Site icon Vistara News

Earthquake In Karnataka | ಕರ್ನಾಟಕ, ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಕಂಪನ, ಕೇಂದ್ರಸ್ಥಾನ ಮಹಾರಾಷ್ಟ್ರ

Earthquake In Karnataka

ವಿಜಯಪುರ : ಗುಮ್ಮಟನಗರಿ ವಿಜಯಪುರದಲ್ಲಿ ಶನಿವಾರ(ಜು.9) ಬೆಳಗ್ಗೆ ಸಂಭವಿಸಿದ ಭೂಕಂಪನದ ತೀವ್ರತೆ (Earthquake In Karnataka) ಅಕ್ಷರಶಃ ಜನತೆಯನ್ನು ಬೆಚ್ಚಿ ಬೀಳಿಸಿದೆ. ಬೆಳಗಿನ ಜಾವದ ನಿದ್ರೆಯಿಂದೆದ್ದು ಜನರು ಮನೆಯಿಂದ ಹೊರಗೋಡಿ ಬಂದಿರುವ ದೃಶ್ಯಾವಳಿ ಸಿಸಿಟಿವಿಗಳಲ್ಲಿ ದಾಖಲಾಗಿದೆ. ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲೂ ಭೂಕಂಪನ ಉಂಟಾಗಿದೆ.

ಒಟ್ಟು ಎರಡು ಬಾರಿ ಬೆಳಗಿನ ಜಾವ ಭೂಮಿ ಕಂಪಿಸಿದೆ. ಈ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.9 ಮ್ಯಾಗ್ನಿಟ್ಯೂಡ್‌ ಎಂದು ಅಂದಾಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಕುರಿತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಕೇಂದ್ರ ಇನ್ನಷ್ಟೇ ಮಾಹಿತಿ ನೀಡಬೇಕಿದೆ. 6 ಗಂಟೆ 22 ನಿಮಿಷಕ್ಕೆ ರಿಕ್ಟರ್ ಮಾಪಕದಲ್ಲಿ 4.9 ಮ್ಯಾಗ್ನಿಟ್ಯೂಡ್‌ ತೀವ್ರತೆಯಲ್ಲಿ ಭೂಕಂಪನವಾಗಿದ್ದರೆ, 6 ಗಂಟೆ 24 ನಿಮಿಷಕ್ಕೆ ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆಯಲ್ಲಿ ಭೂಕಂಪನ ದಾಖಲಾಗಿದೆ.

ಇದನ್ನೂ ಓದಿ | ವಿಜಯಪುರದಲ್ಲಿ ಬೆಳ್ಳಂಬೆಳಗ್ಗೆ ಕಂಪಿಸಿದ ಭೂಮಿ, ಜನತೆಯಲ್ಲಿ ಆತಂಕ

ವಿಜಯಪುರ, ಇಂಡಿ, ಸೊಲ್ಲಾಪುರ, ಜಮಖಂಡಿ, ಬಾಗಲಕೋಟೆ, ಮುಂಬೈ, ಪುಣೆ ಭಾಗಗಳಲ್ಲಿ ಭೂಕಂಪನದ ಅನುಭವವಾಗಿದೆ. 6 ಗಂಟೆ 22 ನಿಮಿಷಕ್ಕೆ ಉಂಟಾದ ಭೂಕಂಪನದ ಕೇಂದ್ರ ಸ್ಥಾನ ಮಹಾರಾಷ್ಟ್ರದ ಸಾಂಗ್ಲಿಯಾದರೆ, 6 ಗಂಟೆ 24 ನಿಮಿಷಕ್ಕೆ ಸಂಭವಿಸಿದ ಭೂಕಂಪನದ ಕೇಂದ್ರ ಮಹಾರಾಷ್ಟ್ರದ ಸೊಲ್ಲಾಪುರವಾಗಿದೆ ಎಂದು ತಿಳಿದು ಬಂದಿದೆ.

ಭೂಕಂಪನದ ಅನುಭವ ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗಷ್ಟೇ ಅಲ್ಲದೆ ರಾಜ್ಯದ ಗಡಿಗೆ ಹೊಂದಿಕೊಂಡಿರುವ ದಕ್ಷಿಣ ಮಹಾರಾಷ್ಟ್ರದ ಸಾಂಗ್ಲಿ ಹಾಗೂ ಸೊಲ್ಲಾಪುರ ಭಾಗಗಳಲ್ಲಿ ಕಂಡುಬಂದಿದೆ ಎಂದು ಅಲ್ಲಿನ ನಿವಾಸಿಗಳು ತಿಳಿಸಿದ್ದಾರೆ

ಇದನ್ನೂ ಓದಿ | Earthquake In Karnataka | ಕೊಡಗಿನಲ್ಲಿ ಮತ್ತೆ ನಡುಗಿದ ಭೂಮಿ: ಮಧ್ಯರಾತ್ರಿ ಭೂಕಂಪನ

Exit mobile version