Site icon Vistara News

DK Suresh: ಡಿ.ಕೆ. ಬ್ರದರ್ಸ್‌ಗೆ ಶುಭ ಶುಕ್ರವಾರ; ಡಿ.ಕೆ. ಸುರೇಶ್‌ ಮೇಲಿದ್ದ ಹಳೇ ಕೇಸ್‌ ಹೈಕೋರ್ಟ್‌ನಲ್ಲಿ ರದ್ದು

DK Suresh DK Shivakumar

ಬೆಂಗಳೂರು: ಡಿ.ಕೆ. ಬದ್ರರ್ಸ್‌ ಕುಟುಂಬಕ್ಕೆ ಶುಕ್ರವಾರ (ಜೂನ್‌ 2) ಶುಭ ದಿನವಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ಅವರ ಮೇಲಿದ್ದ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಸಿಬಿಐ ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್‌ (Karnataka High Court) ಶುಕ್ರವಾರ (ಜೂನ್‌ 2) ವಿಸ್ತರಣೆ ಮಾಡಿತ್ತು. ಇದೇ ವೇಳೆ ಸಂಸದ ಡಿ.ಕೆ. ಸುರೇಶ್‌ (DK Suresh) ಮೇಲಿದ್ದ ಪ್ರಕರಣವನ್ನು ಹೈಕೋರ್ಟ್‌ ರದ್ದು ಮಾಡಿದೆ.

2019ರ ಲೋಕಸಭಾ ಚುನಾವಣೆ ವೇಳೆ ಅಕ್ರಮವಾಗಿ ಹಣ ಹಂಚಿಕೆ ಮಾಡಿದ್ದಾರೆಂಬ ಆರೋಪದ ಮೇಲೆ ಡಿ.ಕೆ. ಸುರೇಶ್ ವಿರುದ್ಧ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಡಿ.ಕೆ. ಸುರೇಶ್ ಸೇರಿದಂತೆ ಒಟ್ಟು ಆರು ಜನರ ವಿರುದ್ಧ ಎಫ್​ಐಆರ್ ಅನ್ನು ದಾಖಲು ಮಾಡಲಾಗಿತ್ತು.

ಈ ಸಂಬಂಧ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಡಿ.ಕೆ. ಸುರೇಶ್‌ ಕೋರ್ಟ್‌ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರ ಪೀಠವು ಪ್ರಕರಣವನ್ನು ರದ್ದುಗೊಳಿಸಿ ಆದೇಶಿಸಿದೆ.

ಇದನ್ನೂ ಓದಿ: Congress Guarantee: ಐದೂ ಗ್ಯಾರಂಟಿ ಜಾರಿ; ಆದರೆ ಈ ವರ್ಷ ಪೂರ್ತಿ ಕಾಯಿರಿ: ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ

ಆದಾಯ ಮೀರಿ ಆಸ್ತಿ ಪ್ರಕರಣದ ತಡೆಯಾಜ್ಞೆ ವಿಸ್ತರಣೆ

ಆದಾಯ ಮೀರಿ ಆಸ್ತಿಯನ್ನು ಗಳಿಕೆ ಮಾಡಲಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲಿದ್ದ ಸಿಬಿಐ ತನಿಖೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯು ಮತ್ತೊಮ್ಮೆ ವಿಸ್ತರಣೆಯಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್ ಏಕಸದಸ್ಯ ಪೀಠವು ತಡೆಯಾಜ್ಞೆ ವಿಸ್ತರಣೆ ಮಾಡಿದೆ. ಈ ಮೂಲಕ ಡಿ.ಕೆ. ಶಿವಕುಮಾರ್‌ ಅವರು ಸದ್ಯಕ್ಕೆ ನಿರಾಳರಾಗಿದ್ದಾರೆ.

ಈ ಹಿಂದೆ ನ್ಯಾ. ನಟರಾಜನ್ ಪೀಠದಲ್ಲಿ ವಿಚಾರಣೆ ನಡೆದಿತ್ತು. ಇದೀಗ ನ್ಯಾ.ಎಂ.ನಾಗಪ್ರಸನ್ನ ಅವರ ಪೀಠ ವಿಚಾರಣೆ ನಡೆಸಿದೆ. ಹೀಗಾಗಿ ಯಾವ ಪೀಠದಲ್ಲಿ ವಿಚಾರಣೆ ಮುಂದುವರಿಸಬೇಕು ಎಂದು ಸಿಜೆ ನಿರ್ಧಾರ ಮಾಡಬೇಕೆಂದು ಪ್ರಕರಣವನ್ನು ಅವರಿಗೆ ವರ್ಗಾಯಿಸಲಾಗಿದೆ. ಈ ಕಾರಣದಿಂದ ಮುಂದಿನ ವಿಚಾರಣೆವರೆಗೂ ಮಧ್ಯಂತರ ತಡೆಯಾಜ್ಞೆ ಮುಂದುವರಿಸಿ ಆದೇಶವನ್ನು ವಿಸ್ತರಣೆ ಮಾಡಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್​ ವಿರುದ್ಧದ ಸಿಬಿಐ ತನಿಖೆಗೆ ಎರಡನೇ ಬಾರಿಗೆ ಹೈಕೋರ್ಟ್ ಮೇ ಅಂತ್ಯದವರೆಗೂ ತಡೆಯಾಜ್ಞೆ ನೀಡಿತ್ತು. ಇದೀಗ ಮತ್ತೆ ತಡೆಯಾಜ್ಞೆ ವಿಸ್ತರಣೆ ಮಾಡಲಾಗಿದೆ.

ಪ್ರಕರಣವೇನು?

ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ಕಲಂ 13(2), 13(1)ಇ ಅಡಿಯಲ್ಲಿ 2020ರ ಅಕ್ಟೋಬರ್ 3ರಂದು ಸಿಬಿಐ ವತಿಯಿಂದ ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಲಾಗಿತ್ತು. ಈ ಪ್ರಕರಣ ರದ್ದು ಕೋರಿ ಡಿ.ಕೆ. ಶಿವಕುಮಾರ್ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಇದರ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ತನಿಖೆಗೆ ಮಧ್ಯಂತರ ತಡೆಯಾಜ್ಞೆಯನ್ನು ನೀಡಿತ್ತು. ಶುಕ್ರವಾರ (ಜೂನ್‌ 2) ವಿಚಾರಣೆ ನಡೆಸಿದ ಹೈಕೋರ್ಟ್‌ ನ್ಯಾಯಪೀಠವು, ಈ ತಡೆಯಾಜ್ಞೆಯನ್ನು ಮತ್ತೊಮ್ಮೆ ವಿಸ್ತರಣೆ ಮಾಡಿದೆ.

ಇದನ್ನೂ ಓದಿ: Congress Guarantee: ಉಚಿತ ವಿದ್ಯುತ್‌ ಪಡೆದ ಮೊದಲ ಗ್ರಾಮ ಇದು: ಈ ಊರಲ್ಲಿ 20 ವರ್ಷದಿಂದ ಯಾರೂ ಕರೆಂಟ್‌ ಬಿಲ್‌ ಕಟ್ಟಿಲ್ಲ !

ಈ ತಡೆಯಾಜ್ಞೆ ತೆರವು ಮಾಡುವಂತೆ ಸಿಬಿಐ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ತನಿಖೆಗೆ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ತೆರವು ಮಾಡಿ ಮಧ್ಯಂತರ ಆದೇಶ ನೀಡಲು ನಿರಾಕರಿಸಿತ್ತು. ಜತೆಗೆ ತಡೆಯಾಜ್ಞೆ ತೆರವಿಗೆ ಹೈಕೋರ್ಟ್‌ನಲ್ಲೇ ಅರ್ಜಿ ಸಲ್ಲಿಸಬಹುದು ಎಂದು ಸೂಚಿಸಿ ಮುಂದಿನ ವಿಚಾರಣೆಯನ್ನು ಜುಲೈ ತಿಂಗಳಿಗೆ ಮುಂದೂಡಿತ್ತು.

Exit mobile version