Site icon Vistara News

Gender Detection : ಕಾರಿನೊಳಗೆ ವೈದ್ಯನ ಶವ ಪತ್ತೆ: ಭ್ರೂಣ‌ ಹತ್ಯೆ ತನಿಖೆಗೆ ಹೆದರಿ ಆತ್ಮಹತ್ಯೆ?

Gender detection Dr. sathish dead

ಕೊಡಗು/ಮಂಡ್ಯ: ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಆನೆಕಾಡು ಬಳಿ ನಿಂತಿದ್ದ ಕಾರಿನಲ್ಲಿ ವೈದ್ಯರೊಬ್ಬರು ಶವವಾಗಿ (Doctor found dead) ಪತ್ತೆಯಾಗಿದ್ದಾರೆ. ಮಂಡ್ಯ ಜಿಲ್ಲೆ ಪಾಂಡವಪುರದ ಶಿವಳ್ಳಿ ಗ್ರಾಮದ ಡಾ. ಸತೀಶ್ (47) ಅವರೇ ಮೃತಪಟ್ಟವರು. ಇವರ ಹೆಸರು ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಭ್ರೂಣ ಹತ್ಯೆ (Gender Detection) ಪ್ರಕರಣಕ್ಕೆ (feticide case) ತಳುಕು ಹಾಕಿಕೊಂಡಿದೆ. ಹೀಗಾಗಿ ಅವರು ತನಿಖೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡರೇ (Suicide Case) ಎಂಬ ಪ್ರಶ್ನೆಯೂ ಕೇಳಿಬಂದಿದೆ.

ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಕೆಂಪು ಕಾರೊಂದರಲ್ಲಿ ಸತೀಶ್‌ ಮೃತದೇಹವು ಪತ್ತೆಯಾಗಿದೆ. ಡಾ ಸತೀಶ್ ಅವರು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕೊಣಸೂರು ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು. ಡ್ರೈವರ್‌ ಸೀಟಿನಲ್ಲೇ ಕುಳಿತಿರುವ ಸತೀಶ್‌ ಅವರಿಗೆ ಹೃದಯಾಘಾತವಾಗಿದೆಯಾ? ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾರಾ ಎಂಬ ಅವಳಿ ಪ್ರಶ್ನೆಗಳು ಕೇಳಿಬಂದಿದ್ದವು. ಇದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸತೀಶ್‌ ಅವರು ಮೈಸೂರಿನ ಕೊಣಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ವೈದ್ಯನಾಗಿ ಕೆಲಸ ಮಾಡುತ್ತಿದ್ದರು. ಅವರ ಹೆಸರು ಇತ್ತೀಚೆಗೆ ಬೆಳಕಿಗೆ ಬಂದ 1500 ಭ್ರೂಣ ಹತ್ಯೆ ಪ್ರಕರಣದಲ್ಲಿ ಕೇಳಿಬಂದಿತ್ತು.

ಈ ಪ್ರಕರಣದಲ್ಲಿ ಹಲವಾರು ವೈದ್ಯರು, ಲ್ಯಾಬ್‌ ಟೆಕ್ನೀಷಿಯನ್‌ಗಳು ಮತ್ತು ಏಜೆಂಟರನ್ನು ಬಂಧಿಸಲಾಗಿದೆ. ಅವರು ವಿಚಾರಣೆಯ ಸಂದರ್ಭದಲ್ಲಿ ಸತೀಶ್ ಅವರ ಹೆಸರು ಹೇಳಿದ್ದರು ಎನ್ನಲಾಗಿದೆ. ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವೈದ್ಯ ಸತೀಶ್ ಅವರು ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ.

ರಾಜ್ಯ ಸರ್ಕಾರ ಈಗ ಭ್ರೂಣ ಹತ್ಯೆ ಪ್ರಕರಣವನ್ನು ಸಿಐಡಿಗೆ ವಹಿಸಿದೆ. ಹೀಗಾಗಿ ಸಿಕ್ಕಿಬಿಳುವ ಭಯದಿಂದ ವೈದ್ಯ ಸತೀಶ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : Gender Detection: ಭ್ರೂಣ ಹತ್ಯೆ 900 ಅಲ್ಲ, 1500ಕ್ಕೂ ಹೆಚ್ಚು! ಹಲವು ಜಿಲ್ಲೆಗಳಲ್ಲಿ ದಂಧೆ

ಹಾಗಿದ್ದರೆ, ಭ್ರೂಣ ಹತ್ಯೆ ಪ್ರಕರಣದಲ್ಲಿ ಮೊದಲ ಬಲಿ ಆಯ್ತಾ ಎಂಬ ಪ್ರಶ್ನೆ ಎದುರಾಗಿದೆ. ಮಂಡ್ಯದ ಕೊಣಸೂರು ಆಸ್ಪತ್ರೆಗೆ ಆರೋಗ್ಯ ಸಚಿವರು ಭೇಟಿ‌ ನೀಡಿದ್ದ ಸಂದರ್ಭದಲ್ಲಿ ಸ್ಥಳೀಯರು ಕೂಡಾ ಡಾ. ಸತೀಶ್‌ ಹೆಸರು ಹೇಳಿದ್ದರು ಎನ್ನಲಾಗಿದೆ. ಆದರೆ, ತನಿಖೆಯ ಬಳಿಕವಷ್ಟೇ ಸತ್ಯಾಂಶ ಹೊರಬರಬೇಕಾಗಿದೆ.

ರಾಜ್ಯದಲ್ಲಿ ಪತ್ತೆಯಾದ ಭ್ರೂಣ ಹತ್ಯೆ ಜಾಲ ಅತ್ಯಂತ ಭಯಾನಕವಾಗಿದೆ. ಮಗುವಿನ ಲಿಂಗ ಪತ್ತೆ ಹಚ್ಚಿ ಹೆಣ್ಣು ಭ್ರೂಣವನ್ನು ಹತ್ಯೆ ಮಾಡುವ ಈ ಜಾಲದಲ್ಲಿ ಹಲವಾರು ವೈದ್ಯರು, ಲ್ಯಾಬ್‌ಗಳು, ಸ್ಕ್ಯಾನಿಂಗ್‌ ಸೆಂಟರ್‌ಗಳು ಭಾಗಿಯಾಗಿವೆ. ಮೊದಲು ಈ ಪ್ರಕರಣ‌ ಬೆಂಗಳೂರಿನ ಬಯ್ಯಪ್ಪನಹಳ್ಳಿಯಲ್ಲಿ ಪತ್ತೆಯಾಯಿತಾದರೂ ಮುಂದೆ ಅದು ಮಂಡ್ಯ ಮತ್ತು ಮೈಸೂರಿನ ಕಡೆಗೆ ವಿಸ್ತರಿಸಿದೆ. ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ಭ್ರೂಣ ಹತ್ಯೆ ನಡೆಯುತ್ತಿರುವುದು ಬೆಳಕಿಗೆ ಬರುತ್ತಿದೆ.

Exit mobile version