Site icon Vistara News

Illicit relationship| ತಾಯಿ ಜತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಹೊಡೆದು ಕೊಂದ ಮಕ್ಕಳು!

murder death

ವಿಜಯಪುರ: ಇದೊಂದು ವಿಚಿತ್ರ ಮತ್ತು ಭಯಾನಕ ಕೊಲೆ. ತಾಯಿಯ ಜತೆ ವ್ಯಕ್ತಿಯೊಬ್ಬ ಅಕ್ರಮ ಸಂಬಂಧ ಹೊಂದಿರುವುದನ್ನು ತಿಳಿದು ಸಿಟ್ಟಿಗೆದ್ದ ಮಕ್ಕಳು ಆ ವ್ಯಕ್ತಿಯನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾರೆ.‌

ವಿಜಯಪುರ ಜಿಲ್ಲೆಯ ಚಡಚಣದಲ್ಲಿ ಶುಕ್ರವಾರ ತಡರಾತ್ರಿ ಘಟನೆ ನಡೆದಿದೆ. ತುಕಾರಾಮ ಚವ್ಹಾಣ (60) ಕೊಲೆಯಾದ ವ್ಯಕ್ತಿ. ೪೫ ವರ್ಷದ ತಂಗೆವ್ವ ಮತ್ತು 60 ವರ್ಷದ ತುಕಾರಾಮನ ಮಧ್ಯೆ ಹತ್ತು ವರ್ಷಗಳಿಂದ ಅನೈತಿಕ ಸಂಬಂಧ ಇತ್ತು ಎನ್ನಲಾಗಿದೆ. ಇದಕ್ಕೆ ತಂಗೆವ್ವನ ಮಕ್ಕಳು ಆಕ್ಷೇಪ ವ್ಯಕ್ತಪಡಿಸಿದ್ದರೂ ಸಂಬಂಧಕ್ಕೆ ತೆರೆ ಬಿದ್ದಿರಲಿಲ್ಲ.

ಕಳ್ಳದಾರಿಯಲ್ಲಿ ಪ್ರೇಯಸಿಯ ಮನೆಗೆ ಬರುತ್ತಿದ್ದ ತುಕಾರಾಮ ಶುಕ್ರವಾರ ರಾತ್ರಿಯೂ ನಡು ಮಟ್ಟದ ಹಳ್ಳ ದಾಟಿ ಬಂದಿದ್ದ. ಈ ವಿಚಾರವನ್ನು ತಿಳಿಯುತ್ತಿದ್ದಂತೆಯೇ ತಂಗೆವ್ವನ ಮಕ್ಕಳಾದ ಸದಾಶಿವ ಬಂಗಾರತಳಿ, ಚಿಕ್ಕು ಬಂಗಾರತಳಿ ಮತ್ತು ಸಿದ್ದು ಬಂಗಾರತಳಿ ಅಲ್ಲಿಗೆ ಧಾವಿಸಿದ್ದಾರೆ. ತುಕಾರಾಮ-ತಂಗೆವ್ವ ಜತೆಯಾಗಿ ಮಲಗಿದ್ದಾಗಲೇ ದಾಳಿ ಮಾಡಿದ ಈ ಮೂವರು ಆತನ ತಲೆಗೆ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾರೆ.

ಕೊಲೆಯಾದ ತುಕಾರಾಮ

ತಾಯಿಯೊಂದಿಗೆ ಮಕ್ಕಳು ಪರಾರಿ
ತುಕಾರಾಮನನ್ನು ಕೊಲೆ ಮಾಡಿದ ಈ ಮೂವರು ತಂಗೆವ್ವಳನ್ನೂ ಜತೆಗೆ ಕರೆದುಕೊಂಡೇ ಅಲ್ಲಿಂದ ಪರಾರಿಯಾಗಿದ್ದಾರೆ. ಅವರು ಮಹಾರಾಷ್ಟ್ರದ ಕಡೆಗೆ ಪರಾರಿಯಾಗಿದ್ದನ್ನು ತಿಳಿದ ಪೊಲೀಸರು ಮಹಾರಾಷ್ಟ್ರದ ಕೊಲ್ಲಾಪುರ ಬಳಿ ಸದಾಶಿವ ಬಂಗಾರತಳಿ, ಚಿಕ್ಕು ಬಂಗಾರತಳಿ ಮತ್ತು ಸಿದ್ದು ಬಂಗಾರತಳಿಯನ್ನು ಬಂಧಿಸಿದ್ದಾರೆ.

ಚಡಚಣ ಪೊಲೀಸ್ ಠಾಣೆ ಪಿಎಸ್ಐ ಸಂಜಯ್ ತಿಪ್ಪಾರೆಡ್ಡಿ ನೇತೃತ್ವದಲ್ಲಿ ಮೂವರು ಆರೋಪಿಗಳ ಬಂಧನ ಮಾಡಿದ್ದಾರೆ. ಆದರೆ, ತಂಗೆವ್ವ ಬಂಗಾರತಳಿ ತಪ್ಪಿಸಿಕೊಂಡಿದ್ದು ಪೊಲೀಸರು ಆಕೆಗಾಗಿ ಹುಡುಕಾಡುತ್ತಿದ್ದಾರೆ. ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ |Murder Case | ಪತ್ನಿಯ ಪ್ರೀತಿ, ಪ್ರಣಯಕ್ಕೆ ಚೆಲ್ಲಿತು ನೆತ್ತರು; ಆ್ಯಕ್ಸಿಡೆಂಟ್‌ ಎಂದವಳು ಈಗ ಕಂಬಿ ಹಿಂದೆ!

Exit mobile version