Site icon Vistara News

Murder Case: ತಾಯಿಯನ್ನು ನಿಂದಿಸಿದ ಮಾವನನ್ನು ಇರಿದು ಕೊಂದ ಅಳಿಯ

hassan murder

ಹಾಸನ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸೋದರ ಮಾವನನ್ನು ಅಳಿಯ ಚಾಕುವಿನಿಂದ ಇರಿದು ಕೊಂದು (murder case) ಹಾಕಿದ್ದಾನೆ. ಹಾಸನ‌ ಜಿಲ್ಲೆಯ (hassan news) ಅರಸೀಕೆರೆ ತಾಲೂಕಿನ ಬಾಣಾವರ ಹೋಬಳಿ ಗಂಜಿಗೆರೆ ಗ್ರಾಮದಲ್ಲಿ ಘಟನೆ ನಡೆದಿದೆ.

ಪ್ರಭುಸ್ವಾಮಿ (50) ಕೊಲೆಯಾದ ವ್ಯಕ್ತಿ. ಅಜಯ್ (22) ಮಾವನನ್ನು ಕೊಲೆಗೈದ ಆರೋಪಿ. ಅಜಯ್‌ನ ತಾಯಿ ಸಾವಿತ್ರಮ್ಮ ಏಳೆಂಟು ವರ್ಷಗಳ ಹಿಂದೆ ಗಂಡನನ್ನು ಬಿಟ್ಟು ತವರು ಮನೆಗೆ ಬಂದು ನೆಲೆಸಿದ್ದರು. ಈಕೆಯ ಸೋದರ ಪ್ರಭುಸ್ವಾಮಿ ಹಾಗೂ ಸಾವಿತ್ರಮ್ಮ ಗಂಜಿಗೆರೆ ಗ್ರಾಮದಲ್ಲಿ ಅಕ್ಕಪಕ್ಕದ ಮನೆಯಲ್ಲಿ ವಾಸವಿದ್ದರು. ಜಮೀನು ವಿಚಾರವಾಗಿ ಆಗಾಗ್ಗೆ ತಂಗಿಯೊಂದಿಗೆ ಪ್ರಭುಸ್ವಾಮಿ ಜಗಳವಾಡುತ್ತಿದ್ದ.

ಮದ್ಯ ಸೇವಿಸಿ ಬಂದು ಒಡಹುಟ್ಟಿದ ತಂಗಿ ಹಾಗೂ ಆಕೆಯ ಮಗಳನ್ನು ಪ್ರಭುಸ್ವಾಮಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಇದರಿಂದ ಬೇಸತ್ತು ಹೋಗಿದ್ದ ಸಾವಿತ್ರಮ್ಮ ತನ್ನ ಮಗನಿಗೂ ಮಾವ ಜಗಳವಾಡುವ ವಿಷಯ ತಿಳಿಸಿದ್ದಳು. ನಿನ್ನೆ ಕೂಡ ಪ್ರಭುಸ್ವಾಮಿ ತಂಗಿಯೊಂದಿಗೆ ಜಗಳವಾಡಿ ಕೆಟ್ಟ ಪದಗಳಿಂದ ನಿಂದಿಸಿದ್ದ.

ವಿಷಯ ತಿಳಿದು ಗಂಜಿಗೆರೆ ಗ್ರಾಮಕ್ಕೆ ಆಗಮಿಸಿದ ಅಜಯ್ ಮನೆಯಲ್ಲಿಯಿದ್ದ ಮಾವ ಪ್ರಭುಸ್ವಾಮಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಣಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನಿವೇಶನದ ತಗಾದೆಯಲ್ಲಿ ವ್ಯಕ್ತಿಯ ಬರ್ಬರ ಕೊಲೆ

ಆನೇಕಲ್: ನಿವೇಶನ ಜಾಗದ ವಿಚಾರದಲ್ಲಿ ಉಂಟಾದ ದ್ವೇಷದಿಂದ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಚ್ಚಿ ಕೊಲೆ (Murder Case) ಮಾಡಲಾಗಿದೆ. ಬೆಂಗಳೂರು ನಗರ ಜಿಲ್ಲೆ ಹೆಬ್ಬಗೋಡಿಯಲ್ಲಿ ಘಟನೆ ನಡೆದಿದೆ.

ಹೆಬ್ಬಗೋಡಿ ಪೊಲೀಸ್ ಠಾಣೆ ಹಿಂಭಾಗದ ಪ್ರದೇಶದಲ್ಲಿ ಈ ಕೊಲೆ ನಡೆದಿದ್ದು, ಹೆಬ್ಬಗೋಡಿಯ ರಮೇಶ್ ಎಂಬವರನ್ನು ಕೊಚ್ಚಿ ಕೊಲ್ಲಲಾಗಿದೆ. ನಿನ್ನೆ ರಾತ್ರಿ ಹತ್ತು ಮೂವತ್ತರ ಸಮಯದಲ್ಲಿ ಘಟನೆ ನಡೆದಿದೆ. ರಮೇಶ್ ಮನೆಯ ಎದುರು ಮನೆಯಾತನೇ ಕೊಲೆ ನಡೆಸಿದ್ದಾನೆ.

ಹೆಬ್ಬಗೋಡಿಯ ಜಾಗದಲ್ಲಿ ಮನೆ ಕಟ್ಟುವ ವಿಚಾರಕ್ಕೆ ಆಗಾಗ ರಮೇಶ ಹಾಗೂ ಕೊಲೆ ಆರೋಪಿಗಳ ನಡುವೆ ಗಲಾಟೆ ನಡೆಯುತ್ತಿತ್ತು. ಸರ್ಕಾರದಿಂದ ಅಲಾಟ್ ಆಗಿದ್ದ ಜಾಗದಲ್ಲಿ ರಮೇಶ್ ನಿನ್ನೆ ಮನೆಗೆ ಅಡಿಪಾಯ ಹಾಕಿದ್ದರು. ಇದೇ ಜಾಗ ತನಗೆ ಸೇರಬೇಕು ಎಂದು ಎದುರು ಮನೆಯ ಜಗದೀಶ್ ಆಗಾಗ ಗಲಾಟೆ ಮಾಡಿದ್ದ. ಹೆಬ್ಬಗೋಡಿ ನಗರಸಭೆಯಿಂದ ಈ ಜಾಗ ರಮೇಶ್‌ಗೆ ಸೇರಿದ್ದು ಎಂದು ದಾಖಲೆ ನೀಡಲಾಗಿತ್ತು.

ಇದೇ ವಿಚಾರಕ್ಕಾಗಿ ನಿನ್ನೆ ರಾತ್ರಿ ರಮೇಶ್‌ನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ರಾತ್ರಿ 10.30ರ ಸಮಯದಲ್ಲಿ ಮಾರಕಾಸ್ತ್ರಗಳ ಜೊತೆ ಬಂದು ಕೊಲೆ ಮಾಡಿದ ಹಂತಕರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Murder Case : ಶ್ರೀನಿವಾಸಪುರ ಬಂದ್‌; ಕೋಲಾರ ಕಾಂಗ್ರೆಸ್‌ ಮುಖಂಡನ ಕೊಲೆ ಕೇಸ್‌ಗೆ ಟ್ವಿಸ್ಟ್‌!

Exit mobile version