Site icon Vistara News

CM Siddaramaiah : ಎಲ್ಲರಲ್ಲೂ ಕೊಳ್ಳುವ ಶಕ್ತಿ ತುಂಬುವುದೇ ಧ್ಯೇಯ; ಗ್ಯಾರಂಟಿ ಸಮರ್ಥಿಸಿದ ಸಿಎಂ

CM Siddaramaiah Siddarameshwara Jayanti

ಚಿಕ್ಕ ಬಾಸೂರು (ಹಾವೇರಿ) : ಸಾರ್ವತ್ರಿಕ ಮೂಲ ಆದಾಯದ ತತ್ವದ ಆಧಾರದ ಮೇಲೆ ಎಲ್ಲರಿಗೂ ಕೊಳ್ಳುವ ಶಕ್ತಿ ಬರಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ಅವರು ಸೋಮವಾರ ಶ್ರೀ ನೊಳಂಬ ಲಿಂಗಾಯತ ಸಂಘ (Nolamba Lingayatha Sangha) ಬೆಂಗಳೂರು ವತಿಯಿಂದ ಆಯೋಜಿಸಿದ್ದ ಶ್ರೀ ಗುರು ಶಿವಯೋಗಿ ಸಿದ್ದರಾಮೇಶ್ವರರ (Shivayogi Siddarameshwara Jayanti) 851 ನೇ ಜಯಂತಿ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಸರ್ಕಾರ ಎಲ್ಲಾ ಸಮಾಜದಲ್ಲಿನ ಬಡವರನ್ನು ಮುಖ್ಯ ವಾಹಿನಿಗೆ ತಂದು, ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬಬೇಕು ಎಂದು ಪ್ರಯತ್ನ ಮಾಡುತ್ತಿದೆ. ಅನುಭವ ಮಂಟಪದಲ್ಲಿ ಸಮಸಮಾಜ ನಿರ್ಮಾಣ ಮಾಡುವ ಬಗ್ಗೆ ಚರ್ಚೆಗಳಾಗುತ್ತಿತ್ತು. ಅಂಥ ಸಮಾಜವನ್ನು ಬಸವಾದಿ ಶರಣರು, ಸಿದ್ದರಾಮೇಶ್ವರರು ಬಯಸಿದ್ದರು ಎಂದರು.

ಬದುಕಿನ ಸಾರ್ಥಕತೆಯ ಬಗ್ಗೆ ಆತ್ಮಾವಲೋಕನ ಅಗತ್ಯ

ಶಿವಯೋಗಿ ಸಿದ್ದರಾಮೇಶ್ವರರು ಬಸವಣ್ಣನವರ ಸಮಕಾಲೀನರು. ವಚನ ಸಾಹಿತ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 12 ನೇ ಶತಮಾನದಲ್ಲಿ ಶರಣರು ವಚನಗಳನ್ನು ರಚಿಸಿ ಜೀವನದ ಮೌಲ್ಯಗಳನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ. ಜೀವನ ಮೌಲ್ಯಗಳನ್ನು ಮಾವು ಅರಿಯಬೇಕು. ಹುಟ್ಟು ಆಕಸ್ಮಿಕ, ಸಾವು ಖಚಿತವಾದರೂ ಹುಟ್ಟು ಸಾವುಗಳ ಮಧ್ಯೆ ನಮ್ಮ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು. ನಮ್ಮ ಬದುಕಿನ ಅವಧಿಯಲ್ಲಿ ನಮ್ಮ ಬದುಕನ್ನು ನಾವು ಸಾರ್ಥಕಗೊಳಿಸಿಕೊಂಡಿದ್ದೇವೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಸವಾದಿ ಶರಣರು ಮನುಷ್ಯರಾಗಿ ಬದುಕಬೇಕೆಂದು ಹೇಳಿದ್ದಾರೆ. ಜೀವನದ ಸಾರವನ್ನು ಜನರ ಮುಂದಿಡುವ ಪ್ರಯತ್ನ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಸಿದ್ದರಾಮೇಶ್ವರ ಜಯಂತಿ ಉತ್ಸವದ ವೇಳೆ ಸನ್ಮಾನ

ವಿಶ್ವ ಸಾಹಿತ್ಯಕ್ಕೂ ದೊಡ್ಡ ಕೊಡುಗೆ ನೀಡಿದ ವಚನ ಸಾಹಿತ್ಯ

ವಚನ ಸಾಹಿತ್ಯ ಕನ್ನಡ ಸಾಹಿತ್ಯದಲ್ಲಿ ಮಾತ್ರವಲ್ಲದೆ ವಿಶ್ವ ಸಾಹಿತ್ಯಕ್ಕೂ ದೊಡ್ಡ ಕೊಡುಗೆ ನೀಡಿದೆ. ಧರ್ಮಾಚರಣೆ, ಆಧ್ಯಾತ್ಮ ಜನರ ಭಾಷೆಯಲ್ಲಿ ಲಭ್ಯವಿರಲಿಲ್ಲ. ಸಾಮಾನ್ಯ ಜನರಿಗೆ ಓದು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಜನರ ಭಾಷೆಯಲ್ಲಿ ಇದನ್ನು ತಿಳಿಸಿದ್ದು ಬಸವಣ್ಣ ಎಂದರು.

ಶರಣ ಸಾಹಿತ್ಯದಲ್ಲಿ ಬಸವಣ್ಣ, ಚೆನ್ನಬಸವಣ್ಣ, ಅಕ್ಕಮಹಾದೇವಿ ಅಲ್ಲಮಪ್ರಭು, ಸಿದ್ದರಾಮೇಶ್ವರರು ಪ್ರಮುಖರು. ಬಸವಾದಿ ಶರಣರು ಮುಖ್ಯವಾಗಿ ನೀಡಿದ ಮೌಲ್ಯ ಕಾಯಕ ಮತ್ತು ದಾಸೋಹ. ಸತ್ಯವೇ ಸ್ವರ್ಗ, ಮಿತ್ಯವೆ ನರಕ ಎಂದ ಶರಣರು, ಮೌಢ್ಯಗಳನ್ನು ತಿರಸ್ಕರಿಸಿದ್ದರು. ಬಸವಾದಿ ಶರಣರು ವೈಚಾರಿಕ, ವೈಜ್ಞಾನಿಕ ವಿಚಾರಗಳನ್ನು ಜನರ ಮುಂದಿಟ್ಟಿದ್ದಾರೆ. ಕಂದಾಚಾರ, ಮೂಢನಂಬಿಕೆ, ಮೌಢ್ಯಗಳನ್ನು ತಿರಸ್ಕಾರ ಮಾಡಿದ್ದಾರೆ ಎಂದರು.

ಸಿದ್ದರಾಮೇಶ್ವರರ ಬೋಧನೆಯನ್ನು ಅಳವಡಿಸಿಕೊಳ್ಳುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ. ಮನುಷ್ಯರು ಚಾತುರ್ವರ್ಣ ವ್ಯವಸ್ಥೆಯನ್ನು ತಮ್ಮ ಸ್ವಾರ್ಥಕ್ಕಾಗಿ ಮಾಡಿಕೊಂಡಿದ್ದಾರೆ. ಯಾವ ದೇವಸ್ಥಾನದೊಳಗೆ ಪ್ರವೇಶವಿಲ್ಲವೋ ಆ ದೇವಸ್ಥಾನದೊಳಗೆ ಪ್ರವೇಶಿಸಬೇಡಿ, ನೀವೇ ದೇಗುಲ ನಿರ್ಮಿಸಿ ಪೂಜಿಸಿ ಎಂದು ನಾರಾಯಣ ಗುರುಗಳು ಕರೆ ನೀಡಿದ್ದರು. ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು. ಮನುಷ್ಯರಾಗಿರಬೇಕು ಎಂದು ಹೇಳಿದರೆ ಕೆಲವರಿಗೆ ಕೋಪ ಬರುತ್ತದೆ ಎಂದರು ಸಿದ್ದರಾಮಯ್ಯ.

ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಹಾಸನದಲ್ಲಿ ಸುಮಾರು 40,000 ಶಾಖೆಗಳಿದ್ದು, ಅನುದಾನ ಕೋರಿರುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.

ಎರಡು ದಿನಗಳ ಕಾಲ ನಡೆದ ಸಿದ್ದರಾಮೇಶ್ವರ ಜಯಂತಿ ಉತ್ಸವ

ಶರಣ ಚಳವಳಿಯ (Sharana Movement) ಕಾಯಕ ಪ್ರತಿನಿಧಿ ಎಂದೇ ಹೆಸರಾದ ಶ್ರೀ ಗುರು ಶಿವಯೋಗಿ ಸಿದ್ದರಾಮೇಶ್ವರರ (Shivayogi Siddarameshwara) 851ನೇ ಜಯಂತಿ ಮಹೋತ್ಸವವನ್ನು ಜನವರಿ 14 ಮತ್ತು 15ರಂದು ಎರಡು ದಿನಗಳ ಕಾಲ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಚಿಕ್ಕಬಾಸೂರಿನಲ್ಲಿ ಆಚರಿಸಲಾಯಿತು. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ (BS Yediyurappa) ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaih) ಅವರು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದರು.

ಇದನ್ನೂ ಓದಿ : ಶಿವಯೋಗಿ ಸಿದ್ದರಾಮೇಶ್ವರ ಜಯಂತಿ : ಹಾವೇರಿಯಲ್ಲಿ 2 ದಿನದ ಸಂಭ್ರಮಕ್ಕೆ ಚಾಲನೆ; ನಾಳೆ ಸಿಎಂ ಭಾಗಿ

ಜನವರಿ 14ರಂದು ಬೆಳಗ್ಗೆ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದ್ದು, ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೊಳಂಬ ಶ್ರೀ ಪ್ರಶಸ್ತಿ ಪ್ರದಾನ ಮಾಡಿದರು.

ಮಧ್ಯಾಹ್ನ 3ಕ್ಕೆ ಶರಣ ಸಾಹಿತ್ಯ ಗೋಷ್ಠಿಯನ್ನು ಶಾಸಕ ಶಾಮನೂರು ಶಿವಶಂಕರಪ್ಪ ಉದ್ಘಾಟಿಸಿದ್ದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬಿಟ್ಟು ಬಂದಳ್ಳಿಯ ಕಥೆಗಳು’ ಗ್ರಂಥ ಬಿಡುಗಡೆ, ಚಿತ್ರನಟ ಡಾಲಿ ಧನಂಜಯ ಕ್ಯಾಲೆಂಡರ್‌ ಬಿಡುಗಡೆಗೊಳಿಸಿದರು. ಜ.15ರಂದು ಮಹಿಳಾ ಗೋಷ್ಠಿ ಕೃಷಿ ಗೋಷ್ಠಿ ನಡೆಯಿತು.

Exit mobile version