Site icon Vistara News

ಹುಬ್ಬಳ್ಳಿ- ಧಾರವಾಡಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 1000 ಕೋಟಿ ಬಂದಿದೆ: ಪ್ರಲ್ಹಾದ್‌ ಜೋಶಿ

Pralhad Joshi

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಹುಬ್ಬಳ್ಳಿ- ಧಾರವಾಡಕ್ಕೆ ಸುಮಾರು 1,500 ಕೋಟಿ ರೂ. ಅನುದಾನವನ್ನು ಕೇಂದ್ರ ಸರ್ಕಾರ ಒದಗಿಸಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದ್ದಾರೆ.

ನಗರದಲ್ಲಿ ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಯೋಜನೆ ಮೂಲಕ ಕೇಂದ್ರ ಸರ್ಕಾರ ಹುಬ್ಬಳ್ಳಿ- ಧಾರವಾಡ ಜಿಲ್ಲೆಗೆ ಸಾವಿರಾರು ಕೋಟಿ ರೂಪಾಯಿ ನೀಡಿದೆ. ಆದರೆ, ಯೋಜನೆ ಕಾರ್ಯಗತಗೊಳಿಸುವುದು ರಾಜ್ಯ ಸರ್ಕಾರದ ಹೊಣೆ ಎಂದು ಸ್ಪಷ್ಟ ಪಡಿಸಿದರು.

ಇದನ್ನೂ ಓದಿ | Karnataka Politics : ರಾಜ್ಯದಲ್ಲಿ ಶುರುವಾಯ್ತಾ ಸರ್ಕಾರ VS ಗವರ್ನರ್?;‌ ಹರಿಪ್ರಸಾದ್‌ ವಿಚಾರಣೆಗೆ ಯಾರ ಆದೇಶ?

ಹುಬ್ಬಳ್ಳಿ- ಧಾರವಾಡಕ್ಕೆ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಈಗಾಗಲೇ ಕೇಂದ್ರದಿಂದ 1000 ಕೋಟಿ ರೂ. ಬಂದಿದೆ. ಇದನ್ನು ಹೊರತುಪಡಿಸಿ ನಗರದೊಳಗಿನ ರಸ್ತೆಗಳ ಅಭಿವೃದ್ಧಿಗೇ 500 ಕೋಟಿ ರು. ನೀಡಲಾಗಿದೆ. ತೋಳನಕೆರೆ ಉದ್ಯಾನ ಅಭಿವೃದ್ಧಿ, ಸುಸಜ್ಜಿತ ಕ್ರೀಡಾ ಸಂಕೀರ್ಣ ಹೀಗೆ ಕೆಲ ಪ್ರಮುಖ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಇದರಿಂದಾಗಿ ಉತ್ತಮ ವಾತಾವರಣ ನಿರ್ಮಾಣವಾಗಿದೆ ಎಂದು ಸಚಿವ ಜೋಶಿ ವಿವರಿಸಿದರು.

ರಾಮ ಮಂದಿರ ಹಾದಿ ಅಷ್ಟು ಸುಗಮ ಇರಲಿಲ್ಲ

ಅಯೋಧ್ಯೆ ಶ್ರೀರಾಮ‌ ಮಂದಿರ ನಿರ್ಮಾಣದ ಹಾದಿ ಅಷ್ಟು ಸುಗಮ ಇರಲಿಲ್ಲ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು, ಶ್ರೀರಾಮ ಮಂದಿರ ನಿರ್ಮಾಣ ಸುದೀರ್ಘ ಹೋರಾಟ, ಪ್ರಧಾನಿ ಮೋದಿ ಅವರ ಸಂಕಲ್ಪ- ಪರಿಶ್ರಮ ಮತ್ತು ಕೋಟ್ಯಂತರ ರಾಮ ಭಕ್ತರ ಆಶಯ ಸಾಕಾರಗೊಂಡಿದೆ ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ.

ಭಾರತೀಯರ ಅಸ್ಮಿತೆ ಪ್ರಭು ಶ್ರೀರಾಮ ಹುಟ್ಟಿದ ಸ್ಥಳದಲ್ಲಿ ಆತನಿಗೆ ಸುಂದರ ಮಂದಿರ ನಿರ್ಮಾಣಕ್ಕಾಗಿ ಬಲಿದಾನಗೈದ ಕರಸೇವಕರ ಸಂಖ್ಯೆ ಇಂದಿಗೂ ಲೆಕ್ಕಕ್ಕಿಲ್ಲ. ಶ್ರೀರಾಮ ಭಕ್ತರ ನೂರಾರು ವರ್ಷಗಳ ಕಾತರ, ಕಾಯುವಿಕೆ ಇಂದು ಅಂತ್ಯಗೊಂಡಿದೆ. ಮನೆ-ಮಠ ಬಿಟ್ಟು ರಾಮನಿಗಾಗಿ ಹೋರಾಡಿದ ಭಕ್ತರಿಗೆ ಇಂದು ಜಯ ಸಿಕ್ಕಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | Rama Mandir : ಜ.22ರಂದು ಶಾಲೆಗಳಲ್ಲಿ ರಾಮ ಮಂದಿರ ಲೋಕಾರ್ಪಣೆ ಲೈವ್‌ ವ್ಯವಸ್ಥೆ

ನಮ್ಮ ಸಂಕಲ್ಪ ಸತ್ಯದ ಪರ-ಧರ್ಮದ ಪರ ಇದ್ದಾಗ ಹಾದಿ ಎಷ್ಟೇ ಕಠಿಣವಿದ್ದರೂ ಸಂಕಲ್ಪ ಈಡೇರುತ್ತದೆ ಎಂಬುದಕ್ಕೆ ಅಯೋಧ್ಯಾ ಶ್ರೀರಾಮಮಂದಿರವೇ ನಿದರ್ಶನ. ಧರ್ಮವನ್ನು ನಾವು ರಕ್ಷಿಸಿದಾಗ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂಬ ಮಾತು ಯಾವತ್ತೂ ಸುಳ್ಳಾಗಲು ಸಾಧ್ಯವಿಲ್ಲ ಎಂದೂ ಸಚಿವ ಪ್ರಲ್ಹಾದ್‌ ಜೋಶಿ ಅನಿಸಿಕೆ ಹಂಚಿಕೊಂಡಿದ್ದಾರೆ.

Exit mobile version