ಆನೇಕಲ್: ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ವಡ್ಡರಪಾಳ್ಯದಲ್ಲಿ ಪತಿ-ಪತ್ನಿಯ ನಡುವಿನ ಗಲಾಟೆ ದುರಂತ ಅಂತ್ಯ ಕಂಡಿದೆ. ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಪತಿ ಸಾವಿಗೀಡಾಗಿದ್ದು, ಇದೇ ವೇಳೆ ಪತ್ನಿಗೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ (Suicide Case). ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.
ಮಂಡ್ಯ ಮೂಲದ ಸಂತೋಷ್ ಮೃತ ವ್ಯಕ್ತಿ. ಪತ್ನಿ ಭಾನು ಗಾಯಾಳು. ಆಗಾಗ ಪತಿ-ಪತ್ನಿ ನಡುವೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದ್ದು, ಗುರುವಾರ ಇಬ್ಬರ ನಡುವೆ ಗಲಾಟೆ ತಾರಕಕ್ಕೇರಿದೆ. ಈ ಹಿಂದೆಯೇ ಪೆಟ್ರೋಲ್ ಖರೀದಿಸಿ ತಂದಿದ್ದ ಪತಿ ಸಂತೋಷ್, ತಾನು ಪೆಟ್ರೋಲ್ ಸುರಿದುಕೊಂಡು ಪತ್ನಿಗೂ ಸುರಿದು ಬೆಂಕಿ ಹಚ್ಚಿಕೊಂಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಂತೋಷ್ ಮೃತಪಟ್ಟಿದ್ದು, ಮಹಿಳೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.
ಇದನ್ನೂ ಓದಿ | Kalaburgi Police: ತಾವೇ ಗುಂಡು ಹಾರಿಸಿಕೊಂಡ್ರಾ ಕಾನ್ಸ್ಟೇಬಲ್?; ಚಿತ್ತಾಪುರ ತಹಸೀಲ್ದಾರ್ ಕಚೇರಿಯಲ್ಲಿ ಶವ ಪತ್ತೆ!
ಸಂತೋಷ್ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರಿಂದ ಬೆಂಕಿ ವ್ಯಾಪಿಸಿ ಮನೆಯಲ್ಲಿದ್ದ ವಸ್ತುಗಳೆಲ್ಲಾ ಸುಟ್ಟು ಕರಕಲಾಗಿವೆ. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.