Site icon Vistara News

Gramin Dak Sevak: ಡಿ. 12ರಿಂದ ಅಂಚೆ ಸೇವಕರ ಅನಿರ್ಧಿಷ್ಟಾವಧಿ ಮುಷ್ಕರ; ಕಾರಣವೇನು?

protest

protest

ಬೆಂಗಳೂರು: ಗ್ರಾಮೀಣ ಅಂಚೆ ಸೇವಕರ (Gramin Dak Sevak) ವಿವಿಧ ಬೇಡಿಕೆಗಳನ್ನು ಊಡೇರಿಸುವಂತೆ ಒತ್ತಾಯಿಸಿ ಡಿ. 12ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಒಕ್ಕೂಟ (All India Garamin Dak Sevaka Union-ಎಐಜಿಡಿಎಸ್‌ಯು) ತಿಳಿಸಿದೆ.

ಬೇಡಿಕೆಗಳ ಪಟ್ಟಿ

ದೀರ್ಘ ಕಾಲದಿಂದ ಬಾಕಿ ಉಳಿದಿರುವ ಬೇಡಿಕೆಗಳ ಪಟ್ಟಿಯನ್ನು ಈಗಾಗಲೇ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ. ಆದರೆ ಸೂಕ್ತ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಿವಿಲ್‌ ನೌಕರರ ಸ್ಥಾನಮಾನ, 8 ಗಂಟೆಗಳ ಕರ್ತವ್ಯ ಮತ್ತು ಪ್ರಯೋಜನ

1977ರಲ್ಲಿ ಸುಪ್ರೀಂ ಕೋರ್ಟ್‌ ಸಾಮಾನ್ಯ ನಾಗರಿಕ ಸೇವೆಗಳನ್ನು ಹೊರತು ಪಡಿಸಿದ ಸಿವಿಲ್‌ ಹುದ್ದೆಗಳಲ್ಲಿರುವವರನ್ನು ಹೆಚ್ಚುವರಿ ಡಿಪಾರ್ಟ್‌ಮೆಂಟಲ್‌ ಏಜೆಂಟ್‌ಗಳು (EDA) ಎಂದು ಕರೆಯಿತು. ಆ ತೀರ್ಪಿನ ಅನುಷ್ಠಾನಕ್ಕಾಗಿ ಹಿಂದಿನಿಂದಲೂ ಒತ್ತಾಯಿಸಲಾಗುತ್ತದೆ. ಅಲ್ಲದೆ 5 ಗಂಟೆಗಳ ಕರ್ತವ್ಯದ ಮಿತಿಯನ್ನು ತೆಗೆದು ಹಾಕಿ ತಮಗೂ ಪೌರ ಕಾರ್ಮಿಕರ ಸ್ಥಾನಮಾನ ನೀಡಬೇಕು, 8 ಗಂಟೆಗಳ ಕರ್ತವ್ಯದ ಅವಧಿಯನ್ನು ನಿಗಧಿಪಡಿಸಬೇಕು ಮತ್ತು ಅಂಚೆ ಸೇವಾ ಉದ್ಯೋಗಿಗಳಿಗೆ ಸಮಗ್ರ ಪ್ರಯೋಜನವನ್ನು ಒದಗಿಸಬೇಕು ಎಂದು ಎಐಜಿಡಿಎಸ್‌ಯು ಸದಸ್ಯರು ಆಗ್ರಹಿಸಿದ್ದಾರೆ.

ಆರ್ಥಿಕ ಉನ್ನತೀಕರಣಗಳ ಅನುದಾನ

10, 20 ಮತ್ತು 30 ವರ್ಷಗಳ ಕರ್ತವ್ಯ ಪೂರ್ಣಗೊಳಿಸಿದ ಇತರ ಉದ್ಯೋಗಿಗಳಿಗೆ ಮೂರು ಬಾರಿಯ ಆರ್ಥಿಕ ಉನ್ನತೀಕರಣ ನೀಡಲಾಗುತ್ತದೆ. ಕಮಲೇಶ್‌ ಚಂದ್ರ ಸಮಿತಿ ಇದನ್ನೇ ಹೇಳಿದೆ. 12, 24 ಮತ್ತು 36 ವರ್ಷಗಳ ಕರ್ತವ್ಯವವನ್ನು ಪೂರ್ಣಗೊಳಿಸಿದ ಗ್ರಾಮೀಣ ಅಂಚೆ ಸೇವಕರಿಗೆ ಮೂರು ಆರ್ಥಿಕ ಉನ್ನತೀಕರಣಗಳನ್ನು ಅನುಮತಿಸಲು ಶಿಫಾರಸು ಮಾಡಲಾಗಿದೆ. ಅದರ ಜಾರಿಗೆ ಒತ್ತಾಯಿಸಲಾಗುತ್ತದೆ.

5 ಲಕ್ಷ ರೂ. ಮೊತ್ತ ಮರುಸ್ಥಾಪನೆ

ಕಮಲೇಶ್‌ ಚಂದ್ರ ಸಮಿತಿಯು ನಿವೃತ್ತಿಯಲ್ಲಿರುವ ಜಿಡಿಎಸ್‌ ನೌಕರರಿಗೆ ಅರ್ಧದಷ್ಟು ವೇತನವನ್ನು ನೀಡಬೇಕೆಂದು ಶಿಫಾರಸು ಮಾಡಿದೆ. ತಿಂಗಳ ವೇತನ ಮತ್ತು ಸೇವೆಯು ಪೂರ್ಣಗೊಂಡ ಪ್ರತಿ ವರ್ಷಕ್ಕೆ ಭತ್ಯೆಗಳು ಗರಿಷ್ಠ 5 ಲಕ್ಷ ರೂ.ಗಳಿಗೆ ಒಳಪಟ್ಟಿದೆ. ಇದನ್ನು ಅನಿಯಂತ್ರಿತವಾಗಿ 1.5 ಲಕ್ಷ ರೂ.ಗೆ ಇಳಿಸಲಾಗಿದೆ. ಹೀಗಾಗಿ 5 ಲಕ್ಷ ರೂ. ಮರುಸ್ಥಾಪಿಸಬೇಕು ಎಂದು ಆಗ್ರಹಿಸಲಾಗಿದೆ.

ವರ್ಷಕ್ಕೆ 30 ದಿನಗಳ ರಜೆ

ವರ್ಷಕ್ಕೆ 30 ದಿನಗಳ ರಜೆ ನೀಡಬೇಕು ಮತ್ತು ಬಳಸಿಕೊಳ್ಳದ ರಜೆಯನ್ನು 180 ದಿನಗಳವರೆಗೆ ಸಂಗ್ರಹಿಸಬಹುದು ಎಂದು ಕಮಲೇಶ್‌ ಚಂದ್ರ ಸಮಿತಿ ಶಿಫಾರಸು ಮಾಡಿದ್ದು, ಅದರ ಅನುಷ್ಠಾನಕ್ಕೆ ಪಟ್ಟು ಹಿಡಿಯಲಾಗಿದೆ.

ವೈದ್ಯಕೀಯ ಸೌಲಭ್ಯ

ಕಡಿಮೆ ಸಂಬಳ ಪಡೆಯುವ ಗ್ರಾಮೀಣ ಅಂಚೆ ಸೇವಾ ನೌಕರರಿಗೆ ಯಾವುದೇ ವೈದ್ಯಕೀಯ ಸೌಲಭ್ಯಗಳಿಲ್ಲ. ಹೀಗಾಗಿ ತಮಗೂ 5 ಲಕ್ಷ ರೂ.ಗಳ ಜಿಐಎಸ್‌ ಅನ್ನು ಜಾರಿಗೊಳಿಸಬೇಕು. ಇದು ಆರ್ಥಿಕ ಭದ್ರತೆಯನ್ನು ಬಲಪಡಿಸುವುದಲ್ಲದೆ ಸರ್ಕಾರದ ಮೇಲಿನ ಹಣಕಾಸಿನ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಒಕ್ಕೂಟ ಪ್ರಕಟಣೆಯಲ್ಲಿ ತಿಳಿಸಿದೆ. ಆದಷ್ಟು ಶೀಘ್ರ ಈ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದೆ.

ಇದನ್ನೂ ಓದಿ: Police Constable: ನಾಳೆ ಕಾನ್ಸ್‌ಟೇಬಲ್ ನೇಮಕಾತಿ ಲಿಖಿತ ಪರೀಕ್ಷೆ; ಈ ದಾಖಲೆ ಮರೆಯಬೇಡಿ!

Exit mobile version