Site icon Vistara News

Brand Bangalore: ಬೆಂಗಳೂರು ಬ್ರ್ಯಾಂಡ್‌ ಅಭಿವೃದ್ಧಿಗೆ ಸಮಿತಿ; ಗಣ್ಯರ ಜತೆ ಸಭೆ ನಡೆಸಿದ ಡಿಕೆಶಿ

#image_title

ಬೆಂಗಳೂರು: ರಾಜಧಾನಿಯನ್ನು ಸರ್ವತೋಮುಖ ಅಭಿವೃದ್ಧಿ ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಖ್ಯಾತಿ ಹೆಚ್ಚಿಸಲು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಉದ್ಯಮಿಗಳು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿ ವಿವಿಧ ಕ್ಷೇತ್ರಗಳ ಗಣ್ಯರ ಜತೆ ವಿಧಾನಸೌಧದಲ್ಲಿ ಶನಿವಾರ ಸಭೆ ನಡೆಸಿದರು. ಬ್ರ್ಯಾಂಡ್ ಬೆಂಗಳೂರು ನಿರ್ಮಾಣಕ್ಕೆ ಪೂರಕವಾಗಿ ಸಲಹೆಗಳನ್ನು ಸ್ವೀಕರಿಸಿದರು.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು, 42 ಪ್ರಮುಖರ ಜತೆ ಸಭೆ ನಡೆಸಲಾಗಿದೆ. ಬ್ರ್ಯಾಂಡ್ ಬೆಂಗಳೂರು ಹಾಗೂ ರಾಜಧಾನಿಗೆ ಹೊಸ ರೂಪ ಕೊಡಲು ನಗರ ಕಟ್ಟುವ, ಉದ್ಯೋಗದಾತರಿಂದ ಸಲಹೆ ಸಲಹೆ ಪಡೆದಿದ್ದೇವೆ. ನಾನು ಬೆಂಗಳೂರಿನಲ್ಲಿ ವಾಸ ಇದ್ದರೂ ಬೇರೆಯವರ ಅನುಭವ ಮುಖ್ಯ. ಹೀಗಾಗಿ ಉದ್ಯಮಿಗಳ ಜತೆಗೆ ಜನಪ್ರತಿನಿಧಿಗಳ ಅಭಿಪ್ರಾಯ ಕೂಡ ಪಡೆದಿದ್ದೇವೆ ಎಂದು ಹೇಳಿದರು.

ಮುಂದಿನ ವಾರ ಮತ್ತೊಮ್ಮೆ ಸಭೆ ಮಾಡಿ ಸಾರ್ವಜನಿಕರ ಅಭಿಪ್ರಾಯ ಸಹ ಪಡೆಯುತ್ತೇವೆ. ವೆಬ್‌ಸೈಟ್ ಮಾಡಿ ಅದರ ಮೂಲಕ ಜನಾಭಿಪ್ರಾಯ ಪಡೆಯುತ್ತೇವೆ. ಬೆಂಗಳೂರು ಸ್ವಾಭಿಮಾನ, ಗೌರವ ಉಳಿಸಬೇಕು. ಸಲಹೆ ಪಡೆದ ಮೇಲೆ ಬೆಂಗಳೂರು ಅಭಿವೃದ್ಧಿಗೆ ಸಮಿತಿ ರಚನೆ ಮಾಡಲಾಗುತ್ತದೆ. ಇದಕ್ಕಾಗಿ ನೀಲಿ ನಕ್ಷೆ ಸಿದ್ಧ ಮಾಡುತ್ತೇವೆ ಎಂದು ಹೇಳಿದರು.

ನಗರ ಅಭಿವೃದ್ಧಿಗೆ ಬಹಳ ಜನ ನಮ್ಮನ್ನು ಬಳಸಿಕೊಳ್ಳಿ ಎಂದು ಹೇಳಿದ್ದಾರೆ. ಹಣ ನಾವೇ ಕೊಡುತ್ತೇವೆ, ಕೆರೆಗಳ ಶುದ್ಧೀಕರಣ ಮಾಡುತ್ತೇವೆ ಎಂದಿದ್ದಾರೆ. ಸ್ವಾರ್ಥ ಬಿಟ್ಟು ಸಮಾಜಕ್ಕೆ ಕೊಡುಗೆ ಕೊಡಬೇಕು. ಈಗ ಶಕ್ತಿಶಾಲಿ ಸರ್ಕಾರ ಬಂದಿದೆ, ನಮ್ಮ ಬೆಂಬಲ ಇದೆ ಎಂದು ತಿಳಿಸಿದರು.

ಹೈ ಡೆನ್ಸಿಟಿ ಕಾರಿಡಾರ್, ಮೆಟ್ರೋ ವಿಸ್ತರಣೆ, ಟ್ರಾಫಿಕ್ ಕಂಟ್ರೋಲ್, ಒಳಚರಂಡಿ, ಸಬ್ ಅರ್ಬನ್ ರೈಲು ಯೋಜನೆ, 2.0 ಜಂಕ್ಷನ್ ಮುಖ್ಯವಾಗಿವೆ. ನೈಸ್ ರಸ್ತೆಯನ್ನು ಫುಲ್ ರಿಂಗ್ ರೋಡ್ ಮಾಡಿ ಎಂದು ಹೇಳಿದ್ದಾರೆ. ನೈಸ್ ಅಥವಾ ಗುತ್ತಿಗೆ ಸಂಸ್ಥೆಯಿಂದ ಯೋಜನೆ ಮಾಡಿಸಿ ಎಂದಿದ್ದಾರೆ. ನಿಗದಿತ ಸಮಯದಲ್ಲಿ ಪ್ರಾಜೆಕ್ಟ್ ಮುಗಿಸಲು ಸಲಹೆ ನೀಡಿದ್ದಾರೆ ಎಂದು ಹೇಳಿದರು.

ಬೆಂಗಳೂರು ನಗರದಲ್ಲಿ ಸುಗಮ ಸಂಚಾರಕ್ಕೆ ಸುರಂಗ ಯೋಜನೆ ಮಾಡುವಂತೆ ಸಲಹೆ ಬಂದಿದೆ. ಈ ಯೋಜನೆ ಹೊರಗಡೆಯವರಿಂದ ಮಾಡಿಸಿ 50 ವರ್ಷ ಆದ ಮೇಲೆ ಬಿಟ್ಟು ಕೊಡಲಿ. ಏರ್‌ಪೋರ್ಟ್‌ನ ಪಾರ್ಕಿಂಗ್ ವಿಚಾರದಲ್ಲಿ ಸಲಹೆ ನೀಡಿದ್ದಾರೆ. ಕೆಲವನ್ನು ನಾನು ಒಪ್ಪುತ್ತೇನೆ ಎಂದು ತಿಳಿಸಿದರು.

ರಾಜಧಾನಿಯ ಮೇಲಿನ ಒತ್ತಡ ತಡೆಯಲು ಹೊರ ವಲಯದಲ್ಲಿ ಉಪನಗರಗಳನ್ನು ಮಾಡಬೇಕು. ಸ್ಯಾಟ್‌ಲೈಟ್ ಹಾಗೂ ಯಲಹಂಕ ಬಿಟ್ಟರೆ ಮತ್ತೆ ಯಾವುದೇ ಇಂತಹ ಯೋಜನೆ ಆಗಲಿಲ್ಲ. ಈಗ ಮತ್ತೆ ಉಪನಗರಗಳ ರಚನೆ ಮಾಡಬೇಕು ಎಂದ ಅವರು, ಸಬ್‌ ಅರ್ಬನ್ ಕಾಮಗಾರಿ ಆರಂಭವಾಗಿಲ್ಲ. ಇದು ಕಾಗದ‌ದ ಮೇಲೆ ಇದೆ. ಇದರ‌ ಬಗ್ಗೆ ಚರ್ಚೆ ಆಗಿದೆ ಎಂದು ತಿಳಿಸಿದರು.

ಹೊಸ ಏರ್‌ಪೋರ್ಟ್‌ ನಿರ್ಮಾಣ ಸಾಧ್ಯವಿಲ್ಲ

ಹೊಸ ಏರ್ಪೋರ್ಟ್ ನಿರ್ಮಾಣ ಸ್ಥಾಪನೆ ವಿಚಾರಕ್ಕೆ ಸ್ಪಂದಿಸಿ, ಹೊಸ ಏರ್‌ಪೋರ್ಟ್‌ ನಿರ್ಮಾಣದ ಬಗ್ಗೆ ಪ್ರಸ್ತಾಪ ಇದೆ. ಒಂದು ಏರ್‌ಪೋರ್ಟ್‌ನಿಂದ ಮತ್ತೊಂದು ಏರ್‌ಪೋರ್ಟ್‌ಗೆ ಅಂತರ ಇರಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ಮಾಡಬೇಕು. ನಿರ್ದಿಷ್ಟ ಅಂತರದಲ್ಲಿ ಹೊಸ ಏರ್‌ಪೋರ್ಟ್‌ ಮಾಡುವಂತೆ ಈಗಿರುವ ಏರ್‌ಪೋರ್ಟ್‌ ಜತೆ ಒಪ್ಪಂದ ಇದೆ. ಹಾಗಾಗಿ ತಾಂತ್ರಿಕವಾಗಿ ಹೊಸ ಏರ್‌ಪೋರ್ಟ್‌ ನಿರ್ಮಾಣ ಸಾಧ್ಯವಿಲ್ಲ ಎಂದು ಉದ್ಯಮಿಗಳ ಪ್ರಸ್ತಾಪವನ್ನು ನಯಯವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ತಳ್ಳಿಹಾಕಿದ್ದಾರೆ.

ಸಭೆಯಲ್ಲಿ ಇನ್ಫೋಸಿಸ್‌ನ ಕ್ರಿಸ್‌ ಗೋಪಾಲಕೃಷ್ಣ, ಆರ್.ವಿ ಇಸ್ಟಿಟ್ಯೂಟ್‌ನ ಎಂಪಿ ಶ್ಯಾಮ್, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜೂಂದಾರ್ ಷಾ, ವಂಡರ್ ಲಾ ಎಂ.ಡಿ. ಅರುಣ್, ನ್ಯಾಷನಲ್ ಲಾ ಸ್ಕೂಲ್‌ನ ಸುಧೀರ್ ಕೃಷ್ಣಮೂರ್ತಿ, ಕಿರ್ಲೋಸ್ಕರ್ ಎಂ.ಡಿ. ಗೀತಾಂಜಲಿ ಕಿರ್ಲೋಸ್ಕರ್, ಬಿ ಪ್ಯಾಕ್ ಸಂಸ್ಥೆ ಸಿಇಒ ರೇವತಿ ಅಶೋಕ್, ಎಫ್‌ಐಸಿಸಿಐ FICCI ಚೇರ್ಮನ್ ಉಲ್ಲಾಸ್ ಕಾಮತ್, ಕೂ ಆ್ಯಪ್ ಕೋ ಫೌಂಡರ್ ಅಪ್ರಮೇಯ ರಾಧಾಕೃಷ್ಣ, ಬಾಗ್ಮನೆ ಟೆಕ್ ಪಾರ್ಕ್ ಸಂಸ್ಥಾಪಕ ರಾಜಾ ಬಾಗ್ಮನೆ, ಬ್ರಿಗೇಡ್ ಗ್ರೂಪ್ ಎಂ.ಡಿ ಜೈ ಶಂಕರ್, ಎಂಬೆಸಿ ಗ್ರೂಪ್ ಸಿಇಒ ಜಿತೇಂದ್ರ, ಮಾಜಿ ಕ್ರಿಕೆಟೆರ್ ಬ್ರಿಜೇಶ್ ಪಟೇಲ್, ಬೆಂಗಳೂರು ಸಂಸದರು, ಶಾಸಕರು, ಬಿಬಿಎಂಪಿ, ಬಿಡಿಎ, ಬಿಎಂಆರ್‌ಸಿಎಲ್, ಬೆಂಗಳೂರು ಸಂಚಾರ ವಿಭಾಗ ಅಧಿಕಾರಿಗಳು ಭಾಗಿಯಾಗಿದ್ದರು.

Exit mobile version