ಕರ್ನಾಟಕ
Brand Bangalore: ಬೆಂಗಳೂರು ಬ್ರ್ಯಾಂಡ್ ಅಭಿವೃದ್ಧಿಗೆ ಸಮಿತಿ; ಗಣ್ಯರ ಜತೆ ಸಭೆ ನಡೆಸಿದ ಡಿಕೆಶಿ
Brand Bangalore: ವಿಧಾನಸೌಧದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರೊಂದಿಗೆ ಸಭೆ ನಡೆಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಸಲಹೆಗಳನ್ನು ಪಡೆದರು.
ಬೆಂಗಳೂರು: ರಾಜಧಾನಿಯನ್ನು ಸರ್ವತೋಮುಖ ಅಭಿವೃದ್ಧಿ ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಖ್ಯಾತಿ ಹೆಚ್ಚಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಉದ್ಯಮಿಗಳು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿ ವಿವಿಧ ಕ್ಷೇತ್ರಗಳ ಗಣ್ಯರ ಜತೆ ವಿಧಾನಸೌಧದಲ್ಲಿ ಶನಿವಾರ ಸಭೆ ನಡೆಸಿದರು. ಬ್ರ್ಯಾಂಡ್ ಬೆಂಗಳೂರು ನಿರ್ಮಾಣಕ್ಕೆ ಪೂರಕವಾಗಿ ಸಲಹೆಗಳನ್ನು ಸ್ವೀಕರಿಸಿದರು.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, 42 ಪ್ರಮುಖರ ಜತೆ ಸಭೆ ನಡೆಸಲಾಗಿದೆ. ಬ್ರ್ಯಾಂಡ್ ಬೆಂಗಳೂರು ಹಾಗೂ ರಾಜಧಾನಿಗೆ ಹೊಸ ರೂಪ ಕೊಡಲು ನಗರ ಕಟ್ಟುವ, ಉದ್ಯೋಗದಾತರಿಂದ ಸಲಹೆ ಸಲಹೆ ಪಡೆದಿದ್ದೇವೆ. ನಾನು ಬೆಂಗಳೂರಿನಲ್ಲಿ ವಾಸ ಇದ್ದರೂ ಬೇರೆಯವರ ಅನುಭವ ಮುಖ್ಯ. ಹೀಗಾಗಿ ಉದ್ಯಮಿಗಳ ಜತೆಗೆ ಜನಪ್ರತಿನಿಧಿಗಳ ಅಭಿಪ್ರಾಯ ಕೂಡ ಪಡೆದಿದ್ದೇವೆ ಎಂದು ಹೇಳಿದರು.
ಮುಂದಿನ ವಾರ ಮತ್ತೊಮ್ಮೆ ಸಭೆ ಮಾಡಿ ಸಾರ್ವಜನಿಕರ ಅಭಿಪ್ರಾಯ ಸಹ ಪಡೆಯುತ್ತೇವೆ. ವೆಬ್ಸೈಟ್ ಮಾಡಿ ಅದರ ಮೂಲಕ ಜನಾಭಿಪ್ರಾಯ ಪಡೆಯುತ್ತೇವೆ. ಬೆಂಗಳೂರು ಸ್ವಾಭಿಮಾನ, ಗೌರವ ಉಳಿಸಬೇಕು. ಸಲಹೆ ಪಡೆದ ಮೇಲೆ ಬೆಂಗಳೂರು ಅಭಿವೃದ್ಧಿಗೆ ಸಮಿತಿ ರಚನೆ ಮಾಡಲಾಗುತ್ತದೆ. ಇದಕ್ಕಾಗಿ ನೀಲಿ ನಕ್ಷೆ ಸಿದ್ಧ ಮಾಡುತ್ತೇವೆ ಎಂದು ಹೇಳಿದರು.
ನಗರ ಅಭಿವೃದ್ಧಿಗೆ ಬಹಳ ಜನ ನಮ್ಮನ್ನು ಬಳಸಿಕೊಳ್ಳಿ ಎಂದು ಹೇಳಿದ್ದಾರೆ. ಹಣ ನಾವೇ ಕೊಡುತ್ತೇವೆ, ಕೆರೆಗಳ ಶುದ್ಧೀಕರಣ ಮಾಡುತ್ತೇವೆ ಎಂದಿದ್ದಾರೆ. ಸ್ವಾರ್ಥ ಬಿಟ್ಟು ಸಮಾಜಕ್ಕೆ ಕೊಡುಗೆ ಕೊಡಬೇಕು. ಈಗ ಶಕ್ತಿಶಾಲಿ ಸರ್ಕಾರ ಬಂದಿದೆ, ನಮ್ಮ ಬೆಂಬಲ ಇದೆ ಎಂದು ತಿಳಿಸಿದರು.
ಹೈ ಡೆನ್ಸಿಟಿ ಕಾರಿಡಾರ್, ಮೆಟ್ರೋ ವಿಸ್ತರಣೆ, ಟ್ರಾಫಿಕ್ ಕಂಟ್ರೋಲ್, ಒಳಚರಂಡಿ, ಸಬ್ ಅರ್ಬನ್ ರೈಲು ಯೋಜನೆ, 2.0 ಜಂಕ್ಷನ್ ಮುಖ್ಯವಾಗಿವೆ. ನೈಸ್ ರಸ್ತೆಯನ್ನು ಫುಲ್ ರಿಂಗ್ ರೋಡ್ ಮಾಡಿ ಎಂದು ಹೇಳಿದ್ದಾರೆ. ನೈಸ್ ಅಥವಾ ಗುತ್ತಿಗೆ ಸಂಸ್ಥೆಯಿಂದ ಯೋಜನೆ ಮಾಡಿಸಿ ಎಂದಿದ್ದಾರೆ. ನಿಗದಿತ ಸಮಯದಲ್ಲಿ ಪ್ರಾಜೆಕ್ಟ್ ಮುಗಿಸಲು ಸಲಹೆ ನೀಡಿದ್ದಾರೆ ಎಂದು ಹೇಳಿದರು.
ಬೆಂಗಳೂರು ನಗರದಲ್ಲಿ ಸುಗಮ ಸಂಚಾರಕ್ಕೆ ಸುರಂಗ ಯೋಜನೆ ಮಾಡುವಂತೆ ಸಲಹೆ ಬಂದಿದೆ. ಈ ಯೋಜನೆ ಹೊರಗಡೆಯವರಿಂದ ಮಾಡಿಸಿ 50 ವರ್ಷ ಆದ ಮೇಲೆ ಬಿಟ್ಟು ಕೊಡಲಿ. ಏರ್ಪೋರ್ಟ್ನ ಪಾರ್ಕಿಂಗ್ ವಿಚಾರದಲ್ಲಿ ಸಲಹೆ ನೀಡಿದ್ದಾರೆ. ಕೆಲವನ್ನು ನಾನು ಒಪ್ಪುತ್ತೇನೆ ಎಂದು ತಿಳಿಸಿದರು.
ರಾಜಧಾನಿಯ ಮೇಲಿನ ಒತ್ತಡ ತಡೆಯಲು ಹೊರ ವಲಯದಲ್ಲಿ ಉಪನಗರಗಳನ್ನು ಮಾಡಬೇಕು. ಸ್ಯಾಟ್ಲೈಟ್ ಹಾಗೂ ಯಲಹಂಕ ಬಿಟ್ಟರೆ ಮತ್ತೆ ಯಾವುದೇ ಇಂತಹ ಯೋಜನೆ ಆಗಲಿಲ್ಲ. ಈಗ ಮತ್ತೆ ಉಪನಗರಗಳ ರಚನೆ ಮಾಡಬೇಕು ಎಂದ ಅವರು, ಸಬ್ ಅರ್ಬನ್ ಕಾಮಗಾರಿ ಆರಂಭವಾಗಿಲ್ಲ. ಇದು ಕಾಗದದ ಮೇಲೆ ಇದೆ. ಇದರ ಬಗ್ಗೆ ಚರ್ಚೆ ಆಗಿದೆ ಎಂದು ತಿಳಿಸಿದರು.
ಹೊಸ ಏರ್ಪೋರ್ಟ್ ನಿರ್ಮಾಣ ಸಾಧ್ಯವಿಲ್ಲ
ಹೊಸ ಏರ್ಪೋರ್ಟ್ ನಿರ್ಮಾಣ ಸ್ಥಾಪನೆ ವಿಚಾರಕ್ಕೆ ಸ್ಪಂದಿಸಿ, ಹೊಸ ಏರ್ಪೋರ್ಟ್ ನಿರ್ಮಾಣದ ಬಗ್ಗೆ ಪ್ರಸ್ತಾಪ ಇದೆ. ಒಂದು ಏರ್ಪೋರ್ಟ್ನಿಂದ ಮತ್ತೊಂದು ಏರ್ಪೋರ್ಟ್ಗೆ ಅಂತರ ಇರಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ಮಾಡಬೇಕು. ನಿರ್ದಿಷ್ಟ ಅಂತರದಲ್ಲಿ ಹೊಸ ಏರ್ಪೋರ್ಟ್ ಮಾಡುವಂತೆ ಈಗಿರುವ ಏರ್ಪೋರ್ಟ್ ಜತೆ ಒಪ್ಪಂದ ಇದೆ. ಹಾಗಾಗಿ ತಾಂತ್ರಿಕವಾಗಿ ಹೊಸ ಏರ್ಪೋರ್ಟ್ ನಿರ್ಮಾಣ ಸಾಧ್ಯವಿಲ್ಲ ಎಂದು ಉದ್ಯಮಿಗಳ ಪ್ರಸ್ತಾಪವನ್ನು ನಯಯವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ತಳ್ಳಿಹಾಕಿದ್ದಾರೆ.
ಸಭೆಯಲ್ಲಿ ಇನ್ಫೋಸಿಸ್ನ ಕ್ರಿಸ್ ಗೋಪಾಲಕೃಷ್ಣ, ಆರ್.ವಿ ಇಸ್ಟಿಟ್ಯೂಟ್ನ ಎಂಪಿ ಶ್ಯಾಮ್, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜೂಂದಾರ್ ಷಾ, ವಂಡರ್ ಲಾ ಎಂ.ಡಿ. ಅರುಣ್, ನ್ಯಾಷನಲ್ ಲಾ ಸ್ಕೂಲ್ನ ಸುಧೀರ್ ಕೃಷ್ಣಮೂರ್ತಿ, ಕಿರ್ಲೋಸ್ಕರ್ ಎಂ.ಡಿ. ಗೀತಾಂಜಲಿ ಕಿರ್ಲೋಸ್ಕರ್, ಬಿ ಪ್ಯಾಕ್ ಸಂಸ್ಥೆ ಸಿಇಒ ರೇವತಿ ಅಶೋಕ್, ಎಫ್ಐಸಿಸಿಐ FICCI ಚೇರ್ಮನ್ ಉಲ್ಲಾಸ್ ಕಾಮತ್, ಕೂ ಆ್ಯಪ್ ಕೋ ಫೌಂಡರ್ ಅಪ್ರಮೇಯ ರಾಧಾಕೃಷ್ಣ, ಬಾಗ್ಮನೆ ಟೆಕ್ ಪಾರ್ಕ್ ಸಂಸ್ಥಾಪಕ ರಾಜಾ ಬಾಗ್ಮನೆ, ಬ್ರಿಗೇಡ್ ಗ್ರೂಪ್ ಎಂ.ಡಿ ಜೈ ಶಂಕರ್, ಎಂಬೆಸಿ ಗ್ರೂಪ್ ಸಿಇಒ ಜಿತೇಂದ್ರ, ಮಾಜಿ ಕ್ರಿಕೆಟೆರ್ ಬ್ರಿಜೇಶ್ ಪಟೇಲ್, ಬೆಂಗಳೂರು ಸಂಸದರು, ಶಾಸಕರು, ಬಿಬಿಎಂಪಿ, ಬಿಡಿಎ, ಬಿಎಂಆರ್ಸಿಎಲ್, ಬೆಂಗಳೂರು ಸಂಚಾರ ವಿಭಾಗ ಅಧಿಕಾರಿಗಳು ಭಾಗಿಯಾಗಿದ್ದರು.
ಕರ್ನಾಟಕ
Ananth Namana: ಅನಂತ ಕುಮಾರ್ ಇದ್ದಿದ್ದರೆ ಕಾವೇರಿ ಇಷ್ಟರ ಮಟ್ಟಿಗೆ ವಿವಾದ ಆಗುತ್ತಿರಲಿಲ್ಲ ಎಂದ ಡಿಕೆಶಿ
Ananth Namana: ರಾಜ್ಯದ ಹಿತಾಸಕ್ತಿಗೆ ಯಾವುದೇ ತೊಂದರೆ ತೆಗೆದುಕೊಳ್ಳಲು ಕೇಂದ್ರ ಮಾಜಿ ಸಚಿವ ಅನಂತ ಕುಮಾರ್ ಅವರು ಸದಾ ಸಿದ್ಧರಾಗಿರುತ್ತಿದ್ದರು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರು: ಕೇಂದ್ರ ಮಾಜಿ ಸಚಿವ ಅನಂತ ಕುಮಾರ್ (Ananth Namana) ಅಜಾತಶತ್ರು. ರಾಜ್ಯದ ಹಿತಾಸಕ್ತಿಗೆ ಯಾವುದೇ ತೊಂದರೆ ತೆಗೆದುಕೊಳ್ಳಲು ಅವರು ಸದಾ ಸಿದ್ಧರಾಗಿರುತ್ತಿದ್ದರು. ಅವರು ಈಗ ಇದ್ದಿದ್ದರೇ ಯಾವುದೇ ಕಾರಣಕ್ಕೂ ಕಾವೇರಿ ವಿವಾದ ಇಷ್ಟರಮಟ್ಟಿಗೆ ಹೋಗಲು ಬಿಡುತ್ತಿರಲಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ಶನಿವಾರ ನಡೆದ ಅನಂತ ನಮನ -64 (Ananth Namana) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನಂತಕುಮಾರ್ ಕೇಂದ್ರ ಸಚಿವರಾಗಿದ್ದಾಗ ಕಾವೇರಿ ನೀರಿನ ಬಗ್ಗೆ ರಾತ್ರೋರಾತ್ರಿ ಅಫೀಡವಿಟ್ ಬದಲಾಯಿಸಿ ಕರ್ನಾಟಕದ ಪರವಾಗಿ ನಿಂತಿದ್ದರು ಎಂದು ಸ್ಮರಿಸಿದರು.
ತೇಜಸ್ವಿನಿ ರಾಜಕೀಯದಲ್ಲಿ ಮುನ್ನುಗ್ಗಬೇಕು
1985ರಲ್ಲಿ ನನಗೆ ಮೊದಲ ಬಾರಿಗೆ ವಿಧಾನಸಭೆ ಟಿಕೆಟ್ ಸಿಕ್ಕಿದಾಗ, ಅನಂತ್ಕುಮಾರ್ ರಹಸ್ಯವಾಗಿ 5 ಸಾವಿರ ರೂ. ಹಣ ನೀಡಿದ್ದರು. ರಾಜ್ಯದ ಪರವಾಗಿ ನಿಲ್ಲುತ್ತಿದ್ದ ಅವರನ್ನು ಸರ್ವಪಕ್ಷ ಸಭೆಯಲ್ಲಿ ಎಲ್ಲರೂ ನೆನಪಿಸಿಕೊಂಡರು. ನನ್ನ ಸಹೋದರಿ ತೇಜಸ್ವಿನಿ ಧೈರ್ಯ ಮಾಡಿ ರಾಜಕೀಯದಲ್ಲಿ ಮುನ್ನುಗ್ಗಬೇಕು. ಅನಂತ ಕುಮಾರ್ ಅವರ ಜತೆ ಸಂಸಾರ ಮಾಡಿ ನಿಮ್ಮದೇ ಆದ ರಾಜಕೀಯ ಜ್ಞಾನವಿದೆ, ನೀವು ರಾಜಕೀಯಕ್ಕೆ ಬರಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ | CM Siddaramaiah : ಶಾಸಕ, ಸಂಸದರಿಗೆ Good News; ಇನ್ನು ಮುಂದೆ ಪ್ರತಿ ಶನಿವಾರ ಸಿಎಂ ಸಿದ್ದರಾಮಯ್ಯ ನಿಮ್ಮನ್ನು ಭೇಟಿಯಾಗ್ತಾರೆ!
ಎಷ್ಟೋ ಹಸುಗಳು ಹುಟ್ಟುತ್ತವೆ, ಆದರೆ ಎಲ್ಲವೂ ಬಸವ ಆಗಲು ಸಾಧ್ಯವಿಲ್ಲ. ನೀವು ಇಲ್ಲೇ ಅಡುಗೆ ಮನೆಯಲ್ಲಿ ಅದಮ್ಯ ಚೇತನದ ಜತೆಯಲ್ಲೇ ಇರಬೇಕಾಗುತ್ತದೆ. ನಿಮ್ಮ ಹಿಂದೆ ದೊಡ್ಡ ಪಡೆ ಇದೆ, ಸಮಾಜವಿದೆ. ಮುನ್ನುಗ್ಗಿ, ನಿಮ್ಮನ್ನು ನಂಬಿಕೊಂಡಿರುವ ಹಿಂಬಾಲಕರನ್ನು ರಕ್ಷಣೆ ಮಾಡಿ. ತೇಜಸ್ವಿನಿ ಅವರೇ ನೀವು ಮುನ್ನುಗ್ಗಬೇಕು, ಹೊಲವನ್ನು ಉಳುಮೆ ಮಾಡದಿದ್ದರೆ ಮಟ್ಟ ಆಗುವುದಿಲ್ಲ. ಶಿಲೆ ಶಿಲ್ಪಿ ಕೈಗೆ ಸಿಗದಿದ್ದರೆ ಕಲೆ ಅರಳುವುದಿಲ್ಲ, ಕಲ್ಲು ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಈ ಕಾರಣಕ್ಕೆ ನೀವು ರಾಜಕಾರಣದಲ್ಲಿ ಇರಬೇಕು ಎಂದು ಸಲಹೆ ನೀಡುತ್ತೇನೆ ಎಂದರು.
ಮೆಟ್ರೋ ರೈಲು ಬರಲು ಅನಂತ ಕುಮಾರ್ ಕಾರಣ
ನಿಮ್ಮ ಇತಿಹಾಸವನ್ನು ಯಾರೂ ಬದಲಾವಣೆ ಮಾಡಲು, ಮುಚ್ಚಿಹಾಕಲು ಆಗುವುದಿಲ್ಲ. ಒಳ್ಳೆ ಕೆಲಸ ಮಾಡಿ ನಿಮ್ಮದೇ ಆದ ಛಾಪನ್ನು ಮೂಡಿಸಿಕೊಂಡಿದ್ದೀರಿ. ನಿಮ್ಮ ಜತೆ ರಾಜಕೀಯ ಭಿನ್ನಾಭಿಪ್ರಾಯ ಇರಬಹುದು. ಆದರೆ ನಿಮ್ಮ ಬಳಿ ಮೃದು ಹೃದಯವಿದೆ. ಅನಂತ ಕುಮಾರ್ ಅವರು ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ, ನೀವು ಹೆಜ್ಜೆ ಗುರುತು ಮೂಡಿಸಿ. ರಾಜ್ಯದಲ್ಲಿ ಮೆಟ್ರೋ ಬರಲು ಎಸ್.ಎಂ. ಕೃಷ್ಣ ಮತ್ತು ಅನಂತ ಕುಮಾರ್ ಅವರೇ ಕಾರಣ ಎಂದು ಹೇಳಿದರು.
ನಾನು ಎಸ್.ಎಂ.ಕೃಷ್ಣ ಅವರ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವನಾಗಿದ್ದೆ. ಕೇಂದ್ರದಲ್ಲಿ ಅನಂತ ಕುಮಾರ್ ನಗರಾಭಿವೃದ್ಧಿ ಸಚಿವರಾಗಿದ್ದರು. ಹಿಂದಿನ ಜೆ.ಎಚ್.ಪಟೇಲ್ ಸರ್ಕಾರ ಮೋನೊ ರೈಲಿಗೆ ಒಪ್ಪಿಗೆ ನೀಡಿತ್ತು. ಹುಡ್ಕೋ ಸಂಸ್ಥೆಯಿಂದ ನನ್ನನ್ನು ಹಾಗೂ ಇತರೇ ಸ್ನೇಹಿತರನ್ನು ವಿದೇಶಕ್ಕೆ ಮೆಟ್ರೊ ಕಾರ್ಯಾಚರಣೆ ಬಗ್ಗೆ ಅಧ್ಯಯನ ಮಾಡಲು ಪ್ರವಾಸ ಕಳುಹಿಸಿದ್ದರು. ಶ್ರೀಧರನ್ ಅವರು ಜತೆಯಲ್ಲಿ ಇದ್ದರು. ನಾವು ಮೆಟ್ರೋ ಇದ್ದರೆ ಅನುಕೂಲ ಎಂದು ಎಸ್.ಎಂ.ಕೃಷ್ಣ ಅವರಿಗೆ ವರದಿ ನೀಡಿದೆವು. ಅವರು ಅನಂತಕುಮಾರ್ ಅವರನ್ನು ಭೇಟಿಯಾಗಲು ಹೇಳಿದರು. ಕೇವಲ ಒಂದೇ ದಿನದಲ್ಲಿ ಪ್ರಧಾನಿಗಳಾದ ವಾಜಪೇಯಿ ಅವರನ್ನು ಭೇಟಿ ಮಾಡಿಸಿ, ನಿಮ್ಮ ಸಮಿತಿಯ ವರದಿ ಸರಿಯಾಗಿದೆ ಎಂದು ಹೇಳಿ, ಕೇಂದ್ರದಿಂದ ಒಪ್ಪಿಗೆ ಕೊಡಿಸಿದರು ಎಂದು ಸ್ಮರಿಸಿದರು.
ಯಾರು ಏನೇ ಹೇಳಿದರೂ ಬೆಂಗಳೂರು ಮೆಟ್ರೋ ಅನಂತ ಕುಮಾರ್ ಹಾಗೂ ಕೃಷ್ಣ ಅವರ ಕೊಡುಗೆ. ನಾನು ದೇವರು ಹಾಗೂ ಧರ್ಮದ ಬಗ್ಗೆ ನಂಬಿಕೆ ಇರುವವನು. ಬಿಟ್ಟು ಹೋಗುವುದಕ್ಕಿಂತ ಕೊಟ್ಟು ಹೋಗುವುದು ಲೇಸಯ್ಯ ಎನ್ನುವ ಪುರಂದರದಾಸರ ಮಾತಿನಂತೆ ಬದುಕಿದವರು ಅನಂತ್ಕುಮಾರ್. ಆದರೆ ಅವರ ವಿಚಾರದಲ್ಲಿ ದೇವರು ಕ್ರೂರಿಯಾಗಿಬಿಟ್ಟ. ಯಾವಾಗಲೂ ಅವರು ಎಲ್ಲರನ್ನೂ ನಗಿಸುತ್ತಾ ಇದ್ದವರು ಎಂದು ತಿಳಿಸಿದರು.
ಸ್ವಂತಕ್ಕೆ ಏನೂ ಮಾಡಿಕೊಂಡಿಲ್ಲ
ಡಿವಿಜಿ ಅವರ ನಗುವು ಸಹಜ ಧರ್ಮ, ನಗಿಸುವುದು ಪರಧರ್ಮ, ನಗುವ ಕೇಳುತ ನಗುವುದತಿಶಯದ ಧರ್ಮ, ನಗುವ ನಗಿಸುವ ನಗಿಸಿ ನಗುತ ಬಾಳುವ ಎಂಬ ಕಗ್ಗದಂತೆ ಬಾಳಿದವವರು ಅನಂತಕುಮಾರ್. ಪರೋಪಕಾರಾಯ ವಹಂತಿ ನದ್ಯಃ ಪರೋಪಕಾರಾಯ ದುಹಂತಿ ಗಾವಃ ಪರೋಪಕಾರಾರ್ಥಮ್ ಇದಂ ಶರೀರಮ್. ಮರ- ಗಿಡಗಳು, ಹಸುಗಳು, ನದಿಗಳು ಸ್ವಂತಕ್ಕೆ ಏನನ್ನೂ ಕೇಳುವುದಿಲ್ಲ, ಇವುಗಳು ಇರುವುದೇ ಪ್ರಕೃತಿಯ ಸೇವೆಗೆ, ಅದೇ ರೀತಿ ಅನಂತಕುಮಾರ್ ಅವರು ಸ್ವಂತಕ್ಕೆ ಏನೂ ಮಾಡಿಕೊಂಡಿಲ್ಲ, ಅವರು ಸೇವೆ ಮಾಡಿರುವುದೇ ಸಮಾಜಕ್ಕೆ ಎಂದರು.
ಇದನ್ನೂ ಓದಿ | Pradeep Eshwar: ಪೌರಕಾರ್ಮಿಕರಿಗೆ ಪಾದ ಪೂಜೆ ಮಾಡಿದ ಶಾಸಕ ಪ್ರದೀಪ್ ಈಶ್ವರ್
40 ವರ್ಷಗಳಲ್ಲಿ ನೂರಾರು ನಾಯಕರನ್ನು ತಯಾರು ಮಾಡಿ, ಅವರನ್ನು ಅನಾಥರನ್ನಾಗಿ ಮಾಡಿ ಹೋಗಿದ್ದಾರೆ. ಅವರು ಕೇವಲ ತೇಜಸ್ವಿನಿ ಅವರನ್ನು ಮಾತ್ರ ಬಿಟ್ಟು ಹೋಗಿಲ್ಲ. ನನಗೆ ವಿದ್ಯಾರ್ಥಿ ದೆಸೆಯಿಂದಲೂ ಅನಂತ್ಕುಮಾರ್ ಅವರು ತುಂಬಾ ಆತ್ಮೀಯರು. ಅವರು ಎಬಿವಿಪಿ ನಾಯಕರಾಗಿದ್ದರು, ಆಗಾಗ್ಗೆ ಜನರಲ್ ಹಾಸ್ಟೆಲ್ಗೆ ಬಂದು ಕಾಲ ಕಳೆಯುತ್ತಿದ್ದರು. ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ, ಪದುಮನಾಭನ ಪಾದ ಭಜನೆ ಪರಮ ಸುಖವಯ್ಯ, ಎಂಬ ಮಾತಿನಂತೆ ಇಂದು ನಾವೆಲ್ಲ ಅನಂತಪದುಮನಾಭ ಅವರನ್ನು ನೆನಪಿಸಿಕೊಂಡಿದ್ದೇವೆ. ಅವರ ಕನಸುಗಳನ್ನು ನನಸಾಗಿಸೋಣ ಎಂದು ಕರೆ ನೀಡಿದರು.
ಕರ್ನಾಟಕ
Cauvery Protest: ಮಂಡ್ಯದಲ್ಲಿ ಕಾವೇರಿ ಕಿಚ್ಚು; ರೈತರ ಬಂದ್ ಕರೆಗೆ ಸರ್ವವೂ ಸ್ತಬ್ಧ, ಹೋರಾಟಕ್ಕೆ ರಾಜ್ಯದೆಲ್ಲೆಡೆ ಬೆಂಬಲ
Cauvery protest : ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಖಂಡಿಸಿ ರೈತ ಸಂಘಟನೆಗಳ ಕರೆ ಮೇರೆಗೆ ನಡೆದ ಮಂಡ್ಯ ಬಂದ್ ಶನಿವಾರ ಯಶಸ್ವಿಯಾಗಿ ನಡೆಯಿತು. ಯಾವುದೇ ಅಹಿತಕರ ಘಟನೆಗಳಿಲ್ಲದೆ ಜನರು ತಮ್ಮ ಪ್ರತಿಭಟನೆ ದಾಖಲಿಸಿದರು.
ಮಂಡ್ಯ: ರಾಜ್ಯದಲ್ಲಿ ಮಳೆ ಇಲ್ಲದೆ ಸಂಕಷ್ಟ ಕಾಲ ಬಂದಿದ್ದರೂ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ (Cauvery protest) ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕರೆ ನೀಡಿದ್ದ ಮಂಡ್ಯ ಬಂದ್ (Mandya bandh) ಯಶಸ್ವಿಯಾಯಿತು. ರೈತರು ನಗರ ಮತ್ತು ಜಿಲ್ಲೆಯ ನಾನಾ ಭಾಗಗಳಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಯನ್ನು ಸಂಘಟಿಸಿದ್ದರೆ, ಜನರು ಅಂಗಡಿ ಮುಂಗಟ್ಟು, ವ್ಯಾಪಾರ ವಹಿವಾಟುಗಳನ್ನು ನಿಲ್ಲಿ ಸಿ ತಮ್ಮ ಬೆಂಬಲ ಸಾರಿದರು. ಕಾವೇರಿ ಹೋರಾಟಕ್ಕೆ ರಾಜ್ಯದ ಎಲ್ಲ ಕಡೆಗಳಲ್ಲೂ ಬೆಂಬಲ ವ್ಯಕ್ತವಾಗಿದ್ದು, ಸಂಘಟನೆಗಳು ಪ್ರತಿಭಟನೆ, ಜಾಥಾಗಳನ್ನು ನಡೆಸಿದವು.
ಆರಂಭದಲ್ಲಿ ಇದು ಮಂಡ್ಯ ನಗರಕ್ಕೆ ಸೀಮಿತವಾಗಿ ಘೋಷಣೆಯಾಗಿದ್ದರೂ ಮದ್ದೂರು, ಭಾರತಿ ನಗರ ಸೇರಿದಂತೆ ಹಲವು ಭಾಗಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು (Shops Closed) ಮುಚ್ಚಿ ಜನರು ಬೆಂಬಲ ನೀಡಿದರು. ದಿನಸಿ ಅಂಗಡಿಗಳು, ಬಟ್ಟೆ ಅಂಗಡಿಗಳು, ಆಭರಣ ಮಳಿಗೆಗಳು, ಹೋಟೆಲ್ಗಳು, ಬೇಕರಿಗಳು, ಚಿತ್ರಮಂದಿರಗಳು, ಖಾಸಗಿ ಕಚೇರಿಗಳು ಮುಚ್ಚಿದ್ದವು.
ಹೆಚ್ಚಿನ ಖಾಸಗಿ ಶಾಲೆ-ಕಾಲೇಜುಗಳು ಮೊದಲೇ ರಜೆ ಘೋಷಿಸಿದ್ದರೆ ಕೆಲವು ಶಾಲೆಗಳು ಓಪನ್ ಇದ್ದವು. ಪ್ರತಿಭಟನಾಕಾರರು ಅವುಗಳನ್ನು ಮುಚ್ಚಿಸಿದ ಬಳಿಕ ವಿದ್ಯಾರ್ಥಿಗಳೂ ಪ್ರತಿಭಟನೆಗೆ ಇಳಿದರು. ನಗರ ವ್ಯಾಪ್ತಿಯಲ್ಲಿ ಬಸ್ ಸಂಚಾರ ಇರಲಿಲ್ಲ. ಆದರೆ, ಗ್ರಾಮೀಣ ಭಾಗದಲ್ಲಿ ಸರಕಾರಿ ಬಸ್ ಸೇವೆ ಎಂದಿನಂತೆ ಇತ್ತು. ನಗರದಲ್ಲಿ ಮಧ್ಯಾಹ್ನದವರೆಗೆ ಆಟೋಗಳ ಸೇವೆ ಬಂದ್ ಇತ್ತು.
ರಸ್ತೆತಡೆ, ಪ್ರತಿಭಟನಾ ಮೆರವಣಿಗೆ, ರಸ್ತೆಯಲ್ಲಿ ಉರುಳು ಸೇವೆ, ಬಾಯಿ ಬಡಿದುಕೊಳ್ಳುವುದು, ಮಕ್ಕಳಿಂದ ಖಾಲಿ ಕೊಡಗಳ ಪ್ರದರ್ಶನ, ಮಾನವ ಸರಪಳಿ ರಚನೆ, ಶ್ವಾನ ಪ್ರದರ್ಶನ, ಎಮ್ಮೆ ಮತ್ತು ಎಮ್ಮೆ ಕರುವಿನೊಂದಿಗೆ ಪ್ರತಿಭಟನೆ ಹೀಗಾಗಿ ಹತ್ತಾರು ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸ್ಥಳ ಜೆ.ಸಿ ವೃತ್ತದಲ್ಲಿ ಇಡೀ ದಿನ ಜನಸಾಗರ, ರಾಜಕಾರಣಿಗಳ ಬೆಂಬಲ
ಪ್ರತಿಭಟನೆಯ ಕೇಂದ್ರ ಸ್ಥಳ ಜೆ.ಸಿ.ವೃತ್ತದಲ್ಲಿ ಇಡಿ ದಿನ ಜನಸಾಗರ ನೆರೆದಿತ್ತು. ಮಾಜಿ ಸಚಿವ ಸಿ.ಟಿ.ರವಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಪಿ.ಉಮೇಶ್ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಕರ್ಯಕರ್ತರು ನಗರದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯೊಂದಿಗೆ ಧರಣಿಯಲ್ಲಿ ಭಾಗವಹಿಸಿದ್ದರು.
ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಅವರು ಕೆಆರ್ಎಸ್ನಲ್ಲಿ ಪರಿಶೀಲನೆ ನಡೆಸಿ ರಸ್ತೆ ಮಾರ್ಗವಾಗಿ ಮಂಡ್ಯಕ್ಕೆ ಆಗಮಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿದ್ದ ಅನಿರ್ಧಿಷ್ಟಾವಧಿ ಮುಷ್ಕರವನ್ನು ಬೆಂಬಲಿಸಿದರು. ಸಂಜೆ ಐದು ಗಂಟೆಯ ನಂತರ ಎಲ್ಲ ವ್ಯಾಪಾರ ವಹಿವಾಟುಗಳು ಎಂದಿನಂತೆ ನಡೆದವು.
ಇದನ್ನೂ ಓದಿ: Cauvery Protest : ಮಂಡ್ಯದಲ್ಲಿ ಭುಗಿಲೆದ್ದ ಆಕ್ರೋಶ; ಕಾವೇರಿ ನೀರಿಗಾಗಿ ವಿದ್ಯಾರ್ಥಿಗಳು ಸಾಥ್
ಎಕ್ಸ್ಪ್ರೆಸ್ವೇನಲ್ಲಿ ಸಂಚಾರ ಸುಗಮ
ಮಂಡ್ಯದಲ್ಲಿ ಬಂದ್ ನಡೆಯುತ್ತಿದ್ದರೂ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಯಾವುದೇ ಸಮಸ್ಯೆಯಿರಲಿಲ್ಲ. ಬೆಂಗಳೂರು-ಮೈಸೂರು ನಡುವೆ ಎಂದಿನಂತೆ ವಾಹನಗಳು ಸಂಚರಿಸುತ್ತಿದ್ದವು. ಮಂಡ್ಯ ನಗರಕ್ಕೆ ಬರುತ್ತಿದ್ದ ಬಸ್ಗಳು ಕೂಡ ಹೆದ್ದಾರಿಯಲ್ಲೇ ಸಂಚಾರ ನಡೆಸಿದವು.
ಕರ್ನಾಟಕ
Vinay Kulkarni: ಧಾರವಾಡ ಪ್ರವೇಶಕ್ಕೆ ವಿನಯ್ ಕುಲಕರ್ಣಿಗೆ ಮತ್ತೆ ಅನುಮತಿ ನಿರಾಕರಿಸಿದ ಹೈಕೋರ್ಟ್
Vinay Kulkarni: ಬಿಜೆಪಿ ಮುಖಂಡ ಯೋಗೀಶ್ ಗೌಡರ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಬಂಧನವಾಗಿ ಷರತ್ತುಬದ್ಧ ಜಾಮೀನಿನ ಮೇಲೆ ಹೊರಗಿದ್ದಾರೆ. ಹೀಗಾಗಿ ಅವರಿಗೆ ಧಾರವಾಡ ಪ್ರವೇಶಕ್ಕೆ ಹೈ ಕೋರ್ಟ್ ನಿಷೇಧ ವಿಧಿಸಿದೆ.
ಬೆಂಗಳೂರು: ಬಿಜೆಪಿ ಮುಖಂಡ ಯೋಗೀಶ್ ಗೌಡರ ಕೊಲೆ ಪ್ರಕರಣದಲ್ಲಿ ಆರೋಪಿಯಾದ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಧಾರವಾಡ ಪ್ರವೇಶಕ್ಕೆ ಹೈಕೋರ್ಟ್ ಮತ್ತೊಮ್ಮೆ ಅನುಮತಿ ನಿರಾಕರಿಸಿದೆ. ಧಾರವಾಡ ಪ್ರವೇಶಕ್ಕಿರುವ ನಿಷೇಧವನ್ನು ತೆರವು ಮಾಡುವಂತೆ ಕೋರಿ ಶಾಸಕ ವಿನಯ್ ಕುಲಕರ್ಣಿ (Vinay Kulkarni) ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ವಜಾ ಮಾಡಿದೆ.
ಶಾಸಕನಾಗಿರುವ ಕಾರಣಕ್ಕೆ ಕ್ಷೇತ್ರಕ್ಕೆ ಭೇಟಿ ನೀಡಲು ಅವಕಾಶ ನೀಡಬೇಕು ಎಂದು ವಿನಯ್ ಕುಲಕರ್ಣಿ ಕೋರಿದ್ದರು. ಈ ಹಿಂದೆ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದಾಗಲೂ ಷರತ್ತು ಸಡಿಲಿಸಿರಲಿಲ್ಲ. ಚುನಾವಣೆ ವೇಳೆಯೂ ಕ್ಷೇತ್ರ ಭೇಟಿಗೆ ಅನುಮತಿ ನಿರಾಕರಿಸಲಾಗಿತ್ತು. ಇದೀಗ ಮತ್ತೊಮ್ಮೆ ಶಾಸಕರಿಗೆ ಹಿನ್ನಡೆಯಾಗಿದೆ.
ಯೋಗೀಶಗೌಡ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅವರ ಮೇಲೆ ಈಗಾಗಲೇ ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ ಗುರುತರ ಆರೋಪವಿದ್ದು, ಪ್ರಮುಖ ಸಾಕ್ಷಿಗಳ ವಿಚಾರಣೆ ಇನ್ನೂ ಆರಂಭವಾಗಿಲ್ಲ. ಸಿಬಿಐ ಪರ ಎಸ್ಪಿಪಿ ಪ್ರಸನ್ನ ಕುಮಾರ್ ವಾದಿಸಿದ್ದರು. ಹೀಗಾಗಿ ಷರತ್ತು ಸಡಿಲಿಕೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಇದನ್ನೂ ಓದಿ | Cauvery Dispute: ಮೈಸೂರಿನಲ್ಲಿ ಸಚಿವ ಡಾ.ಮಹದೇವಪ್ಪ ಕಾರಿಗೆ ಮುತ್ತಿಗೆ ಹಾಕಿ ರೈತರ ಆಕ್ರೋಶ
ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶಗೌಡ ಗೌಡ ಅವರನ್ನು 2016ರ ಜೂನ್ 15ರಂದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರಲ್ಲಿ ವಿನಯ್ ಕುಲಕರ್ಣಿ ಅವರನ್ನು ಬಂಧಿಸಲಾಗಿತ್ತು. ಅಲ್ಲದೆ, ಧಾರವಾಡ ಜಿಲ್ಲೆಗೆ ಪ್ರವೇಶಿಸದಂತೆ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಒಂದು ವೇಳೆ ಧಾರವಾಡಕ್ಕೆ ತೆರಳಿದರೆ ಜಾಮೀನು ರದ್ದುಪಡಿಸುವುದಾಗಿ ಕೋರ್ಟ್ ಎಚ್ಚರಿಕೆ ನೀಡಿತ್ತು.
ಕರ್ನಾಟಕ
Cauvery protest : ಸೆ. 26ರ ಬೆಂಗಳೂರು ಬಂದ್ಗೆ ಭಾರಿ ಬೆಂಬಲ; ಏನಿರುತ್ತೆ? ಏನಿರಲ್ಲ?; ಕರ್ನಾಟಕ ಬಂದ್ಗೂ ಪ್ಲ್ಯಾನಿಂಗ್
Cauvery protest : ಬೆಂಗಳೂರಿನಲ್ಲಿ ಮಂಗಳವಾರ ನಡೆಸಲು ಉದ್ದೇಶಿಸಿರುವ ಕಾವೇರಿ ಬಂದ್ಗೆ ಹಲವು ಸಂಘಟನೆಗಳು ಬೆಂಬಲ ನೀಡಿವೆ. ಹಾಗಿದ್ದರೆ ಏನಿರುತ್ತೇ? ಏನಿರಲ್ಲ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರು: ಕಾವೇರಿ ನೀರಿನ ಉಳಿವಿಗಾಗಿ ಸೆಪ್ಟೆಂಬರ್ 26ರಂದು (ಮಂಗಳವಾರ) ಕರೆ ನೀಡಲಾಗಿರುವ ಸ ಬೆಂಗಳೂರು ಬಂದ್ಗೆ (Bangalore bandh on September 26) ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಕರ್ನಾಟಕ ಜಲ ಸಂರಕ್ಷಣಾ ಸಮಿತಿ (Karnataka Jala Samrakshana Samiti) ನೇತೃತ್ವದಲ್ಲಿ ಫ್ರೀಡಂ ಪಾರ್ಕ್ನಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ (Cauvery Protest) ಬಂದ್ ಬಗ್ಗೆ ತೀರ್ಮಾನ ತೆಗೆದುಕೊಂಡ ಬೆನ್ನಿಗೇ ನಾನಾ ಸಂಘಟನೆಗಳು ತಮ್ಮ ಬೆಂಬಲವನ್ನು ಘೋಷಣೆ ಮಾಡಿವೆ.
ಫ್ರೀಡಂ ಪಾರ್ಕ್ನಲ್ಲಿ ನಡೆದ ಸಭೆಯಲ್ಲಿ ಬೆಂಗಳೂರಿನ ಪ್ರಮುಖ ಅಪಾರ್ಟ್ ಮೆಂಟ್ ಅಸೋಸಿಯೇಷನ್, ಲೇಔಟ್ ಅಸೋಸಿಯೇಷನ್, ಹೋಟೆಲ್ ಮಾಲೀಕರ ಸಂಘ, ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು, ಐಟಿ ಕಂಪನಿಗಳು ಭಾಗಿಯಾಗಿದ್ದವು. ಬಂದ್ ಘೋಷಣೆಯಾದ ಬಳಿಕ ಹಲವು ಸಂಘಟನೆಗಳು ತಾವು ನಿಮ್ಮ ಜತೆಗಿರುತ್ತೇವೆ ಎಂದು ಪ್ರಕಟಿಸಿವೆ. ಹೀಗಾಗಿ ಬಂದ್ ಯಶಸ್ವಿಯಾಗುವ ಸಾಧ್ಯತೆಗಳು ಕಂಡುಬರುತ್ತಿವೆ.
ಏನಿರುತ್ತೆ?: ಆಸ್ಪತ್ರೆ, ಮೆಡಿಕಲ್ ಸ್ಟೋರ್, ಹಾಲಿನ ಬೂತ್, ಅಗತ್ಯ ವಸ್ತುಗಳು, ಮೆಟ್ರೋ, ಆಂಬುಲೆನ್ಸ್
ಏನಿರಲ್ಲ: ಆಟೋ, ಕ್ಯಾಬ್, ಗೂಡ್ಸ್ ವಾಹನಗಳು, ಖಾಸಗಿ ಬಸ್ಗಳು, ಥಿಯೇಟರ್, ಸೂಪರ್ ಮಾರ್ಕೆಟ್, ಪೆಟ್ರೋಲ್ ಬಂಕ್, ಶಾಲಾ -ಕಾಲೇಜ್ಗಳು, ಅಂಗಡಿಗಳು, ಬೀದಿಬದಿ ಅಂಗಡಿಗಳು, ಜ್ಯುವೆಲ್ಲರಿ ಶಾಪ್ಗಳು, ಕೈಗಾರಿಕೆಗಳು ಹೋಟೆಲ್ಗಳು, ಮಾಲ್ಗಳು
ಬಂದ್ಗೆ ಬೆಂಬಲ ನೀಡಿರುವ ಸಂಘಟನೆಗಳು
- ಅಖಿಲ ಕರ್ನಾಟಕ ಯುವ ಕನ್ನಡಿಗರ ವೇದಿಕೆ
- ಕರ್ನಾಟಕ ಚಾಲಕರ ವೇದಿಕೆ
- ಕರ್ನಾಟಕ ಕನ್ನಡಿಗರ ವೇದಿಕೆ
- ಕರ್ನಾಟಕ ಯುವ ರಕ್ಷಣಾ ವೇದಿಕೆ
- ಸುವರ್ಣ ಕರ್ನಾಟಕ ಹಿತರಕ್ಷಣಾ ವೇದಿಕೆ
- ಕಾವೇರಿ ಕನ್ನಡಿಗರ ವೇದಿಕೆ
- ಅಖಿಲ ಭಾರತ ಕಾರ್ಮಿಕರ ಹಿತರಕ್ಷಣಾ ವೇದಿಕೆ
- ಜೈ ಭಾರತ ರಕ್ಷಣಾ ವೇದಿಕೆ
- ಕಾರ್ಮಿಕರ ಪಡೆ
- ಕರವೇ ಕನ್ನಡಿಗರ ಸಾರಥ್ಯ
- ಕರವೇ ಕನ್ನಡ ಸೇನೆ
- ನಮ್ಮ ನಾಡ ರಕ್ಷಣಾ ವೇದಿಕೆ
- ಕರ್ನಾಟಕ ಸಿಂಹ ಘರ್ಜನೆ ವೇದಿಕೆ
- ಕರುನಾಡ ಕಾವಲು ಪಡೆ
- ಜೈ ಕರ್ನಾಟಕ
- ಕರ್ನಾಟಕ ರಾಜ್ಯ ಕಾರ್ಮಿಕರ ಹಿತ ರಕ್ಷಣಾ ವೇದಿಕೆ
- ಹೊಯ್ಸಳ ಸೇನೆ
- ಕರವೇ ಗಜಸೇನೆ
- ಜೈ ಕರುನಾಡ ಯುವಸೇನೆ
- ಕರುನಾಡ ಯುವಪಡೆ
- ಕೆಂಪೇಗೌಡ ಸೇನೆ
- ಒಕ್ಕಲಿಗರ ಯುವ ವೇದಿಕೆ
- ನೆರವು ಕಟ್ಟದ ಕಾರ್ಮಿಕರ ಸಂಘ
- ಅಖಿಲ ಕರ್ನಾಟಕ ಯುವ ಸೇನೆ
- ಯುವ ಶಕ್ತಿ ಕರ್ನಾಟಕ
- ದಲಿತ ಸಂರಕ್ಷಣ ಸಮಿತಿ
- ಕರ್ನಾಟಕ ಸಮರ ಸೇನೆ
- ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆ
- ದಲಿತ ಜನಸೇನಾ
- ಕರುನಾಡ ಜನ ಬೆಂಬಲ ವೇದಿಕೆ
- ಕರ್ನಾಟಕ ದಲಿತ ಜನಸೇನೆ
- ಜೈ ಭಾರತ ಚಾಲಕರ ಸಂಘ
- ರಾಜ್ಯ ಕರ್ನಾಟಕ ಸೇನೆ
- ಕರವೇ ಜನಸೇನೆ
- ಅಖಂಡ ಕರ್ನಾಟಕ ರಕ್ಷಣಾ ವೇದಿಕೆ
- ಕರುನಾಡ ಸೇನೆ
- ಕರ್ನಾಟಕ ಚಳುವಳಿ ವೇದಿಕೆ
- ಕನ್ನಡ ಸಾಹಿತ್ಯ ಪರಿಷತ್
- ಓಲಾ ಹಾಗೂ ಉಬರ್ ಮಾಲೀಕರ ಸಂಘ
- ರಾಜ್ಯ ಕಬ್ಬು ಬೆಳೆಗಾರರ ಸಂಘ
- ಆಮ್ ಆದ್ಮಿ ಪಕ್ಷ
- ಕನ್ನಡ ಚಳವಳಿ ಕೇಂದ್ರ ಸಮಿತಿ
- ಜಯ ಕರ್ನಾಟಕ ಸಂಘಟನೆ
- ರಾಷ್ಟ್ರೀಯ ಚಾಲಕರ ಒಕ್ಕೂಟ
- ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘ
- ತಮಿಳು ಸಂಘ
- ಕೆಂಪೇಗೌಡ ಸಮಿತಿ
- ರಾಜಸ್ತಾನಿ ಭಾಷಿಕರ ಸಂಘ
- ಕರ್ನಾಟಕ ರಕ್ಷಣಾ ಸೇನೆ
ಮಂಗಳವಾರದ ಬಂದ್ ಹೇಗಿರಲಿದೆ?
1.ಬೆಂಗಳೂರಿನ ಬಹುತೇಕ ಕನ್ನಡ ಸಂಘಟನೆಗಳು ಬೆಂಬಲ ನೀಡಿರುವುದರಿಂದ ಸ್ಥಳೀಯವಾಗಿ ಬಂದ್ನ್ನು ಯಶಸ್ವಿಗೊಳಿಸುವ ಪ್ರಯತ್ನಗಳನ್ನು ಕಾರ್ಯಕರ್ತರು ನಡೆಸುವ ಸಾಧ್ಯತೆಗಳಿವೆ.
2. ಕರ್ನಾಟಕ ವಿದ್ಯಾರ್ಥಿ ವೇದಿಕೆ ರಾಜ್ಯಾಧ್ಯಕ್ಷರಾದ ಡಾ.ಶಿವಶಂಕರ್ ಅವರು ಶಾಲೆ ಕಾಲೇಜುಗಳನ್ನು ಬಂದ್ ಮಾಡುವಂತೆ ಮನವಿ ಮಾಡಿದ್ದಾರೆ. ಕಾವೇರಿ ವಿಚಾರವಾಗಿರುವುದರಿಂದ ಬಂದ್ಗೆ ಬೆಂಬಲ ಕೊಡುವ ಸಾಧ್ಯತೆಗಳಿವೆ. ಇನ್ನೂ ಅಧಿಕೃತವಾಗಿ ಶಾಲೆ ಕಾಲೇಜುಗಳ ಬಂದ್ ಘೋಷಣೆಯಾಗಿಲ್ಲ.
3. ರಾಷ್ಟ್ರೀಯ ಚಾಲಕರ ಒಕ್ಕೂಟದ ಅಧ್ಯಕ್ಷ ಗಂಡಸಿ ಸದಾನಂದಸ್ವಾಮಿ ಅವರು ಬಂದ್ ಗೆ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಅಂದು ಎಲ್ಲಾ ವಾಹನಗಳು ಸಂಚಾರ ನಿಲ್ಲಿಸಲಾಗುತ್ತದೆ ಎಂದಿದ್ದಾರೆ.
4.ಬೆಂಗಳೂರು ಹೋಟೆಲ್ ಮಾಲೀಕರ ಸಂಘದಿಂದ ನೈತಿಕ ಬೆಂಬಲ ನೀಡುವುದಾಗಿ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಮಾಹಿತಿ ನೀಡಿದ್ದಾರೆ.
5. ಓಲಾ, ಉಬರ್ ಇರುವುದಿಲ್ಲ: ಬೆಂಗಳೂರಿನಾದ್ಯಂತ ಮಂಗಳವಾರ ಓಲಾ, ಉಬರ್ ಓಡಿಸದಿರಲು ನಿರ್ಧರಿಸಲಾಗಿದೆ ಎಂದು ಓಲಾ, ಉಬರ್ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ತಿಳಿಸಿದ್ದಾರೆ.
6. ಆಟೋ, ಟ್ಯಾಕ್ಸಿಗಳು ಇರುವುದು ಡೌಟ್: ಹಲವಾರು ಆಟೋ ಸಂಘಟನೆಗಳು ಬೆಂಬಲ ಘೋಷಿಸಿವೆ. ಅಂತಿಮವಾಗಿ ಸಮಗ್ರ ಬೆಂಬಲ ದೊರೆಯುವ ನಿರೀಕ್ಷೆ ಇದೆ.
7. ಅಂಗಡಿ ಮುಂಗಟ್ಟುಗಳು ಬಂದ್ ಆಗುವ ಸಾಧ್ಯತೆ ಇದೆ. ಜನರು ಸ್ವಯಂಪ್ರೇರಿತವಾಗಿ ಬಂದ್ ಮಾಡಬಹುದು.
8. ಎಲ್ಲ ರೀತಿಯ ಸಂಚಾರ ವ್ಯವಸ್ಥೆ ಸ್ಥಗಿತವಾಗುವ ಸಾಧ್ಯತೆ ಇದೆ.
9. ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಂದ್ ಮಾಡುವುದಾಗಿ ಪ್ರಕಟಿಸಲಾಗಿದೆ.
10. ಬಿಬಿಎಂಪಿ ನೌಕರರ ಸಂಘ ಬೆಂಬಲ ನೀಡಿದೆ. ಹೀಗಾಗಿ ಕಾರ್ಮಿಕರು, ನೌಕರರು ಕೆಲಸಕ್ಕೆ ಹಾಜರಾಗುವುದಿಲ್ಲ.
11. ಸರ್ಕಾರಿ ನೌಕರರ ಸಂಘಟನೆ ಇನ್ನೂ ತೀರ್ಮಾನ ಮಾಡಿಲ್ಲ. ಆದರೆ, ಹಾಜರಾತಿ ವಿರಳ ಆಗಬಹುದು.
12. ಸಿನಿಮಾ ರಂಗ ಬಂದ್ನ್ನು ಬೆಂಬಲಿಸುವುದರಿಂದ ಸಿನಿಮಾ ಮಂದಿರಗಳು ಬಂದ್ ಇರಲಿವೆ.
ಹಾಗಿದ್ದರೆ ಏನೇನು ಇರಬಹುದು?
– ಹಾಲು, ತರಕಾರಿ, ಪತ್ರಿಕೆ, ಆಸ್ಪತ್ರೆ, ಮೆಡಿಕಲ್ ಸೇರಿದಂತೆ ಅಗತ್ಯ ವಸ್ತುಗಳು ಇರುತ್ತವೆ.
– ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಬಸ್ಗಳು ವಿರಳವಾಗಿ ಸಂಚರಿಸುವ ಸಾಧ್ಯತೆ ಇದೆ.
– ತುರ್ತು ಅಗತ್ಯದ ಸೇವೆಗಳಿಗೆ, ಅದಕ್ಕೆ ಹೋಗುವವರಿಗೆ ಯಾವುದೇ ತೊಂದರೆ ಇರಲಾರದು. ಆದರೆ, ಅಧಿಕೃತ ಗುರುತು ಚೀಟಿ ಬೇಕಾದೀತು.
– ಮೆಟ್ರೋ ಸಂಚಾರ ಇರಬಹುದು.
ಸಮಗ್ರ ಕರ್ನಾಟಕ ಬಂದ್ಗೆ ವಾಟಾಳ್ ಚಿಂತನೆ
ಇತ್ತ ಬೆಂಗಳೂರು ಬಂದ್ಗೆ ಕರೆ ನೀಡಿದ ಬೆನ್ನಿಗೇ ಕನ್ನಡ ಚಳುವಳಿ ವಾಟಾಳ್ ಪಕ್ಷದ ನಾಯಕ ವಾಟಾಳ ನಾಗರಾಜ್ ಅವರು ಸಮಗ್ರ ಕರ್ನಾಟಕ ಬಂದ್ಗೆ ಕರೆ ನೀಡಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಸೋಮವಾರ ಸಮಗ್ರ ಕರ್ನಾಟಕ ಬಂದ್ ಕರೆಯ ಬಗ್ಗೆ ಚರ್ಚೆ ನಡೆಯಲಿದೆ ವಾಟಾಳ್ ನಾಗರಾಜ್ ಜೊತೆ ಮಾತುಕತೆ ಬಳಿಕ ರೈತ ಮುಂದಾಳು ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
-
ಸುವಚನ16 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕರ್ನಾಟಕ22 hours ago
Heart Attack: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಸದ್ದಿಗೆ ಹಾರಿಹೋಯ್ತು ಯುವಕನ ಪ್ರಾಣ!
-
ದೇಶ11 hours ago
Kamal Haasan: ಸನಾತನ ಧರ್ಮದ ವಿಷಯದಲ್ಲಿ ‘ಮಗು’ ಉದಯನಿಧಿ ಮೇಲೆ ದಾಳಿ ಎಂದ ಕಮಲ್ ಹಾಸನ್
-
ದೇಶ23 hours ago
Money Guide: ಅತ್ಯುತ್ತಮ ನಿವೃತ್ತ ಜೀವನಕ್ಕಾಗಿ ಟಾಪ್ 10 ಹಣ ಉಳಿತಾಯದ ಟಿಪ್ಸ್!
-
ಅಂಕಣ14 hours ago
ವಿಸ್ತಾರ ಅಂಕಣ: ಮಣ್ಣು ಬರೀ ಮಣ್ಣಲ್ಲ, ಅದು ನಮ್ಮ ಭಾವಕೋಶ, ನಾವು ಮಣ್ಣಿನ ಮಕ್ಕಳು!
-
ದೇಶ21 hours ago
‘ದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿ’! ಡ್ಯಾನಿಶ್ ಅಲಿಯನ್ನು ಭೇಟಿಯಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
-
ಕರ್ನಾಟಕ7 hours ago
Suspicious death : ಮನೆಯಲ್ಲಿ ನೇತಾಡುತ್ತಿತ್ತು ಹೆಂಡ್ತಿ ಶವ; ಚಿತೆಯ ಫೋಟೊ ಹಾಕಿದ ಗಂಡ!
-
ಕ್ರಿಕೆಟ್24 hours ago
T20 World Cup : 2024 ಟಿ20 ವಿಶ್ವ ಕಪ್ ಪಂದ್ಯಗಳು ಎಲ್ಲೆಲ್ಲಿ ನಡೆಯುತ್ತವೆ ಎಂಬ ಮಾಹಿತಿ ಇಲ್ಲಿದೆ