Site icon Vistara News

ದೇಶದಲ್ಲಿ ಜನರಿಗೆ ಕೊಟ್ಟ ಮಾತು ಉಳಿಸಿಕೊಂಡ ಏಕೈಕ ನಾಯಕ ಕುಮಾರಸ್ವಾಮಿ ಮಾತ್ರ: ಎಚ್‌.ಡಿ. ದೇವೇಗೌಡ

ಎಚ್‌.ಡಿ.ದೇವೇಗೌಡ

ಬೆಂಗಳೂರು: ಇಡೀ ದೇಶದಲ್ಲಿ ಹೇಳಿದ್ದನ್ನು ಮಾಡಿ ತೋರಿಸಿದ, ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡ ಏಕೈಕ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮಾತ್ರ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.

ನಗರದ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಭಾನುವಾರ ನಡೆದ ವೀರಶೈವ ಲಿಂಗಾಯತ ಮುಖಂಡರ ಸಭೆಯಲ್ಲಿ ಮಾತನಾಡಿ, ಎರಡು ಸಲ ಮುಖ್ಯಮಂತ್ರಿ ಆಗಿದ್ದಾಗಲೂ ಕುಮಾರಸ್ವಾಮಿ ಅವರು ಮಾತು ಕೊಟ್ಟ ಹಾಗೆ ಎಲ್ಲ ಕೆಲಸಗಳನ್ನು ಮಾಡಿದರು, ಸಾಲಮನ್ನಾ ಮಾಡಿ ಮಾತು ಉಳಿಸಿಕೊಂಡರು. ಹೀಗಾಗಿ ನನ್ನ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗಬೇಕಾದರೆ ಮತ್ತೊಮ್ಮೆ ಈ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎಂದವರು ಹೇಳಿದರು.

ಇದನ್ನೂ ಓದಿ | Election | 2023ರ ವಿಧಾನಸಭಾ ಚುನಾವಣೆ ಪ್ರಣಾಳಿಕೆಗೆ ಕಾಂಗ್ರೆಸ್‌ ಸಿದ್ಧತೆ; ಇಲ್ಲಿವೆ ಪ್ರಮುಖ ಅಂಶಗಳು

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಕೂಡ ಕೆಲಸ ಮಾಡುತ್ತೇನೆ. ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತೇನೆ. ಪಕ್ಷ ಗೆಲ್ಲಲು ಸಾಧ್ಯವಾದ ಎಲ್ಲ ಕೆಲಸವನ್ನು ಮಾಡುತ್ತೇನೆ. ಮುಖಂಡರು, ಕಾರ್ಯಕರ್ತರು ಎಲ್ಲರೂ ಶಿಸ್ತು, ಪ್ರಾಮಾಣಿಕತೆ, ಬದ್ಧತೆಯಿಂದ ಪಕ್ಷಕ್ಕೆ ದುಡಿಯಬೇಕು. ನಿಸ್ವಾರ್ಥವಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಕುಮಾರಸ್ವಾಮಿ ಅವರು ಈ ಬಾರಿ ಅಧಿಕಾರಕ್ಕೆ ಬಂದೇ ಬರುತ್ತಾರೆ, ಅವರು ಕನಸಿನ ಪಂಚರತ್ನ ಕಾರ್ಯಕ್ರಮಗಳನ್ನು ಜಾರಿಗೆ ತಂದೆ ತರುತ್ತಾರೆ. ಇಡೀ ರಾಜ್ಯದ ಅಭಿವೃದ್ಧಿಗೆ ಪಂಚರತ್ನ ಯೋಜನೆ ಪರಿಣಾಮಕಾರಿಯಾಗಿದೆ. ರಾಜ್ಯದಲ್ಲಿ ಮತ್ತೊಮ್ಮೆ ಜೆಡಿಎಸ್ ಸರ್ಕಾರ ಬರಬೇಕು. ಆ ಕ್ಷಣವನ್ನು ನಾನು ನೋಡಬೇಕು ಎಂದು ಪುನರುಚ್ಚರಿಸಿದರು.

ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ದೊಡ್ಡ ಮಟ್ಟದಲ್ಲಿ ಪಕ್ಷದ ಕಚೇರಿಯಲ್ಲಿ ಸೇರಿರುವುದು ನೋಡಿ ನನಗೆ ಸಂತೋಷ ಆಗಿದೆ. ಯಾವ ಯಾವ ಸಮುದಾಯಕ್ಕೆ ನಾನು ಮತ್ತು ಕುಮಾರಸ್ವಾಮಿ ಎಷ್ಟೆಲ್ಲಾ ಒಳ್ಳೆಯ ಕೆಲಸ ಮಾಡಿದೆವು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ | ರಾಜ್ಯದಲ್ಲಿ ಮತ್ತೊಮ್ಮೆ ಜನಪರ ಸರ್ಕಾರ ಮರು ಸ್ಥಾಪನೆ ಎಂದ ಸಿಎಂ ಬೊಮ್ಮಾಯಿ‌

Exit mobile version