Site icon Vistara News

Congress Guarantee: ಎಲ್ಲರಿಗೂ 200 ಯೂನಿಟ್‌ ವಿದ್ಯುತ್‌ ಉಚಿತ ಇಲ್ಲ: ಸಿದ್ದರಾಮಯ್ಯ ಸಾವಿರಾರು ಕೋಟಿ ರೂ. ಉಳಿಸಿದ್ದು ಹೇಗೆ?

Siddaramaiah

ಬೆಂಗಳೂರು: ಚುನಾವಣೆಗೂ ಮುನ್ನ ಕಾಂಗ್ರೆಸ್‌ ಘೋಷಣೆ ಮಾಡಿದ ಗ್ಯಾರಂಟಿ ಯೋಜನೆಗಳನ್ನು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಎಲ್ಲ ಐದು ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆಯಾದರೂ ಅನೇಕ ನಿಬಂಧನೆಗಳನ್ನು ವಿಧಿಸಲಾಗಿದೆ. ಅದರಲ್ಲಿ ಮೊದಲನೆಯದಾಗಿ ಮಾಸಿಕ 200 ಯೂನಿಟ್‌ ಉಚಿತ ವಿದ್ಯುತ್‌ ನೀಡುವ ಯೋಜನೆ. ಆದರೆ ಎಲ್ಲರಿಗೂ 200 ಯೂನಿಟ್‌ ಉಚಿತ ವಿದ್ಯುತ್‌ ಈ ವರ್ಷದಿಂದಲೇ ಸಿಗುವುದಿಲ್ಲ. ಈ ಕುರಿತ ಮಾಹಿತಿ ಇಲ್ಲಿದೆ.

ಗೃಹಜ್ಯೋತಿ ಯೋಜನೆ: ಪ್ರತಿ ಮನೆಯು ಹಿಂದಿನ 12 ತಿಂಗಳಲ್ಲಿ ಎಷ್ಟು ವಿದ್ಯುತ್‌ ಬಳಸಿದೆ ಎಂಬ ಲೆಕ್ಕ ತೆಗೆದುಕೊಳ್ಳಲಾಗುತ್ತದೆ. ಅಷ್ಟೂ ತಿಂಗಳ ವಿದ್ಯುತ್‌ ಬಳಕೆಯ ಸರಾಸರಿ ಪಡೆದುಕೊಳ್ಳಲಾಗುತ್ತದೆ. ಅದಕ್ಕೆ ಶೇ.10 ಸೇರಿಸಸಲಾಗುತ್ತದೆ. ಅಂದರೆ ಉದಾಹರಣೆಗೆ ಯಾವುದಾದರೂ ಮನೆಯ ವಾರ್ಷಿಕ ಸರಾಸರಿ ವಿದ್ಯುತ್‌ ಬಳಕೆ ಮಾಸಿಕ 170 ಯೂನಿಟ್‌ ಆಗಿದ್ದರೆ ಅದಕ್ಕೆ ಶೇ.10 ಅಂದರೆ 17 ಯೂನಿಟ್‌ ಸೇರಿಸಲಾಗುತ್ತದೆ. ಅಲ್ಲಿಗೆ ಒಟ್ಟು ಸರಾಸರಿ ಯೂನಿಟ್‌ 187 ಆಗುತ್ತದೆ. ಯಾವುದೇ ತಿಂಗಳು 187 ಯೂನಿಟ್‌ ಬಳಕೆ ಮಾಡುವವರೆಗೂ ಆ ಮನೆಯವರು ಬಿಲ್‌ ಕಟ್ಟುವಂತಿಲ್ಲ. ಆದರೆ ಯಾವುದಾದರೂ ಒಂದು ತಿಂಗಳು ಆ ಮನೆಯ ವಿದ್ಯುತ್‌ ಬಿಲ್‌ ಇದ್ದಕ್ಕಿದ್ದಂತೆ 190 ಯೂನಿಟ್‌ ಬಂದರೆ ಆ ತಿಂಗಳು ಬಿಲ್‌ ಕಟ್ಟಬೇಕಾಗುತ್ತದೆ. ಜುಲೈವರೆಗೆ ಬಾಕಿ ಉಳಿಸಿಕೊಂಡಿರುವವರು ಅವರೇ ಕಟ್ಟಬೇಕು ಎಂದರು. ಜುಲೈ ತಿಂಗಳ ಬಿಲ್‌ನಿಂದ ಈ ಯೋಜನೆ ಜಾರಿಯಾಗುತ್ತದೆ. ಅಂದರೆ ಆಗಸ್ಟ್‌ನಲ್ಲಿ ಬರುವ ಬಿಲ್‌ ಮೊತ್ತ 199 ಯೂನಿಟ್‌ ಒಳಗಿದ್ದರೆ ಅಂಥವರು ಪಾವತಿ ಮಾಡಬೇಕಾಗಿಲ್ಲ. ಇದಿಷ್ಟೂ ಯೋಜನೆಯ ಸ್ಥೂಲ ಚಿತ್ರಣ.

ಎಲ್ಲರಿಗೂ ಏಕೆ ಫ್ರೀ ಇಲ್ಲ?: ಪ್ರತಿ ತಿಂಗಳು 200 ಯೂನಿಟ್‌ ಉಚಿತ ವಿದ್ಯುತ್‌ ಬಳಸಬಹುದು ಎನ್ನುವುದು ಎಲ್ಲರಿಗೂ ಅನ್ವಯ ಆಗುವುದಿಲ್ಲ. ಮುಖ್ಯವಾಗಿ ಈ ಹಿಂದಿನ 12 ತಿಂಗಳು ಎಷ್ಟು ವಿದ್ಯುತ್‌ ಬಳಕೆ ಮಾಡಲಾಗಿದೆ ಎನ್ನುವುದರ ಆಧಾರದಲ್ಲಿ ಉಚಿತ ವಿದ್ಯುತ್‌ ನಿಗದಿ ಆಗುತ್ತದೆ. ಉದಾಹರಣೆಗೆ ಒಂದು ಮನೆಯಲ್ಲಿ ಮಾಸಿಕ 60-70 ಯೂನಿಟ್‌ ವಿದ್ಯುತ್‌ ಬಳಕೆ ಮಾಡಲಾಗುತ್ತಿರುತ್ತದೆ ಎಂದಿಟ್ಟುಕೊಳ್ಳೋಣ. ಆಗ ವಾರ್ಷಿಕ ಸರಾಸರಿ 65 ಯೂನಿಟ್‌ ಎಂದಾಗುತ್ತದೆ. ಅದಕ್ಕೆ ಶೇ.10 ಹೆಚ್ಚುವರಿ ಅಂದರೆ 6 ಯೂನಿಟ್‌ವರೆಗೆ ಹೆಚ್ಚುವರಿಯಾಗಿ ಬಳಸಬಹುದು. ಅಂದರೆ ಯಾವುದೇ ತಿಂಗಳು 71 (65+6) ಯೂನಿಟ್‌ವರೆಗೂ ಯಾವುದೇ ತಿಂಗಳು ಬಿಲ್‌ ಬಂದರೂ ಅದನ್ನು ಪಾವತಿ ಮಾಡಬೇಕಿಲ್ಲ. ಆದರೆ ಉಚಿತ ವಿದ್ಯುತ್‌ ಸಿಗುತ್ತದೆ ಎಂಬ ಕಾರಣಕ್ಕೆ ಫ್ರಿಜ್‌, ವಾಷಿಂಗ್‌ ಮಷೀನ್‌, ಎಲೆಕ್ಟ್ರಿಕ್‌ ವಾಹನಗಳನ್ನು ಕೊಂಡುಕೊಂಡು ಬಂದರೆ ಈ ಸರಾಸರಿ ಮೀರಬಹುದು. ಹಾಗೊಂದು ವೇಳೆ ಈ ಮೇಲೆ ಉದಾಹರಣೆ ನೀಡಿದ ಮನೆಯ ವಿದ್ಯುತ್‌ 71 ಯೂನಿಟ್‌ ಮೀರಿದರೆ, 71 ಯೂನಿಟ್‌ ಮೀರಿದ ಅಷ್ಟೂ ತಿಂಗಳು ಬಿಲ್‌ ಕಟ್ಟಬೇಕಾಗುತ್ತದೆ.

ಮುಂದಿನ ವರ್ಷ ಉಪಯೋಗ: ಇಡೀ ವರ್ಷ ಸರಾಸರಿ ವಿದ್ಯುತ್‌ ಬಿಲ್‌ ಹೆಚ್ಚು ಆಗಬಹುದು. ಆದರೆ ಇಡೀ ವರ್ಷ ಬಿಲ್‌ ಕಟ್ಟಿದ ನಂತರ ಆ ಮನೆಯ ಸರಾಸರಿ ಹೆಚ್ಚಾಗುತ್ತದೆ. ಆ ಸರಾಸರಿಯು 199 ಯೂನಿಟ್‌ ಒಳಗಿದ್ದರೆ ಆ ವರ್ಷ ಪೂರ್ತಿ ಮತ್ತೆ ಉಚಿತ ವಿದ್ಯುತ್‌ ಸಿಗುತ್ತದೆ. ಹೀಗೆ, ಉಚಿತ ವಿದ್ಯುತ್‌ ಎನ್ನುವುದು ಈ ವರ್ಷವೇ ಎಲ್ಲರಿಗೂ 200 ಯೂನಿಟ್‌ ಉಚಿತವಾಗಿ ಸಿಗುವುದಿಲ್ಲ.

ಸರಾಸರಿಯನ್ನು ತೆಗೆಯುವ ಮೂಲಕ, ಬೊಕ್ಕಸಕ್ಕೆ ಕೋಟ್ಯಂತರ ರೂ. ಉಳಿಸುವ ಬುದ್ಧಿವಂತಿಕೆಯನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ. ಸರಾಸರಿ ತೆಗೆದಯದೇ ಪ್ರತಿ ತಿಂಗಳ ವಿದ್ಯುತ್‌ ಆಧಾರದಲ್ಲಿ ನೀಡುವುದಾಗಿದ್ದರೆ ಯಾವುದೇ ನಿಯಂತ್ರಣವಿಲ್ಲದೆ ಹಣ ನೀಡಬೇಕಾಗುತ್ತಿತ್ತು. ಈಗಿನ ಲೆಕ್ಕದಲ್ಲಿ, ಪ್ರತಿ ವರ್ಷ ಗರಿಷ್ಠ ಎಷ್ಟು ಮೊತ್ತವನ್ನು ಮೀಸಲಿಡಬೇಕಾಗುತ್ತದೆ ಎಂಬ ಲೆಕ್ಕವು ವರ್ಷದ ಆರಂಭದಲ್ಲೇ ಸಿಗುವುದರಿಂದ ಅಷ್ಟರ ಮಟ್ಟಿಗೆ ಬಜೆಟ್‌ ಮಂಡಿಸುವುದೂ ಸುಲಭವಾಗಲಿದೆ. 13 ಬಾರಿ ಬಜೆಟ್‌ ಮಂಡಿಸಿರುವ ಸಿದ್ದರಾಮಯ್ಯ ತಮ್ಮ ಅನುಭವ ಬಳಸಿ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ. ಉಳಿಸಿದ್ದಾರೆ.

ಇದನ್ನೂ ಓದಿ: Congress Guarantee : ಎಲ್ಲರಿಗೂ ಫ್ರೀ ಫ್ರೀ ಫ್ರೀ… ಐದು ಗ್ಯಾರಂಟಿ ಯೋಜನೆಗಳ ಕಂಡೀಷನ್‌, ವೇಳಾಪಟ್ಟಿ ವಿವರ ಇಲ್ಲಿದೆ

Exit mobile version