Site icon Vistara News

ನಾವು ಅನರ್ಹರಾದಾಗ ಅನೇಕರು ಹಾಲು ಕುಡಿದಿದ್ದರು: ಯು.ಬಿ. ಬಣಕಾರ್‌ ಕುರಿತು ಬಿ.ಸಿ. ಪಾಟೀಲ್‌ ಹೇಳಿಕೆ

ಬಿ.ಸಿ.ಪಾಟೀಲ್

ಬೆಂಗಳೂರು: ಯು.ಬಿ. ಬಣಕಾರ್‌ ಕಾಂಗ್ರೆಸ್‌ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿರುವ ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕೃಷಿ ಸಚಿವ ಬಿ.ಸಿ. ಪಾಟೀಲ್‌ ಪ್ರತಿಕ್ರಿಯಿಸಿದ್ದು, ನಾನು ಯಾರಿಗೂ ದ್ರೋಹ ಮಾಡಿಲ್ಲ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿ, ಯು. ಬಿ. ಬಣಕಾರ್ ಅವರು ಯಾವ ಪಕ್ಷ ಸೇರಿದ್ದಾರೆ ಅಂತ ಗೊತ್ತಿಲ್ಲ. ಅವರು ಕಾಂಗ್ರೆಸ್ ಸೇರಿದಮೇಲೆ ನನ್ನ ಎದುರಾಳಿ ಆಗಿ ಸ್ಪರ್ಧಿಸಬಹುದು. ಬಣಕಾರ್ ಅವರನ್ನು ನಾನು ಹೊಸದಾಗಿ ಎದುರಿಸುತ್ತಿಲ್ಲ. ಈಗಾಗಲೇ ಮೂರು ಸಲ ಅವರ ವಿರುದ್ಧ ಕುಸ್ತಿ ಮಾಡಿದೀನಿ, ಅವರನ್ನು ಮೂರು ಸಲ ಸೋಲಿಸಿದ್ದೇನೆ.

ಅವರು ಅವರ ಜನ್ಮದಲ್ಲಿ ನೋಡಲಾಗಷ್ಟು ಅಭಿವೃದ್ಧಿ ನಾನು ಬಂದ ಮೇಲೆ ಆಗಿದೆ. ಅವರು ನನ್ನ ಕಾಲದಲ್ಲಿ ಗುತ್ತಿಗೆದಾರರಿಗೆ ಕೆಲಸ ತಗೊಂಡು, ಲಾಭ ಪಡೆದಿದ್ದಾರೆ. ಈಗ ನನ್ನ ಮೇಲೆ ಕಿರುಕುಳ ಆರೋಪ ಮಾಡುತ್ತಿದ್ದಾರೆ. ಇದನ್ನೆಲ್ಲ ಆ ದೇವರು ನೋಡುತ್ತಿದ್ದಾನೆ.

ಅವರು ಏನು ಅಭಿವೃದ್ಧಿ ಮಾಡಿದಾರೆ ಅಂತ ಹೇಳಲಿ. ನಾನೇನು ಅಭಿವೃದ್ಧಿ ಮಾಡಿದೀನಿ ಅಂತ ನಾನು ಹೇಳುತ್ತೇನೆ. ನಾನು ಮಾಡಿದ ಅಭಿವೃದ್ಧಿ ಕೆಲಸಗಳ ಬಗ್ಗೆ ಪುಸ್ತಕವನ್ನೇ ಪ್ರಿಂಟ್ ಮಾಡಿ ಜನರಿಗೆ ಕೊಡುತ್ತೇನೆ. ಯಾರು ಬೇಕು ಅಂತ ಜನ ತೀರ್ಮಾನ ಮಾಡುತ್ತಾರೆ. ನಾನು ರಾಜೀನಾಮೆ ಕೊಡುತ್ತಿದ್ದ ಹಾಗೆಯೇ ಬಣಕಾರ್ ಉಗ್ರಾಣ ನಿಗಮದ ಅಧ್ಯಕ್ಷರಾದರು. ನಾವು ಆರು ತಿಂಗಳು ವನವಾಸ ಅನುಭವಿಸಿದೆವು. ನಾವು ಅನರ್ಹರಾದಾಗ ಬಹಳಷ್ಟು ಜನ ಹಾಲು ಕುಡಿದರು. ನನಗಿಂತ ಮುಂಚೆ ಬಣಕಾರ್ ಆರು ತಿಂಗಳು‌ ಉಗ್ರಾಣ ನಿಗಮದ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿದರು. ಬಣಕಾರ್ ಅವರಿಗೆ ನಾನು ಯಾವುದೇ ಕಿರುಕುಳ‌ ಕೊಟ್ಟಿಲ್ಲ ಎಂದರು.

ನನಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ಸಿಕ್ಕಿದ್ದು ಅವರಿಗೆ ಕಿರುಕುಳ ಆಯಿತ? ಮುಂಬರುವ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಜನ ನನ್ನನ್ನು ಇಷ್ಟಪಟ್ಟಿದ್ದಾರೆ. ಹಾಗಾಗಿ ಮೂರ್ನಾಲ್ಕು ಸಲ ಗೆಲ್ಲಿಸಿದ್ದಾರೆ. ಈ ಸಲವೂ ಖಂಡಿತವಾಗಿ ಜನ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದರು.

ಚಿಲುಮೆ ಸಂಸ್ಥೆಯ ಮೂಲಕ ಆಪರೇಷನ್ ವೋಟರ್ ಕಾರ್ಡ್ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಬಿ.ಸಿ. ಪಾಟೀಲ್‌, ಇದರ ಬಗ್ಗೆ ನನಗೆ ಮಾಹಿತಿ‌ ಇಲ್ಲ ಎಂದರು.

ಸಚಿವರಿಂದ ಹೈಕಮಾಂಡ್ ರಿಪೋರ್ಟ್ ಕಾರ್ಡ್ ಕೇಳಿರುವ ವಿಚಾರದಲ್ಲಿ ಪ್ರತಿಕ್ರಿಯಿಸಿ, ಸಚಿವರಿಂದ ವರದಿ ಕೇಳುವುದು ಸಹಜ. ಸಚಿವರು ಯಾವ ರೀತಿ ಕೆಲಸ ಮಾಡಿದ್ದಾರೆ ಎಂದು ವರದಿ ಕೇಳವುದು ಸಹಜ. ಇದರಲ್ಲಿ ಹೊಸದೇನಿಲ್ಲ. ವರದಿ ಆಧಾರದಲ್ಲಿ ಟಿಕೆಟ್ ಕೊಡುವ ವಿಚಾರ ಗೊತ್ತಿಲ್ಲ ಎಂದರು.

ಕಾಂಗ್ರೆಸ್‌ಗೆ ಮರಳಿ ಬರುವಂತೆ ಡಿಕೆಶಿ ಆಹ್ವಾನ ವಿಚಾರದಲ್ಲಿ ಪ್ರತಿಕ್ರಿಯಿಸಿ, ನಾವೆಲ್ಲ ಅನರ್ಹರಾದಾಗ ಡಿಕೆಶಿ, ಸಿದ್ದರಾಮಯ್ಯ ಅವರು ಏನೆಲ್ಲ ಮಾತಾಡಿದಾರೆ ಎಂದು ಸದನದಲ್ಲಿ ಎಲ್ಲರೂ ನೋಡಿದ್ದಾರೆ. ನಮ್ಮ ರಾಜಕೀಯ ಸಮಾಧಿ ಆಯಿತು ಅಂತೆಲ್ಲ ಮಾತಾಡಿದರು. ಸಮಾಧಿ ಆದವರನ್ನು ‌ಈಗ ಡಿಕೆಶಿ ಮತ್ಯಾಕೆ ಕರೀತಿದಾರೆ? ನಮ್ಮವರು ಯಾರೂ ಅರ್ಜಿ ಹಾಕಿಲ್ಲ. ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಕೊರತೆ ಆಗಿರಬಹುದು. ಹಾಗಾಗಿ ಹಳೆಯ ಗಂಡನ ಪಾದವೇ ಗತಿ ಎಂದು ಕರೆಯುತ್ತಿರಬಹುದು. ಆದರೆ ನಮ್ಮಿಂದ ಯಾರೂ ಕಾಂಗ್ರೆಸ್‌ಗೆ ಹೋಗುವುದಿಲ್ಲ. ಕಾಂಗ್ರೆಸ್‌ನಿಂದಲೇ ಬಹಳಷ್ಟು ಜನ ಬಿಜೆಪಿಗೆ ಬರುತ್ತಾರೆ ಎಂದರು.

ಇದನ್ನೂ ಓದಿ | U B Banakar | ಬಿಜೆಪಿಗೆ ಗುಡ್‌ಬೈ ಹೇಳಿದ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ ಬಣಕಾರ್‌, ಕಾಂಗ್ರೆಸ್‌ ಸೇರ್ಪಡೆ ಪಕ್ಕಾ

Exit mobile version