Site icon Vistara News

Prajwal Revanna Video: ಪ್ರಜ್ವಲ್‌ ಪ್ರತ್ಯಕ್ಷನಾಗಿದ್ದಕ್ಕೆ ಸಮಾಧಾನ ಆಯ್ತು ಎಂದ ಎಚ್‌ಡಿಕೆ; ಫಸ್ಟ್‌ ರಿಯಾಕ್ಷನ್‌ ಹೀಗಿದೆ

Prajwal Revanna Video

HD Kumaraswamy First Reaction About Prajwal Revanna Video

ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾಗುತ್ತಲೇ ವಿದೇಶಕ್ಕೆ ತೆರಳಿ, ಕಳೆದ ಒಂದು ತಿಂಗಳಿಂದ ತಲೆಮರೆಸಿಕೊಂಡಿದ್ದ ಪ್ರಜ್ವಲ್‌ ರೇವಣ್ಣ ಅವರು ವಿಡಿಯೊ (Prajwal Revanna Video) ಮೂಲಕ ಪ್ರತ್ಯಕ್ಷರಾಗಿದ್ದಾರೆ. ವಿದೇಶದಿಂದಲೇ ವಿಡಿಯೊ ಬಿಡುಗಡೆ ಮಾಡಿರುವ ಪ್ರಜ್ವಲ್‌ ರೇವಣ್ಣ, “ನಾನು ಎಲ್ಲೂ ತಲೆಮರೆಸಿಕೊಂಡಿಲ್ಲ. ಮೇ 31ರಂದು ಬೆಳಗ್ಗೆ ಬಂದು ಎಸ್‌ಐಟಿ ವಿಚಾರಣೆಗೆ ಹಾಜರಾಗುತ್ತೇನೆ. ನೆಲದ ಕಾನೂನು ಗೌರವಿಸಿ, ದೋಷಮುಕ್ತನಾಗಿ ಹೊರಬರುವ ವಿಶ್ವಾಸವಿದೆ” ಎಂದು ಅವರು ಹೇಳಿದ್ದಾರೆ. ಇದರ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಅವರು ಪ್ರತಿಕ್ರಿಯಿಸಿದ್ದು, “ಪ್ರಜ್ವಲ್‌ ರೇವಣ್ಣನನ್ನು ನೋಡಿ ಸಮಾಧಾನ ಅಗಿದೆ” ಎಂದು ತಿಳಿಸಿದ್ದಾರೆ.

“ಪ್ರಕರಣದ ಕುರಿತು ಎಸ್‌ಟಿ ತನಿಖೆ ನಡೆಸುತ್ತಿದೆ, ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡೋಣ. ಪ್ರಜ್ವಲ್‌ ರೇವಣ್ಣನನ್ನು ನೋಡಿ ನನಗೆ ಈಗ ಸಮಾಧಾನ ಆಗಿದೆ. ಪ್ರಕರಣದ ಬಗ್ಗೆ ಎಚ್.ಡಿ.ದೇವೇಗೌಡರು ಮಾತನಾಡಿದ್ದಾರೆ. ದೇವೇಗೌಡರು ಪ್ರಜ್ವಲ್ ರೇವಣ್ಣಗೆ ಮನವಿ ಹಾಗೂ ಎಚ್ಚರಿಕೆ ಕೊಟ್ಟಿದ್ದರು. ಅದರಂತೆ ಈಗ ಭಾರತಕ್ಕೆ ವಾಪಸ್‌ ಆಗುವುದಾಗಿ ಪ್ರಜ್ವಲ್‌ ರೇವಣ್ಣ ಹೇಳಿದ್ದಾನೆ. ಎಸ್‌ಐಟಿ ವಿಚಾರಣೆ ಬಳಿಕ ಏನಾಗುತ್ತದೆ ಎಂಬುದನ್ನು ನೋಡೋಣ” ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ವಿಡಿಯೊದಲ್ಲಿ ಏನಿದೆ?

“ನಾನು ಎಲ್ಲಿದ್ದೇನೆ ಎಂಬ ಮಾಹಿತಿ ನೀಡಲು ಬಂದಿದ್ದೇನೆ. ನಾನು ಎಲ್ಲಿಯೂ ಓಡಿ ಹೋಗಿಲ್ಲ. ನನ್ನ ರಾಜಕೀಯ ಬೆಳವಣಿಗೆ ಸಹಿಸಲಾಗದೆ ಷಡ್ಯಂತ್ರ ರೂಪಿಸಲಾಗಿದೆ. ನನ್ನ ವಿರುದ್ಧ ಪಿತೂರಿ ಮಾಡಲಾಗಿದೆ. ಕೆಲವು ಶಕ್ತಿಗಳು ಒಟ್ಟಾಗಿ ನನ್ನ ವಿರುದ್ಧ ಪಿತೂರಿ ನಡೆಸಿವೆ. ಇಷ್ಟಾದರೂ ನಾನು ನನ್ನ ತಾತ, ಜೆಡಿಎಸ್‌ ಕಾರ್ಯಕರ್ತರಿಗೆ ಕ್ಷಮೆಯಾಚಿಸುತ್ತೇನೆ. ನಾನು ಮೇ 31ರಂದು ಬೆಳಗ್ಗೆ 10 ಗಂಟೆಗೆ ಭಾರತಕ್ಕೆ ಬಂದು ಎಸ್‌ಐಟಿ ಎದುರು ವಿಚಾರಣೆಗೆ ಹಾಜರಾಗುತ್ತೇನೆ. ವಿದೇಶ ಪ್ರವಾಸವು ಮೊದಲೇ ನಿಗದಿಯಾಗಿತ್ತು. ಆದರೂ, ನಾನು ಭಾರತಕ್ಕೆ ಬಂದು ವಿಚಾರಣೆ ಎದುರಿಸುತ್ತೇನೆ” ಎಂಬುದಾಗಿ ಪ್ರಜ್ವಲ್‌ ರೇವಣ್ಣ ವಿಡಿಯೊದಲ್ಲಿ ತಿಳಿಸಿದ್ದಾರೆ.

“ನಾನು ಇದೇ ಶುಕ್ರವಾರ ಕರ್ನಾಟಕಕ್ಕೆ ಆಗಮಿಸಿ, ಎಸ್‌ಐಟಿ ತನಿಖೆಗೆ ಸಹಕಾರ ನೀಡುತ್ತೇನೆ. ನನಗೆ ಕಾನೂನಿನ ಮೇಲೆ ಅಪಾರ ಗೌರವವಿದೆ. ನನ್ನ ವಿರುದ್ಧ ಮಾಡಿದ ಆರೋಪಗಳನ್ನು ಕೇಳಿ ನನಗೆ ಶಾಕ್‌ ಆಯಿತು. ಇದೇ ಕಾರಣಕ್ಕಾಗಿ ನಾನು ಕೆಲ ದಿನಗಳಿಂದ ಐಸೋಲೇಷನ್‌ನಲ್ಲಿ ಇದ್ದೆ. ವಿದೇಶ ಪ್ರವಾಸವು ಮೊದಲೇ ನಿಗದಿಯಾಗಿತ್ತು. ನಾನು ವಿದೇಶಕ್ಕೆ ಬಂದ ಬಳಿಕ ಪ್ರಕರಣ ತಿಳಿಯಿತು. ನನ್ನ ವಿರುದ್ಧ ರಾಹುಲ್‌ ಗಾಂಧಿ ಸೇರಿ ಎಲ್ಲರೂ ವೇದಿಕೆ ಮೇಲೆಯೇ ಹೇಳಿಕೆಗಳನ್ನು ಕೊಟ್ಟರು. ಆ ಮೂಲಕ ರಾಜಕೀಯ ಪಿತೂರಿ ನಡೆಸಿದರು. ಆದರೂ, ನಾನು ರಾಜ್ಯಕ್ಕೆ ಆಗಮಿಸಿ ತನಿಖೆಗೆ ಸಹಕಾರ ನೀಡುತ್ತೇನೆ. ನಾನು ಈ ಪ್ರಕರಣದಿಂದ ಆರೋಪಮುಕ್ತನಾಗಿ ಹೊರಬರುತ್ತೇನೆ ಎಂಬ ವಿಶ್ವಾಸವಿದೆ” ಎಂಬುದಾಗಿ ಹೇಳಿದ್ದಾರೆ.

ಇದನ್ನೂ ಓದಿ: Prajwal Revanna Video: ನಾನು ‘ಅಮಾಯಕ’ ಎನ್ನುವ ಪ್ರಜ್ವಲ್‌ಗೆ ‘ವಿಸ್ತಾರ ನ್ಯೂಸ್‌’ 10 ಪ್ರಶ್ನೆಗಳು

Exit mobile version