ಮಂಡ್ಯ: ಹೆಣ್ಣು ಮಕ್ಕಳಿಗೆ ಅಗೌರವ ತೋರುವ ಮಾತು ಕಾಂಗ್ರೆಸ್ ಮುಖಂಡನಿಗೆ ಶೋಭೆ, ಗೌರವ ತರುವುದಿಲ್ಲ. ಮಾತಿಗೆ ಮುನ್ನಾ ಒಂದು ಕ್ಷಣ ಯೋಚನೆ ಮಾಡಬೇಕು. ಮೊದಲು ಕ್ಷಮೆ ಕೇಳಿ, ಹೇಳಿಕೆಯನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ.
ಬಿಜೆಪಿ ಸರ್ಕಾರ ಲಂಚ ಮತ್ತು ಮಂಚದ ಸರ್ಕಾರ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಜಿಲ್ಲೆಯ ಪಾಂಡಪುರ ತಾಲೂಕಿನ ಬೇಬಿ ಗ್ರಾಮದ ಶ್ರೀ ದುರ್ದಂಡೇಶ್ವರ ಮಹಂತ ಶಿವಯೋಗಿಗಳ ಮಠದ ವತಿಯಿಂದ ಜೀವನದಿ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡುವುದು ಬಿಟ್ಟು ಗೌರವದಿಂದ ಇರಬೇಕು. ಒಬ್ಬ ಕಾಂಗ್ರೆಸ್ ಮುಖಂಡನಿಂದ ಇಂತಹ ಮಾತುಗಳನ್ನು ನಿರೀಕ್ಷೆ ಮಾಡಿಲ್ಲ, ಅವರ ಮಾತಿಗೆ ಕೂಡಲೇ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.
ಸಕ್ರಿಯ ರಾಜಕೀಯದಿಂದ ನಿವೃತ್ತಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ನನಗೆ ಎಲ್ಲ ರೀತಿಯ ಆಶೀರ್ವಾದ ಮಾಡಿದ್ದು, ಪಕ್ಷದಲ್ಲಿ ಉನ್ನತ ಸ್ಥಾನಮಾನ ಕೊಡಲಾಗಿದೆ. ಆ.21ರಿಂದ ರಾಜ್ಯದ ಪ್ರವಾಸ ಮಾಡಲಿದ್ದೇನೆ, ರಾಜ್ಯಾದ್ಯಂತ ಓಡಾಟ ಮಾಡಿ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 130ರಿಂದ 140 ಸೀಟ್ ಗೆಲ್ಲುತ್ತದೆ. ಯಾರೋ ಮುಖ್ಯಮಂತ್ರಿ ಆಗುತ್ತೇವೆ ಎಂದು ಕುಣಿಯುತ್ತಿದ್ದಾರಲ್ಲ ಅದಕ್ಕೆ ಅವಕಾಶ ಸಿಗುವುದಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವ್ಯಂಗ್ಯವಾಡಿದರು.
ಇದನ್ನೂ ಓದಿ | ವಿದೇಶಾಂಗ ಸಚಿವರ ಸಮ್ಮುಖದಲ್ಲಿ ಬಿಜೆಪಿ ಸೇರಿದ ಜೆಡಿಎಸ್ ಮಾಜಿ ಎಂಎಲ್ಸಿ