Site icon Vistara News

ಕನ್ನಡ ಸಾಹಿತ್ಯ ಪರಿಷತ್‌ನ ದತ್ತಿ ಪ್ರಶಸ್ತಿ ಪುರಸ್ಕೃತರಿಗೆ ಅ.21ರಂದು ಪ್ರಶಸ್ತಿ ಪ್ರದಾನ

Kannada Sahitya Parishat's Dr. Pandappa Lakshmana Hoogara, Dr. H. Vishwanath-M.S. Indira Endowment award Announcemed

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‌ನ ʻಚಾವುಂಡರಾಯ ದತ್ತಿʼ, ʻನಾಗಡಿಕೆರೆ ಕಿಟ್ಟಪ್ಪಗೌಡ ರುಕ್ಮಿಣಿ ತಿರ್ಥಹಳ್ಳಿ ದತ್ತಿʼ ಹಾಗೂ ʻಕನ್ನಡ ಕಾಯಕ ದತ್ತಿʼ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅಕ್ಟೋಬರ್ 21ರಂದು ಸಂಜೆ 4.30ಕ್ಕೆ ನಗರದ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್‌ನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ವಿದ್ವಾಂಸ ನಾಡೋಜ ಡಾ. ಹಂಪ ನಾಗರಾಜಯ್ಯ ಅವರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರು ವಹಿಸಲಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಹಾಗೂ ಲೋಕಾಯುಕ್ತ ವಿಶ್ರಾಂತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | Fit At Any Age | ನಿವೃತ್ತ ಯೋಧ ಅಯ್ಯರ್‌ ಪುಸ್ತಕ ಲೋಕಾರ್ಪಣೆ,‌ ಫಿಟ್ನೆಸ್‌ ಸರಳ ಮಂತ್ರಗಳಿಗೆ ಬುಕ್ ಕನ್ನಡಿ

ಧಾರವಾಡ ವಿಶ್ರಾಂತ ಕನ್ನಡ ಪ್ರಾಧ್ಯಾಪಕರು ಹಾಗೂ ವಿಶ್ರಾಂತ ಕುಲ ಸಚಿವ ಪ್ರೊ. ಶಾಂತಿನಾಥ ದಿಬ್ಬದ ಅವರು ʻಚಾವುಂಡರಾಯ ದತ್ತಿʼ ಪ್ರಶಸ್ತಿಗೆ, ವಿಜಯವಾಣಿ ದಿನಪತ್ರಿಕೆ ಸಂಪಾದಕ ಕೆ.ಎನ್.ಚನ್ನೇಗೌಡ ಅವರು ʻನಾಗಡಿಕೆರೆ ಕಿಟ್ಟಪ್ಪಗೌಡ ರುಕ್ಮಿಣಿ ತಿರ್ಥಹಳ್ಳಿ ದತ್ತಿʼ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ʻಕನ್ನಡ ಕಾಯಕ ದತ್ತಿʼ ಪ್ರಶಸ್ತಿಯನ್ನು ಮಹಾರಾಷ್ಟ್ರ ರಾಜ್ಯದ ಗಡಿ ಭಾಗವಾದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ ಪಿಠಾಧ್ಯಕ್ಷ ಶ್ರೀ ನಿರಂಜನ ಪ್ರಣವ ಸ್ವರೂಪಿ ಬಸವಲಿಂಗ ಸ್ವಾಮೀಜಿ, ಕೋಲಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಶಂಕರಪ್ಪ ಮತ್ತು ಕೊಪ್ಪಳದ ರಂಗನಿರ್ದೇಶಕರು ಹಾಗೂ ರಂಗಭೂಮಿ ಕಲಾವಿದರಾದ ಕೆ. ಇಮಾಮಸಾಬ್ ಅವರಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಕಸಾಪ ದತ್ತಿ ಪ್ರಶಸ್ತಿ ಪುರಸ್ಕೃತರ ಪರಿಚಯ:

ಪ್ರೊ. ಶಾಂತಿನಾಥ ದಿಬ್ಬದ(ಚಾವುಂಡರಾಯ ಪ್ರಶಸ್ತಿ)
ಪ್ರೊ. ಶಾಂತಿನಾಥ ದಿಬ್ಬದ ಅವರು ಗುಲಬರ್ಗಾ ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಒಟ್ಟು 32 ವರ್ಷಗಳ ಕಾಲ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಇದಲ್ಲದೆ, ರಾಜ್ಯದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಬೇರೆ ಬೇರೆ ಪಠ್ಯಪುಸ್ತಕ ಸಮಿತಿ, ನೇಮಕಾತಿ ಸಮಿತಿಗಳಂತಹ ಕನ್ನಡ ಸಮಿತಿಗಳಲ್ಲಿ ಅಧ್ಯಕ್ಷರಾಗಿ, ಸದಸ್ಯರಾಗಿ, ಕೇಂದ್ರ ಲೋಕಸೇವಾ ಆಯೋಗ ಮತ್ತು ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಕನ್ನಡ ಸಾಹಿತ್ಯ ಪರಿಷತ್ ‌2021ನೇ ಸಾಲಿನ ಚಾವುಂಡರಾಯ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಪ್ರಶಸ್ತಿಯು 30 ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ಫಲಕಗಳನ್ನು ಒಳಗೊಂಡಿದೆ.

ಕೆ.ಎನ್. ಚನ್ನೇಗೌಡ(ನಾಗಡಿಕೆರೆ-ಕಿಟ್ಟಪ್ಪಗೌಡ ರುಕ್ಮಿಣಿ ತೀರ್ಥಹಳ್ಳಿ ದತ್ತಿ ಪ್ರಶಸ್ತಿ)

ವಿಜಯವಾಣಿ’ ಕನ್ನಡ ದಿನ ಪತ್ರಿಕೆ ಸಂಪಾದಕರಾದ ಕೆ.ಎನ್. ಚನ್ನೇಗೌಡ ಅವರು 2021ನೇ ಸಾಲಿನ ನಾಗಡಿಕೆರೆ-ಕಿಟ್ಟಪ್ಪ ರುಕ್ಮಿಣಿ ತೀರ್ಥಹಳ್ಳಿ ದತ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು 25 ವರ್ಷಗಳಿಂದಲೂ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದು, ಅನೇಕ ದಿನಪತ್ರಿಕೆಗಳಲ್ಲಿ ಚಿಂತನಾ ಬರಹಗಳು, ರಾಜಕೀಯ ವಿಶ್ಲೇಷಣೆಗಳ ಜತೆಗೆ ಪ್ರಧಾನ ಲೇಖನಗಳನ್ನು ಕೂಡ ಬರೆದಿದ್ದಾರೆ. ನಾಡಿನ ಪ್ರಮುಖ ಪತ್ರಿಕೆಗಳಾದ ಹೊಸದಿಗಂತ, ಉಷಾಕಿರಣ, ಉದಯವಾಣಿ ಪತ್ರಿಕೆಗಳಲ್ಲಿ ಅನೇಕ ಜವಾಬ್ದಾರಿಯುತ ಹುದ್ದೆಗಳನ್ನು ನಿರ್ಭಿಡೆಯಿಂದ ನಿರ್ವಹಿಸಿದ್ದಾರೆ.

2012ರಲ್ಲಿ ಆರಂಭವಾದ ವಿಜಯವಾಣಿ ದಿನ ಪತ್ರಿಕೆಯಲ್ಲಿ ಆರಂಭಿಕ ದಿನದಿಂದ ಸೇವೆ ಸಲ್ಲಿಸುತ್ತಿರುವ ಇವರು, ಈಗ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನೇಕ ಯುವ ಬರಹಗಾರರು, ಲೇಖಕರು, ಪತ್ರಕರ್ತರಿಗೆ ಮಾದರಿಯಾಗಿ ಪ್ರೋತ್ಸಾಹ ನೀಡುತ್ತ, ಅತ್ಯಂತ ಕ್ರಿಯಾಶೀಲರಾಗಿ ಪತ್ರಿಕೆಯನ್ನು ಮುನ್ನಡೆಸುತ್ತಿರುವ ಇವರಿಗೆ 2021ನೇ ಸಾಲಿನ ನಾಗಡಿಕೆರೆ-ಕಿಟ್ಟಪ್ಪಗೌಡ ರುಕ್ಮಿಣಿ ತೀರ್ಥಹಳ್ಳಿ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಇದು 10 ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ ಒಳಗೊಂಡಿದೆ.

ಶ್ರೀ ಮ.ನಿ.ಪ್ರ. ಬಸವಲಿಂಗ ಮಹಾಸ್ವಾಮಿ(ಕನ್ನಡ ಕಾಯಕ ಪ್ರಶಸ್ತಿ)
ಕನ್ನಡಪರ ಹೋರಾಟಗಾರರು ಹಾಗೂ ಕರ್ನಾಟಕ ಗಡಿ ಭಾಗದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ಪೀಠಾಧ್ಯಕ್ಷರಾದ ಮ.ನಿ.ಪ್ರ. ಬಸವಲಿಂಗ ಮಹಾಸ್ವಾಮಿಗಳು, ಕನ್ನಡ ಸೇವೆಗಾಗಿ ಗಡಿನಾಡು ಶರಣ ಸಾಹಿತ್ಯ ಸ್ಥಾಪಿಸಿದರು. ಅನೇಕ ಮಹನೀಯರ ಮಾರ್ಗದರ್ಶನದಲ್ಲಿ ನಿರಂತರ ಸೇವೆ ಮಾಡುತ್ತ ಕನ್ನಡ ನಾಡು, ನುಡಿ, ನೆಲ, ಜಲಕ್ಕಾಗಿ ಹೋರಾಟ ಕೈಗೊಂಡಿರುವ ಶ್ರೀಗಳಿಗೆ “ಕನ್ನಡ ಕಾಯಕ ಪ್ರಶಸ್ತಿ” ನೀಡಿ ಗೌರವಿಸಲಾಗುತ್ತಿದೆ. ಪ್ರಶಸ್ತಿಯು 10 ಸಾವಿರ ನಗದು, ಸ್ಮರಣಿಕೆ ಹಾಗೂ ಫಲತಾಂಬೂಲ ಒಳಗೊಂಡಿರುತ್ತದೆ.

ಡಾ. ಆರ್. ಶಂಕರಪ್ಪ(ಕನ್ನಡ ಕಾಯಕ ಪ್ರಶಸ್ತಿ)
ಬೆಂಗಳೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದಲ್ಲಿ ಎಂ.ಎ. ಪದವಿ ಪಡೆದು ಪ್ರಸ್ತುತ ಕೋಲಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಡಾ. ಆರ್. ಶಂಕರಪ್ಪ ಸೇವೆ ಸಲ್ಲಿಸುತ್ತಿದ್ದಾರೆ. ಇವರ 291 ಲೇಖನಗಳು, 25 ಸಂಶೋಧನಾ ಲೇಖನಗಳು ವಿವಿಧ ವೃತ್ತ ಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಒಟ್ಟು 24 ಪುಸ್ತಕಗಳು, 10 ರಾಜ್ಯ ಮಟ್ಟದ, 25 ರಾಷ್ಟ್ರ ಮಟ್ಟದ, 20 ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ವಿಷಯ ಮಂಡಿಸಿ, ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುತ್ತಾರೆ. ಕನ್ನಡ ನಾಡು-ನುಡಿ, ನೆಲ-ಜಲ ಕೃತಿ ರಚಿಸಿದ ಮಹನೀಯರಿಗೆ “ಕನ್ನಡ ಕಾಯಕ ಪ್ರಶಸ್ತಿ” ನೀಡಿ ಗೌರವಿಸಲಾಗುತ್ತಿದೆ.

ಕೆ. ಇಮಾಮಸಾಬ್ (ಕನ್ನಡ ಕಾಯಕ ಪ್ರಶಸ್ತಿ)
ಕೊಪ್ಪಳದ ರಂಗ ನಿರ್ದೇಶಕರು ಹಾಗೂ ರಂಗಭೂಮಿ ಕಲಾವಿದರು ಆದ ಕೆ. ಇಮಾಮ ಸಾಬ ಅವರು 1978ರ ಮೇ 11ರಿಂದ 1983 ರವರೆಗೆ ಕನಕಾಂಗಿ ಕಲ್ಯಾಣ, ರತಿ ಕಲ್ಯಾಣ, ಪ್ರಮೀಳಾದೇವಿ, ಗಿರಿಜಾ ಕಲ್ಯಾಣ, ದಕ್ಷಬ್ರಹ್ಮ, ಶ್ರೀ ರಾಮಾಂಜನೇಯ ಯುದ್ಧ ಮುಂತಾದ 225ಕ್ಕೂ ಹೆಚ್ಚು ದೊಡ್ಡಾಟಗಳಲ್ಲಿ ಸಂಗೀತ ನಿರ್ದೇಶಕನಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ʼಕನ್ನಡ ಕಾಯಕ ಪ್ರಶಸ್ತಿ’‌ ನೀಡಿ ಗೌರವಿಸಲಾಗುತ್ತಿದೆ.

ಇದನ್ನೂ ಓದಿ | BTS-2022 | ಬೆಂಗಳೂರಿನಲ್ಲಿ ನ.16ರಿಂದ ಬಿಟಿಎಸ್‌-25; 5ಜಿ ಸೇರಿ ಅತ್ಯಾಧುನಿಕ ತಂತ್ರಜ್ಞಾನಗಳ ಕುರಿತು ಚರ್ಚೆ

Exit mobile version