Site icon Vistara News

Bus Accident : ವಾಹನ ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ತಲೆಸುತ್ತು; ರಸ್ತೆ ಬಿಟ್ಟು ಜಮೀನಿಗೆ ನುಗ್ಗಿದ ಬಸ್‌

Bus Accident

ಗದಗ: ಬಸ್‌ ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ತಲೆ ಸುತ್ತು ಬಂದಿದ್ದು, ನಿಯಂತ್ರಣ ತಪ್ಪಿ ರಸ್ತೆಯಿಂದ ಜಮೀನಿಗೆ ಬಸ್‌ಗೆ ನುಗ್ಗಿದ (Bus Accident) ಘಟನೆ ನಡೆದಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಟೋಲ್ ಗೇಟ್ ಬಳಿ ಘಟನೆ ನಡೆದಿದೆ.

ಸಾರಿಗೆ ಸಂಸ್ಥೆಯ ಬಸ್‌ವೊಂದು ಮುಂಡರಗಿ ಪಟ್ಟಣದಿಂದ ಹಮ್ಮಿಗಿ ಗ್ರಾಮಕ್ಕೆ ತೆರಳುತ್ತಿತ್ತು. ಸುಮಾರು 40ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಈ ವೇಳೆ ಚಾಲಕನಿಗೆ ತಲೆ ಸುತ್ತು ಬಂದಿದೆ. ನೋಡ ನೋಡುತ್ತಿದ್ದಂತೆ ರಸ್ತೆ ಬದಿ ಜಮೀನಿಗೆ ಬಸ್‌ ನುಗ್ಗಿದೆ.

ಅದೃಷ್ಟವಶಾತ್‌ ಸಣ್ಣ ಪುಟ್ಟ ಗಾಯಗಳಿಂದ ಪ್ರಯಾಣಿಕರು ಪಾರಾಗಿದ್ದಾರೆ. ಬಸ್‌ನಲ್ಲಿ ಸಿಲುಕಿದ್ದ ಗಾಯಾಳುಗಳನ್ನು ಸ್ಥಳೀಯರು ರಕ್ಷಿಸಿ, ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಜಮೀನಿಗೆ ಬಿದ್ದಿದ್ದ ಬಸ್‌ ಅನ್ನು ತೆರವು ಮಾಡಲಾಗಿದೆ.

ಇದನ್ನೂ ಓದಿ: Self Harming : ಒಂದೇ ದಿನ ನಾಲ್ವರು ಗೃಹಿಣಿಯರ ಆತ್ಮಹತ್ಯೆ; ಅವರಲ್ಲಿಬ್ಬರು ಯೋಧರ ಪತ್ನಿಯರು

ಅತಿ ವೇಗವಾಗಿ ಬಂದು ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ನಜ್ಜು-ಗುಜ್ಜು

ಉಡುಪಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ನಜ್ಜುಗುಜ್ಜಾಗಿದೆ. ಉಡುಪಿ ಅಂಬಾಗಿಲು ವಿನಲ್ಲಿ ಘಟನೆ ನಡೆದಿದೆ. ಕಾರೊಂದು ಸಂತೆಕಟ್ಟೆಯಿಂದ ಉಡುಪಿ ಕಡೆಗೆ ಅತೀ ವೇಗವಾಗಿ ಬಂದಿದ್ದು, ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಯಾಗಿದೆ.

ಕಾರಿನಲ್ಲಿದ್ದ ನಾಲ್ವರಿಗೆ ಗಾಯವಾಗಿದ್ದು, ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕಾರಿನ ಇಂಜಿನ್ ಮಾರುದ್ದ ಹಾರಿ ಬಿದ್ದಿತ್ತು.

ಕಾರು ಡಿಕ್ಕಿಯಾಗಿ ಜಿಂಕೆ ಸಾವು

ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಆನೆಕಾಡಿನ ರಾಷ್ಟ್ರೀಯ ಹೆದ್ದಾರಿ‌ 275ರ ಬಳಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ 12 ವರ್ಷದ ಗಂಡು ಜಿಂಕೆಯೊಂದು ಮೃತಪಟ್ಟಿದೆ. ಅರಣ್ಯದ ಒಂದು ಕಡೆಯಿಂದ ಮತ್ತೊಂದು ಕಡೆಗೆ ದಾಟುವಾಗ ಕಾರಿಗೆ ಜಿಂಕೆ ಅಡ್ಡ ಬಂದಿದೆ.

ಕುಶಾಲನಗರ ಕಡೆಯಿಂದ ಮಡಿಕೇರಿ ಕಡೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಜಿಂಕೆ ಮೃತಪಟ್ಟಿದೆ. ಸ್ಥಳಕ್ಕೆ ಆನೆಕಾಡು ಉಪ ವಲಯ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version