Site icon Vistara News

ಮುಳುಗಡೆ ಸಂತ್ರಸ್ತರ ಪುನರ್ವಸತಿಗಾಗಿ ಅರಣ್ಯ ಭೂಮಿ ಡಿನೋಟಿಫಿಕೇಶನ್; ಇಬ್ಬರು ಅಧಿಕಾರಿಗಳ ವಿರುದ್ಧ ದೂರು

sharavati backwater sagara

ಶಿವಮೊಗ್ಗ: ಜಿಲ್ಲೆಯಲ್ಲಿ 2015-17ರ ನಡುವೆ 9,934.02 ಎಕರೆ ಅರಣ್ಯ ಭೂಮಿಯನ್ನು ಡಿನೋಟಿಫೈ ಮಾಡಿದ್ದಕ್ಕಾಗಿ ನಿವೃತ್ತ ಐಎಎಸ್ ಅಧಿಕಾರಿಗಳಾದ ಮದನ್ ಗೋಪಾಲ್ ಮತ್ತು ಟಿ.ಎಂ. ವಿಜಯ ಭಾಸ್ಕರ್ ವಿರುದ್ಧ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ (MoEF&CC) ದಕ್ಷಿಣ ವಲಯದಲ್ಲಿ ದೂರು ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತ ಹೊಸನಗರದ ಗಿರೀಶ್ ಆಚಾರ್ ದೂರು ನೀಡಿದ್ದಾರೆ.

ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಅರಣ್ಯ ಪ್ರದೇಶಗಳನ್ನು ಡಿನೋಟಿಫೈ ಮಾಡುವ ಅಥವಾ ಪರಿವರ್ತಿಸುವ ಮೊದಲು ಕೇಂದ್ರ ಸರ್ಕಾರದ ಅನುಮೋದನೆ ಪಡೆಯುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದ್ದರೂ, ಈ ಪ್ರಕರಣದಲ್ಲಿ ನಿಯಮ ಉಲ್ಲಂಘಿಸಲಾಗಿದೆ ಎಂದು ಸೆ.29ರಂದು ಸಲ್ಲಿಸಿದ ದೂರಿನಲ್ಲಿ ತಿಳಿಸಲಾಗಿದೆ. ಎಲ್ಲ ಡಿನೋಟಿಫಿಕೇಶನ್ ಆದೇಶಗಳನ್ನು ಹಿಂಪಡೆಯಲು ಮತ್ತು ಮಾಜಿ ಐಎಎಸ್ ಅಧಿಕಾರಿಗಳ ವಿರುದ್ಧ ತನಿಖೆಯನ್ನು ಪ್ರಾರಂಭಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಆಚಾರ್ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ.

ದೂರಿನಲ್ಲಿ ಉಲ್ಲೇಖ
ಕಳೆದ ಸೆ.1 ರಂದು ಕರ್ನಾಟಕ ಲೋಕಾಯುಕ್ತರ ಮುಂದೆ ಈ ವಿಷಯ ಪ್ರಸ್ತಾಪಿಸಿ ಇಬ್ಬರು ಮಾಜಿ ಐಎಎಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದರು. ಗೋಪಾಲ್ ಪ್ರಸ್ತುತ ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿಯ ಅಧ್ಯಕ್ಷರಾಗಿದ್ದರೆ, ಆಡಳಿತ ಸುಧಾರಣಾ ಆಯೋಗಕ್ಕೆ ಭಾಸ್ಕರ್ ಅಧ್ಯಕ್ಷರಾಗಿದ್ದಾರೆ.

9934.02 ಎಕರೆ ಮೀಸಲು ಅರಣ್ಯ ಪ್ರದೇಶವನ್ನು ಡಿನೋಟಿಫೈ ಮಾಡಲು 2015-2017ನೇ ಸಾಲಿನಲ್ಲಿ ಒಟ್ಟು 56 ಅಧಿಸೂಚನೆಗಳನ್ನು ಹೊರಡಿಸಲಾಗಿದೆ. 2015ರಲ್ಲಿ ನ.17, ಡಿ. 14 ಮತ್ತು 19 ರಂದು, 2016 ರಲ್ಲಿ ಜು.19, ಸೆ. 28 ಮತ್ತು ನ.23 ರಂದು ಹಾಗೂ 2017 ರಲ್ಲಿ ಫೆಬ್ರವರಿ 23 ರಂದು ಅಧಿಸೂಚನೆ ಹೊರಡಿಸಿ ಆದೇಶ ಹೊರಡಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಶರಾವತಿ ಜಲಾಶಯ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಪುನರ್ವಸತಿ ಕಲ್ಪಿಸಲು ಶಿವಮೊಗ್ಗ ಜಿಲ್ಲೆಯ ಸಾಗರ ಅರಣ್ಯ ವಿಭಾಗದಲ್ಲಿ 14,848.83 ಹೆಕ್ಟೇರ್ ಅರಣ್ಯ ಭೂಮಿಯನ್ನು 1996 ಮೇ 5ರಂದು ಕೇಂದ್ರ ಸರ್ಕಾರವು ಮಂಜೂರು ಮಾಡಿತ್ತು. “1978ರ ಮೊದಲು ಮಾಡಿದ ಅತಿಕ್ರಮಣಗಳನ್ನು ಕೇಂದ್ರ ಸರ್ಕಾರವು ಸಕ್ರಮಗೊಳಿಸಿದ್ದು, ಅರಣ್ಯ ಸಂರಕ್ಷಣಾ ಕಾಯ್ದೆಯನ್ನು 1980ರಲ್ಲಿ ಜಾರಿಗೊಳಿಸಲಾಯಿತು. ನಂತರ ಅರಣ್ಯ ಭೂಮಿಯನ್ನು ಇತರೆ ಬಳಕೆಗೆ ಒಪ್ಪಿಗೆ ನೀಡಲು ಕೇಂದ್ರ ಸರ್ಕಾರದ ಪೂರ್ವಾನುಮತಿ ಅಗತ್ಯ ಎಂದು ಕಡ್ಡಾಯಗೊಳಿಸಲಾಯಿತು. ಹಾಗಾಗಿ 2015-2017ರ ಅವಧಿಯಲ್ಲಿ ಮಾಜಿ ಐಎಎಸ್ ಅಧಿಕಾರಿಗಳು ಮಾಡಿದ ಡಿನೋಟಿಫಿಕೇಶನ್‌ಗಳು ಕಾನೂನುಬಾಹಿರ ಮತ್ತು ಅರಣ್ಯ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸುತ್ತವೆ ಎಂದು ಗಿರೀಶ್ ಆಚಾರ್ ತಿಳಿಸಿದ್ದಾರೆ.

ಅರಣ್ಯವನ್ನು ಮೀಸಲಿಡುವ ಸಂಬಂಧ ನಿರ್ಬಂಧ ಅಥವಾ ಅರಣ್ಯೇತರ ಉದ್ದೇಶಗಳಿಗಾಗಿ ಅರಣ್ಯ ಭೂಮಿಯನ್ನು ಬಳಸುವ ಕುರಿತು ಅರಣ್ಯ ಸಂರಕ್ಷಣಾ ಕಾಯಿದೆ, 1980, ಸೆಕ್ಷನ್ 2ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಕೇಂದ್ರ ಸರ್ಕಾರದ ಪೂರ್ವಾನುಮತಿ ಹೊರತುಪಡಿಸಿ ಯಾವುದೇ ರಾಜ್ಯ ಸರ್ಕಾರ ಅಥವಾ ಇತರ ಪ್ರಾಧಿಕಾರವು ಯಾವುದೇ ಬದಲಾವಣೆಯನ್ನು ಮಾಡಬಾರದು. ಆದರೆ, ಕೇಂದ್ರ ಸರ್ಕಾರದ ಅನುಮತಿಯಿಲ್ಲದೆ ಇಷ್ಟೊಂದು ಪ್ರಮಾಣದಲ್ಲಿ ಅರಣ್ಯ ಭೂಮಿ ಡಿನೋಟಿಫಿಕೇಶನ್ ಮಾಡಲಾಗಿದೆ.
| ಗಿರೀಶ್ ಆಚಾರ್, ಅರ್ಜಿದಾರ

ಇದನ್ನೂ ಓದಿ | Muslim Laws | ಯುವತಿಯು ಮುಸ್ಲಿಂ ಕಾನೂನಿನ ಅನ್ವಯ ಪೋಷಕರ ಒಪ್ಪಿಗೆ ಇಲ್ಲದೆ ಮದುವೆ ಸಾಧ್ಯ ಎಂದ ಕೋರ್ಟ್

Exit mobile version