Site icon Vistara News

ಶೂನ್ಯದಿಂದ ಬಹಳ ಎತ್ತರಕ್ಕೆ ಬೆಳೆದ ಜಾರ್ಜ್ ಫರ್ನಾಂಡಿಸ್‌: ಸಿದ್ದರಾಮಯ್ಯ ಸ್ಮರಣೆ

ಜಾರ್ಜ್ ಫರ್ನಾಂಡಿಸ್‌

ಬೆಂಗಳೂರು: ಜಾರ್ಜ್ ಫರ್ನಾಂಡಿಸ್ ಅವರಲ್ಲಿ ಸೈದ್ಧಾಂತಿಕ ಬದ್ಧತೆ ಇತ್ತು. ಅವರು ಶೂನ್ಯದಿಂದ ಬಹಳ ಎತ್ತರಕ್ಕೆ ಬೆಳೆದವರು. ಬರಿಗೈಲಿ ಮುಂಬೈಗೆ ಹೋಗಿ, ಅಲ್ಲಿ ಕಾರ್ಮಿಕ ಸಂಘಟನೆಯನ್ನು ಕಟ್ಟಿ, ರಾಜಕೀಯವಾಗಿ ಬೆಳೆದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಮರಿಸಿದರು.

ನಗರದಲ್ಲಿ ಭಾನುವಾರ ಕೇಂದ್ರದ ಮಾಜಿ ಸಚಿವ, ದಿವಂಗತ ಜಾರ್ಜ್ ಫರ್ನಾಂಡಿಸ್ ಅವರ ಜೀವನ ಚರಿತ್ರೆ ಕುರಿತಾದ “ದಿ ಲೈಫ್ ಆ್ಯಂಡ್ ಟೈಮ್ಸ್ ಆಫ್ ಜಾರ್ಜ್ ಫರ್ನಾಂಡೀಸ್” ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ದಕ್ಷಿಣ ಭಾರತದಿಂದ ಕೇಂದ್ರಕ್ಕೆ ಹೋಗಿ ರಾಜಕೀಯದಲ್ಲಿ ಬೆರಳೆಣಿಕೆಯ ಜನರಷ್ಟೇ ಯಶಸ್ಸು ಕಂಡಿದ್ದಾರೆ. ಜಾರ್ಜ್ ಮೊದಲ ಚುನಾವಣೆಯಲ್ಲಿಯೇ ಮುಂಬೈನಲ್ಲಿ ಆಗಿನ ಕಾಂಗ್ರೆಸ್ ಪಕ್ಷದ ಜನಪ್ರಿಯ ನೇತಾರ ಎಸ್.ಕೆ.ಪಾಟೀಲ್ ಅವರನ್ನು ಮಣಿಸಿ ಗೆಲುವು ಸಾಧಿಸಿ ‘ಜಯೇಂಟ್ ಕಿಲ್ಲರ್ʼ(Giant killer) ಎಂದು ಹೆಸರಾಗಿದ್ದರು ಎಂದರು.

ಇದನ್ನೂ ಓದಿ | 108 ಆ್ಯಂಬುಲೆನ್ಸ್ ಸ್ಥಗಿತಕ್ಕೆ ಕಾರಣ ತಿಳಿಸಿದ ಆರೋಗ್ಯ ಸಚಿವ ಸುಧಾಕರ್‌: ಸಿಎಂ ಬೊಮ್ಮಾಯಿ ಜತೆ ಚರ್ಚೆ

ಜಾರ್ಜ್‌ ಮಾತಿನಿಂದ ಕೋಕಾ ಕೋಲಾ ಕುಡಿಯುವುದೇ ಬಿಟ್ಟೆ: ಜಾರ್ಜ್ ಫರ್ನಾಂಡಿಸ್ ಅವರು ಮೊರಾರ್ಜಿ ದೇಸಾಯಿ ಅವರು ಪ್ರಧಾನಿಯಾಗಿದ್ದಾಗ ಕೈಗಾರಿಕಾ ಸಚಿವರಾಗಿದ್ದರು. ಆಗ ಮೈಸೂರಿಗೆ ಒಮ್ಮೆ ಬಂದಿದ್ದರು. ಮೈಸೂರಿನ ತಮ್ಮೆಲ್ಲ ಸ್ನೇಹಿತರನ್ನು ಒಟ್ಟಿಗೆ ಸೇರಿಸಿಕೊಂಡು ನಾನು ಕೋಕಾ ಕೋಲಾ ಕಂಪನಿ ವಿರುದ್ಧ ಹೋರಾಟವನ್ನು ಮಾಡುತ್ತೇನೆ. ಅದಕ್ಕೆ ನಿಮ್ಮ ಬೆಂಬಲ ಬೇಕು ಮತ್ತು ಯಾವತ್ತೂ ಕೋಕಾ ಕೋಲಾ ಕುಡಿಯುವುದಿಲ್ಲ ಎಂದು ಶಪಥ ಮಾಡಬೇಕು’ ಎಂದು ನನಗೆ ಹೇಳಿದ್ದರು. ಅವರ ಮಾತಿಗೆ ಒಪ್ಪಿ ಕೋಕಾ ಕೋಲಾ ಕುಡಿಯುವುದನ್ನು ಬಿಟ್ಟ ನಾನು ಇಲ್ಲಿಯವರೆಗೆ ಕುಡಿದಿಲ್ಲ ಎಂದರು.

ಆ ದಿನಗಳಿಂದ ಇತ್ತೀಚೆಗೆ ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿಯುವವರೆಗೆ ನನಗೆ ಅವರ ಜತೆ ಸ್ನೇಹಪೂರ್ವಕ ಒಡನಾಟವಿತ್ತು. ಕೊನೆ ದಿನಗಳ ಅವರ ರಾಜಕೀಯ ನಿಲುವುಗಳ ಬಗ್ಗೆ ನನಗೆ ಭಿನ್ನಾಭಿಪ್ರಾಯವಿದ್ದರೂ ಸ್ನೇಹ ರಾಜಕೀಯವನ್ನು ಮೀರಿದ್ದ ಸಂಬಂಧವಾಗಿತ್ತು. ನನ್ನ ರಾಜಕೀಯ ಬದುಕಿನಲ್ಲಿ ಜಾರ್ಜ್ ಫರ್ನಾಂಡಿಸ್ ಅವರಿಗೆ ವಿಶೇಷ ಸ್ಥಾನವಿದೆ. ಮೈಸೂರಿನಲ್ಲಿ ನಾನು ಕಾನೂನು ವ್ಯಾಸಂಗ ಮಾಡುತ್ತಿದ್ದಾಗ ನನಗೆ ಖ್ಯಾತ ಸಮಾಜವಾದಿ ಮತ್ತು ರೈತನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರು ಮೇಸ್ಟ್ರಾಗಿದ್ದರು. ಅವರ ಒತ್ತಾಯದಿಂದ ನಾನು ಸಮಾಜವಾದಿ ಪಕ್ಷ ಸೇರಿದ್ದೆ. ಅವರ ಮೂಲಕ ನನಗೆ ಜಾರ್ಜ್ ಫರ್ನಾಂಡಿಸ್ ಪರಿಚಯವಾಗಿದ್ದರು, ಕನ್ನಡಿಗರೇ ಆಗಿದ್ದರಿಂದ ಹೆಚ್ಚು ಆತ್ಮೀಯರಾಗಿದ್ದರು ಎಂದು ಹೇಳಿದರು.

ತುರ್ತುಪರಿಸ್ಥಿತಿಯ ನಂತರ ನಡೆದ ಚುನಾವಣೆಯಲ್ಲಿ ಬಿಹಾರದ ಮುಜಫ್ಫರ್‌ಪುರ ಲೋಕಸಭಾ ಕ್ಷೇತ್ರದಿಂದ ಜೈಲಿನಿಂದಲೇ ಸ್ಪರ್ಧಿಸಿ ಗೆದ್ದು ಬಿಟ್ಟರು. ಅದರ ನಂತರ ಆ ರಾಜ್ಯವನ್ನೇ ತಮ್ಮ ರಾಜಕೀಯದ ಅಖಾಡವನ್ನಾಗಿ ಮಾಡಿಕೊಂಡರು. ಕರ್ನಾಟಕದ ರಾಜಕಾರಣದ ಬಗ್ಗೆ ಅವರಿಗೆ ಆಸಕ್ತಿ ಇತ್ತು. ಈ ಕಾರಣದಿಂದಾಗಿಯೇ 1984ರಲ್ಲಿ ಅವರು ಬೆಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ, ಗೆಲುವು ಕೈಗೆ ಸಿಗಲಿಲ್ಲ. ಅದರ ನಂತರ ಜಾರ್ಜ್ ಕರ್ನಾಟಕದಿಂದ ದೂರವೇ ಹೋಗಿ ಬಿಟ್ಟರು ಎಂದರು.

1980ರಲ್ಲಿ ನಾನು ಮೊದಲ ಬಾರಿ ರಾಜಕೀಯ ರಂಗ ಪ್ರವೇಶಿಸಿದೆ. ಅದಕ್ಕೆ ಜಾರ್ಜ್ ಅವರ ಒತ್ತಾಯವೂ ಕಾರಣ. ನಾನು ಜನತಾ ಪಕ್ಷದ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧಿಸಬೇಕೆಂದು ಜಾರ್ಜ್ ಬಂದು ಕೇಳಿಕೊಂಡರು. ಚುನಾವಣೆ ನನಗೆ ಹೊಸತು, ಅನುಭವವೂ ಇರಲಿಲ್ಲ, ದುಡ್ಡೂ ಇರಲಿಲ್ಲ. ಸಾಂಕೇತಿಕವಾಗಿ ಸ್ಪರ್ಧಿಸಿ, ಸೋಲು-ಗೆಲುವು ಮುಖ್ಯ ಅಲ್ಲ ಎಂದು ನನ್ನ ಮನವೊಲಿಸಿ ಚುನಾವಣೆಗೆ ನಿಲ್ಲಿಸಿದರು. ದುಡ್ಡೇನೋ ಸ್ವಲ್ಪ ಕೊಟ್ಟರು, ಅದು ಕೆಲವು ದಿನಗಳಲ್ಲಿ ಖರ್ಚಾಯಿತು, ಆ ಚುನಾವಣೆಯಲ್ಲಿ ನಾನು ಹೀನಾಯವಾಗಿ ಸೋತು ಬಿಟ್ಟೆ ಎಂದರು.

ಅದರ ನಂತರ ಜನತಾ ಪಕ್ಷ ಒಡೆದುಹೋಯಿತು, ಜಾರ್ಜ್, ಚರಣ್ ಸಿಂಗ್ ಎಲ್ಲ ಸೇರಿ ಜನತಾ (ಸೆಕ್ಯುಲರ್) ಪಕ್ಷ ಕಟ್ಟಿದ್ದರು. 1983ರ ವಿಧಾನಸಭಾ ಚುನಾವಣೆಯಲ್ಲಿ ಆ ಪಕ್ಷದಿಂದ ಸ್ಪರ್ಧಿಸುವಂತೆ ಜಾರ್ಜ್ ಮತ್ತೆ ಕೇಳಿಕೊಂಡರು. ಆಗಲೂ ನಾನು ಮೊದಲು ಹಿಂಜರಿದು ಆ ಮೇಲೆ ಒಪ್ಪಿಕೊಂಡೆ. ಏನೋ ಸಮಸ್ಯೆಯಾಗಿ ಆ ಚುನಾವಣೆಗೆ ಅವರ ಪಕ್ಷದ ಬಿ ಫಾರ್ಮ್ ಸಿಗದೆ ನಾನು ಪಕ್ಷೇತರನಾಗಿ ಸ್ಪರ್ಧಿಸಬೇಕಾಯಿತು. ಆ ಚುನಾವಣೆಯ ಪ್ರಚಾರದಲ್ಲಿ ಜಾರ್ಜ್ ಅವರು ಕರ್ಪೂರಿ ಠಾಕೂರ್ ಜತೆ ಬಂದು ಪ್ರಚಾರ ಮಾಡಿದ್ದರು. ಚುನಾವಣಾ ಖರ್ಚಿಗೆ ಆ ಕಾಲದಲ್ಲಿ ಜಾರ್ಜ್ ನನಗೆ ಹತ್ತು ಸಾವಿರ ರೂಪಾಯಿ ಕೊಟ್ಟಿದ್ದನ್ನು ಮರೆಯಲಾರೆ. ಆ ಚುನಾವಣೆಯಲ್ಲಿ ಗೆದ್ದ ನಂತರ ನನ್ನ ನಿಜವಾದ ರಾಜಕೀಯ ಪಯಣ ಶುರುವಾಯಿತು ಎಂದರು.

ದಕ್ಷಿಣ ಭಾರತದಲ್ಲಿರುವ ರಾಜಕಾರಣಿಗಳಿಗೆ ದೆಹಲಿ ಭೌಗೋಳಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಬಲು ದೂರ. ಇದಕ್ಕೆ ಭಾಷೆ ಜತೆಗೆ ಅಲ್ಲಿನ ಭಿನ್ನ ಸಂಸ್ಕೃತಿ, ಆಹಾರ ಪದ್ಧತಿ ಕೂಡ ಕಾರಣ. ನಾವೆಲ್ಲ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿದರೆ ಒಂದೆರಡು ದಿನಗಳ ವಾಸ್ತವ್ಯ ಮಾಡಿ ಮತ್ತೆ ಕರ್ನಾಟಕಕ್ಕೆ ಓಡಿಬರುತ್ತೇವೆ. ಹಿಂದಿ ಮತ್ತು ಇಂಗ್ಲಿಷ್ ಒಳಗೊಂಡಂತೆ ಹಲವಾರು ಭಾಷೆಗಳನ್ನು ಬಲ್ಲ ಜಾರ್ಜ್ ಫರ್ನಾಂಡಿಸ್ ಕನ್ನಡಿಗರಾದರೂ ಉತ್ತರಭಾರತೀಯರೇ ಆಗಿಬಿಟ್ಟಿದ್ದರು ಎಂದು ಹೇಳಿದರು.

ಫರ್ನಾಂಡಿಸ್ ಭಾರತೀಯ ಜನತಾ ಪಕ್ಷದ ಜತೆ ಸೇರಿಕೊಂಡ ನಂತರ ನನಗೂ ಅವರಿಗೂ ರಾಜಕೀಯ ಭಿನ್ನಾಭಿಪ್ರಾಯಗಳಿತ್ತು. ಕೊನೆ ದಿನಗಳಲ್ಲಿ ಸೈದ್ಧಾಂತಿಕವಾಗಿ ನಾವಿಬ್ಬರೂ ಪರಸ್ಪರ ವಿರುದ್ಧ ಧ್ರುವಗಳಲ್ಲಿದ್ದವರು. ಇದರ ಹೊರತಾಗಿಯೂ ನಾವಿಬ್ಬರು ಆಪ್ತ ಸ್ನೇಹಿತರಾಗಿದ್ದೆವು. ಜಾರ್ಜ್ ಸ್ನೇಹಕ್ಕೆ ಬಹಳ ಬೆಲೆ ಕೊಡುವವರು. ಕರ್ನಾಟಕದಲ್ಲಿ ಅವರಿಗೆ ದೊಡ್ಡ ಸ್ನೇಹ ಬಳಗ ಇತ್ತು. ಜೆ.ಎಚ್.ಪಟೇಲ್ ಅವರು ಬಿಜೆಪಿಯನ್ನು ಸೈದ್ಧಾಂತಿಕವಾಗಿ ವಿರೋಧಿಸುತ್ತಿದ್ದರೂ ಗೆಳೆಯ ಜಾರ್ಜ್ ಫರ್ನಾಂಡಿಸ್ ಅವರ ಮಾತಿನಂತೆ ಎನ್‌ಡಿಎ ಮೈತ್ರಿಕೂಟ ಸೇರಿದ್ದರು ಎಂದರು.

ಹುಟ್ಟೂರನ್ನು ಅವರು ಮರೆತಿರಲಿಲ್ಲ. ಈ ನೆನಪಿನಿಂದಾಗಿಯೇ ತಾನು ಕೇಂದ್ರ ರೈಲ್ವೆ ಸಚಿವರಾಗಿದ್ದ ಕಾಲದಲ್ಲಿ ಕರಾವಳಿ ಜನತೆಯ ಬಹುದಿನಗಳ ಕನಸಾದ ‘ಕೊಂಕಣ ರೈಲ್ವೆ ಯೋಜನೆ’ಯನ್ನು ಯಶಸ್ವಿಯಾಗಿ ಜಾರಿಗೊಳಿಸಿದರು. ಈ ಯೋಜನೆಯ ಉದ್ಘಾಟನೆಗೆ ಬಂದಿದ್ದ ಜಾರ್ಜ್ ಅವರ ಜತೆಯಲ್ಲಿ ನಾನು ಕಾರವಾರದಿಂದ ಮಂಗಳೂರುವರೆಗೆ ರೈಲಿನಲ್ಲಿ ಪ್ರಯಾಣಿಸಿದ್ದೆ. ಆ ಹೊತ್ತಿನಲ್ಲಿ ಅವರು ತಮ್ಮ ರಾಜಕೀಯ ಜೀವನದ ಏರುಪೇರುಗಳ ಬಗ್ಗೆ ಬಹಳಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದರು ಎಂದು ತಿಳಿಸಿದರು.

ಪ್ರಸ್ತುತ ವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯವನ್ನು ದಮನಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಇಂತಹ ಸಂದಿಗ್ಧ ಸಮಯದಲ್ಲಿ ಜಾರ್ಜ್ ಫರ್ನಾಂಡಿಸ್ ಅವರು ನಮ್ಮೊಂದಿಗೆ ಇರಬೇಕಿತ್ತು. ನನ್ನ ರಾಜಕೀಯ ಜೀವನದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಜಾರ್ಜ್ ಫರ್ನಾಂಡಿಸ್ ಅವರ ಕುರಿತಾದ ಪುಸ್ತಕವನ್ನು ಅತ್ಯಂತ ಸಂತೋಷದಿಂದ ಲೋಕಾರ್ಪಣೆಗೊಳಿಸಿದ್ದೇನೆ. ಈ ಅವಕಾಶ ಮಾಡಿಕೊಟ್ಟವರಿಗೆ ಧನ್ಯವಾದಗಳು ಎಂದು ತಿಳಿಸಿದರು.

ಇದನ್ನೂ ಓದಿ | ಕರ್ನಾಟಕ ಕಾಂಗ್ರೆಸ್‌ಗೆ 27 ಮುಖ್ಯ ವಕ್ತಾರರು, 41 ವಕ್ತಾರರು !: ಜಂಬೊ ಸಮಿತಿ ಘೋಷಿಸಿದ ಪ್ರಿಯಾಂಕ್‌ ಖರ್ಗೆ

Exit mobile version