Site icon Vistara News

Karnataka Election 2023: ಹಾಸನ, ಚಾಮರಾಜನಗರದಲ್ಲಿ ಇಂದು ರಾಹುಲ್‌ ಗಾಂಧಿ ಓಡಾಟ

Rahul gandhi

ಹಾಸನ/ ಚಾಮರಾಜನಗರ: ಹಾಸನ ಹಾಗೂ ಚಾಮರಾಜನಗರ ಉಭಯ ಜಿಲ್ಲೆಗಳಲ್ಲಿ ಇಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ (Rahul Gandhi) ಚುನಾವಣಾ ಓಡಾಟ ನಡೆಸಲಿದ್ದು, ಇಬ್ಬರು ಕೈ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಇಂದು ಪ್ರವಾಸಕ್ಕೆ ಕೇಂದ್ರ ನಾಯಕ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಅರಸೀಕೆರೆಗೆ ಆಗಮಿಸಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ.ಶಿವಲಿಂಗೇಗೌಡ ಪರ ಪ್ರಚಾರ ನಡೆಸಲಿದ್ದಾರೆ. ಅರಸೀಕೆರೆ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿರುವ ಬೃಹತ್ ಬಹಿರಂಗ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಕಾಂಗ್ರೆಸ್‌ನ ರಾಜ್ಯ ಹಾಗೂ ಜಿಲ್ಲೆಯ ಹಲವು ನಾಯಕರು ಭಾಗಿಗಳಾಗಲಿದ್ದಾರೆ. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಶಿವಲಿಂಗೇಗೌಡರು ಜೆಡಿಎಸ್‌ನಿಂದ ಹ್ಯಾಟ್ರಿಕ್ ಗೆಲವು ಸಾಧಿಸಿದ್ದರು.

ಚಾಮರಾಜನಗರದಲ್ಲಿ ಇಂದು ಕಾಂಗ್ರೆಸ್‌ನ ಬೃಹತ್ ಸಮಾವೇಶ ನಡೆಯಲಿದ್ದು, ಅದರಲ್ಲಿ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಲಿದ್ದಾರೆ. ಇಂದು ಮಧ್ಯಾಹ್ನ 3.30ಕ್ಕೆ ಚಾಮರಾಜನಗರದ ರೇಷ್ಮೆಗೂಡು ಮಾರುಕಟ್ಟೆ ಸಮೀಪದ ಆವರಣದಲ್ಲಿ ಸಮಾವೇಶ ನಡೆಯಲಿದೆ. ಶಾಸಕ ಪುಟ್ಟರಂಗಶೆಟ್ಟಿ ಪರ ಮತಯಾಚನೆ ಮಾಡಲು ಕೈ ಪಡೆ ಲಗ್ಗೆಯಿಡುತ್ತಿದೆ. ಬಿಜೆಪಿಯಿಂದ ವಿ. ಸೋಮಣ್ಣ ಸ್ಪರ್ಧಿಸಿರುವ ಕಾರಣ ಈ ಕ್ಷೇತ್ರವನ್ನು ಕಾಂಗ್ರೆಸ್ ಪ್ರತಿಷ್ಠೆಯಾಗಿ ಪರಿಗಣಿಸಿದೆ.

ಸೆ. 30ರಂದು ಭಾರತ್ ಜೋಡೋ ಯಾತ್ರೆಯನ್ನು ಗುಂಡ್ಲುಪೇಟೆಯಿಂದ ಪ್ರಾರಂಭಿಸಿದ್ದ ರಾಹುಲ್ ಗಾಂಧಿಯಿಂದ ಮತ್ತೊಮ್ಮೆ ಜಿಲ್ಲಾ ಪ್ರವಾಸ ನಡೆಯುತ್ತಿದೆ. ಹೆಲಿಕಾಪ್ಟರ್ ಮೂಲಕ ಜಿಲ್ಲೆಗೆ ಬರಲಿರುವ ಇಬ್ಬರೂ ನಾಯಕರು ಮಾಜಿ ಸಂಸದ, ದಿವಂಗತ ಆರ್.ಧ್ರುವನಾರಾಯಣ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ನಂತರ ರ್ಯಾಲಿ ಹಾಗೂ ಸಭೆ ನಡೆಯಲಿದೆ.

Exit mobile version