Site icon Vistara News

Electricution death: ಮತ್ತೊಂದು ವಿದ್ಯುತ್‌ ದುರಂತ; ರಸ್ತೆ ದಾಟುತ್ತಿದ್ದ ಬಾಲಕ ಶಾಕ್‌ಗೆ ಬಲಿ

Boy death in Chikkaballapura

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ವಿದ್ಯುತ್‌ ಇಲಾಖೆಯ ‌ನಿರ್ಲಕ್ಷ್ಯದಿಂದ (Negligence of Electricity department) ಅಮಾಯಕರು ಪ್ರಾಣ ಕಳೆದುಕೊಳ್ಳುವ ದುರಂತಗಳು ಮುಂದುವರಿಯುತ್ತಿವೆ. ಬೆಂಗಳೂರಿನಲ್ಲಿ ಕೆಲವು ವಾರದ ಹಿಂದೆ ಬಸ್ಸಿನಿಂದ ಇಳಿದು ಫುಟ್‌ ಪಾತ್‌ನಲ್ಲಿ ಹೋಗುತ್ತಿದ್ದ ತಾಯಿ ಮತ್ತು ಪುಟ್ಟ ಮಗು ವಿದ್ಯುತ್‌ ತಂತಿ ಸ್ಪರ್ಶಿಸಿ (Electricution death) ಪ್ರಾಣ ಕಳೆದುಕೊಂಡ ಬೆನ್ನಿಗೇ ರಾಜ್ಯದ ಹಲವೆಡೆ ರಸ್ತೆಯಲ್ಲೇ ಹರಡಿಕೊಂಡಿರುವ ಅಪಾಯಕಾರಿ ತಂತಿಗಳ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳಗ್ಗೆ ಬಾಲಕನೊಬ್ಬ ಕರೆಂಟ್‌ ಶಾಕ್‌ಗೆ ಬಲಿಯಾಗಿರುವುದು (Boy dies of Electricution) ಇಲಾಖೆ ನಿರ್ಲಕ್ಷ್ಯ ಮುಂದುವರಿದಿರುವುದನ್ನು ಸೂಚಿಸುತ್ತದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿಯಲ್ಲಿ ಮಂಚೇನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ವಿದ್ಯುತ್‌ ತಂತಿಯನ್ನು ಮೆಟ್ಟಿ ಎಂಟು ವರ್ಷದ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಮೀನಾಕ್ಷಿ-ಮೂರ್ತಿ ದಂಪತಿಗಳ ಪುತ್ರ ನಾಗೇಂದ್ರ ಮೃತ ಬಾಲಕ‌.

ಆತ ರಸ್ತೆ ದಾಟಲು ಹೋದಾಗ ಟ್ರಾನ್ಸ್‌ ಫಾರ್ಮರ್‌ ಗ್ರೌಂಡಿಂಗ್ ವೈರ್ ನಿಂದ ವಿದ್ಯುತ್‌ ತಗುಲಿದ್ದು, ಆತ ವಿದ್ಯುತ್‌ ಆಘಾತದಿಂದ ಪ್ರಾಣ ಕಳೆದುಕೊಂಡಿದ್ದಾನೆ. ರಸ್ತೆ ಅಗಲೀಕರಣಕ್ಕಾಗಿ ಟ್ರಾನ್ಸ್‌ ಫಾರ್ಮರ್‌ ಬಳಿ ಮಣ್ಣು ತೆಗೆದಿದ್ದು ಅದರಲ್ಲಿ ನೀರು ಶೇಖರಣೆಯಾಗಿತ್ತು. ರಸ್ತೆ ದಾಟಲು ಟ್ರಾನ್ಸ್‌ಫರ್ಮರ್ ಬದಿಯಲ್ಲೇ ಹೋಗುವಾಗ ಅವಘಡ ಸಂಭವಿಸಿದೆ. ಸ್ಥಳಕ್ಕೆ ಮಂಚೇನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : Self Harming : ಇಬ್ಬರು ಹೆಣ್ಮಕ್ಕಳ ಜತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ; ಗಂಡನೇ ಕಿರಾತಕ!

ಮಲಗಿದ್ದ ಕಾರ್ಮಿಕರ ಮೇಲೆ ಹರಿದ ಟ್ರ್ಯಾಕ್ಟರ್‌: ಕಾರ್ಮಿಕ ಸಾವು

ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ವಾಲಿ ಸ್ಪಿರಿಟ್ ಕಾರ್ಖಾನೆ ಬಳಿ ಮಲಗಿದ್ದ ಕಾರ್ಮಿಕರ ಮೇಲೆ ಟ್ರ್ಯಾಕ್ಟರ್‌ ಹರಿದು ಒಬ್ಬ ಕಾರ್ಮಿಕ ಮೃತಪಟ್ಟಿದ್ದಾರೆ. ಇತರ ಮೂವರಿಗೆ ಗಂಭೀರ ಗಾಯಗಳಾಗಿವೆ.

ವಾಲಿ ಸ್ಪಿರಿಟ್ ತಯಾರಿಕಾ ಕಾರ್ಖಾನೆಯಲ್ಲಿ, ಬೆಳಗಿನ ಜಾವ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತ ವಕ್ತಿ ಸಮೇತ ಗಾಯಗೊಂಡವರನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಲ್ಲಿ ಮಲ್ಲಿಕಾರ್ಜುನ್ ಮೃತಪಟ್ಟಿದ್ದರೆ, ರಾಜೇ ಸಾಬ್ ಮತ್ತು ಈರಯ್ಯ,ಈಶ್ವರ ಗಾಯಗೊಂಡಿದ್ದಾರೆ.

ಮೃತ ಕಾರ್ಮಿಕ ಮಲ್ಲಿಕಾರ್ಜುನ ಕಳಸಕೊಪ್ಪ ಗ್ರಾಮದ ನಿವಾಸಿಯಾಗಿದ್ದಾರೆ. ಗಾಯಗೊಂಡ ಮೂವರು ಯಂಡಿಗೇರಿ ಗ್ರಾಮದವರು. ಗಾಯಗೊಂಡ ಮೂವರಿಗೆ ಚಿಕಿತ್ಸೆ ಮುಂದುವರಿದಿದೆ.

Exit mobile version