Site icon Vistara News

Moral Policing : ಪಣಂಬೂರು ಬೀಚ್‌ನಲ್ಲಿ ತಿರುಗಾಡುತ್ತಿದ್ದ ಯುವಕ-ಯುವತಿಗೆ ಕಿರುಕುಳ, ಮೂವರ ಅರೆಸ್ಟ್‌

Moral Policing Panambur Beach Mangalore

ಮಂಗಳೂರು: ಮಂಗಳೂರು ನಗರದ (Mangalore News) ಹೊರವಲಯದಲ್ಲಿ ಪಣಂಬೂರು ಬೀಚ್‌ಗೆ (Panambur Beach) ಬಂದಿದ್ದ ಬೇರೆ ಬೇರೆ ಧರ್ಮಕ್ಕೆ ಸೇರಿದ ಯುವಕ ಮತ್ತು ಯುವತಿಯ (Harrassing man and woman) ಮೇಲೆ ನೈತಿಕ ಪೊಲೀಸ್‌ಗಿರಿ (Moral Policing) ನಡೆದಿದೆ. ಪಣಂಬೂರು ಪೊಲೀಸರು ಕೂಡಲೇ ಕ್ರಮ ಕೈಗೊಂಡು ಮೂವರನ್ನು ಬಂಧಿಸಿದ್ದಾರೆ.

ಕೇರಳ ಮೂಲದ ಯುವಕ ಮತ್ತು ಬೆಂಗಳೂರು ಮೂಲದ ಯುವತಿ ಪರಸ್ಪರ ಪರಿಚಿತರಾಗಿದ್ದು, ಜತೆಯಾಗಿ ಪಣಂಬೂರು ಬೀಚ್‌ನಲ್ಲಿ ತಿರುಗಾಡಲು ಬಂದಿದ್ದರು. ಆದರೆ, ಹೀಗೆ ಬಂದಿದ್ದ ಯುವಕ ಮುಸ್ಲಿಂ ಎಂಬ ಸಂಶಯ ಅಲ್ಲಿದ್ದ ಕೆಲವರಿಗೆ ಬಂದಿತ್ತು. ಹಾಗಾಗಿ ಅವರು ಸ್ಥಳೀಯ ಶ್ರೀರಾಮ ಸೇನೆಯ ಯುವಕರಿಗೆ ವಿಷಯ ತಿಳಿಸಿದ್ದರು. ಶ್ರೀ ರಾಮ ಸೇನೆಯ ಯುವಕರು ಬೀಚ್‌ಗೆ ಆಗಮಿಸಿ ಯುವಕ-ಯುವತಿ ಜೋಡಿಯನ್ನು ಅಡ್ಡಗಟ್ಟಿದರು.

ಇಬ್ಬರೂ ಬೇರೆ ಬೇರೆ ಧರ್ಮಗಳಿಗೆ ಸೇರಿದವರಾಗಿದ್ದು ಏಕೆ ಒಟ್ಟಿಗೆ ಇದ್ದೀರಿ ಎಂದು ಪ್ರಶ್ನಿಸಿದರು. ನಿಮ್ಮ ಮನೆಗಳಿಗೆ ವಿಷಯ ತಿಳಿಸುವುದಾಗಿ ಬೆದರಿಸಿದರು. ಅವರ ಮೇಲೆ ಹಲ್ಲೆ ನಡೆಸಲು ಮುಂದಾದರು. ಆಗ ಅವರು ಕೂಡಾ ನಮ್ಮನ್ನು ಪ್ರಶ್ನೆ ಮಾಡಲು ನೀವು ಯಾರು ಎಂದು ತಿರುಗಿ ಪ್ರಶ್ನಿಸಿದರು.

ಒಂದು ಹಂತದಲ್ಲಿ ಗಲಾಟೆಯಾಗುವ ಸನ್ನಿವೇಶ ನಿರ್ಮಾಣವಾದಾಗ ಪಣಂಬೂರು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಆರೋಪಿಗಳನ್ನು ವಶಕ್ಕೆ ಪಡೆದರು. ಅವರ ವಿಚಾರಣೆ ನಡೆಸಿ ಬಂಧಿಸಲಾಗಿದೆ. ಇವರೆಲ್ಲರೂ ಶ್ರೀರಾಮ ಸೇನೆಗೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : Moral Policing : ಹಿಂದು-ಮುಸ್ಲಿಂ ಯಾರೇ ಆಗಲಿ ನೈತಿಕ ಪೊಲೀಸ್‌ಗಿರಿಗೆ ಅವಕಾಶವಿಲ್ಲ; ಸಿಎಂ, ಡಿಕೆಶಿ ವಾರ್ನಿಂಗ್

ಖಬರಸ್ಥಾನದ ಮರದ ಕೊಂಬೆ ಕಡಿದುದಕ್ಕೆ ಕೋಮು ಗಲಾಟೆ

ಶಿವಮೊಗ್ಗ: ಶಿವಮೊಗ್ಗದ ಹೊಳೆಹೊನ್ನೂರಿನ ಜಂಬರಘಟ್ಟ ಗ್ರಾಮದಲ್ಲಿ ಖಬರಸ್ಥಾನದಲ್ಲಿದ್ದ (ಸ್ಮಶಾನ) ಮರದ ಕೊಂಬೆಗಳನ್ನು ಕಡಿದ ಕಾರಣಕ್ಕೆ ಎರಡು ಕೋಮುಗಳ (Communal violence) ನಡುವೆ ಗಲಾಟೆ ನಡೆದಿತ್ತು. ಘಟನೆ ಸಂಬಂಧ ಇದೀಗ ಹೊಳೆಹೊನ್ನೂರು ಪೊಲೀಸರು ಜಾತಿ ನಿಂದನೆ ಹಾಗೂ ಗುಂಪುಗಾರಿಕೆ ಹಾಗೂ ಹಲ್ಲೆ ಮಾಡಿದ ಕಾರಣಕ್ಕೆ ಎಫ್‌ಐಆರ್ ದಾಖಲಿಸಿದ್ದಾರೆ. ಜತೆಗೆ ಹಿಂದು ಯುವಕರ ಮೇಲೆ ಹಲ್ಲೆ ನಡೆಸಿದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಎರಡು ಕೋಮುಗಳ ನಡುವಿನ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಎಸ್‌ಪಿ ಮಿಥುನ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಗಲಾಟೆ ಸಂಬಂಧ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: Murder Case : ದುಡ್ಡು ಕೊಡೋ ಎಂದವನ ಮುಖಕ್ಕೆ ಕಡಗದಿಂದ ಗುದ್ದಿ, ಚಪ್ಪಲಿಯಿಂದ ತುಳಿದು ಕೊಂದ ಸ್ನೇಹಿತ

ಏನಿದು ಘಟನೆ?

ಫೆ.4 ರಂದು ಖಬರಸ್ಥಾನದಲ್ಲಿದ್ದ ಮರಗಳನ್ನು ಕಡಿದ ಆರೋಪದಲ್ಲಿ ಹಿಂದು ಯುವಕರ ಮೇಲೆ ಮುಸ್ಲಿಂ ಯುವಕರು ಹಲ್ಲೆ ನಡೆಸಿರುವ ಘಟನೆ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಜಂಬರಘಟ್ಟ ಗ್ರಾಮದಲ್ಲಿ ನಡೆದಿತ್ತು. ಮರ ಕಡಿದಿದ್ದಾರೆ ಎಂಬ ಕಾರಣಕ್ಕೆ ಇಬ್ಬರು ಯುವಕರನ್ನು, ಮಸೀದಿಯಲ್ಲಿ ಮುಸ್ಲಿಂ ಯುವಕರ ಗುಂಪು ಇಟ್ಟುಕೊಂಡಿತ್ತು.

ಈ ವಿಷಯ ತಿಳಿದು ಯುವಕರನ್ನು ಬಿಡಿಸಿಕೊಂಡು ಬರಲು ಹಿಂದು ಯುವಕರ ಗುಂಪು ಹೋಗಿದೆ. ಈ ವೇಳೆ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸಿದ್ದಾರೆ. ಮುಸ್ಲಿಂ ಯುವಕರು ಹಲ್ಲೆ ನಡೆಸಿದ್ದರಿಂದ 6 ಯುವಕರು ಗಾಯಗೊಂಡಿದ್ದರು. ಗಾಯಾಳುಗಳನ್ನು ಹೊಳೆಹೊನ್ನೂರು ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಘಟನೆ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇತ್ತ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಪೊಲೀಸ್‌ ಠಾಣೆ ಪ್ರತಿಭಟನೆಯನ್ನೂ ನಡೆಸಿದ್ದರು. ನಮ್ಮ ಮನೆಗಳಿಗೆ ನುಗ್ಗಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಗ್ರಾಮದ ಮಹಿಳೆಯರು ಆರೋಪಿಸಿದ್ದರು.

ಹೊಳೆಹೊನ್ನೂರು ಪೊಲೀಸ್ ಠಾಣೆ ಎದುರು ಭಾನುವಾರ ರಾತ್ರಿ ಪೂರ್ತಿ ನೂರಾರು ಸಂಖ್ಯೆಯಲ್ಲಿ ಜನರು ಸೇರಿ, ಹಲ್ಲೆ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸ್ಥಳಕ್ಕೆ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಡರಾತ್ರಿ ತೆರಳಿದ್ದ ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್, ಪ್ರತಿಭಟನಾಕಾರರ ಮನವಲಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version