Site icon Vistara News

HD Devegowda | ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ಸನ್ನಿಧಿಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ತುಲಾಭಾರ ಸೇವೆ

HD Devegowda ನಂಜನಗೂಡು

ಮೈಸೂರು: ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ (HD Devegowda) ಹಾಗೂ ಪತ್ನಿ ಚೆನ್ನಮ್ಮ ‌ನಂಜನಗೂಡಿನ ನಂಜುಂಡೇಶ್ವರ ಸನ್ನಿಧಿಗೆ ಭೇಟಿ ನೀಡಿ ನಮಿಸಿದರು. ಇದೇ ವೇಳೆ ತುಲಾಭಾರ ನೆರವೇರಿಸಲಾಗಿದೆ.

ವಿಶೇಷ ಪೂಜೆಯಲ್ಲಿ ಭಾಗಿಯಾದ ದಂಪತಿ ಏಕವಾರ ರುದ್ರಾಭಿಷೇಕ, ತುಲಾಭಾರ ಸೇವೆ ನೆರವೇರಿಸಿದರು. ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಅಶ್ವಿನ್ ಕುಮಾರ್, ಸಿ.ಎನ್.ಮಂಜೇಗೌಡ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.

ನಂಜುಂಡೇಶ್ವರಿನಿಂದ ಕಿವಿ ನೋವು ಸಮಸ್ಯೆ ದೂರ
ನಂಜುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಎಚ್‌.ಡಿ. ದೇವೇಗೌಡ್ರು, ಮೂರು ವರ್ಷಗಳ ನಂತರ ನಂಜನಗೂಡಿನ ನಂಜುಂಡೇಶ್ವರನ ದರ್ಶನಕ್ಕೆ ಬರುತ್ತಿದ್ದೇನೆ. ಈ ದಿನ ಚೆನ್ನಾಗಿದೆ ಎಂದು ಗೊತ್ತು ಮಾಡಿದ ಕಾರಣಕ್ಕೆ ಬಂದಿದ್ದೇನೆ ಎಂದರು. ಜತೆಗೆ ನಂಜುಂಡೇಶ್ವರನ ಮಹಿಮೆ ಕುರಿತು ಮಾತನಾಡಿದ ಅವರು, ಬಾಲ್ಯದ ಕಿವಿನೋವಿನ ಬಗ್ಗೆ ನೆನಪಿಸಿಕೊಂಡರು.

ಚಿಕ್ಕ ವಯಸ್ಸಿನಲ್ಲಿ ಕಿವಿ ಸಮಸ್ಯೆ ಕಾಣಿಸಿಕೊಂಡಿತ್ತು, ಎಷ್ಟು ವೈದ್ಯರಿಗೆ ತೋರಿಸಿದರೂ ಪ್ರಯೋಜನವಾಗಲಿಲ್ಲ. ಬಳಿಕ ನಂಜುಂಡೇಶ್ವರನ ಸನ್ನಿಧಿಗೆ ಬಂದು ಪ್ರಾರ್ಥಿಸಿದ ನಂತರ ಗುಣವಾಗಿತ್ತು. ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರೆ ದೇವರು ಫಲ ಕೊಡುತ್ತಾನೆ ಎಂದರು.

ಚುನಾವಣಾ ಪ್ರಚಾರಕ್ಕೆ ಹೋಗುವೆ
ಮುಂದಿನ ತಿಂಗಳಿನಿಂದ ಚುನಾವಣಾ ಪ್ರಚಾರಕ್ಕೆ ಹೋಗುವುದಾಗಿ ಮೈಸೂರಿನಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ. ಕುಮಾರಸ್ವಾಮಿ ಸೇರಿದಂತೆ ಎಲ್ಲರೂ ಪಂಚ ರತ್ನ ಯಾತ್ರೆ ಮಾಡುತ್ತಿದ್ದಾರೆ. ಪ್ರತಿ ಹಳ್ಳಿಯಲ್ಲಿ ನಮ್ಮ ಪಕ್ಷದ ಶಾಸಕರು, ಮುಖಂಡರು, ಮಾಜಿ ಶಾಸಕರು ಒಬ್ಬೊಬ್ಬರಿಗೂ ಒಂದೊಂದು ಜವಾಬ್ದಾರಿ ಕೊಡಲಾಗಿದೆ. ಮನೆ ಮನೆ ತೆರಳಿ ಪಕ್ಷದ ಪರವಾಗಿ ಕೆಲಸ ಮಾಡಲು ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇನೆ ಎಂದರು.

ದ್ವಂದ ಇದೆ, ಸಮಸ್ಯೆ ಬಗೆಹರಿದಿಲ್ಲ
ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಶಾಶ್ವತ ಅಲ್ಲ. ಪ್ರತಿದಿನ ಪಟ್ಟಿ ಬದಲಾವಣೆ ಆಗುತ್ತದೆ. ಪ್ರತಿ ದಿನ ಸರ್ವೇ ನಡೆಯುತ್ತಿದೆ. ಅದರ ಆಧಾರದ ಮೇಲೆ ತೀರ್ಮಾನ ಮಾಡಲಾಗುತ್ತದೆ. ಶಾಸಕ ಶಿವಲಿಂಗೇಗೌಡರು ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶಿವಲಿಂಗೇಗೌಡರು ಹಾಗೂ ಕುಮಾರಸ್ವಾಮಿ ಸಂಪರ್ಕದಲ್ಲಿದ್ದಾರೆ. ಅವರು ಚರ್ಚೆ ನಡೆಸಿದ್ದಾರೆ. ದ್ವಂದ ಇದೆ, ಇನ್ನೂ ಸಮಸ್ಯೆ ಬಗೆಹರಿದಿಲ್ಲ ಎಂದು ದೇವೇಗೌಡ ಹೇಳಿದರು.

ಮುಂದಿನ ಸಿಎಂ ಯಾರೆಂದು ತೀರ್ಮಾನಿಸುವುದು ಜನ
ಹಾಸನ ಶಾಸಕ ಪ್ರೀತಂ ಗೌಡಗೆ ಯಡಿಯೂರಪ್ಪ ಸರ್ಕಾರ ಸರ್ವ ಶಕ್ತಿ ಕೊಟ್ಟಿದೆ. ಯಾವ್ಯಾವ ಕೆಲಸ ಕೊಟ್ಟಿದ್ದಾರೆ? ಅದರಿಂದ ಎಷ್ಟು ಹಣ ಸಂಪಾದಿಸಿದ್ದಾರೆ ಎಂಬುದೆಲ್ಲ ಗೊತ್ತಿದೆ. ಅವರ ಶಕ್ತಿಗೆ ಯಡಿಯೂರಪ್ಪ ಹಾಗೂ ಅವರ ಮಕ್ಕಳೇ ಕಾರಣ. ಅವರ ಹೆದರಿಕೆಗೆಲ್ಲ ನಾವು ಬಗ್ಗುವುದಿಲ್ಲ ಎಂದು ದೇವೇಗೌಡ ಹೇಳಿದರು.

ಅಭ್ಯರ್ಥಿಗಳ ಪಟ್ಟಿ ಸಂಬಂಧ ಪ್ರತಿಕ್ರಿಯಿಸಿದ ಅವರು, ಹಾಸನಕ್ಕೆ ಬಹಳ ಜನ ಆಕಾಂಕ್ಷಿಗಳಿದ್ದಾರೆ. ಕುಮಾರಸ್ವಾಮಿ ಹಾಗೂ ರೇವಣ್ಣ ಒಟ್ಟಾಗಿ ಕುಳಿತು ಮಾತನಾಡಿ ಅಂತಿಮ ಮಾಡುತ್ತಾರೆ. ಯಾರು ಮುಖ್ಯಮಂತ್ರಿ ಆಗಬೇಕೆಂಬುದನ್ನು ಜನ ತೀರ್ಮಾನ ಮಾಡುತ್ತಾರೆ ಎಂದರು.

ಇದನ್ನೂ ಓದಿ | ಮಲಮಗಳನ್ನು ಗರ್ಭಿಣಿ ಮಾಡಿದವನಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್​; ಆದರೆ ಇದೊಂದು ಅಪರೂಪದ ಪ್ರಕರಣ!

Exit mobile version