Site icon Vistara News

Officer Dismissed: ಸುಳ್ಳು ದಾಖಲೆ ನೀಡಿ ನೇಮಕ; ಸಹಾಯಕ ತೋಟಗಾರಿಕೆ ಅಧಿಕಾರಿ ವಜಾ

ಹಾವೇರಿ: ಸುಳ್ಳು ದಾಖಲೆ ನೀಡಿ ಅಕ್ರಮವಾಗಿ ನೇಮಕವಾಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಹಾವೇರಿ ಸಹಾಯಕ ತೋಟಗಾರಿಕೆ ಅಧಿಕಾರಿ ಬಸವರಾಜಪ್ಪ ನಿಂಗಪ್ಪ ಬರೇಗಾರ ವಜಾಗೊಂಡಿದ್ದಾರೆ. ಸತ್ಯಾಂಶ ಮರೆಮಾಚಿ ಅಕ್ರಮವಾಗಿ ನೇಮಕವಾದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ದೂರರ್ಜಿ ಪರಿಶೀಲನಾ ಸಮಿತಿಯು ಪರಿಶೀಲನೆ ನಡೆಸಿ ವರದಿ ನೀಡಿತ್ತು. ನಿಯಮಬಾಹಿರವಾಗಿ ನೇಮಕಾಗಿರುವುದು ತಿಳಿದುಬಂದ ಹಿನ್ನೆಲೆಯಲ್ಲಿ ಅಧಿಕಾರಿಯನ್ನು ವಜಾಗೊಳಿಸಿ (Officer Dismissed) ತೋಟಗಾರಿಕಾ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ತೋಟಗಾರಿಕೆ ಇಲಾಖೆಯಲ್ಲಿ ಬಸವರಾಜಪ್ಪ ನಿಂಗಪ್ಪ ಬರೇಗಾರ ದಿನಗೂಲಿ ನೌಕರನಾಗಿದ್ದುಕೊಂಡು ಹಾವೇರಿ ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆ ಬಡ್ತಿ ಪಡೆದಿದ್ದರು. 1981 ರಿಂದ 1991ರವರೆಗೆ ದಿನಗೂಲಿ ನೌಕರನಾಗಿ ಸೇವೆ ಸಲ್ಲಿಸಿದ್ದಾಗಿ ಸುಳ್ಳು ದಾಖಲೆ ನೀಡಿದ್ದರು. ಇದರಿಂದ 1992ರಲ್ಲಿ ತೋಟಗಾರ ಹುದ್ದೆಗೆ ನೇಮಕವಾಗಿದ್ದರು. ನಂತರ 2012ರಲ್ಲಿ ಜ್ಯೇಷ್ಠತೆಯನ್ನು ಪರಿಗಣಿಸಿ ಸಹಾಯಕ ತೋಟಗಾರಿಕೆ ಅಧಿಕಾರಿಯಾಗಿ ಮುಂಬಡ್ತಿ ನೀಡಲಾಗಿತ್ತು. ಆದರೆ ಇವರ ಹುದ್ದೆಯನ್ನು ನಿಯಮಬಾಹಿರವಾಗಿ ಸಕ್ರಮಗೊಳಿಸಲಾಗಿದೆ ಎಂದು ದೂರು ಸಲ್ಲಿಕೆಯಾಗಿತ್ತು.

ಇದನ್ನೂ ಓದಿ | PSI Parashuram Case: ಸರ್ಕಾರಿ ಯೋಜನೆ ಹಣ ಬಿಡುಗಡೆಗೂ ಕಮಿಷನ್‌ಗೆ ಬೇಡಿಕೆ; ಎ2 ಪಂಪನಗೌಡ ವಿರುದ್ಧ ಮತ್ತೊಂದು ಆರೋಪ

1981ರಿಂದ 1991ರವರೆಗೆ ದಿನಗೂಲಿ ನೌಕರನಾಗಿ ಕೆಲಸ ಮಾಡಿರುವುದಾಗಿ ದಾಖಲೆ ನೀಡಿದ್ದರು. ಆದರೆ, ಆ ಅವಧಿಯಲ್ಲಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ರೆಗ್ಯುಲರ್‌ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡಿದ್ದರು ಎಂಬುವುದು ದೃಢಪಟ್ಟಿದೆ. 10 ವರ್ಷಗಳ ನಿರಂತರ ಸೇವೆ ಪೂರೈಸದೆ ಸಕ್ರಮಾತಿ ಷರತ್ತುಗಳನ್ನು ಉಲ್ಲಂಘಿಸಿ ನೇಮಕವಾಗಿರುವುದು ಸಮಿತಿ ಪರಿಶೀಲನೆ ವೇಳೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಹಾವೇರಿ ಸಹಾಯಕ ತೋಟಗಾರಿಕೆ ಅಧಿಕಾರಿ ಬಸವರಾಜಪ್ಪ ನಿಂಗಪ್ಪ ಬರೇಗಾರ ಅವರನ್ನು ಇಲಾಖೆ ನಿರ್ದೇಶಕರು ಸೇವೆಯಿಂದ ವಜಾಮಾಡಿದ್ದಾರೆ.

ಜಾತಿ ನಿಂದನೆ ಆರೋಪ; ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ, ಕುಲಸಚಿವರ ವಿರುದ್ಧ ಕೇಸ್‌

ಕಲಬುರಗಿ: ಜಾತಿ ನಿಂದನೆ ಆರೋಪದಲ್ಲಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ಕುಲಪತಿ ಹಾಗೂ ಕುಲಸಚಿವರ ವಿರುದ್ಧ ಪ್ರಕರಣ ದಾಖಲಾಗಿದೆ. ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿ ನಂದಪ್ಪ ನೀಡಿದ ದೂರಿನ ಮೇರೆಗೆ ನರೋಣಾ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ | Abu Salem: ಮುಂಬೈ ಸ್ಫೋಟದ ಪ್ರಮುಖ ಆರೋಪಿ, ಭೂಗತ ಪಾತಕಿ ಅಬು ಸಲೇಂನನ್ನು ಮನ್ಮಾಡ್‌ಗೆ ರೈಲಿನಲ್ಲಿ ಕರೆತಂದ ಪೊಲೀಸರು

ಆ.1 ರಂದು ಸಿಯುಕೆಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದ ವೇಳೆ ಸಂಶೋಧನಾ ವಿದ್ಯಾರ್ಥಿ ನಂದಪ್ಪ ಅವರನ್ನು ವಿವಿ ಕ್ಯಾಂಪಸ್ ಒಳಗೆ ಸಿಬ್ಬಂದಿ ಬಿಟ್ಟಿಲ್ಲ. ಎಸ್‌ಸಿ ಎಂಬ ಕಾರಣಕ್ಕೆ ನನ್ನನ್ನು ಒಳಗೆ ಬಿಡಬೇಡಿ ಎಂದು ಕುಲಪತಿ ಬಟ್ಟೂ ಸತ್ಯನಾರಾಯಣ ಹಾಗೂ ಕುಲಸಚಿವ ಆರ್.ಆರ್. ಬಿರಾದಾರ್ ಹೇಳಿದ್ದಾರೆ. ಹೀಗಾಗಿ ಇಬ್ಬರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

Exit mobile version