Site icon Vistara News

Gruha lakshmi : ಮೋದಿಯವರೇ ಗ್ಯಾರಂಟಿಗಳಿಂದ ರಾಜ್ಯ ದಿವಾಳಿ ಆಗಿಲ್ಲ, ಆಗಲ್ಲ: ಸಿದ್ದರಾಮಯ್ಯ ಸವಾಲ್‌

CM siddaramaiah

ಮೈಸೂರು: ಸ್ವತಃ ಪ್ರಧಾನಿ ನರೇಂದ್ರ ಮೋದಿ (PM Narendra Modi). ಅವರೇ ಕಾಂಗ್ರೆಸ್‌ನ ಪಂಚ ಗ್ಯಾರಂಟಿಗಳನ್ನು (Congress gurantee) ಜಾರಿ ಮಾಡಿದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಹೇಳಿದ್ದರು. ಆದರೆ, ನಾವು ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ರಾಜ್ಯ ದಿವಾಳಿಯಾಗಿಲ್ಲ, ಆಗುವುದೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು.

ಮೈಸೂರಿನ ಮಹಾರಾಣಿ ಕಾಲೇಜಿನ ಮೈದಾನದಲ್ಲಿ ಬುಧವಾರ ನಡೆದ ಸರ್ಕಾರದ ಮಹತ್ವಾಕಾಂಕ್ಷಿ ನಾಲ್ಕನೇ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ (Gruha lakshmi Scheme) ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ 1.15 ಕೋಟಿ ಕುಟುಂಬಗಳ ಯಜಮಾನಿಯರಿಗೆ ಪ್ರತಿ ತಿಂಗಳು 2000 ರೂ. ನೇರ ನಗದು ವರ್ಗಾವಣೆ ಮಾಡುವ ಯೋಜನೆಗೆ ಚಾಲನೆ ದೊರೆಯಿತು.

ನಮ್ಮ ಯಾವುದೇ ರೆಗ್ಯುಲರ್ ಯೋಜನೆ ನಿಲ್ಲಿಸಿಲ್ಲ. ಲೋಕೋಪಯೋಗಿ, ನೀರಾವರಿ ಹೀಗೆ ಎಲ್ಲ ಯೋಜನೆಗೂ ಹಣ ಕೊಟ್ಟಿದ್ದೇವೆ. ರೈತರು, ಕಾರ್ಮಿಕರು, ಮಹಿಳೆಯರು, ಯುವಕರ ಪರವಾದ ಪಕ್ಷ ಕಾಂಗ್ರೆಸ್. ವಿರೋಧ ಪಕ್ಷದವರು ಏನೇ ಹೇಳಲಿ. ಅವರು ಹೇಳುತ್ತಿರುವುದು ಸುಳ್ಳು. ಸತ್ಯ ನಿಮ್ಮ ಮುಂದೆ ಇದೆ ಎಂದರು ಸಿದ್ದರಾಮಯ್ಯ.

ಪ್ರಣಾಳಿಕೆ ಜಾರಿ ರಾಜಧರ್ಮ ಎಂದ ಸಿದ್ದರಾಮಯ್ಯ

ʻʻಚುನಾವಣಾ ಪ್ರಣಾಳಿಕೆಯನ್ನು ಸಮರ್ಪಕವಾಗಿ ಜಾರಿಮಾಡಬೇಕಿರುವುದು ಯಾವುದೇ ಸರ್ಕಾರದ ರಾಜಧರ್ಮ. ಅದರಂತೆ ನಮ್ಮ ಸರ್ಕಾರ ಗೃಹಲಕ್ಮೀ ಯೋಜನೆಯನ್ನು ಜಾರಿ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು .

ʻʻಈವರೆಗೆ ಕೊಟ್ಟ ಮಾತಿನಂತೆ ಯಾವ ಸರ್ಕಾರವೂ ನಡೆದುಕೊಂಡಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ನಮ್ಮ ಸರ್ಕಾರ ಮುಂದಿನ 5 ವರ್ಷಗಳಲ್ಲಿ ಜನರಿಗೆ ನೀಡಿರುವ ಭರವಸೆಗಳನ್ನು ನೂರಕ್ಕೆ ನೂರು ಈಡೇರಿಸುವ ವಿಶ್ವಾಸ, ಭರವಸೆ ನಮಗಿದೆ. ಐದು ಗ್ಯಾರಂಟಿಗಳನ್ನು ನಾವು ಜನರ ಮುಂದಿಟ್ಟಿದ್ದೆವು. ಗೃಹಜ್ಯೋತಿ, ಶಕ್ತಿ ಯೋಜನೆ, ಅನ್ನಭಾಗ್ಯ, ನಾಲ್ಕನೇ ಗ್ಯಾರಂಟಿಯಾಗಿ ಗೃಹಲಕ್ಷ್ಮೀ ಯೋಜನೆಯನ್ನು ಇಂದು ಜಾರಿಮಾಡಲಾಗಿದೆʼʼ ಎಂದು ಹೇಳಿದರು.

ನೂರು ದಿನಗಳ ಸಾಧನೆ ಬಿಂಬಿಸುವ ಕಿರುಹೊತ್ತಿಗೆ

ಈ ತಿಂಗಳ 27 ನೇ ತಾರೀಖೆಗೆ ಸರ್ಕಾರ ಅಧಿಕಾರಕ್ಕೆ ಬಂದು 100 ದಿನಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ ಜನತೆಯ ಮುಂದೆ ಸರ್ಕಾರದ ಸಾಧನೆಗಳನ್ನು ತಿಳಿಸಲು ಸಣ್ಣ ಕೈಪಿಡಿ ಹೊರತರಲಾಗಿದೆ. ಈ ಕಿರುಹೊತ್ತಿಗೆ ಕಳೆದ ಮೂರು ತಿಂಗಳು, 10 ದಿನಗಳಲ್ಲಿ ಮಾಡಿರುವ ಸಾಧನೆಗಳನ್ನು ಒಳಗೊಂಡಿದೆ. ಈ ರಾಜ್ಯದ ಜನತೆಗೆ ನಮ್ಮ ಕರ್ತವ್ಯ ಜವಾಬ್ದಾರಿ ಹಾಗೂ ಸಾಧನೆಗಳನ್ನು ಮುಂದಿಡುವ ಪ್ರಯತ್ನ ಮಾಡಿದೆ ಎಂದರು.

ಸರಕಾರದ 100 ದಿನಗಳ ಸಾಧನೆ ಬಿಂಬಿಸುವ ಕೈಪಿಡಿಯನ್ನು ಗಮನಿಸುತ್ತಿರುವ ರಾಹುಲ್‌ ಗಾಂಧಿ

ಬೃಹತ್ ಪ್ರಮಾಣದಲ್ಲಿ ಬಡವರಿಗೆ ಹಣ ವರ್ಗಾವಣೆ

ಕರ್ನಾಟಕದಲ್ಲಿ 1.26 ಕೋಟಿ ಕುಟುಂಬಗಳಿವೆ. ಆ ಕುಟುಂಬಗಳ ಯಜಮಾನಿಯಾರಿಗೆ 2000 ರೂ.ಗಳನ್ನು ಅವರ ಖಾತೆಗೆ ಇಂದು ಜಮಾ ಮಾಡಲಾಗಿದೆ. ಈ ಯೋಜನೆಗೆ 1.10 ಕೋಟಿ ಜನ ನೋಂದಾಯಿಸಿಕೊಂಡಿದ್ದಾರೆ. ಇಡೀ ಭಾರತದಲ್ಲಿ ಯಾವ ರಾಜ್ಯವೂ ತೊಂದರೆಯಲ್ಲಿರುವ ಜನರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಂದರೆ ವರ್ಷಕ್ಕೆ 24 ಸಾವಿರ ಹಣವನ್ನು ಬಡವರಿಗೆ ವರ್ಗಾಯಿಸಿಲ್ಲ ಎನ್ನುವುದು ಕಟುಸತ್ಯ. ಜೂನ್ 11 ರಂದು ಶಕ್ತಿ ಯೋಜನೆ ಜಾರಿಯಾಗಿದ್ದು, 48,500 ಕೋಟಿ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದಾರೆ. ಅನ್ನಭಾಗ್ಯ ಕಾರ್ಯಕ್ರಮವನ್ನು ಜುಲೈ 10 ರಂದು ಜಾರಿಗೆ ತಂದೆವು. ಕೇಂದ್ರ ಸರ್ಕಾರ ಅಕ್ಕಿಯನ್ನು ನೀಡದೇ ಹೋದರೂ ನಾವು 170 ರೂ.ಗಳನ್ನು ಅಕ್ಕಿ ಸಿಗುವವರೆಗೂ ಪ್ರತಿ ಬಿಪಿಎಲ್, ಅಂತ್ಯೋದಯ ಕಾರ್ಡುದಾರರ ಖಾತೆಗೆ ಜಮಾ ಮಾಡಿದ್ದೇವೆ ಎಂದರು.

ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನ

ಜುಲೈ ತಿಂಗಳಿಂದ ಗೃಹಜ್ಯೋತಿ ಕಾರ್ಯಕ್ರಮದಡಿ 200 ಯೂನಿಟ್‍ವರೆಗೆ ವಿದ್ಯುತ್ ಬಳಸುವವರಿಗೆಲ್ಲಾ ಉಚಿತ ವಿದ್ಯುತ್ ಒದಗಿಸಿ ಶೂನ್ಯ ಬಿಲ್ ನೀಡುತ್ತಿದ್ದೇವೆ. ಈ ಯೋಜನೆಗೆ 1.56 ಕೋಟಿ ಜನ ನೋಂದಾಯಿಸಿಕೊಂಡಿದ್ದಾರೆ. ಪ್ರಧಾನಿಗಳೇ ಈ 5 ಗ್ಯಾರಂಟಿಗಳನ್ನು ಜಾರಿ ಮಾಡಿದರೆ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಹೇಳಿದ್ದರು. ಆದರೆ ಗೃಹಲಕ್ಷ್ಮೀ ಯೋಜನೆ ಜಾರಿಯಾಗಿದೆ. ಯುವನಿಧಿಯನ್ನು ಡಿಸೆಂಬರ್ ಅಥವಾ ಜನವರಿಯಲ್ಲಿ ಪ್ರಾರಂಭವಾಗಲಿದೆ. ಎಲ್ಲಾ ಅಭಿವೃದ್ದಿ ಕಾರ್ಯಕ್ರಮಗಳನ್ನು ಜಾರಿ ಮಾಡಿ, ನೀರಾವರಿ, ಲೋಕೋಪಯೋಗಿ, ವಸತಿ, ಗ್ರಾಮಿಣಾಭಿವೃದ್ಧಿಗೆ ಅನುದಾನವಿಟ್ಟು 5 ಗ್ಯಾರಂಟಿಗಳನ್ನು ಜಾರಿ ಮಾಡಿದೆ. 56 ಸಾವಿರ ಕೋಟಿ ರೂ.ಗಳು ಒಂದು ವರ್ಷಕ್ಕೆ ತಗಲುತ್ತದೆ. ನಮ್ಮದು ಬಡವರ , ದಲಿತರ, ಹಿಂದುಳಿದ, ಅಲ್ಪಸಂಖ್ಯಾತರ ರೈತರ, ಕಾರ್ಮಿಕರ, ಯುವಕರ ಪರವಾದ ಸರ್ಕಾರ ಎಂದು ಸಾಬೀತು ಮಾಡಲಾಗಿದೆ. ಯಾರು ಏನೇ ಹೇಳಿದರೂ ನಾನು ನುಡಿದಂತೆ ನಡೆದಿದ್ದೇವೆ. ವಿರೋಧ ಪಕ್ಷದವರು ಹೇಳಿರುವುದು ಸುಳ್ಳು ಎಂದರು. ರಾಜ್ಯದಲ್ಲಿ ಐತಿಹಾಸಿಕ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಗಿದೆ ಎಂದರು.

ಇದನ್ನೂ ಓದಿ : Rahul Gandhi : ಸಿಎಂ ಸಿದ್ದರಾಮಯ್ಯರನ್ನು ಬಸ್ಸಿನಿಂದ ಕೈಹಿಡಿದು ಕೆಳಗಿಳಿಸಿದ ರಾಹುಲ್‌ ಗಾಂಧಿ, ಖರ್ಗೆ ಕೈಹಿಡಿದ ಸುರ್ಜೇವಾಲ

ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಹುಲ್ ಗಾಂಧಿ, ರಾಜ್ಯಸಭಾ ಸದಸ್ಯ ಹಾಗೂ ಕರ್ನಾಟಕ ಉಸ್ತುವಾರಿ ರಂದೀಪ್ ಸುರ್ಜೇವಾಲಾ, ಕೆ.ಸಿ.ವೇಣುಗೋಪಾಲ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಸಚಿವ ಡಾ: ಕೆ.ಹೆಚ್.ಮುನಿಯಪ್ಪ, ಸಚಿವರಾದ ಕೃಷ್ಣಬೈರೇಗೌಡ, ಲಕ್ಷ್ಮೀ ಹೆಬ್ಬಾಳ್ಕರ್, ಬೈರತಿ ಸುರೇಶ್, ಚೆಲುವರಾಯಸ್ವಾಮಿ, ಕೆ.ಹೆಚ್.ಮುನಿಸ್ವಾಮಿ, ಡಾ:ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ, ಪಿ.ನರೇಂದ್ರಸ್ವಾಮಿ, ಬೋಸರಾಜು , ಶಾಸಕರು ಉಪಸ್ಥಿತರಿದ್ದರು.

Exit mobile version