ಬೆಂಗಳೂರು: ಕುಮಾರಸ್ವಾಮಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳೋಕೆ ಗ್ಯಾರಂಟಿ ಯೋಜನೆ ಬಗ್ಗೆ ಮಾತಾಡುತ್ತಿದ್ದಾರೆ ಎಂಬ ಸಚಿವ ಡಾ.ಜಿ. ಪರಮೇಶ್ವರ್ ಹೇಳಿಕೆಗೆ ಖಾರವಾಗಿ ಉತ್ತರಿಸಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ನಾವೇನು ಕಡುಬು ತಿನ್ನೋಕ ರಾಜಕಾರಣ ಮಾಡುತ್ತಿರುವುದು? ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಎಚ್.ಡಿ. ಕುಮಾರಸ್ವಾಮಿ, ನಾನು ಸನ್ಯಾಸಿ ಅಲ್ಲ, ಕಾಂಗ್ರೆಸ್ ಘೋಷಣೆ ಮಾಡಿರುವ 5 ಗ್ಯಾರಂಟಿಗಳೇ ನಮಗೆ ಅಸ್ತ್ರ. ಕಾಂಗ್ರೆಸ್ ಗ್ಯಾರಂಟಿಗಳಿಂದ ನನ್ನ ಅಸ್ತಿತ್ವ ಕುಸಿತ ಆಗಿರೋದು. ನಾನು ಅಷ್ಟು ಸುಲಭವಾಗಿ ಬಿಡ್ತಿನಾ? ನೋಡಿ ಎಂದರು.
ಇದೇ ಗ್ಯಾರಂಟಿಗಳನ್ನೆ ಇಟ್ಟುಕೊಂಡು ನಾನು ಹೋರಾಟ ಮಾಡಬೇಕು. ಯಾವ ಆಧಾರದಲ್ಲಿ ಇವರು ಗ್ಯಾರಂಟಿ ಕೊಟ್ಟರು? ಪರಮೇಶ್ವರ್ ಅವರೇ ಅಲ್ಲವೇ ಪ್ರಣಾಳಿಕೆ ಸಮಿತಿ ಅಧ್ಯಕ್ಷ? ನಿಮ್ ಸಿಎಂ, ಅಧ್ಯಕ್ಷ ಏನ್ ಹೇಳಿದ್ರು? ಎಲ್ಲರಿಗೂ ಫ್ರೀ..ಫ್ರೀ.. ಫ್ರೀ ಅಂದ್ರು. ಈಗ ಕಂಡಿಷನ್ ಅಂತಿದ್ದಾರೆ. ನಾನು ಹೇಳಿದ್ನಾ.. ನೀವು ತಾನೆ ಹೇಳಿದ್ದು. ಕೊಡಿ ಈಗ. ಈಗ ಜನರಿಗೆ ಸುಳ್ಳು ಹೇಳಿ, ಟೋಪಿ ಹಾಕ್ತಿದ್ದಾರೆ.
ನಿರುದ್ಯೋಗಿಗಳಿಗೆ ಹಣ ಕೊಡ್ತೀನಿ ಅಂದ್ರು. ಈಗ ಈ ವರ್ಷ ಪಾಸ್ ಆದವರಿಗೆ ಅಂತ ಕಂಡಿಷನ್ ಅಂತಿದ್ದಾರೆ. ಪಾಪ ಅ ನಿರುದ್ಯೋಗಿಗಳೇ ನಿಮಗೆ ಓಟ್ ಹಾಕಿರೋದು. ಹೊಟ್ಟೆಗೆ ಹಿಟ್ಟು ಇಲ್ಲದವನು ನಿಮಗೆ ಓಟ್ ಹಾಕಿದ್ದಾನೆ. ನಾನು ಈ ವಿಷಯ ತೆಗೆದುಕೊಳ್ಳದೆ ಇನ್ಯಾವ ವಿಷಯ ತೆಗೆದುಕೊಳ್ಳಲಿ? ರಾಜಕೀಯ ಮಾಡೋಕೆ ಇದ್ದೀನಿ. ಸನ್ಯಾಸ ಮಾಡೋಕೆ ಅಲ್ಲ. ಊಟ ಮಾಡಿಕೊಂಡು ಕಡುಬು ತಿನ್ನೋಕೆ ನಾನು ರಾಜಕೀಯ ಮಾಡ್ತಿಲ್ಲ. ಜನರ ಪರವಾನಗಿ ನಾನು ಕೆಲಸ ಮಾಡ್ತೀನಿ ಎಂದರು.
ಕಾಂಗ್ರೆಸ್ ಗ್ಯಾರಂಟಿ ವಿರುದ್ಧ ಹೋರಾಟ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಚ್.ಡಿ. ಕುಮಾರಸ್ವಾಮಿ, ಎರಡು ಸಚಿವ ಸಂಪುಟ ಮುಗೀಲಿ. ಇವರು ಏನ್ ಮಾಡ್ತಾರೆ ನೋಡೋಣ. ಇದೇ ಗ್ಯಾರಂಟಿ ಕೊಟ್ಟು ಚಪ್ಪಾಳೆ ಹೊಡೆಸಿಕೊಂಡ್ರು ಅಲ್ಲವಾ? ಈಗ ಗ್ಯಾರಂಟಿ ಘೋಷಣೆ ಮಾಡಲಿ. ಅವರು ಏನ್ ಮಾಡ್ತಾರೆ ನೋಡಿ ನಮ್ಮ ಹೋರಾಟ ತೀರ್ಮಾನ ಮಾಡ್ತೀವಿ ಎಂದರು.
ಇದನ್ನೂ ಓದಿ: Congress Guarantee: ಗ್ಯಾರಂಟಿ ಕಾರ್ಡ್ಗೆ ಕಂಡೀಷನ್ ಹಾಕಿದ್ರೆ ಹುಷಾರ್; ಜೂನ್ 1ರಿಂದ ಹೋರಾಟವೆಂದ ಪ್ರತಾಪ್ ಸಿಂಹ