Site icon Vistara News

Anchor Aparna: ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಇನ್ನಿಲ್ಲ, ಕಳಚಿತು ಅಚ್ಚ ಕನ್ನಡದ ಕೊಂಡಿ

Anchor Aparna

Famous Kannada Anchor Aparna Passes Away Due To Cancer

ಬೆಂಗಳೂರು: ಕನ್ನಡಿಗರಲ್ಲದವರೂ ತಲೆದೂಗುವಂತೆ ಕನ್ನಡ (Kannada) ಮಾತನಾಡುತ್ತಿದ್ದ, ಸ್ಪಷ್ಟ ಉಚ್ಚಾರ, ಅದಕ್ಕೆ ತಕ್ಕ ಹಾವ-ಭಾವ, ನಿರೂಪಣೆ ವೇಳೆ ಕನ್ನಡದ ಪದಗಳನ್ನು ಪೋಣಿಸುತ್ತಿದ್ದ ಕರ್ನಾಟಕದ ಖ್ಯಾತ ನಿರೂಪಕಿ ಅಪರ್ಣಾ (51) (Anchor Aparna) ಅವರು ನಿಧನರಾಗಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ಕ್ಯಾನ್ಸರ್‌ನಿಂದ (Cancer) ಬಳಲುತ್ತಿದ್ದ ಅಪರ್ಣಾ ಅವರು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ (ಜುಲೈ 11) ರಾತ್ರಿ ನಿಧನರಾಗಿದ್ದಾರೆ. ಇವರ ಅಗಲಿಕೆಗೆ ಕನ್ನಡ ಸಿನಿಮಾ ರಂಗದ ನಟರು ಸೇರಿ ಹಲವರು ಕಂಬನಿ ಮಿಡಿದಿದ್ದಾರೆ.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪರ್ಣಾ ಅವರು ಬೆಂಗಳೂರಿನ ಬನಶಂಕರಿಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಪುಟ್ಟಣ್ಣ ಕಣಗಾಲ್ ಅವರ ಮಸಣದ ಹೂವು ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟಿದ್ದ ಅಪರ್ಣಾ ಅವರು ಹಿಂದಿರುಗಿ ನೋಡಲಿಲ್ಲ. ಸಾಲು ಸಾಲು ಸಿನಿಮಾಗಳು, ಕಿರುತೆರೆ, ವೇದಿಕೆಗಳಲ್ಲಿ ಮನೋಜ್ಞ ನಿರೂಪಣೆ ಮೂಲಕವೇ ಅವರು ಮನೆಮಾತಾಗಿದ್ದರು. ಅದರಲ್ಲೂ, 80 ಮತ್ತು 90ರ ದಶಕದಲ್ಲಿ ಕನ್ನಡ ಕಿರುತೆರೆ ನಿರೂಪಕಿಯಾಗಿ ಜನಪ್ರಿಯತೆ ಗಳಿಸಿದ್ದರು.

1984ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ಅವರು ಮಸಣದ ಹೂವು ಚಿತ್ರದಿಂದ ಬೆಳಕಿಗೆ ಬಂದರು. ನಂತರ ಇನ್ಸ್‌ಪೆಕ್ಟರ್ ವಿಕ್ರಮ್ ಸೇರಿ ಹಲವು ಚಿತ್ರಗಳಲ್ಲಿ ನಟನೆ ಮಾಡಿದರು. 90ರ ದಶಕದಲ್ಲಿ ಚಂದನ ವಾಹಿನಿಯಲ್ಲಿ ಮೂಡಿಬಂದ ಹಲವು ಕಾರ್ಯಕ್ರಮಗಳ ನಿರೂಪಣೆ ಮಾಡಿದ ನಂತರ ಭಾರತ ಸರ್ಕಾರದ ವಿವಿಧ ಭಾರತಿಯಲ್ಲಿ ರೇಡಿಯೋ ಜಾಕಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು.

1998ರಲ್ಲಿ ನಡೆದ ದೀಪಾವಳಿ ಕಾರ್ಯಕ್ರವೊಂದನ್ನು ಎಂಟು ಗಂಟೆಗಳ ನಿರೂಪಣೆ ಮಾಡಿ ದಾಖಲೆ ಬರೆದಿದ್ದರು. ಕಿರುತೆರೆಯಲ್ಲಿ ಮೂಡಲಮನೆ, ಮುಕ್ತ ಮುಂತಾದ ಧಾರಾವಾಹಿಗಳಲ್ಲಿ ನಟನೆ ಮಾಡಿದ್ದರು. 2013ರಲ್ಲಿ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್ ನ ಸ್ಪರ್ಧೆಯಾಗಿದ್ದರು. 2015 ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ `ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರ ಮಾಡಿದ್ದರು. 2014ರಲ್ಲಿ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಘೋಷಣೆಯಾಗುವ ‘ಪ್ರಯಾಣಿಕರು ಹತ್ತುವ ಮತ್ತು ಇಳಿಯುವ ಸೂಚನೆ’ಗೆ ಧ್ವನಿ ನೀಡಿದ್ದು ಕೂಡ ಇವರೇ.

ಇದನ್ನೂ ಓದಿ: Rajeev Taranath: ಖ್ಯಾತ ಸರೋದ್‌ ವಾದಕ ರಾಜೀವ್ ತಾರಾನಾಥ್ ಇನ್ನಿಲ್ಲ

Exit mobile version