Site icon Vistara News

Heart Attack : ಬಿಇಒ ಕಚೇರಿ SDAಗೆ ಹೃದಯಾಘಾತ; ಹಿರಿಯ ಅಧಿಕಾರಿ ಕಿರುಕುಳ ಕಾರಣ ಎಂದು ಶವ ಇಟ್ಟು ಪ್ರತಿಭಟನೆ

Heart attack

ಹಾಸನ: ಹಾಸನ ಜಿಲ್ಲೆಯ (Hassan News) ಯಳ್ಳೇಶಪುರದ ಕ್ಷೇತ್ರ ಶಿಕ್ಷಣ ಇಲಾಖೆ ಕಚೇರಿಯಲ್ಲಿ (BEO Office) ದ್ವಿತೀಯ ದರ್ಜೆ ಸಹಾಯಕರಾಗಿ (Second Division Assistant) ಕೆಲಸ ಮಾಡುತ್ತಿದ್ದ ಕಿರಣ್ (31) ಭಾನುವಾರ ರಾತ್ರಿ ಹೃದಯಾಘಾತದಿಂದ (Heart Attack) ನಿಧನರಾಗಿದ್ದಾರೆ. ಆದರೆ, ಅವರ ಸಾವಿಗೆ ಹಿರಿಯ ಅಧಿಕಾರಿಗಳ ಒತ್ತಡವೇ ಕಾರಣ (Pressure from senior officer alleged) ಎಂದು ಆರೋಪಿಸಿ ಶವ ಇಟ್ಟು ಪ್ರತಿಭಟನೆ (Protest by keeping dead body) ನಡೆಸಲಾಗುತ್ತಿದೆ.

ಕಿರಣ್‌ ಅವರ ಸಾವಿಗೆ ಸಿಡಿಪಿಓ ಭಾಗ್ಯಮ್ಮ ಮತ್ತು ಕೇಸ್ ವರ್ಕರ್ ಸುನೀಲ್ ಅವರ ಕಿರುಕುಳ ಮತ್ತು ಒತ್ತಡವೇ ಕಾರಣ ಎಂದು ಆರೋಪಿಸಲಾಗಿದೆ. ಕಿರಣ್ ಪೋಷಕರು ಹಾಗೂ ದಲಿತ ಸಂಘಟನೆಗಳಿಂದ ಹೊಳೆನರಸೀಪುರದ ಬಿಇಓ‌ ಕಚೇರಿ ಎದುರು ಕಿರಣ್ ಶವವಿಟ್ಟು ಪ್ರತಿಭಟನೆ ನಡೆಸಲಾಗುತ್ತಿದೆ.

ಕಿರಣ್‌ ಅವರು ಈ ಹಿಂದೆ ಹೊಳೆನರಸೀಪುರ ಬಿಇಓ ಕಚೇರಿಯಲ್ಲಿ ಕೆಲಸ ಮಾಡುತಿದ್ದರು. ಅವರನ್ನು ಯಳ್ಳೇಶಪುರಕ್ಕೆ ವರ್ಗಾವಣೆ ಮಾಡಲಾಗಿತ್ತು. ಅವರನ್ನು ಜಾತಿ ನಿಂದನೆ ಮಾಡಿ, ಮಾನಸಿಕ‌ ಕಿರುಕುಳ ನೀಡಿ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಧಿಕಾರಿಗಳ ಒತ್ತಡವೇ ಹೃದಯಾಘಾತಕ್ಕೆ ಕಾರಣ ಎನ್ನುವುದು ಅವರ ಆಕ್ರೋಶ.

ಹೊಳೆನರಸೀಪುರದ ಬಿಇಓ ಕಚೇರಿ ಎದುರು ಮೃತನ ಶವವಿಟ್ಟು ಪ್ರತಿಭಟನೆ ನಡೆಸುತ್ತಿರುವ ಸಂಘಟನೆಗಳು ಕಿರಣ್ ಸಾವಿಗೆ ಕಾರಣರಾದವರನ್ನು ಬಂಧಿಸುವಂತೆ ಆಗ್ರಹಿಸುತ್ತಿದ್ದಾರೆ.

ಹೊಳೆ ನರಸೀಪುರದಲ್ಲಿ ಪ್ರತಿಭಟನೆ

ಇದನ್ನೂ ಓದಿ: Heart Attack : ಆಟೋದಲ್ಲಿ ಕುಳಿತಿದ್ದಾಗಲೇ ಎದೆನೋವು; ಕೆಳಗಿಳಿದ ಕೂಡಲೇ ಕುಸಿದು ಬಿದ್ದು ಚಾಲಕ ಸಾವು

ಕಿರಣ್ ಹೊಳೆನರಸೀಪುರ ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದವರಾಗಿದ್ದು, ಅವರ ಮೇಲೆ ಹಿರಿಯ ಅಧಿಕಾರಿಗಳು ನಡೆಸಿರುವ ದೌರ್ಜನ್ಯ ಮತ್ತು ನೀಡಿರುವ ಒತ್ತಡದಿಂದ ಅವರು ಹೃದಯದ ಸಮಸ್ಯೆಗೆ ಒಳಗಾದರು ಎನ್ನುವುದು ದಲಿತ ಸಂಘಟನೆಗಳು ಮತ್ತು ಪೋಷಕರು ಗಂಭೀರವಾಗಿ ಆರೋಪಿಸಿದ್ದಾರೆ

ಪ್ರತಿಭಟನೆಯಿಂದಾಗಿ ಬಿಇಓ ಕಚೇರಿ ಎದುರು ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿಗೆ. ಹೊಳೆನರಸೀಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version