Site icon Vistara News

ಜಿರಳೆಗೆ ಔಷಧ ಸಿಂಪಡಿಸಿದ್ದ ಮನೆ ಮಾಲೀಕ, ಉಸಿರುಗಟ್ಟಿ ಪ್ರಾಣ ಕಳೆದುಕೊಂಡ ಪುಟ್ಟ ಬಾಲಕಿ

Girl death

ಬೆಂಗಳೂರು: ಮನೆ ಮಾಲೀಕ ಅರಿವಿಲ್ಲದೆ ಮಾಡಿದ ಪ್ರಮಾದಿಂದ ಆರು ವರ್ಷದ ಬಾಲಕಿಯೊಬ್ಬಳು ಉಸಿರುಗಟ್ಟಿ ಪ್ರಾಣ ಕಳೆದುಕೊಂಡಿದ್ದಾಳೆ. ಬೆಂಗಳೂರಿನ ವಸಂತ ನಗರದ ಆರನೇ ಕ್ರಾಸ್‌ನಲ್ಲಿರುವ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯ ಮಾಲೀಕ ಜಿರಳೆ ಓಡಿಸಲೆಂದು ಔಷಧ ಸಿಂಪಡಿಸಿದ್ದ. ಆದರೆ, ಅದರ ಅರಿವಿಲ್ಲದೆ ಬಂದು ಮಲಗಿದ ಆರು ವರ್ಷದ ಬಾಲಕಿ ಉಸಿರು ಕಟ್ಟಿ ಮೃತಪಟ್ಟಿದ್ದಾಳೆ.

ವಸಂತ ನಗರದ ಶಿವಶಂಕರ್‌ ಎಂಬವರ ಮನೆಯಲ್ಲಿ ವಿನೋದ್‌ ಎಂಬವರ ಕುಟುಂಬ ಬಾಡಿಗೆಗಿದೆ. ಆ ಕುಟುಂಬದ ಆರು ವರ್ಷದ ಬಾಲಕಿ ಅಹನಾಳೇ ಪ್ರಾಣ ಕಳೆದುಕೊಂಡವಳು.

ವಿನೋದ್‌ ಕುಟುಂಬ ವಾರದ ಹಿಂದೆ ಊರಿಗೆ ಹೋಗಿತ್ತು. ಈ ನಡುವೆ ಬಾಡಿಗೆಗೆ ಕೊಟ್ಟ ಮನೆಯಲ್ಲಿ ಜಿರಳೆ ಕಾಟ ಜೋರಿರುವುದನ್ನು ಅರಿತ ಮಾಲೀಕ ಶಿವಶಂಕರ್‌ ಅವರು ಔಷಧ ಸಿಂಪಡಿಸಿದ್ದರು. ಈ ನಡುವೆ ಊರಿಗೆ ಹೋಗಿದ್ದ ವಿನೋದ್‌ ಕುಟುಂಬ ಒಂದು ವಾರದ ಬಳಿಕ ಮನೆಗೆ ಮರಳಿತ್ತು.

ಇವರೆಲ್ಲ ಬಂದಿದ್ದು ಮನೆ ಮಾಲೀಕ ಶಿವಶಂಕರ್‌ಗೂ ಗೊತ್ತಾಗಲಿಲ್ಲ. ಮನೆಗೆ ಔಷಧ ಸಿಂಪಡಿಸಿದ ವಿಷಯ ವಿನೋದ್‌ ಅವರ ಕುಟುಂಬಕ್ಕೂ ಗೊತ್ತಾಗಲಿಲ್ಲ. ಅವರೆಲ್ಲ ಮನೆಗೆ ಬಂದು ಮಲಗಿದ್ದಾರೆ. ಮುಂಜಾನೆಯಾಗುವ ಹೊತ್ತಿಗೆ ಬಾಲಕಿ ಅಹನಾಗೆ ಉಸಿರುಗಟ್ಟಿದಂತಾಗಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರೂ ಅಷ್ಟು ಹೊತ್ತಿಗೆ ಪ್ರಾಣ ಪಕ್ಷಿ ಹಾರಿ ಹೋಗಿದೆ. ಮನೆಯವರಿಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಅವರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಮುಂದುವರಿದ ಮಳೆ ಆರ್ಭಟ; ಉತ್ತರ ಕನ್ನಡದಲ್ಲಿ ಮನೆ ಮೇಲೆ ಗುಡ್ಡ ಕುಸಿತ, ನಾಲ್ವರು ಅಪಾಯದಲ್ಲಿ

Exit mobile version