾಮ್‌ನ ಅಣ್ಣ ಗೋವಿಂದನ ಮಗ.

ಗಂಗಾರಾಮ್‌ ಮತ್ತು ಗೋವಿಂದ ಪ್ಲಾಸ್ಟಿಕ್‌ ವ್ಯಾಪಾರಿಗಳು. ಗಂಗಾರಾಮ್‌, ಗೋವಿಂದ ಮತ್ತು ಗೋವಿಂದನ ಹೆಂಡತಿ ವ್ಯಾಪಾರಕ್ಕೆ ತೆರಳಿದ್ದರು. ಗಂಗಾರಾಮ್‌ನ ಪತ್ನಿ ಲಕ್ಷ್ಮಿ ಎರಡೂ ಕುಟುಂಬದ ಮಕ್ಕಳೊಂದಿಗೆ ಮನೆಯಲ್ಲಿದ್ದರು. ಆಗ ಈ ಕೊಲೆ ನಡೆದಿತ್ತು. ತನಿಖೆ ನಡೆಸಿದಾಗ ಲಕ್ಷ್ಮಿ ಎಂಬ ಹೆಸರಿನ ಇನ್ನೊಬ್ಬ ಮಹಿಳೆಯೇ ಕೊಲೆಗಾತಿ ಎಂದು ಪತ್ತೆಯಾಗಿತ್ತು. ಆಕೆ ಗಂಗಾರಾಮ್‌ನನ್ನು ಪ್ರೀತಿಸುತ್ತಿದ್ದು, ಆತನನ್ನು ಪಡೆಯುವುದಕ್ಕಾಗಿ ಇಂಥ ಕ್ರೂರ ಕೃತ್ಯವನ್ನು ನಡೆಸಿದ್ದಳು.

ಕೆಆರ್‌ಎಸ್‌ ಗ್ರಾಮಕ್ಕೆ ಇಂಥ ಕ್ರೂರ ಚರಿತ್ರೆ ಇರುವುದರಿಂದ ಶ್ರೀನಿವಾಸ್‌ ಕೊಲೆ ಕೂಡಾ ಆತಂಕ ಸೃಷ್ಟಿಸಿದೆ.

ಇದನ್ನೂ ಓದಿ | Murder Case | ಮಡದಿ ಜತೆಗೆ ಅನೈತಿಕ ಸಂಬಂಧ ಸಂಶಯ; ಚೂರಿ ಇರಿದು ಅಣ್ಣನನ್ನೇ ಕೊಲೆಗೈದ

Exit mobile version