Site icon Vistara News

ಬೆಂಗಳೂರಿನ ಶ್ರೀ ವಿದ್ಯಾಮಾನ್ಯ ವಿದ್ಯಾ ಕೇಂದ್ರದಲ್ಲಿ ದಸರಾ ವೈಭವ; ಬೊಂಬೆ ಪ್ರದರ್ಶನದಲ್ಲಿ ಸಂಪೂರ್ಣ ರಾಮಾಯಣ

vidhyanidhi vidyakendra 9

ಬೆಂಗಳೂರು: ಬೆಂಗಳೂರಿನ ವಿದ್ಯಾಮಾನ್ಯ ನಗರದ ಶ್ರೀ ವಿದ್ಯಾಮಾನ್ಯ ವಿದ್ಯಾ ಕೇಂದ್ರದಲ್ಲಿ ದಸರಾ ಹಬ್ಬಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದ್ದು, ಸಂಭ್ರಮ ಕಳೆಕಟ್ಟಿದೆ. ಭಾರತೀಯ ಸಂಸ್ಕೃತಿ, ಆಚರಣೆ ಹಾಗೂ ಮೌಲ್ಯಗಳ ಆಧಾರಿತವಾಗಿ ಕಾರ್ಯಕ್ರಮಗಳನ್ನು ಪ್ರಸ್ತುತಿ ಪಡಿಸಲಾಗುತ್ತಿದ್ದು, ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ಶ್ರೀ ರಾಮಾಯಣ ವೈಭವ, ಪಟ್ಟದ ಗೊಂಬೆ, ಶ್ರೀಕೃಷ್ಣ ಲೀಲಾ, ಪುರಿ ಪರಮಪುರುಷ ಜಗನ್ನಾಥ ವೈಭವ, ಭಾರತೀಯ ಬುಡಕಟ್ಟು ಹಾಗೂ ಹಳ್ಳಿಗಳ ಕುರಿತಾದ ಪ್ರದರ್ಶನ ಮತ್ತು ಮೈಸೂರು ದಸರಾ ಮೆರವಣಿಗೆ ಸೇರಿದಂತೆ ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಅನೇಕ ಬೊಂಬೆ ಪ್ರದರ್ಶನಗಳು ನಡೆಯುತ್ತಿವೆ.

ಸಂಪೂರ್ಣ ರಾಮಾಯಣದ (ರಾಮನ ಹುಟ್ಟು, ವನವಾಸ, ಶ್ರೀರಾಮನ ಪಟ್ಟಾಭಿಷೇಕ, ಲವಕುಶ ಜನನ, ಲವಕುಶ ಪಟ್ಟಾಭಿಷೇಕ) ಗೊಂಬೆಗಳು, ಮೈಸೂರು ದಸರಾ ಜಂಬೂ ಸವಾರಿ ಗೊಂಬೆಗಳು, ಶ್ರೀ ಕೃಷ್ಣ ಲೀಲಾ, ನವದುರ್ಗೆಯರು, ಮದುವೆ ಮಂಟಪ, ಚೆನ್ನಪಟ್ಟಣದ ಬೊಂಬೆಗಳು, ಪಟ್ಟದ ಬೊಂಬೆಗಳು, ಕಾಮದೇನು, ಹಳ್ಳಿಗಾಡು ಸೇರಿದಂತೆ ಅನೇಕ ಪ್ರಕಾರದ ಬೊಂಬೆಗಳನ್ನು ಅಚ್ಚುಕಟ್ಟಾಗಿ ಜೋಡಿಸಲಾಗಿದ್ದು, ನೋಡುಗರನ್ನು ಆಕರ್ಷಿಸುತ್ತಿವೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀ ವಿದ್ಯಾಮಾನ್ಯ ವಿದ್ಯಾ ಕೇಂದ್ರ ಪ್ರಾಂಶುಪಾಲೆ ಶಾರದಾ, ಕಳೆದ ಏಳು ವರ್ಷಗಳಿಂದ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ದಸರಾ ಆಚರಣೆ ಮಾಡಿಕೊಂಡು ಬಂದಿದ್ದೇವೆ. ಆಡಳಿತ ಮಂಡಳಿಯ ಮುಖಸ್ಥರಾದ ಸೌಂದರ್ಯ ರಮೇಶ್ ಮತ್ತು ಸೌಂದರ್ಯ ಭರತ್ ಸಂಪೂರ್ಣ ಸಹಕಾರ ನೀಡಿದ್ದಾರೆ. ಅದೇ ರೀತಿ
ಈ ಬಾರಿ ಸಂಪೂರ್ಣ ರಾಮಾಯಣ, ಕೃಷ್ಣ ಲೀಲೆ, ಮಹಾಭಾರತದ ಸನ್ನಿವೇಶಗಳು, ಮೈಸೂರು ದಸರಾ ಪ್ರದರ್ಶನಗಳನ್ನೂ ಮಾಡಲಾಗುತ್ತಿದೆ. ಕಳೆದ 20 ದಿನಗಳಿಂದ ಇದರ ತಯಾರಿ ನಡೆದಿದ್ದು, ನಾವು ಅಂದುಕೊಂಡಂತೆ ಬೊಂಬೆಗಳ ಪ್ರದರ್ಶನ ಮೂಡಿಬಂದಿದೆ ಎಂದು ತಿಳಿಸಿದರು. ಈ ಬೊಂಬೆ ಪ್ರದರ್ಶನವು ಸೆಪ್ಟೆಂಬರ್ 26ರಿಂದ ಅಕ್ಟೋಬರ್ 5ರವರೆಗೂ ನಡೆಯಲಿದೆ. ಬೆಳಗ್ಗೆ 9.30ರಿಂದ ಸಂಜೆ 6.30 ರವರೆಗೂ ಪ್ರದರ್ಶನ ಇರಲಿದೆ.

ಇದನ್ನೂ ಓದಿ | Mysuru Dasara | ಭಾರತೀಯ ಸಂಸ್ಕೃತಿಯ ಪ್ರತೀಕ ಮೈಸೂರು ದಸರಾ: ಕನ್ನಡ ನುಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

Exit mobile version