Site icon Vistara News

Cylinder Blast : ಸಿಲಿಂಡರ್‌ ಸ್ಫೋಟಕ್ಕೆ ಮನೆಯೇ ಧ್ವಂಸ; ಅವಶೇಷಗಳಡಿ ಸಿಲುಕಿ ಸಾವು

Cylinder blast

ಬಾಗಲಕೋಟೆ: ಸಿಲಿಂಡರ್ ‌ಸ್ಫೋಟಗೊಂಡು (Cylinder blast) ಇಡೀ ಮನೆಯೇ ಧ್ವಂಸಗೊಂಡು (House damaged) ಅದರ ಅವಶೇಷಗಳಡಿ ಸಿಲುಕಿ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡ ದಾರುಣ ಘಟನೆ ಬಾಗಲಕೋಟೆ ಜಿಲ್ಲೆಯ (Bagalakote News) ನಂದಿಕೇಶ್ವರ ಗ್ರಾಮದ ಆಶ್ರಯ ಕಾಲೋನಿಯಲ್ಲಿ ತಡರಾತ್ರಿ ನಡೆದಿದೆ. ಮಂಜುನಾಥ್ ಪಡಿಯಪ್ಪ ಮಾದರ (35) ಎಂಬವರೇ ಮೃತ ವ್ಯಕ್ತಿ.

ಮಂಜುನಾಥ್‌ ಅವರು ತಮ್ಮ ಪತ್ನಿ ಮತ್ತು ಮಗುವಿನ ಜೊತೆ ಭಟ್ಕಳದಲ್ಲಿ ಉದ್ಯೋಗ ನಿಮಿತ್ತ ನೆಲೆಸಿದ್ದಾರೆ. ಆದರೆ, ಅವರು ಜಮೀನು ಸಮಸ್ಯೆ ಸಲುವಾಗಿ ವಿಚಾರಿಸಿಕೊಂಡು ಹೋಗಲು ಒಬ್ಬರೇ ಗ್ರಾಮಕ್ಕೆ ಬಂದಿದ್ದರು.

ಇಲ್ಲಿನ ಆಶ್ರಯ ಕಾಲೊನಿಯಲ್ಲಿ ಅವರಿಗೆ ಒಂದು ಮನೆಯಿದೆ. ಅವರು ಈ ರಾತ್ರಿ ಈ ಮನೆಯಲ್ಲಿ ತಂಗಿದ್ದರು. ಆಗ ಸಿಲಿಂಡರ್ ಸ್ಫೋಟಗೊಂಡು ಸಾವು ಸಂಭವಿಸಿದೆ.

ಎರಡು ರೂಮ್‌ ಹೊಂದಿದ್ದೀ ಮನೆಯನ್ನು ಹಾಲೋ ಬ್ಲಾಕ್‌ನಿಂದ ನಿರ್ಮಿಸಲಾಗಿದೆ. ಸಿಲಿಂಡರ್‌ ಸ್ಫೋಟದ ರಭಸಕ್ಕೆ ಇಡೀ ಸಿಮೆಂಟ್‌ ಚಾವಣಿ ಸಮೇತ ಕುಸಿದು ಬಿದ್ದಿದೆ.

ಮಂಜುನಾಥ್‌ ಅವರು ರಾತ್ರಿ ತಂಗಿದ್ದಾಗ ಮನೆಯಲ್ಲಿ ಅಡುಗೆ ಮಾಡಲು ಹೋದ ವೇಳೆ ಈ ಘಟನೆ ನಡೆದಿರುವ ಸಾಧ್ಯತೆ ಇದೆ. ಸ್ಟವ್‌ ಉರಿಸಲೆಂದು ಬೆಂಕಿ ಹಚ್ಚಿದಾಗ ಸ್ಫೋಟ ಸಂಭವಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇಲ್ಲಿ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿದ್ದು, ಬೆಂಕಿ ಹಚ್ಚಿದಾಗ ಸ್ಫೋಟವಾಗಿರಬಹುದು ಎನ್ನಲಾಗಿದೆ.

ಬಾದಾಮಿ ಪೊಲೀಸ್ ಠಾಣಾ ವ್ಯಾಪ್ತಿ ನಡೆದ ಘಟನೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಭಟ್ಕಳದಿಂದ ಕುಟುಂಬಿಕರು ಆಗಮಿಸಿದ್ದು, ಆಕ್ರಂದನ ಹೇಳತೀರದಾಗಿದೆ.

ಇದನ್ನೂ ಓದಿ: Self Harming : ಅಂಗಡಿ ಮುಂದೆ ನೇತಾಡುತ್ತಿತ್ತು ವ್ಯಕ್ತಿ ಶವ; ನೇಣಿಗೆ ಕೊರಳೊಡ್ಡಿದ ಬೆಸ್ಕಾಂ ಎಂಜಿನಿಯರ್‌

ಎಲೆಕ್ಟ್ರಿಕ್‌ ಟವರ್‌ಗೆ ನೇಣು ಬಿಗಿದು ಮಹಿಳೆ ಆತ್ಮಹತ್ಯೆ

ಕೋಲಾರ: ಮಹಿಳೆಯೊಬ್ಬರು ಗ್ರಾಮದ ನಡುವೆ ಇರುವ ವಿದ್ಯುತ್‌ ಹೈಟೆನ್ಶನ್‌ ಟವರ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಲಾರ ತಾಲೂಕಿನ ಕೊಳಗಂಜನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಸುಷ್ಮಾ (27) ಎಂಬವರೇ ಆತ್ಮಹತ್ಯೆಗೆ ಶರಣಾದ ಮಹಿಳೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅವರು ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

ಸುಷ್ಮಾ ಅವರಿಗೆ ಕೆಲವು ವರ್ಷಗಳ ಹಿಂದೆ ಗಜೇಂದ್ರ ಎಂಬವರ ಜತೆ ಮದುವೆಯಾಗಿತ್ತು. ಅವರ ಸಂಬಂಧದಲ್ಲಿ ಎರಡು ಪುಟ್ಟ ಮಕ್ಕಳಿದ್ದಾರೆ. ಆದರೆ, ಆರಂಭದಿಂದಲೂ ಮನೆಯಲ್ಲಿ ನಿತ್ಯ ಜಗಳ ಎನ್ನಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅವರು ನೊಂದಿದ್ದರು ಎನ್ನಲಾಗಿದೆ.

ಇದೀಗ ತನ್ನ ಇಬ್ಬರು ಪುಟ್ಟ ಮಕ್ಕಳನ್ನು ಬಿಟ್ಟು ಆಕೆ ಗ್ರಾಮದ ಮಧ್ಯೆ ಇರುವ ವಿದ್ಯುತ್ ಟವರ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಷ್ಮಾ ಅವರ ಶವ ಟವರ್‌ನಲ್ಲಿ ನೇತಾಡುತ್ತಿರುವುದು ಬೆಳಗ್ಗೆ ಕಂಡುಬಂದಿದ್ದು, ಜನ ಸೇರಿದ್ದರು. ಸ್ಥಳಕ್ಕೆ ವೇಮಗಲ್ ಪೊಲೀಸರ ಭೇಟಿ ಪರಿಶೀಲನೆ ಮಾಡಿದ್ದಾರೆ.

Exit mobile version