Site icon Vistara News

Girl murdered : ತಾಯಿಯ ಅಕ್ರಮ ಸಂಬಂಧಕ್ಕೆ ಅಸಹನೆ ತೋರಿದ್ದಕ್ಕೆ ಹೆಣವಾದಳು ಬಾಲಕಿ, ಉಸಿರುಗಟ್ಟಿಸಿ ಕೊಂದ ಕಿರಾತಕ

Girl murdered

#image_title

ಮಹಲಿಂಗೇಶ್‌ ಹಿರೇಮಠ್‌, ವಿಸ್ತಾರ ನ್ಯೂಸ್‌ ಗದಗ
ಆ‌ ಬಾಲಕಿ ಭವಿಷ್ಯದ ಬಗ್ಗೆ ದೊಡ್ಡ ದೊಡ್ಡ ಕನಸು ಕಂಡವಳು. ವಿದ್ಯೆಯ ಬೆನ್ನುಹತ್ತಿ ಭರವಸೆ ಕಂಡುಕೊಂಡವಳು. ಬಾಲ್ಯದಲ್ಲಿಯೇ ಬದುಕು ರೂಪಿಸಿಕೊಳ್ಳುವ ತವಕದಲ್ಲಿದ್ದಳು. ಆದರೆ ವಿಪರ್ಯಾಸ, ತನ್ನ ತಾಯಿ ಮಾಡಿದ ಸಣ್ಣ ತಪ್ಪಿನಿಂದಾಗಿ ಜೀವವನ್ನೇ‌ ಬಲಿ ಕೊಡಬೇಕಾಗಿ ಬಂದಿದೆ. ಹೌದು, ಗದಗ ಜಿಲ್ಲೆಯ ಮುಂಡರಗಿ ಪಟ್ಟಣ ಅಕ್ಷರಶಃ ಬೆಚ್ಚಿ ಬಿದ್ದಿದೆ.‌ ಮುದ್ದಾದ ಕುಟುಂಬಕ್ಕೆ ಒಬ್ಬ ಕಾಮುಕನಿಂದಾಗಿ ಬೆಂಕಿಬಿದ್ದಿದೆ.

ಅಪ್ರಾಪ್ತ ಬಾಲಕಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ‌ ಸುದ್ದಿ ಜನತೆ ಬಾಯಲ್ಲಿ ಗುಸುಗುಸು ಚರ್ಚೆಗೆ ಕಾರಣವಾಗಿತ್ತು. ಆದರೆ ದಿನಗಳೆದಂತೆ‌ ಹೊರಬಂದ ಸತ್ಯ ಅದೇ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ನಂಬಲು ಅಸಾಧ್ಯವಾದ, ಯಾರೂ ಕಲ್ಪಿಸಿಕೊಳ್ಳಲಾಗದ ಈ ಘಟನೆಯಿಂದ ಜನ ತಲ್ಲಣಗೊಂಡಿದ್ದಾರೆ. ತಾಯಿಯ ಅಕ್ರಮ ಸಂಬಂಧದ ಕಳ್ಳಾಟಕ್ಕೆ ಅಪ್ರಾಪ್ತೆ ಮಗಳು ಬಲಿಯಾಗಿದ್ದಳು!

ಮುಂಡರಗಿ ಪಟ್ಟಣದ ಮಾರುತಿ ಮತ್ತು ಶೋಭಾ ದಂಪತಿಗೆ ಇಬ್ಬರು ಮಕ್ಕಳು. ಮಾರುತಿ ಕಾಲೇಜೊಂದರಲ್ಲಿ ಜವಾನನಾಗಿದ್ದರೆ ಶೋಭಾ ಕೂಡಾ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಮಾರ್ಚ್‌ 6ರ ಮಂಗಳವಾರ 17 ವರ್ಷದ ಮಗಳು ತನ್ನ ಮನೆಯಲ್ಲಿ‌ ಕೊಲೆಯಾದ ರೀತಿಯಲ್ಲಿ‌ ಸಾವನ್ನಪ್ಪಿದ್ದಳು. ಮೇಲ್ನೋಟಕ್ಕೆ ಕೊಲೆ ಎಂದು‌ ಕಂಡು ಬಂದರೂ ಸಂಶಯಾಸ್ಪದ ಸಾವು‌ ಎಂದು ಮುಂಡರಗಿ ಪೊಲೀಸ್ ಠಾಣೆಯಲ್ಲಿ‌ ದೂರು‌‌‌ ದಾಖಲಾಗಿತ್ತು. ನಂತರ ತನಿಖೆ ದಾರಿ ಎತ್ತ ಸಾಗುತ್ತಿದೆ ಎಂದು ಪಟ್ಟಣದ ಸಮಾಜದ‌ ಮುಖಂಡರು, ಹೋರಾಟಗಾರರು, ಪ್ರತಿಭಟನೆ ಮೂಲಕ ಖಾಕಿಗೆ ಎಚ್ಚರಿಸುವ ಕೆಲಸ‌ ಮಾಡಿದ್ದರು.‌ ಇದಾದ ಬಳಿಕ, ಬಾಲಕಿ ತಂದೆಯ ದೂರಿನ ಮೇಲೆ 2ನೇ ಎಫ್ಐಆರ್ ದಾಖಲಾಗಿತ್ತು.

ಆಗಲೇ ನೋಡಿ, ಬಾಲಕಿಯ ಸಾವು ಒಂದು ಕೊಲೆ. ಕೊಲೆಯ ಹಿಂದೆ ಅಕ್ರಮ‌ ಸಂಬಂಧದ ಘಾಟು‌ ಇದೆ ಎನ್ನುವುದು ಪಕ್ಕಾ ಆಗಿದ್ದು. ತನಿಖೆಯ ಬೆನ್ನು ಹತ್ತಿದ ಪೊಲೀಸರಿಗೆ ಬಾಲಕಿ ತಂದೆ ವ್ಯಕ್ತಪಡಿಸಿದ ಅನುಮಾನ ನಿಜವೆಂದು ಗೊತ್ತಾಯಿತು. ಆರೋಪಿಯನ್ನು ಬಂಧಿಸಿ ಬೇಡಿ‌ ಹಾಕಿ ಕರೆತಂದಾಗ ಪಾಪಿ ಆರೋಪಿ, ತಾನು ಮಾಡಿದ ಎಲ್ಲ ಕ್ರೌರ್ಯವನ್ನು ಬಾಯಿಬಿಟ್ಟಿದ್ದನು.

ಹಾಗಿದ್ದರೆ ಅಲ್ಲಿ ನಿಜಕ್ಕೂ ಆಗಿದ್ದೇನು?

ಆವತ್ತು ಮಾರ್ಚ್‌ ಆರು. ಬಾಲಕಿ ಎಸ್ಎಸ್ಎಲ್ಸಿ ಬಾಹ್ಯ ಪರೀಕ್ಷೆ ಮುಗಿಸಿ ಮನೆಗೆ ವಾಪಸ್ ಆಗಿದ್ದಳು. ಆ ಮನೆಯಲ್ಲಿ ಓರ್ವ ಕಿವಿ ಕೇಳದ,‌ ಕಣ್ಣು ಕಾಣದ ಅಜ್ಜಿಯೊಬ್ಬರೇ ಇದ್ದರು. ಬಾಲಕಿ ತನ್ನ ಪಾಡಿಗೆ ತಾನು ಮನೆಗೆಲಸದಲ್ಲಿ ‌ನಿರತಳಾಗಿದ್ದಳು. ಅಷ್ಟು ಹೊತ್ತಿಗೆ ಭಯಾನಕ ಘಟನೆಯೊಂದು ನಡೆದುಹೋಗಿತ್ತು. ಮನೆಗೆ ಕಳ್ಳಬೆಕ್ಕಿನಂತೆ ನುಗ್ಗಿದ ಆ ಕಿರಾತಕ ಬಾಲಕಿಯ ಕತ್ತು ಹಿಸುಕಿ ಪರಾರಿಯಾಗಿದ್ದ.

ಮನೆಯಲ್ಲಿದ್ದ ವೃದ್ಧೆಗೆ ಇದ್ಯಾವುದೂ ಗೊತ್ತೆ ಆಗಿರಲಿಲ್ಲ. ಅಷ್ಟೊತ್ತಿಗಾಗಲೇ ಮನೆಗೆ ಬಂದ ತಾಯಿ ಮಗಳು ಶವವಾಗಿ ಮಲಗಿರುವುದನ್ನು ಕಂಡು ಬೆಚ್ಚಿಬಿದ್ದರು. ಕೂಡಲೇ ಅಕ್ಕಪಕ್ಕದವರ ಸಹಾಯದೊಂದಿಗೆ ಆಸ್ಪತ್ರೆಗೆ ಕರೆದುಕೊಂಡು ಹೋದರು. ಮೊದಲು ಖಾಸಗಿ ಆಸ್ಪತ್ರೆಗೆ ಅಲ್ಲಿಂದ ಮುಂಡರಗಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಕರೆತಂದಾಗ, ಮಗಳು ಮೃತಪಟ್ಟಿದ್ದಾಳೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದರು.

ಯಾರಿವನು ಕೊಲೆಗಾರ?

ಹಾಗೆ ಆವತ್ತು ಯಾರಿಗೂ ಗೊತ್ತಾಗದಂತೆ ಕೊಲೆ ಮಾಡಿ ಹೋದವನು ಅವನೇ ಇರಬಹುದು ಎಂದು ಬಾಲಕಿಯ ತಂದೆ ಗುಮಾನಿ ವ್ಯಕ್ತಪಡಿಸಿದ್ದರು. ಬಾಲಕಿಯ ವಿಚಾರದಲ್ಲಿ ಕೆಲವರು ಏನೋ ಮಾತನಾಡಿಕೊಂಡರಾದರೂ ತಂದೆಗೆ ಮಾತ್ರ ಅವನ ಮೇಲೆಯೇ ಸಂಶಯವಿತ್ತು. ಹಾಗೆ ಪೊಲೀಸರು ಆತನನ್ನು ಹಿಡಿದು ತಂದು ವಿಚಾರಿಸಿದಾಗ ಸತ್ಯ ಹೊರಬಿತ್ತು. ಬಾಲಕಿಯನ್ನು ಕೊಂದವನು ಬೇರೆ ಯಾರೂ ಅಲ್ಲ, ಕಾಮ ಪಿಶಾಚಿ ಮೆಹಬೂಬ ಸಾಬ್ ಬಾಣದ.

ಹಾಗಿದ್ದರೆ ಕೊಲೆ ಮಾಡಿದ್ದು ಯಾಕೆ?

ಕೊಲೆಯಾದ ಬಾಲಕಿಯ ತಾಯಿ ಹಾಗೂ ಮೆಹಬೂಬ್ ಸಾಬ್ ಬಾಣದ ನಡುವೆ ಅನೈತಿಕ ಸಂಬಂಧ ಇತ್ತು ಅ‌ನ್ನೋ ಆರೋಪ ವ್ಯಾಪಕವಾಗಿ‌ ಕೇಳಿ ಬರುತ್ತಿದೆ. ಎರಡ್ಮೂರು ವರ್ಷಗಳಿಂದ ನಡೆಯುತ್ತಿರುವ ಈ ಕಳ್ಳಾಟದ ಬಗ್ಗೆ ಆಗಿನ್ನೂ ಹರೆಯಕ್ಕೆ ಬರುತ್ತಿದ್ದ ಬಾಲಕಿಗೆ ಅಸಮಾಧಾನವಿತ್ತು. ಬೇಸರಗೊಂಡಿದ್ದ ಬಾಲಕಿಯು ತಾಯಿ, ಮೆಹಬೂಬಸಾಬ ಜೊತೆಗೆ ಅಂತರ ಕಾಪಾಡಿಕೊಂಡಿದ್ದಳಂತೆ. ಇವರಿಬ್ಬರ ಅನೈತಿಕ ಸಂಬಂಧಕ್ಕೆ ಬಾಲಕಿ ಆಗಾಗ ಆಕ್ಷೇಪವನ್ನೂ ಎತ್ತಿದ್ದಳಂತೆ. ಇದು ಆಗಾಗ ಕಳ್ಳಬೆಕ್ಕಿನಂತೆ ಬಂದು ಹೋಗುತ್ತಿದ್ದ ಬಾಣದನಿಗೆ ಸಹಿಸಲಾಗಿರಲಿಲ್ಲ. ಬಾಲಕಿಯನ್ನು ಕಂಡರೆ ಎಲ್ಲಿಲ್ಲದ ಕೋಪವಿತ್ತು. ಕಳ್ಳ‌ ಸಂಬಂಧಕ್ಕೆ ಬಾಲಕಿ ಅಡ್ಡಗೋಡೆಯಾಗಿ ನಿಂತಿದ್ದು ಈತನಿಗೆ ಸಹಿಸಲಾಗಿರಲಿಲ್ಲ. ಹೇಗಾದರೂ ಮಾಡಿ ತನ್ನ ಕಳ್ಳಾಟಕ್ಕೆ ಅಡ್ಡವಾಗಿರುವ ಬಾಲಕಿಯನ್ನು ಕೊನೆಗಾಣಿಸಬೇಕು‌‌ ಎಂದು ಹೊಂಚು ಹಾಕಿದ್ದ. ಆವತ್ತು ಪರೀಕ್ಷೆ ಮುಗಿಸಿದ ಬಂದ ಬಾಲಕಿ ಒಬ್ಬಳೇ ಇರುವುದನ್ನು ಖಾತ್ರಿಪಡಿಸಿಕೊಂಡು ಮನೆಗೆ ಬಂದ ಕ್ರೂರಿ ಬಾಣದ ಅವಳ ಕತ್ತು ಹಿಸುಕಿ, ಉಸಿರು ಗಟ್ಟಿಸಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಆವತ್ತು ಬಾಲಕಿ ತನ್ನ ಜೀವ ಉಳಿಸಿಕೊಳ್ಳಲು ಅದೆಷ್ಟು ಹೋರಾಟ ನಡೆಸಿದ್ದಳು ಎನ್ನುವುದನ್ನು ಬಾಣದನ ಕೈಯ ಮೇಲಿನ ಗಾಯದ ಗುರುತುಗಳೇ ಹೇಳುತ್ತವೆ.

ಬಾಣದನ ಕೈಯಲ್ಲಿರುವ ಗಾಯದ ಗುರುತು

ಅಕ್ರಮ ಸಂಬಂಧ ಬೆಳೆದಿದ್ದು ಹೇಗೆ?

ಬಾಲಕಿ ತಂದೆ ಮಾರುತಿ ಹಾಗೂ ತಾಯಿ ಶೋಭಾ ಹಾಗೂ ಇವರಿಬ್ಬರ ಮಕ್ಕಳು ಉದ್ಯೋಗ ನಿಮಿತ್ತ ಮುಂಡರಗಿ ಪಟ್ಟಣದಲ್ಲಿ ವಾಸವಾಗಿದ್ದರು. ಎಲ್ಲರ ಹಾಗೆ ನಮಗೂ ಒಂದು ಮನೆ ಇರಲಿ ಎಂದು ಇವರೂ ಆಸೆ ಪಟ್ಟಿದ್ದೇ ತಪ್ಪಾಯಿತೆಂದು ಕಾಣುತ್ತದೆ.

ಮನೆ‌ ಕಟ್ಟುವಾಗ ಪರಿಚಿತನೇ ಆಗಿದ್ದ ಮೆಹಬೂಬ್‌ ಸಾಬ್‌ ಬಾಣದ ಸಹಕಾರ ನೀಡಿದ್ದ. ಮಾರುತಿ ಕುಟುಂಬ 12 ಲಕ್ಷ ರೂ. ಬ್ಯಾಂಕ್‌ ಸಾಲ ಪಡೆಯಲು ಅವನು ನೆರವಾಗಿದ್ದ. ಆದರೆ, ಬಾಣದನ ಬ್ಯಾಂಕ್‌ ಲೋನ್‌ ಸಹಾಯ ಅಲ್ಲಿಗೆ ನಿಲ್ಲಲಿಲ್ಲ. ಸಹಾಯ ಮಾಡಿದ್ದರ ಬಡ್ಡಿ ಅಸಲು ವಸೂಲಿ ಮಾಡುವುದಕ್ಕಾಗಿ ಆತ ಮನೆ ಯಜಮಾನಿಯ ಮೇಲೆಯೇ ಕಣ್ಣು ಹಾಕಿದ್ದ ಎಂದು ಊರು ಹೇಳುತ್ತದೆ. ಏರಿಯಾದಲ್ಲಿ ಇದೆಲ್ಲ ಸುದ್ದಿಯಾಗಿತ್ತು. ಆದರೆ, ಆಗಿನ್ನೂ ಸಣ್ಣ ಹುಡುಗಿಯಾಗಿದ್ದ ಬಾಲಕಿಗೆ ಇದೆಲ್ಲ ಗೊತ್ತಾಗುತ್ತಿರಲಿಲ್ಲ. ಯಾವಾಗ ಆಕೆಗೂ ಇದೆಲ್ಲ ಅರ್ಥವಾಗತೊಡಗಿತೋ ಅವರಿಬ್ಬರ ಬಗ್ಗೆ ಅಸಹ್ಯ ಭಾವನೆ ಮೂಡಲು ಶುರುವಾಯಿತು. ಆಗಿನಿಂದಲೇ ಅಸಹನೆ ತೋರಿಸಲು ಶುರು ಮಾಡಿದ್ದಳು. ಇದು ಬಾಣದನಿಗೆ ಸಹಿಸಲು ಸಾಧ್ಯವಾಗಲಿಲ್ಲ.

ಅವಳು ಬೆಸ್ಟ್‌ ಸ್ಟೂಡೆಂಟ್‌ ಆಗಿದ್ದಳು

ಇಂಥಹುದೊಂದು ಪರಿಸ್ಥಿತಿಯಲ್ಲಿ ಬೆಳೆಯುತ್ತಿದ್ದರೂ ಆ ಬಾಲಕಿ ಮಾತ್ರ ಬೆಸ್ಟ್‌ ಸ್ಟೂಡೆಂಟ್‌ ಆಗಿದ್ದಳು. ಕಲಿಯುವಿಕೆ ಮಾತ್ರವಲ್ಲ ನಡವಳಿಕೆಯಲ್ಲೂ ಆಕೆ ಎಲ್ಲರ ಮನ ಗೆದ್ದಿದ್ದಳು. ಶಿಕ್ಷಕರು ಎದುರು ಬಂದಾಗ ಸೈಕಲ್‌ನಿಂದ ಇಳಿದು ಗೌರವ ನೀಡುತ್ತಿದ್ದ ಆಕೆಯನ್ನು ನೆನಪಿಸಿಕೊಂಡು ಶಾಲೆಯೂ ಕಣ್ಣೀರು ಹಾಕುತ್ತಿದೆ. ಆದರೇನು ಮಾಡೋಣ ಸಂಸ್ಕಾರ ಕಲಿಸಬೇಕಾಗಿದ್ದ ತಾಯಿಯೇ ಸಂಸ್ಕಾರ ಮರೆತಿದ್ದಳು. ಅಂತಿಮವಾಗಿ ಮಗಳ ಸಂಹಾರಕ್ಕೇ ಕಾರಣಳಾಗಿದ್ದಾಳೆ. ಇನ್ನೂ ಬೆಳೆಯುತ್ತಿದ್ದ ಅಮಾಯಕ ದಲಿತ ಬಾಲಕಿ ಕಾಮುಕನ ಕೈಯಲ್ಲಿ ಹೆಣವಾಗಬೇಕಾಗಿದೆ.

ಪೊಲೀಸರು ಹಂತಕ ಬಾಣದನನ್ನು ಅರೆಸ್ಟ್‌ ಮಾಡಿದ್ದಾರೆ. ಅವನಿಗೆ ಕಠಿಣ ಶಿಕ್ಷೆ ಆಗಬೇಕು ಎನ್ನುವುದು ಮುಂಡರಗಿ ಪಟ್ಟಣದ ಜನರ ಆಗ್ರಹವಾಗಿದೆ. ಇತ್ತ ಬಾಲಕಿಯ ತಾಯಿ ಈಗ ಪಶ್ಚಾತ್ತಾಪದಲ್ಲಿ ಬೇಯುತ್ತಿದ್ದಾಳೆ. ಸಹಾಯ ಮಾಡಿದವನ ಜತೆಗೆ ಸಹಕರಿಸಿದ್ದೇ ಆಕೆಯ ಕುಟುಂಬಕ್ಕೆ ಕೊಳ್ಳಿ ಇಡುವಂತಾಗಿದೆ. ಕಾಲ ಮಿಂಚಿಹೋಗಿದೆ.

“ಆರೋಪಿಯು ಬಾಲಕಿ ತಾಯಿ ಜೊತೆಗೆ ಅಕ್ರಮ ಸಂಬಂಧ ಹೊಂದಿರುವುದು ತಿಳಿದುಬಂದಿದೆ. ಆರೋಪಿಯನ್ನು ಈಗಾಗಲೇ‌ ಬಂಧಿಸಿ ವಿಚಾರಣೆ ಕೈಗೊಂಡಿದ್ದು ತನಿಖೆ ಹಂತದಲ್ಲಿದೆ. ಆದಷ್ಟು ಬೇಗ ತನಿಖೆ ಪೂರ್ಣಗೊಳಿಸಲಾಗುವುದುʼʼ ಎಂದು ಗದಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್‌. ನೇಮಗೌಡ ಹೇಳುತ್ತಾರೆ.

ಇದನ್ನೂ ಓದಿ : Girl murdered : ನಾಪತ್ತೆಯಾಗಿದ್ದ ಬಾಲಕಿ ಬಾವಿಯಲ್ಲಿ ಶವವಾಗಿ ಪತ್ತೆ; ಕೊಂದು ಚೀಲದಲ್ಲಿ ಹಾಕಿ ಬಾವಿಗೆಸೆದ ದುಷ್ಟರು

Exit mobile version