Site icon Vistara News

Indira Gandhi Jayanti: ಅವಕಾಶ ವಂಚಿತರಿಗೆ ಶಕ್ತಿ ತುಂಬಿದ ಇಂದಿರಾ ಗಾಂಧಿ: ಸಿಎಂ

Siddaramaiah

ಬೆಂಗಳೂರು: ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹೀಗೆ ಎಲ್ಲ ಅವಕಾಶ ವಂಚಿತರಿಗೆ ಶಕ್ತಿ ತುಂಬುವುದೇ ನಿಜವಾದ ಸ್ವಾತಂತ್ರ್ಯದ ಅರ್ಥ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು (Indira Gandhi Jayanti) ಅವಕಾಶ ವಂಚಿತರಿಗಾಗಿ ಶ್ರಮಿಸಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಿ ಮಾತನಾಡಿದ ಅವರು, ಅವಕಾಶ ವಂಚಿತರ ಬಗ್ಗೆ ಕಾಳಜಿ ತೋರುತ್ತಿದ್ದ ಅವರು, ಉಗ್ರವಾದವನ್ನು ತೀವ್ರವಾಗಿ ಹತ್ತಿಕ್ಕುವ ಕೆಲಸ ಮಾಡಿದರು. ಅದಕ್ಕಾಗಿಯೇ ಪ್ರಾಣ ಕಳೆದುಕೊಂಡರು. ದೇಶಕ್ಕಾಗಿ ಪ್ರಾಣ ತೆತ್ತ ಧೀಮಂತ ಮಹಿಳೆಯ ಮಾರ್ಗದರ್ಶನದಲ್ಲಿ ನಡೆಯುವುದೇ ಅವರಿಗೆ ಸಲ್ಲಿಸುವ ಗೌರವ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

ಇಂದಿರಾ ಗಾಂಧಿಯವರು ಸುಮಾರು 16 ವರ್ಷಗಳ ಕಾಲ ಈ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಅವರ ತಂದೆ ದಿವಂಗತ ಜವಾಹರ್ ಲಾಲ್ ನೆಹರು ಅವರು ಸಕ್ರಿಯ ರಾಜಕಾಣದಲ್ಲಿ ತೊಡಗಿದ್ದವರು. ಮಹಾತ್ಮ ಗಾಂಧಿ ಅವರು ಸೇರಿ ದೇಶದ ಹಿರಿಯ ನಾಯಕರ ಒಡನಾಟವನ್ನು ಅವರ ಕುಟುಂಬ ಹೊಂದಿತ್ತು. ದೇಶದ ಸ್ವಾತಂತ್ರ್ಯ ಇಂದಿರಾ ಗಾಂಧಿಯವರ ಮೇಲೆ ಗಾಢವಾದ ಪರಿಣಾಮ ಬೀರಿತ್ತು. ಜನಪರ ನಿಲುವು ಹೊಂದಿದ್ದ ಅವರು ತಮ್ಮ ಇಡೀ ಜೀವನವನ್ನು ದೇಶ ಸೇವೆಗೆ ಮುಡಿಪಾಗಿಟ್ಟಿದ್ದರು. ಲಾಲ್ ಬಹದ್ದೂರ್ ಶಾಸ್ತ್ರಿಯವರ ನಂತರ ಪ್ರಧಾನಿಯಾದ ಅವರನ್ನು ಉಕ್ಕಿನ ಮಹಿಳೆ ಎಂದು ಕರೆಯಲಾಗಿದೆ. ಯಾಕೆಂದರೆ ದೇಶದ ಪರ ತೀರ್ಮಾನಗಳನ್ನು ಅವರು ಬಹಳ ದೃಢವಾಗಿ ತೆಗೆದುಕೊಳ್ಳುತ್ತಿದ್ದರು ಎಂದು ಸಿದ್ದರಾಮಯ್ಯ ಸ್ಮರಿಸಿದರು.

ಇದನ್ಣೂ ಓದಿ | BK Bhattacharya : ರಾಜ್ಯದ ಮಾಜಿ ಮುಖ್ಯ ಕಾರ್ಯದರ್ಶಿ ಬಿ.ಕೆ ಭಟ್ಟಾಚಾರ್ಯ ನಿಧನ

ದೇಶದ ಸ್ವಾತಂತ್ರಕ್ಕಾಗಿ ತ್ಯಾಗ ಬಲಿದಾನಗಳನ್ನು ಮಾಡಿದವರಲ್ಲಿ ಕಾಂಗ್ರೆಸ್ ನಾಯಕರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಇಂದು ಅಧಿಕಾರದಲ್ಲಿರುವ ಬಿಜೆಪಿಯವರು ದೇಶದ ಸ್ವಾತಂತ್ರ್ಯಕ್ಕಾಗಿ ಯಾವ ತ್ಯಾಗ ಬಲಿದಾನಗಳನ್ನು ಮಾಡಿಲ್ಲ. ಜಾತ್ಯತೀತ ತತ್ವ, ಸಾಮಾಜಿಕ ನ್ಯಾಯ, ಬಡವರ ಕಾಳಜಿ, ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿ, ದೇಶದ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದು ಕಾಂಗ್ರೆಸ್ ಪಕ್ಷ ಮಾತ್ರ. ಜವಾಹರ್ ಲಾಲ್ ನೆಹರು ಅವರು ಪ್ರಧಾನಿಯಾಗಿದ್ದಾಗ ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಪರಿಸ್ಥಿತಿ ದುಸ್ಥಿತಿಯಲ್ಲಿತ್ತು. ಇಂಥ ಸಂದರ್ಭದಲ್ಲಿ ದೇಶವನ್ನು ಕಟ್ಟುವ ಕೆಲಸವನ್ನು ಮಾಡಿದರು.

ಇಂದಿರಾಗಾಂಧಿಯವರು ದೇಶವನ್ನು ಬಲಪಡಿಸುವ ಹಾಗೂ ಬಡವರಿಗೆ ಶಕ್ತಿ ತುಂಬಿದರು. ವಿರೋಧಪಕ್ಷದವರು ಇಂದಿರಾಗಾಂಧಿ ಹಠಾವೋ ಎಂಬ ಟೀಕೆಗೆ, ಗರೀಬಿ ಹಠಾವೋ ಎಂದು ಪ್ರತ್ಯುತ್ತರ ನೀಡುತ್ತಿದ್ದರು. ದೇಶದಲ್ಲಿ ಆಹಾರ ಸಮಸ್ಯೆ ತಲೆದೋರಿದ ಸಂದರ್ಭದಲ್ಲಿ ಬಾಬು ಜಗಜೀವನರಾಮ್ ಅವರ ಸಹಕಾರದೊಂದಿಗೆ ಹಸಿರು ಕ್ರಾಂತಿಯನ್ನು ತಂದು ಅಹಾರ ಸ್ವಾವಲಂಬನೆಯನ್ನು ತಂದರು. ದೇಶದ ಜನಸಂಖ್ಯೆ ಹೆಚ್ಚಿದ್ದು, ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದೇವೆ. ನಿರಂತರ ಹಸಿರುಕ್ರಾಂತಿ ನಡೆಯಬೇಕಿದೆ. ಪ್ರಧಾನಿಯಾಗಿ ಇಂದಿರಾ ಗಾಂಧಿಯವರು ಬಲಿಷ್ಠ ರಾಷ್ಟ್ರವನ್ನು ನಿರ್ಮಿಸಿದರು ಎಂದು ತಿಳಿಸಿದರು.

ಖಾಸಗಿ ಬ್ಯಾಂಕುಗಳು ಬಡವರಿಗೆ, ಸಾಮಾನ್ಯ ರೈತರಿಗೆ ಬಾಗಿಲು ತೆರೆದಿರಲಿಲ್ಲ. ಹೀಗಾಗಿ ರಾಷ್ಟ್ರೀಕರಣ ಮಾಡಿ, ಆ ಬ್ಯಾಂಕುಗಳ ಬಾಗಿಲುಗಳನ್ನು ಬಡವರು, ಸಾಮಾನ್ಯ ರೈತರಿಗೆ ತೆರೆಯುವ ಕೆಲಸ ಮಾಡಿದವರು ಇಂದಿರಾಗಾಂಧಿ. ಈಗ ನರೇಂದ್ರಮೋದಿಯವರು ಖಾಸಗೀಕರಣ ಮಾಡುತ್ತಿದ್ದಾರೆ. ರೈತರು, ಬಡವರು, ಜನಸಾಮಾನ್ಯರಿಗೆ ತೆರೆದಿದ್ದ ರಾಜ್ಯದ ಬ್ಯಾಂಕುಗಳು ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ಶ್ರೀಮಂತರ ಸಾಲ ಮನ್ನಾ ಮಾಡುತ್ತಿದ್ದಾರೆಯೇ ಹೊರತು, ಬಡವರು ರೈತರ ಸಾಲವನ್ನಲ್ಲ ಎಂದು ಟೀಕಿಸಿದರು.

1971 ರಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದು ಬಾಂಗ್ಲಾದೇಶದ ಉದಯಕ್ಕೆ ಕಾರಣರಾದರು. ಅಂದು ಭಾರತೀಯ ಜನತಾ ಪಕ್ಷದಲ್ಲಿದ್ದ ವಾಜಪೇಯಿ ಅವರು ʼದುರ್ಗೆʼ ಎಂದು ಹೇಳಿದ್ದರು. ದೇಶದ ಕಟ್ಟ ಕಡೆಯ ಜನರು, ಅವಕಾಶ ವಂಚಿತರಿಗೆ 20 ಅಂಶಗಳ ಕಾರ್ಯಕ್ರಮದ ಮೂಲಕ ಶಕ್ತಿ ತುಂಬುವ ಕೆಲಸ ಮಾಡಿದರು. ಭೂಸುಧಾರಣಾ ಕಾಯ್ದೆ ಜಾರಿಗೆ ಮಾಡಿ ಬಡವರಿಗೆ ಶಕ್ತಿ ಕೊಟ್ಟರು ಎಂದು ನುಡಿದರು.

ಇದನ್ನೂ ಓದಿ | ‌Congress Guarantee : ಬಿಜೆಪಿ – ಜೆಡಿಎಸ್‌ಗೆ ಮತ ಹಾಕಿದ್ರೆ ಗ್ಯಾರಂಟಿ ಯೋಜನೆಗಳು ರದ್ದು ಎಂದ ಡಿಕೆಶಿ!

ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್ ಹಾಗೂ ಸಚಿವ ಬೈರತಿ ಸುರೇಶ್ ಮತ್ತು ಪಕ್ಷದ ಪದಾಧಿಕಾರಿಗಳು, ಹಿರಿಯ ಮುಖಂಡರು ಭಾಗವಹಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version