Site icon Vistara News

Murder Case : ಪುತ್ತೂರಿನ ಹುಲಿವೇಷ ತಂಡದ ಮುಖ್ಯಸ್ಥನ ಬರ್ಬರ ಹತ್ಯೆ; ರಸ್ತೆಯಲ್ಲೇ ಅಟ್ಟಾಡಿಸಿ ಕೊಲೆ

Akshay Kallega Tiger Dancer murder

ಮಂಗಳೂರು: ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್‌ (Kallega Tigers) ಹುಲಿ ತಂಡದ ಮುಖ್ಯಸ್ಥ ಅಕ್ಷಯ್‌ ಕಲ್ಲೇಗ (26) ಎಂಬವರನ್ನು ಅತ್ಯಂತ ಬರ್ಬರವಾಗಿ ಕೊಲೆ (Murder Case) ಮಾಡಲಾಗಿದೆ. ಪುತ್ತೂರಿನ ನೆಹರು ನಗರ ಜಂಕ್ಷನ್‌ನಲ್ಲಿ ರಸ್ತೆಯಲ್ಲೇ ಅಟ್ಟಾಡಿಸಿ ಈ ಕೊಲೆ (Tiger team leader Murdered) ನಡೆದಿದೆ.

ಕೊಲೆ ನಡೆದ ನೆಹರೂ ನಗರ ಜಂಕ್ಷನ್‌

ಅಕ್ಷಯ್‌ ಕಲ್ಲೇಗ ಇಲ್ಲಿನ ಹುಲಿ ತಂಡದ ಮುಖ್ಯಸ್ಥರಾಗಿ ಸಾಕಷ್ಟು ಜನಪ್ರಿಯರಾಗಿದ್ದರು. ಅವರ ತಂಡವೂ ಅಷ್ಟೇ ಖ್ಯಾತಿಯನ್ನು ಹೊಂದಿತ್ತು. ಕಲರ್ಸ್‌ ಕನ್ನಡ ಚಾನೆಲ್‌ನಲ್ಲೂ ಇವರ ಹುಲಿ ವೇಷ ಕಾಣಿಸಿಕೊಂಡಿತ್ತು. ಅಂಥ ಜನಪ್ರಿಯತೆ ಹೊಂದಿದ್ದ ಯುವಕನನ್ನು ಸೋಮವಾರ ರಾತ್ರಿ ಕೊಲೆ ಮಾಡಲಾಗಿದೆ.

ಕೊಲೆ ಆರೋಪಿಗಳಾದ ಚೇತು, ಮಂಜ, ಮನೀಷ್

ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ನೆಹರು ನಗರ ಜಂಕ್ಷನ್ ನಲ್ಲಿದ್ದಾಗ ಅಕ್ಷಯ್‌ ಮೇಲೆ ಮೂವರು ದುಷ್ಟರು ದಾಳಿ ಮಾಡಿದ್ದಾರೆ. ಅವರಿಂದ ತಪ್ಪಿಸಿಕೊಳ್ಳಲು ಅಕ್ಷಯ್‌ ಸಾಕಷ್ಟು ಪ್ರಯತ್ನಪಟ್ಟರೂ ಅದು ಸಾಧ್ಯವಾಗಲಿಲ್ಲ. ಪೊದೆಗಳ ನಡುವೆ ಓಡಿದರೂ ಬೆನ್ನಟ್ಟಿದ ತಂಡ ಅಕ್ಷಯ್‌ನನ್ನು ಕೊಂದು ಹಾಕಿದೆ.

ಈ ಕೊಲೆ ಮಾಡಿದ್ದು ಮನೀಷ್‌, ಚೇತು ಮತ್ತು ಇನ್ನೊಬ್ಬ ವ್ಯಕ್ತಿ. ಇವರಲ್ಲಿ ಬನ್ನೂರು ನಿವಾಸಿ ಮನೀಷ್, ಚೇತು ಪೊಲೀಸ್ ಠಾಣೆಗೆ ಶರಣಾಗಿದ್ದರೆ, ಮತ್ತೋರ್ವ ಆರೋಪಿ ತಲೆಮಲೆಸಿಕೊಂಡಿದ್ದಾನೆ.

ಯಾಕೆ ನಡೆಯಿತು ಕೊಲೆ?

ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತ ವಿಚಾರದಲ್ಲಿ ಗಲಾಟೆಯಾಗಿ ಅದು ಕೊಲೆಗೆ ಕಾರಣವಾಗಿದೆ ಎನ್ನುವುದು ಮೇಲ್ನೋಟಕ್ಕೆ ತಿಳಿದುಬಂದಿರುವ ಮಾಹಿತಿ. ಬಸ್‌ ಚಾಲಕ ಚೇತು ಎಂಬಾತನ ಬೆಂಬಲಿಗ ಹಾಗೂ ಅಕ್ಷಯ್‌ ನಡುವೆ ದ್ವಿಚಕ್ರ ವಾಹನ ಅಪಘಾತದ ವಿಚಾರದಲ್ಲಿ ತೀವ್ರ ವಾಗ್ವಾದ ನಡೆದಿತ್ತು.

ಅಪಘಾತದ ಬಳಿಕ ರಿಪೇರಿ ಖರ್ಚಿನ ಸಂಬಂಧ ಎರಡು ಸಾವಿರ ರೂ. ನೀಡುವ ವಿಚಾರದಲ್ಲಿ ಸಣ್ಣ ಮಟ್ಟಿನ ತಗಾದೆ ಎದ್ದು ಅದು ವಿಕೋಪಕ್ಕೆ ಹೋಗಿದೆ ಎನ್ನಲಾಗಿದೆ. ಈ ವಿಚಾರ ಚೇತು ಮತ್ತು ಗ್ಯಾಂಗ್‌ಗೆ ತಲುಪಿ ಆ ತಂಡ ಆಗಮಿಸಿ ದಾಳಿ ನಡೆಸಿದೆ.

ಚೇತು ಮತ್ತು ತಂಡ ಅಕ್ಷಯ್ ಕಲ್ಲೇಗ ಅವರನ್ನು ಅಟ್ಟಾಡಿಸಿ ತಲವಾರಿನಿಂದ ದಾಳಿ ಮಾಡಿದೆ. ಅಕ್ಷಯ್‌ ಸತ್ತು ಬಿದ್ದುದನ್ನು ದೃಢಪಡಿಸಿಕೊಂಡ ತಂಡದ ಇಬ್ಬರು ಪೊಲೀಸ್‌ ಠಾಣೆಗೆ ಹೋಗಿ ತಾವು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.

ನಿಜಕ್ಕೂ ಅಪಘಾತದ ಕಾರಣಕ್ಕಾಗಿಯೇ ಈ ಕೊಲೆ ನಡೆದಿದೆಯೇ ಅಥವಾ ಬೇರೆ ಏನಾದರೂ ಕಾರಣಗಳಿವೆಯೇ ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Murder Case : ಸರ್ಕಾರಿ ಕೆಲಸ ಇಲ್ಲವೇ ಪ್ರತಿಮಾಳ ಕೊಲೆ; ನಿರ್ಧರಿಸಿಯೇ ಬಂದಿದ್ದ ಹಂತಕ ಕಿರಣ್‌

ಹುಲಿಕುಣಿತದಲ್ಲಿ ಕಲ್ಲೇಗ ಟೈಗರ್ಸ್ ತಂಡದ ನೇತೃತ್ವ ವಹಿಸಿಕೊಂಡಿದ್ದ ಅಕ್ಷಯ್ ನ ಜನಪ್ರಿಯತೆ ಸಹಿಸದೆ ಅಪಘಾತದ ಕಾರಣ ಮುಂದಿಟ್ಟುಕೊಂಡು ಕೊಲೆ ಮಾಡಿದರೇ ಎಂಬುದು ಕೆಲವರ ಸಂಶಯ. ಈ ನಡುವೆ ಹುಲಿ ಕುಣಿತಗಳ ಸ್ಪರ್ಧೆಯೂ ಇಲ್ಲಿ ದೊಡ್ಡ ಮಟ್ಟದಲ್ಲಿ ಘರ್ಷಣೆಗೆ ಕಾರಣವಾಗುತ್ತಿದೆ. ಹೀಗಾಗಿ ಈ ಕೊಲೆಗೆ ಹಲವು ಆಯಾಮಗಳು ಇವೆ ಎಂದು ಹೇಳಲಾಗುತ್ತಿದೆ.

ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Exit mobile version