Site icon Vistara News

ನೀರಾ ಕುಡಿದಾಗ ನನಗೆ ಅಮಲಾಗಲಿಲ್ಲ: ಅನುಭವ ಮೆಲುಕು ಹಾಕಿದ ಡಿಸಿಎಂ ಡಿ.ಕೆ.ಶಿವಕುಮಾರ್

dks

dks

ಬೆಂಗಳೂರು: ʼʼ30-35 ವರ್ಷಗಳ ಹಿಂದೆ ನಾನು ನೀರಾ (Neera) ಕುಡಿದಿದ್ದೆ. ಅದು ಜ್ಯೂಸ್‌ನಂತಿತ್ತು. ನನಗೆ ಯಾವುದೇ ಮತ್ತು ಬರಲಿಲ್ಲ” ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಅವರ ಮಾತು ಸ್ವಾರಸ್ಯಕರ ಚರ್ಚೆಗೆ ಗ್ರಾಸವಾಯಿತು.

ಪ್ರಶ್ನೋತ್ತರ ಕಲಾಪದ ವೇಳೆ ಬಿ.ಕೆ.ಹರಿಪ್ರಸಾದ್ ಅವರು, ʼʼಸಾರಾಯಿ ನಿಷೇಧದ ನಂತರ ಅನೇಕರು ಬೀದಿಗೆ ಬಂದಿದ್ದು, ಅಬಕಾರಿ ಇಲಾಖೆ ವತಿಯಿಂದ ಇವರಿಗಾಗಿ ಯಾವುದಾದರೂ ಕಾರ್ಯಕ್ರಮ ಹಮ್ಮಿಕೊಂಡಿದೆಯೇ?ʼʼ ಎಂದು ಪ್ರಶ್ನೆ ಕೇಳಿದರು. ಈ ಸಂದರ್ಭದಲ್ಲಿ ಸೇಂದಿ, ಸಾರಾಯಿಯನ್ನು ಉಪ ಕಸುಬಾಗಿಸಿಕೊಂಡಿದ್ದ ಸಮುದಾಯಕ್ಕೆ ನೀರಾ ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನೀರಾ ಸೇವನೆ ವಿಚಾರವಾಗಿ ಮಾಡಿದ ಚರ್ಚೆ ಸದನವನ್ನು ನಗೆಗಡಲಲ್ಲಿ ತೇಲಿಸಿತು.

ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, “ಸಾರ್ವಜನಿಕ ಹಿತಾಸಕ್ತಿಗಾಗಿ ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಸೇಂದಿ ಹಾಗೂ ಯಡಿಯೂರಪ್ಪ ಅವರ ಕಾಲದಲ್ಲಿ ಸಾರಾಯಿ ನಿಷೇಧ ಮಾಡಲಾಯಿತು. ಸೇಂದಿ ಬದಲಾಗಿ ನೀರಾ ಬಂದಿದ್ದು ನೀರಾ ಮಳಿಗೆಗಳ ಸ್ಥಾಪನೆಗೆ ಅನುಮತಿ ನೀಡಬೇಕು. ಈ ಸಮುದಾಯದವರಿಗೆ ಎಂಎಸ್ಐಎಲ್‌ನಲ್ಲಿ ಅವಕಾಶ ನೀಡಬೇಕು” ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ʼʼನೀವು ನೀರಾ ಕುಡಿಯುವ ಪ್ರಯತ್ನ ಮಾಡಿಲ್ಲವೇ?ʼʼ ಎಂದು ಪೂಜಾರಿ ಅವರಿಗೆ ಕೇಳಿದರು. ಅದಕ್ಕೆ ಉತ್ತರಿಸಿದ ಪೂಜಾರಿ, “ನಾನು ನೀರಾ ಕುಡಿಯಬೇಕು ಎಂದು ಅಂದುಕೊಂಡೆ. ಆದರೆ ಅದನ್ನು ಕುಡಿದ ಮೇಲೆ ನಿಂತುಕೊಳ್ಳುವ ಶಕ್ತಿ ನನ್ನಲ್ಲಿರುತ್ತದೆಯೇ ಎಂಬ ಅನುಮಾನ ಮೂಡಿತು. ನಾನು ಡಿ.ಕೆ. ಶಿವಕುಮಾರ್ ಅವರಂತೆ ದಪ್ಪಗಿದ್ದರೆ ಕುಡಿದ ನಂತರವೂ ನಿಲ್ಲುವ ಶಕ್ತಿ ಇರುತ್ತಿತ್ತು.” ಎಂದರು. ಆಗ ಇಡೀ ಸದನ ನಗೆಗಡಲಲ್ಲಿ ತೇಲಿತು.

ಆಗ ಮಾತನಾಡಿದ ಬಿ.ಕೆ ಹರಿಪ್ರಸಾದ್ ಅವರು ಪೂಜಾರಿ ಅವರಿಗೆ ಕುಡಿಯುವ ಅಭ್ಯಾಸವಿಲ್ಲ. ಕುಡಿಸುವ ಅಭ್ಯಾಸವಿದೆ ಎಂದರು. ನಂತರ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, “ಪ್ರಕೃತಿ ಮುಂದೆ ಯಾವುದೂ ಇಲ್ಲ. ಸುಮಾರು ವರ್ಷಗಳ ಹಿಂದೆ ನಮ್ಮ ಪಕ್ಕದ ಊರಿನಲ್ಲಿ ನಾನು ನೀರಾ ಕುಡಿದಿದ್ದೆ. ಅದರಿಂದ ಮತ್ತು ಬರುವುದಿಲ್ಲ” ಎಂದು ನೀರಾ ಕುಡಿದ ತಮ್ಮ ಅನುಭವವನ್ನು ಮೆಲುಕು ಹಾಕಿದರು.

ಈ ಸದರ್ಭದಲ್ಲಿ ತೇಜಸ್ವಿನಿ ಅವರು ಮಾತನಾಡಿ, “ಶಿವಕುಮಾರ್ ಅವರು ನೀರಾ ನೆನಪು ಎಂಬ ಪುಸ್ತಕ ಬರೆಯಬಹುದು” ಎಂದು ಹೇಳಿದರು.

ಇದನ್ನೂ ಓದಿ: NIMHANS Hospital: ಉತ್ತರ ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಎರಡನೇ ಹೈಟೆಕ್ ನಿಮ್ಹಾನ್ಸ್ ಆಸ್ಪತ್ರೆ!

ನಂತರ ಮಾತು ಮುಂದುವರಿಸಿದ ಶಿವಕುಮಾರ್, “ಪೂಜಾರಿ ಹಾಗೂ ರವಿ ಕುಮಾರ್ ಈ ಸಮುದಾಯದ ಜನರ ರಕ್ಷಣೆ ಬಗ್ಗೆ ಆಲೋಚಿಸುತ್ತಿದ್ದಾರೆ. ಈಗ ಬೀದಿ ಬದಿಯ ಎಳನೀರನ್ನು 20 ರೂಪಾಯಿಗೆ ಮಾರುತ್ತಾರೆ. ಆದರೆ ಅದನ್ನೇ ಪ್ಯಾಕೆಟ್ ಅಥವಾ ಬಾಟೆಲ್ ನಲ್ಲಿ ಹಾಕಿ ಮಾರಿದರೆ 100 ರೂ. ಕೊಟ್ಟು ಖರೀದಿ ಮಾಡುವ ಜನರೂ ಇದ್ದಾರೆ. ಅದೇ ರೀತಿ ಬಂಡವಾಳ ಹಾಕಿ ನೀರಾ ಉತ್ಪನ್ನವನ್ನು ಮಾಡಿ ಈ ವರ್ಗದ ಜನರಿಗೆ ಎಂಎಸ್ಐಎಲ್‌ನಲ್ಲಿ ಅವಕಾಶ ಮಾಡಿಕೊಡಿ ಎಂದು ಕೇಳುತ್ತಿದ್ದಾರೆ. ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಇದೇ ಸದನದಲ್ಲಿ ಎಂ.ಸಿ.ನಾಣಯ್ಯ ಅವರು ಮಾಡಿದ ಭಾಷಣ ಇಡೀ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನೇ ಬದಲಿಸಿತು. ಆಗ ಕೋಡೆಸ್, ಮಲ್ಯ ಸೇರಿದಂತೆ ಅನೇಕರಿಗೆ ವ್ಯಾಪಾರದಲ್ಲಿ ನಷ್ಟ ಉಂಟಾಯಿತು. ಅದೇ ರೀತಿ ಇಂದು ನೀವು ಎತ್ತಿರುವ ವಿಚಾರ ಹಾಗೂ ಇದರಿಂದ ತೆಗೆದುಕೊಳ್ಳುವ ನಿರ್ಧಾರ ಬದಲಾವಣೆಗೆ ದಾರಿಯಾಗಬಹುದು” ಎಂದು ತಿಳಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version