Site icon Vistara News

Rain News| ಮಳೆಯಿಂದ ಸಾಂಕ್ರಾಮಿಕ ರೋಗಗಳ ಭೀತಿ, ಮುನ್ನೆಚ್ಚರಿಕೆ ವಹಿಸಲು ಆಸ್ಪತ್ರೆಗಳಿಗೆ ಸೂಚನೆ

ಸಾಂಕ್ರಾಮಿಕ

ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಪ್ರವಾಹ ಅಥವಾ ಪ್ರವಾಹದಂತಹ ಪರಿಸ್ಥಿತಿ ಉಂಟಾಗಿ, ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಅಧಿಕವಾಗಿರುವ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗಗಳ ಚಿಕಿತ್ಸೆ ಹಾಗೂ ನಿರ್ವಹಣೆಗಾಗಿ ಎಲ್ಲಾ ಹಂತಗಳ ಆಸ್ಪತ್ರೆಗಳಲ್ಲಿ ಅಗತ್ಯ ಸಿದ್ಧತೆ ಖಚಿತಪಡಿಸಿಕೊಂಡು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಡಿ.ರಂದೀಪ್‌ ಸೂಚಿಸಿದ್ದಾರೆ.

ಆಸ್ಪತ್ರೆಗಳಲ್ಲಿ ಸಾಂಕ್ರಾಮಿಕ ರೋಗಗಳ ಚಿಕಿತ್ಸೆ ಹಾಗೂ ನಿರ್ವಹಣೆಗಾಗಿ ಸೂಚಿಸಿರುವ ಅಂಶಗಳು

  1. ಸಾಂಕ್ರಾಮಿಕ ರೋಗಗಳ ನಿರ್ವಹಣೆಗೆ, ಉಲ್ಲೇಖಗಳ ಅನ್ವಯ ಸಮಗ್ರ ಕ್ರಿಯಾ ಯೋಜನೆಯು ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರಬೇಕು.
  2. ಕ್ರಿಯಾ ಯೋಜನೆಯಂತೆ ಅಗತ್ಯ ಮಾನವ ಸಂಪನ್ಮೂಲ, ಟೆಸ್ಟಿಂಗ್ ಕಿಟ್, ಔಷಧಗಳು, ರಾಸಾಯನಿಕ, ಉಪಕರಣಗಳು ಹಾಗೂ ಪ್ರಮಾಣಿತ ಕಾರ್ಯಾಚರಣ ವಿಧಾನಗಳು ಅಗತ್ಯ ಪ್ರಮಾಣದಲ್ಲಿ ಲಭ್ಯವಿರಬೇಕು.
  3. ಸಾಂಕ್ರಾಮಿಕ ರೋಗಗಳ ಚಿಕಿತ್ಸೆ ಮತ್ತು ನಿರ್ವಹಣೆಯನ್ನು ಎನ್‌ಸಿಡಿಸಿ ಹಾಗೂ ಎನ್‌ಸಿವಿವಿಡಿ ಭಾರತ ಸರ್ಕಾರ ಮತ್ತು ಈ ನಿರ್ದೇಶನಾಲಯದಿಂದ ಸೂಚಿಸಿರುವ ಪ್ರಮಾಣಿತ ಕಾರ್ಯಾಚರಣ ವಿಧಾನಗಳ ಅನ್ವಯ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ನಡೆಸಬೇಕು.
  4. ಯಾವುದೇ ರೀತಿಯ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು, ಜಿಲ್ಲಾ ಹಾಗೂ ತಾಲೂಕು ಮಟ್ಟದ ತ್ವರಿತ ಪ್ರತಿಕ್ರಿಯಾ ತಂಡಗಳು (Rapid Response Teams) ಅಗತ್ಯ ಔಷಧಗಳು, ಸಲಕರಣೆಗಳು ಹಾಗೂ ವಾಹನ ಸೌಲಭ್ಯದೊಂದಿಗೆ ಸನ್ನದ್ಧವಾಗಿರುವುದು.
  5. ಪ್ರವಾಹ ಪೀಡಿತವಾಗುವಂತಹ (flood prone) ವಾರ್ಡ್‌ಗಳು, ಗ್ರಾಮಗಳು ಸೂಕ್ಷ್ಮಯೋಜನೆಯನ್ನು ಸಿದ್ಧಪಡಿಸಿಟ್ಟುಕೊಂಡು, ತುರ್ತು ಪರಿಸ್ಥಿತಿಗೆ ಶೀಘ್ರವಾಗಿ ಸ್ಪಂದಿಸುವುದು.
  6. ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಆರೋಗ್ಯ ಕೇಂದ್ರಗಳು ಮುನ್ನೆಚ್ಚರಿಕಾ ಕ್ರಮವಾಗಿ ರೋಗ ನಿರ್ದಿಷ್ಟ ಸರ್ವೇಕ್ಷಣೆಯನ್ನು (ಸಕ್ರಿಯ ಹಾಗೂ ಸ್ಥಿತ) ಹೆಚ್ಚಿಸುವುದು. ಮುಂದುವರಿದು, ತಾಲೂಕು ವೈದ್ಯಾಧಿಕಾರಿಗಳು, ಅಗತ್ಯ ದತ್ತಾಂಶವನ್ನು ವಿಶ್ಲೇಷಿಸಿ, ರೋಗ ಪ್ರಸರಣವನ್ನು ಪತ್ತೆ ಹಚ್ಚಿ ತುರ್ತು ನಿಯಂತ್ರಣ ಕ್ರಮಗಳನ್ನು ಅನುಷ್ಠಾನಗೊಳಿಸುವಂತೆ ಸೂಚಿಸುವುದು.
  7. ಕೀಟಶಾಸ್ತ್ರೀಯ ಸೂಚ್ಯಂಕಗಳನ್ನು (Entomological indices) ಮುಂಚಿತವಾಗಿಯೇ ವಿಶ್ಲೇಷಿಸಿ ಉಲ್ಬಣಿಸಬಹುದಾದ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದು.
  8. ಮುಖ್ಯ ಆರೋಗ್ಯಾಧಿಕಾರಿಗಳು, ಐಬಿಎಂಪಿ, ಜಿಲ್ಲಾ ಆರೋಗ್ಯಾಧಿಕಾರಿಗಳು ಕ್ರಮವಾಗಿ ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತಗಳಿಂದ ಅಗತ್ಯ ಸಹಕಾರವನ್ನು ಪಡೆಯುವುದು. ಆರೋಗ್ಯ ಇಲಾಖೆಯೂ ಸೇರಿ ಇತರ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ, ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸರ್ವೇಕ್ಷಣಾ ಚಟುವಟಿಕೆಗಳ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳುವುದು ಮತ್ತು ಪರಿಸ್ಥಿತಿಯ ಕುರಿತು ಆಯುಕ್ತಾಲಯಕ್ಕೆ ನಿಗದಿತವಾಗಿ ಮಾಹಿತಿ ನೀಡುವುದು.
  9. ಪ್ರವಾಹದ ಸಮಯ, ಸಾಂಕ್ರಾಂಮಿಕ ರೋಗಗಳ ಸಂದರ್ಭದಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳನ್ನು ಮನದಟ್ಟು ಮಾಡಿಕೊಡುವ ನಿಟ್ಟನಲ್ಲಿ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯನ್ನು ನಡೆಸಿ, ಅಗತ್ಯ ಸಹಕಾರವನ್ನು ಪಡೆಯುವುದು.
  10. ಈ ಮೇಲಿನ ಎಲ್ಲಾ ಅಂಶಗಳ ಅನುಷ್ಠಾನದ ಉಸ್ತುವಾರಿ ಹಾಗೂ ಮೇಲ್ವಿಚಾರಣೆಗಾಗಿ ಮತ್ತು ಸಮನ್ವಯವನ್ನು ಸಾಧಿಸಲು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸುವುದು.

    ಸಾಮಾನ್ಯವಾಗಿ, ಪ್ರವಾಹವು ಕಡಿಮೆಯಾಗುವ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣವಾಗುವ ಸಾಧ್ಯತೆ ಇರುವುದರಿಂದ, ಪರಿಸ್ಥಿತಿಯು ಸಾಮಾನ್ಯವಾಗುವರೆಗೂ ಸರ್ವೇಕ್ಷಣೆ ಹಾಗೂ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಅಗತ್ಯವಾಗಿದೆ. ಒಟ್ಟಾರೆಯಾಗಿ, ಸಾಂಕ್ರಾಮಿಕ ರೋಗಗಳು ಹರಡದಂತ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಅಗತ್ಯ ಪ್ರಯತ್ನಗಳನ್ನು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕೈಗೊಳ್ಳಲು ಸೂಚಿಸಲಾಗಿದೆ.

    ಇದನ್ನೂ ಓದಿ | Police Alert | ಅಂಡರ್‌ ಪಾಸ್‌ಗಳಲ್ಲಿ ವಾಹನ ನಿಲ್ಲಿಸುವಂತಿಲ್ಲ ಎಂಬ ಆದೇಶ ವಾಪಸ್‌ಗೆ ಒತ್ತಾಯ

Exit mobile version