Site icon Vistara News

Public Exam : 5, 8ನೇ ತರಗತಿ ಪಬ್ಲಿಕ್‌ ಪರೀಕ್ಷೆಗೆ ಕೋರ್ಟ್‌ ಗ್ರೀನ್‌ ಸಿಗ್ನಲ್, ಮಾರ್ಚ್‌ 27ರಿಂದ ಎಕ್ಸಾಂ ನಡೆಸಲು ಸೂಚನೆ

high court cancels acquttal of rape victim

high court cancels acquttal of rape victim

ಬೆಂಗಳೂರು: ಈ ಶೈಕ್ಷಣಿಕ ವರ್ಷದಿಂದಲೇ 5 ಮತ್ತು 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ (Public Exam) ನಡೆಸಲು ರಾಜ್ಯ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ. ಮಾರ್ಚ್‌ 27ರಿಂದ ಪರೀಕ್ಷೆ ನಡೆಸಲು ಹೈಕೋರ್ಟ್‌ ಸೂಚನೆ ನೀಡಿದೆ.

ಈ ಬಾರಿ ಪರೀಕ್ಷೆ ನಡೆಸಬಾರದು ಎಂದು ಖಾಸಗಿ ಶಾಲೆಗಳ ಒಕ್ಕೂಟ ಹೈಕೋರ್ಟ್‌ ಮೆಟ್ಟಿಲೇರಿತ್ತು. ಇದೀಗ ಕೋರ್ಟ್‌ ಆದೇಶದಿಂದ ಒಕ್ಕೂಟದ ನಿಲುವಿಗೆ ಹಿನ್ನಡೆಯಾಗಿದೆ.

ನ್ಯಾ. ನರೇಂದರ್‌ ಹಾಗೂ ನ್ಯಾ ಅಶೋಕ್ ಕಿಣಗಿ ಅವರನ್ನೊಳಗೊಂಡ ವಿಭಾಗೀಯ ಪೀಠದಲ್ಲಿ ‌ಬುಧವಾರ ಸಂಜೆ ವಿಚಾರಣೆ ನಡೆದು ಕೋರ್ಟ್‌ ಪರೀಕ್ಷೆಗೆ ಅನುಮತಿ ನೀಡಿದೆ. ಈ ಬಾರಿಯಿಂದಲೇ ಪಬ್ಲಿಕ್‌ ಪರೀಕ್ಷೆ ನಡೆಸುವ ನಿರ್ಧಾರವನ್ನು ಏಕಸದಸ್ಯ ಪೀಠ ರದ್ದುಪಡಿಸಿತ್ತು. ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಅದರ ವಿಚಾರಣೆ ಎರಡು ದಿನಗಳ ಕಾಲ ನಡೆದು ಬುಧವಾರ ಸಂಜೆ ಕೋರ್ಟ್‌ ತನ್ನ ಅಭಿಪ್ರಾಯವನ್ನು ತಿಳಿಸಿತು.

ಮಂಗಳವಾರ ವಿಚಾರಣೆ ನಡೆಸಿದ್ದ ಕೋರ್ಟ್‌, ಪರೀಕ್ಷೆ ನಡೆಸುವ ರೀತಿ, ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗಳು ಬರುತ್ತವೆಯೇ ಎಂಬಿತ್ಯಾದಿ ವಿಚಾರಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ಶಿಕ್ಷಣ ಇಲಾಖೆಯ ಪ್ರಿನ್ಸಿಪಾಲ್‌ ಸೆಕ್ರೆಟರಿಗೆ ಸೂಚಿಸಿತ್ತು. ಬುಧವಾರ ಅವರು ಸೂಕ್ತ ಮಾಹಿತಿ ನೀಡಿದ ಬಳಿಕ ಕೋರ್ಟ್‌ ಪರೀಕ್ಷೆಗೆ ಅನುಮತಿ ನೀಡಿತು.

ಇದು ಮೌಲ್ಯಮಾಪನ ಮಾತ್ರ. ಮಕ್ಕಳಿಗೆ ಸರಿಯಾರಿ ಪಾಠ ಅರ್ಥವಾಗಿದೆಯೇ ಎನ್ನುವ ಮೌಲ್ಯಮಾಪನ ನಡೆಸಲಾಗುತ್ತದೆ. ಒಂದೊಮ್ಮೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೂ ಅನುತ್ತೀರ್ಣಗೊಳಿಸುವುದಿಲ್ಲ ಎಂದು ಕೋರ್ಟ್‌ಗೆ ತಿಳಿಸಿತ್ತು.

ಆದರೆ, ಷರತ್ತುಗಳು ಅನ್ವಯ

ಪಬ್ಲಿಕ್‌ ಪರೀಕ್ಷೆ ನಡೆಸಲು ಗ್ರೀನ್‌ ಸಿಗ್ನಲ್‌ ನೀಡಿರುವ ಹೈಕೋರ್ಟ್‌ ಕೆಲವೊಂದು ಷರತ್ತುಗಳನ್ನು ಕೂಡಾ ವಿಧಿಸಿದೆ.
1. ಯಾವ ಕಾರಣಕ್ಕೂ ಪರೀಕ್ಷೆಗೆ ಪಠ್ಯದಿಂದ ಹೊರಗಿನ ಪ್ರಶ್ನೆಗಳನ್ನು ಕೇಳಬಾರದು.
2. ಫಲಿತಾಂಶವನ್ನು ಕೇವಲ ಶಾಲೆಗಳಲ್ಲಿ ಮಾತ್ರ ಘೋಷಿಸಬೇಕು. ಯಾವ ಕಾರಣಕ್ಕೂ ಅದನ್ನು ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಪ್ರಕಟಿಸಬಾರದು.

ಏನಿದು ವಿವಾದ, ಯಾಕಿಷ್ಟು ಹಗ್ಗ ಜಗ್ಗಾಟ?

5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್‌ ಪರೀಕ್ಷೆ ನಡೆಸುವುದು ಸರಿಯಲ್ಲ ಎಂದು ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘದ (ರುಪ್ಸಾ) ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮೇಲ್ಮನವಿ ಸಲ್ಲಿಸಿದ್ದರು. 2022-23ನೇ ಶೈಕ್ಷಣಿಕ ಸಾಲಿನಲ್ಲಿ 5 ಮತ್ತು 8ನೇ ತರಗತಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಮೌಲ್ಯಮಾಪನ ವಿಧಾನವನ್ನು ಬದಲಿಸುವ ಕುರಿತಂತೆ 2022ರ ಡಿಸೆಂಬರ್‌ 12 ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶದ ಕ್ರಮ ಪ್ರಶ್ನಿಸಿ ಸಂಘವು ತಕರಾರು ಅರ್ಜಿ ಸಲ್ಲಿಸಿತ್ತು.

ಅದನ್ನು ಫೆಬ್ರವರಿ 23ರಂದು ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠವು ಸರ್ಕಾರದ ನಿರ್ಧಾರಕ್ಕೆ ಮಧ್ಯಂತರ ತಡೆ ನೀಡಲು ನಿರಾಕರಿಸಿತ್ತು. ಇದರಿಂದ ರುಪ್ಸಾ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ಮೌಲ್ಯಮಾಪನ ಬದಲಾವಣೆಗೆ ಸರ್ಕಾರ ಕೈಗೊಂಡಿರುವ ನಿರ್ಣಯವು ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬುದು ಸಂಘದ ಆಕ್ಷೇಪಣೆಯಾಗಿತ್ತು.

ಮೇಲ್ಮನವಿಯನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ಪ್ರಸಕ್ತ ಶೈಕ್ಷಣಿಕ ಸಾಲಿನ 5 ಮತ್ತು 8ನೇ ತರಗತಿಗಳ ಪರೀಕ್ಷೆಗಳು ಮಾರ್ಚ್‌ 13ರಂದು ಆರಂಭವಾಗಲಿರುವುದರಿಂದ ತುರ್ತಾಗಿ ಅರ್ಜಿ ಇತ್ಯರ್ಥ ಪಡಿಸಿ ಎಂದು ಸೂಚಿಸಿತ್ತು. ಅದರಂತೆ ವಿಚಾರಣೆ ನಡೆಸಿದ ಏಕಸದಸ್ಯ ಪೀಠ ಪರೀಕ್ಷೆಗೆ ತಡೆಯಾಜ್ಞೆ ನೀಡಿತ್ತು. ಮಂಗಳವಾರ ಮತ್ತೊಂದು ಸುತ್ತಿನ ವಿಚಾರಣೆ ನಡೆದು ಸರ್ಕಾರಕ್ಕೆ ಅಫಿಡವಿಟ್‌ ಸಲ್ಲಿಸಲು ಸೂಚಿಸಲಾಯಿತು. ಇದೀಗ ಅಫಿಡವಿಟ್‌ ಗಮನಿಸಿದ ಕೋರ್ಟ್‌ ಪರೀಕ್ಷೆಗೆ ಗ್ರೀನ್‌ ಸಿಗ್ನಲ್‌ ನೀಡಿದೆ.

ಇದನ್ನೂ ಓದಿ : Public Exam : 5, 8ನೇ ತರಗತಿ ಪಬ್ಲಿಕ್‌ ಪರೀಕ್ಷೆ ರದ್ದು, ಎಕ್ಸಾಂ ನಡೆಸದಂತೆ ರಾಜ್ಯ ಹೈಕೋರ್ಟ್‌ ಆದೇಶ

Exit mobile version