Site icon Vistara News

ನಾಡಗೀತೆಗೆ ಅವಮಾನ ಮಾಡಿದವರ ವಿರುದ್ಧ ತಡಮಾಡದೇ ಕ್ರಮ ಕೈಗೊಳ್ಳಿ: ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ ಆಗ್ರಹ

kasapa president mahesh joshi

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರ ಕುರಿತು ಅವಹೇಳನಕಾರಿ ಮಾತುಗಳ ಬಗ್ಗೆ ಹಾಗೂ ತಿರುಚಿ ಬರೆದು ನಾಡಗೀತೆಗೆ ಅವಮಾನ ಮಾಡಿರುವವರ ಕುರಿತು ಓದುವ ಹೀನಾಯ ಸ್ಥಿತಿ ತಲುಪಿರುವುದು ಕನ್ನಡ ಸಾಹಿತ್ಯ ಪರಿಷತ್ತಿಗೆ ಅತ್ಯಂತ ಖೇದ ಹಾಗೂ ಬೇಸರದ ಸಂಗತಿಯಾಗಿದೆ ಎಂದು ಕನ್ನಡ ಸಾಃಇತ್ಯ ಪರಿಷತ್‌ ಅಧಯಕ್ಷ ಡಾ. ಮಹೇಶ್‌ ಜೋಶಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಮಹೇಶ್‌ ಜೋಶಿ, 1971ರಲ್ಲಿ ರಾಷ್ಟ್ರಕವಿ ಕುವೆಂಪು ಅವರ ಸಮ್ಮತಿ ಪಡೆದು ಪರಿಷತ್ತು ನಾಡಗೀತೆಯನ್ನು ತನ್ನ ಎಲ್ಲ ಕಾರ್ಯಕ್ರಮಗಳಲ್ಲೂ ಹಾಡಿಸಲಾಗುತ್ತಿತ್ತು. ಜಗದ ಕವಿ, ಯುಗದ ಕವಿ, ನಾಡು ಕಂಡ ಅಪ್ರತಿಮ ಮಹಾಕವಿ, ದಾರ್ಶನಿಕ, ರಸಋಷಿ ಕುವೆಂಪು ಅವರಿಗೆ ಅತ್ಯಂತ ಗೌರವ ಸಲ್ಲಿಸುವ ಸಂಸ್ಥೆ ಕರ್ನಾಟಕದಲ್ಲಿ ಯಾವುದಾದರೂ ಇದೇ ಅಂದರೆ, ಅದು ಕನ್ನಡ ಸಾಹಿತ್ಯ ಪರಿಷತ್ತು. ಕುವೆಂಪು ವಿರಚಿತ “ಜಯಭಾರತ ಜನನಿಯ ತನುಜಾತೆ” ಗೀತೆಯನ್ನು “ನಾಡಗೀತೆ” ಮಾಡಬೇಕೆಂದು ಮೊದಲ ಅಳವಡಿಸಿಕೊಂಡಿದ್ದು ಸಾಹಿತ್ಯ ಪರಿಷತ್ತು.

ಇದನ್ನೂ ಓದಿ | ರಾಷ್ಟ್ರಕವಿ ಕುವೆಂಪು ಮತ್ತು ನಾಡಗೀತೆಗೆ ಅವಮಾನ ಖಂಡಿಸಿ ಮಂಡ್ಯದಲ್ಲಿ ಪ್ರತಿಭಟನೆ

ಇಂತಹ ಅಪರೂಪದ ಗೀತೆಯನ್ನು ಪರಿಷತ್ತು ನಾಡಗೀತೆಯಾಗಿ ಆರಿಸಿತು. ಅದರ ನಂತರ ಸರ್ಕಾರವೂ ಇದನ್ನೇ ನಾಡಗೀತೆ ಎಂದು ಅಂಗೀಕರಿಸಿ, ಪರಿಷತ್ತಿನ ಆಯ್ಕೆಯನ್ನು ದೃಢಗೊಳಿಸಿ, 2004ರ ಜನವರಿ 6ರಂದು ಕರ್ನಾಟಕದ ನಾಡಗೀತೆಯನ್ನಾಗಿ ನಿಗದಿಪಡಿಸಿ ಆದೇಶ ಹೊರಡಿಸಿತು. ರಾಷ್ಟ್ರಕವಿ ಕುವೆಂಪು ಅವರ ಕುರಿತು ಅವಹೇಳನಕಾರಿ ಮಾತುಗಳ ಬಗ್ಗೆ ಹಾಗೂ ನಾಡಗೀತೆಯನ್ನು ತಿರುಚಿ ಬರೆದಿರುವ ಕುರಿತು ಓದುವ, ಹೀನಾಯ ಸ್ಥಿತಿ ತಲುಪಿರುವುದಕ್ಕೆ, ಕನ್ನಡ ಸಾಹಿತ್ಯ ಪರಿಷತ್ತಿಗೆ ಅತ್ಯಂತ ಖೇದ ಹಾಗೂ ಬೇಸರದ ಸಂಗತಿಯಾಗಿದೆ.

ಸಾಧಾರಣವಾಗಿ ನನ್ನ ಎಲ್ಲ ಭಾಷಣಗಳಲ್ಲೂ ಕುವೆಂಪು ಅವರ ಚಿಂತನೆಗಳನ್ನು ಉಲ್ಲೇಖಿಸುತ್ತೇನೆ. ಯಾವುದೇ ಸಾಹಿತಿಯನ್ನು ಟೀಕಿಸುವ ಮೊದಲು ಅವರ ಸಾಹಿತ್ಯದ ಸಾರ-ಸರ್ವವನ್ನು ಅರಿತುಕೊಳ್ಳಬೇಕು. ತಿಳಿದುಕೊಳ್ಳದೇ ಮಾತನಾಡುವುದು ಶೋಭೆಯಲ್ಲ. ಹಿನ್ನೆಲೆ ತಿಳಿದುಕೊಳ್ಳದೇ ಮಾತನಾಡುವುದು, ಅವರ ಬೇಜವಾಬ್ದಾರಿತನವನ್ನು ಹಾಗೂ ಅಪ್ರಬುದ್ಧತೆಯನ್ನು ತೋರಿಸುತ್ತದೆ.

ಕುವೆಂಪು ಅವರನ್ನು ನಿಂದಿಸಿದವರ ಹಾಗೂ ತಿರುಚಿ ಬರೆದು ನಾಡಗೀತೆಗೆ ಅವಮಾನ ಮಾಡಿದವರ ಮೇಲೆ ಕ್ರಮಕೈಗೊಳ್ಳುವಂತೆ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಮಹಾಸ್ವಾಮೀಜಿಗಳ ಒತ್ತಾಯವನ್ನು ಮಾನ್ಯ ಮುಖ್ಯಮಂತ್ರಿಗಳು ಕ್ರಮ ತೆಗೆದುಕೊಳ್ಳುವ ಬಗ್ಗೆ ತೀರ್ಮಾನ ಕೈಗೊಂಡಿರುವುದನ್ನು, ಕನ್ನಡ ಸಾಹಿತ್ಯ ಪರಿಷತ್ತು ಬೆಂಬಲಿಸುತ್ತಾ, ತಡಮಾಡದೇ ಅಂಥವರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತದೆ.

ಇದನ್ನೂ ಓದಿ: ಕನ್ನಡ ಸಾಹಿತ್ಯ ಪರಿಷತ್ತಿಗೆ ಎಂಟು ಆಧಾರಸ್ತಂಭ: ಡಾ. ಮಹೇಶ ಜೋಶಿ

Exit mobile version