Site icon Vistara News

Family suicide : ಮಂಗಳೂರಿನ ಲಾಡ್ಜ್‌ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ, ಮೃತರು ಮೈಸೂರಿನವರು

Family suicide

#image_title

ಮಂಗಳೂರು: ಮಂಗಳೂರಿನ ಲಾಡ್ಜ್‌ ಒಂದರಲ್ಲಿ ಒಂದೇ ಕುಟುಂಬದ ನಾಲ್ಕು ಜನ ಆತ್ಮಹತ್ಯೆ (Family suicide) ಮಾಡಿಕೊಂಡಿದ್ದಾರೆ. ಮಂಗಳೂರಿನ ಕೆಎಸ್ ರಾವ್ ರೋಡ್ ನಲ್ಲಿರುವ ಕರುಣಾ ಲಾಡ್ಜ್ ನಲ್ಲಿ ಈ ಘಟನೆ ನಡೆದಿದೆ.

ಮೈಸೂರು ಮೂಲದ ದೇವೇಂದ್ರ(48) ಎಂಬವರು ತಮ್ಮ ಕುಟುಂಬ ಸಮೇತ ಸಾವಿಗೆ ಶರಣಾಗಿದ್ದಾರೆ. ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳ ಸಹಿತ ಲಾಡ್ಜ್‌ಗೆ ಬಂದಿದ್ದ ಅವರು ಅಲ್ಲೇ ತಮ್ಮ ಜೀವನವನ್ನು ಕೊನೆಗೊಳಿಸಿದ್ದಾರೆ.

ಅವಳಿ ಹೆಣ್ಮಕ್ಕಳು

ಮೃತರನ್ನು ದೇವೇಂದ್ರ (48), ನಿರ್ಮಲಾ(48), ಚೈತ್ರಾ(09), ಚೈತನ್ಯ (09) ಎಂದು ಗುರುತಿಸಲಾಗಿದೆ. ದೇವೇಂದ್ರ ಅವರು ಮೈಸೂರಿನ ವಿಜಯನಗರ ಮೂಲದ ಕುಟುಂಬ ನಿವಾಸಿಯಾಗಿದ್ದು, ಮಾರ್ಚ್‌ 27ರಂದು ಕರುಣಾ ಲಾಡ್ಜ್‌ನಲ್ಲಿ ರೂಂ ಬುಕ್ ಮಾಡಿದ್ದರು. ಒಂದು ದಿನಕ್ಕಾಗಿ ರೂಂ ಬುಕ್ ಮಾಡಿದ್ದ ಕುಟುಂಬ ಬಳಿಕ ಎರಡು ದಿ‌ನಕ್ಕಾಗಿ ರೂಂ ವಿಸ್ತರಣೆ ಮಾಡಿತ್ತು. ಗುರುವಾರ ಸಂಜೆ ರೂಂ ಚೆಕ್ ಔಟ್ ಮಾಡಬೇಕಾಗಿತ್ತು. ಅದರೆ, ಬಾಗಿಲು ತೆರೆಯದ ಕಾರಣ ಅನುಮಾನಗೊಂಡು ತಪಾಸಣೆ ನಡೆಸಿದಾಗ ಬೆಳಗ್ಗಿನ ವೇಳೆಗೆ ಆತ್ಮಹತ್ಯೆ ಮಾಡಿಕೊಂಡಿರುವುದ ಬೆಳಕಿಗೆ ಬಂದಿದೆ. ಚೈತ್ರಾ ಮತ್ತು ಚೈತನ್ಯ ಅವಳಿ ಮಕ್ಕಳೆಂದು ತಿಳಿದುಬಂದಿದೆ.

ಸಾಲಗಾರರ ಕಾಟ ಕಾರಣ

ದೇವೇಂದ್ರ ಕುಟುಂಬದ ಆತ್ಮಹತ್ಯೆಗೆ ಸಾಲ ಬಾಧೆಯೇ ಕಾರಣ ಎಂದು ತಿಳಿದಬಂದಿದೆ. ಲಾಡ್ಜ್‌ನ ರೂಮಿನಲ್ಲಿ ಡೆತ್‌ ನೋಟ್‌ ಪತ್ತೆಯಾಗಿದ್ದು, ಅದರಲ್ಲಿ ಸಾಲ ಬಾಧೆ, ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆಯಲಾಗಿದೆ. ದೇವೇಂದ್ರ ಅವರು ಕುಟುಂಬದ ಇತರರಿಗೆ ವಿಷ ನೀಡಿ ತಾವೂ ಸಾವಿಗೆ ಶರಣಾಗಿದ್ದಾರೆ.

ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಜೈನ್ ಭೇಟಿ ನೀಡಿದ್ದಾರೆ.

Exit mobile version