Site icon Vistara News

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ 2ನೇ ಮದುವೆ ಚರ್ಚೆ ಜೋರು; ನಟಿ ಜತೆಗಿನ ಫೋಟೋ ವೈರಲ್

ಬಾಗಲಕೋಟೆ: ಹುನಗುಂದದ ಕಾಂಗ್ರೆಸ್ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ನಟಿಯೊಬ್ಬರ ಜತೆಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಮಾಜಿ ಶಾಸಕ 2ನೇ ವಿವಾಹವಾಗಿರಬಹುದೇ ಎಂಬ ವಿಷಯ ಚರ್ಚೆಗೆ ಗ್ರಾಸವಾಗಿದೆ.

ನಟಿ ಜತೆಗಿನ ಫೋಟೋಗಳ ಜತೆಗೆ ಮಗುವೊಂದರ ಜನನ ಪ್ರಮಾಣ ಪತ್ರ ವೈರಲ್ ಆಗುತ್ತಿದೆ. ಅದರಲ್ಲಿ ತಂದೆಯ ಹೆಸರಿನ ಕಾಲಂನಲ್ಲಿ ವಿಜಯಾನಂದ ಕಾಶಪ್ಪನವರ ಎಂಬ ಹೆಸರನ್ನು ನಮೂದಿಸಲಾಗಿದೆ. ಪ್ರಮಾಣ ಪತ್ರದಲ್ಲಿ ತಾಯಿಯ ಹೆಸರು ಪೂಜಾಶ್ರೀ ಎಸ್ ಎಂದಿದೆ. ಹಾಗಾಗಿ ವಿಜಯಾನಂದ ಕಾಶಪ್ಪನವರ ಪೂಜಾಶ್ರೀ ಎಂಬ ನಟಿಯ ಜತೆ ಎರಡನೇ ಮದುವೆ ಆಗಿದ್ದಾರಾ ಎಂಬುವುದು ಅನುಮಾನಗಳಿಗೆ ಕಾರಣವಾಗಿದೆ.

ನಟಿ ಗರ್ಭವತಿಯಾಗಿದ್ದಾಗ ದಾಖಲಾಗಿದ್ದ ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಸ್ಕ್ಯಾನಿಂಗ್‌ ರಿಪೋರ್ಟ್‌ ಎನ್ನಲಾದ ದಾಖಲೆಯೊಂದು ಬಹಿರಂಗವಾಗಿದ್ದು, ರಿಪೋರ್ಟ್‌ನಲ್ಲಿ ಪೇಷಂಟ್ ಹೆಸರಲ್ಲಿ ಸಾನಿಕಾ ಕಾಶಪ್ಪನವರ ಎಂದು ಹೆಸರು ಉಲ್ಲೇಖವಾಗಿದೆ. ಮೂಲ ಹೆಸರು ಸಾನಿಕಾ ಆಗಿದ್ದು, ಸಿನಿಮಾಗಾಗಿ ʼಪೂಜಾಶ್ರೀʼ ಎಂದು ಬದಲಿಸಿಕೊಂಡಿದ್ದರು ಎನ್ನಲಾಗಿದೆ. ಕಾಶಪ್ಪನವರ ಹಾಗೂ ನಟಿಗೆ ಜನಿಸಿದ್ದು ಎನ್ನಲಾಗುತ್ತಿರುವ ಮಗುವಿನ ಪೊಟೊ ಕೂಡ ವೈರಲ್ ಆಗಿದೆ.

ಕೊಪ್ಪಳದ ಖಾಸಗಿ ಕಾರ್ಯಕ್ರಮದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ವಿಜಯಾನಂದ ಕಾಶಪ್ಪನರ, ನನಗೆ ಯಾವುದೇ ಫೋಟೋಸ್‌ ಬಂದಿಲ್ಲ. ನೀವು ದಾಖಲೆ ತಂದುಕೊಟ್ಟರೆ ನಾನು ಮಾತನಾಡುತ್ತೇನೆ. ದಾಖಲೆ ಕೊಡಲಿಲ್ಲ ಎಂದರೆ ನಾನು ಯಾವುದಕ್ಕೂ ಪ್ರತಿಕ್ರಿಯಿಸುವುದಿಲ್ಲ. ವೈಯಕ್ತಿಕ ಬದುಕೇ ಬೇರೆ, ರಾಜಕೀಯವೇ ಬೇರೆ. ವಿರೋಧಿಗಳು ಹೀಗೆ ಮಾತನಾಡುವುದು ಸಹಜ ಎಂದಿದ್ದಾರೆ.

ಇಳಕಲ್ ಐಪಿಎಲ್‌ನಲ್ಲಿ ಕೇಳಿಬಂದಿತ್ತು ಹೆಸರು
ಜುಲೈ 1ರಂದು ಆಯೋಜಿಸಿದ್ದ ಇಳಕಲ್ ಐಪಿಎಲ್ (ಇಳಕಲ್ ಪ್ರಿಮಿಯರ್ ಲೀಗ್) ಉದ್ಘಾಟನೆ ಕಾರ್ಯಕ್ರಮದಲ್ಲಿ ಮೈಕ್‌ನಲ್ಲಿ ನಟಿ ಪೂಜಾಶ್ರೀ ಹೆಸರು ಅನೌನ್ಸ್ ಆಗಿತ್ತು. ಕಾರ್ಯಕ್ರಮದಲ್ಲಿ ಅನೇಖ ಕಲಾವಿದೆಯರು ಭಾಗವಹಿಸಿದ್ದರು. ಹೆಸರು ಹೇಳಿದಾಗ ಇವರೆಲ್ಲರೂ ಎದ್ದು ನಿಂತು ಕೈ ಮುಗಿದಿದ್ದರು. ಪೂಜಾಶ್ರೀ ಹೆಸರು ಘೋಷಣೆ ಆಗಿದ್ದರೂ ಅವರು ಉಪಸ್ಥಿತರಿರಲಿಲ್ಲ. ಆಮಂತ್ರಣ ಪತ್ರಿಕೆಯಲ್ಲಿ ಪೂಜಾಶ್ರೀ ಹೆಸರು ನಮೂದಾಗಿತ್ತು. ಆದರೆ ಆಮಂತ್ರಣ ಪತ್ರಿಕೆಯಲ್ಲಿ ವಿಜಯಾನಂದ ಕಾಶಪ್ಪನವರ ಪತ್ನಿ ವೀಣಾ ಕಾಶಪ್ಪನವರ ಹೆಸರು ಎಲ್ಲೂ ನಮೂದಾಗಿರಲಿಲ್ಲ.

ಸಾಮಾಜಿಕ‌ ಜಾಲತಾಣದಲ್ಲಿ ಬಿಜೆಪಿ ಕಾರ್ಯಕರ್ತರ ತರಾಟೆ
ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಎರಡನೇ ಮದುವೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್‌ ಅಭಿಮಾನಿ ಬಳಗ ಎಂಬ ಗ್ರೂಪ್‌ನಲ್ಲಿ ಟೀಕಿಸಲಾಗಿದೆ. ಎರಡನೇ ಮದುವೆ ಆಗಿದ್ದಕ್ಕೆ ಸಾಹೇಬರು ಮಾಧ್ಯಮದವರಿಗೇ ದಾಖಲೆ ಕೇಳುತ್ತಾರೆ. ಇನ್ನು ಸ್ವಲ್ಪ ದಿನ ಕಾಯ್ದರೆ ನಿಮ್ಮ ಎರಡನೇ ಹೆಂಡತಿಯ ಹೆಣ್ಣು ಮಗು ದಾಖಲೆ ತೆಗೆದುಕೊಂಡು ಬರುತ್ತದೆ. ಅಲ್ಲಾ ಸ್ವಾಮಿ, ಮಾಡೋದವುದೆಲ್ಲ ಇಂತಹ ಕೆಲಸ. ಮತ್ತೆ ನಮ್ಮ ‌ಬಿಜೆಪಿಯವರಿಗೇ ಚಾಲೆಂಜ್ ಹಾಕುತ್ತೀರ? ಹಾಕು ಹಾಕು ನೀ ಚಾಲೆಂಜ್ ಹಾಕಿದಾಗ ನಮ್ಮ ಡಿಜಿಪಿ (ದೊಡ್ಡನಗೌಡ ಪಾಟೀಲ್‌) ಗೆದ್ದಿದ್ದಾರೆ. ಇನ್ನೊಮ್ಮೆ ಚಾಲೆಂಜ್ ಹಾಕು ನಮ್ಮ ರಾಮುಲುಜೀ ಕೂಡ ಗೆಲ್ಲುತ್ತಾರೆ. ನಿನ್ನ ಚಾಲೆಂಜ್ ನಮ್ಮ ಗೆಲುವಿನ ಮುನ್ಸೂಚನೆ ಎಂದು ಹೇಳಿರುವ ವಾಟ್ಸ್‌ಆ್ಯಪ್​ ಗ್ರೂಪ್‌ ಸಂದೇಶಗಳು ಕೂಡ ವೈರಲ್ ಆಗಿವೆ.

ಇದನ್ನೂ ಓದಿ | ಹೆರಿಗೆ, ಶಸ್ತ್ರಚಿಕಿತ್ಸೆ ವಿಭಾಗಗಳಲ್ಲಿ ಉತ್ತಮ ಕಾರ್ಯನಿರ್ವಹಣೆ; ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ರಾಷ್ಟ್ರಮಟ್ಟದ ಲಕ್ಷ್ಯ ಪ್ರಶಸ್ತಿ

Exit mobile version