Site icon Vistara News

Fertilizer problems | ಚಾಮರಾಜನಗರದಲ್ಲಿ ರಸಗೊಬ್ಬರಕ್ಕಾಗಿ ಸರದಿ ಸಾಲಿನಲ್ಲಿ ನಿಂತಿದ್ದ ರೈತ ಅಸ್ವಸ್ಥ

chamarajnagara farmer

ಚಾಮರಾಜನಗರ: ರಾಜ್ಯದಲ್ಲಿ ರಸಗೊಬ್ಬರದ ಕೊರತೆ (Fertilizer problems) ಎದುರಾಗಿದೆಯೇ ಎಂಬ ಸಂಶಯ ಮೂಡತೊಡಗಿದ್ದು, ಈ ಹಿನ್ನೆಲೆಯಲ್ಲಿ ರೈತರು ಸಹ ಸೊಸೈಟಿ ಎದುರು ದಿನಗಟ್ಟಲೇ ಕಾಯುತ್ತಿರುವ ಪ್ರಕರಣಗಳು ವಿವಿಧ ಜಿಲ್ಲೆಗಳಲ್ಲಿ ವರದಿಯಾಗುತ್ತಲೇ ಇದೆ. ಶುಕ್ರವಾರ (ಜುಲೈ ೧೫) ರಸಗೊಬ್ಬರಕ್ಕಾಗಿ ಹನೂರು ಪಟ್ಟಣದ ಸೊಸೈಟಿಯೊಂದರಲ್ಲಿ ನಿಂತಿದ್ದ ರೈತರೊಬ್ಬರು ತೀವ್ರ ಅಸ್ವಸ್ಥರಾಗಿದ್ದಾರೆ.

ಹನೂರು ಪಟ್ಟಣದ ಕಾಡಂಚಿನ ಗ್ರಾಮಗಳಲ್ಲಿ ಸರಿಯಾದ ಸಮಯಕ್ಕೆ ರಸಗೊಬ್ಬರ ವಿತರಣೆಯಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಹೀಗಾಗಿ ಮೊದಲು ಹೋದವರಿಗೆ ರಸಗೊಬ್ಬರಗಳು ಲಭ್ಯವಾಗುತ್ತಿವೆ. ಇದಕ್ಕಾಗಿ ರೈತರು ಬೆಳಗ್ಗೆ 6 ಗಂಟೆಯಿಂದಲೇ ರಸಗೊಬ್ಬರಕ್ಕಾಗಿ ಸೊಸೈಟಿ ಮುಂದೆ ಸಾಲುಗಟ್ಟುತ್ತಿದ್ದಾರೆ. ಮಹಿಳೆಯರು ಸೇರಿದಂತೆ ವೃದ್ಧರೂ ಸಹ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಬಂದೊದಗಿದೆ. ಈ ವೇಳೆ ಉಪಾಹಾರ ಮಾಡದೆ ಬಹಳ ಹೊತ್ತು ನಿಂತಿದ್ದ ರೈತರೊಬ್ಬರು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅಲ್ಲಿದ್ದ ರೈತರು ಸೇರಿದಂತೆ ಸ್ಥಳೀಯರು ರೈತನ ನೆರವಿಗೆ ಧಾವಿಸಿದ್ದು, ನೀರು ಕುಡಿಸಿ ಉಪಚರಿಸಿದ್ದಾರೆ.

ಕಾಡಂಚಿನ ಗ್ರಾಮಗಳಲ್ಲಿ ರಸಗೊಬ್ಬರ ಸಮರ್ಪಕವಾಗಿ ತಲುಪದ ಹಿನ್ನೆಲೆಯಲ್ಲಿ ರೈತರು ರಸಗೊಬ್ಬರಕ್ಕಾಗಿ ಪರದಾಡುತ್ತಿದ್ದಾರೆ. ಆದರೆ, ಸರ್ಕಾರ ಮಾತ್ರ ಈವರೆಗೂ ರಸಗೊಬ್ಬರವನ್ನು ಸಮರ್ಪಕವಾಗಿ ಪೂರೈಸಲು ಮುಂದಾಗಿಲ್ಲ ಎಂದು ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ| ಕೊಪ್ಪಳದಲ್ಲಿ ಯೂರಿಯಾ ಗೊಬ್ಬರಕ್ಕಾಗಿ ಗಂಟೆಗಟ್ಟಲೇ ಕ್ಯೂ ನಿಂತ ರೈತರು!

Exit mobile version