Site icon Vistara News

‘ನಾನೆಂದು ನಿಮ್ಮವನು, ನಿಮಗಾಗಿ ಬಂದವನು’; ವರುಣದಲ್ಲಿ ಸಿದ್ದು ಪರ ಶಿವಣ್ಣ, ರಮ್ಯಾ, ದುನಿಯಾ ವಿಜಯ್‌ ಪ್ರಚಾರ

Karnataka Election: Actor Shivaraj Kumar Campaigns In Varuna For Siddaramaiah

Karnataka Election: Actor Shivaraj Kumar Campaigns In Varuna For Siddaramaiah

ವರುಣ: ಸಿದ್ದರಾಮಯ್ಯ ಅವರು ಸ್ಪರ್ಧಿಸಿರುವ, ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಪ್ರತಿಷ್ಠೆಯ ಕಣವಾಗಿರುವ ವರುಣ ಕ್ಷೇತ್ರದಲ್ಲಿ ಸ್ಯಾಂಡಲ್‌ವುಡ್‌ ಸ್ಟಾರ್‌ಗಳು ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಅದರಲ್ಲೂ, ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌, ದುನಿಯಾ ವಿಜಯ್‌ ಹಾಗೂ ರಮ್ಯಾ ಅವರು ಪ್ರಚಾರ ಕೈಗೊಂಡಿದ್ದಾರೆ. ಇದರೊಂದಿಗೆ, ಸಿಎಂ ಬಸವರಾಜ ಬೊಮ್ಮಾಯಿ ಅವರ ಪರ ಕಿಚ್ಚ ಸುದೀಪ್ ಪ್ರಚಾರ ನಡೆಸಿದರೆ, ಮಾಜಿ ಸಿಎಂ ಪರ ಶಿವರಾಜ್‌ ಕುಮಾರ್‌ ಸೇರಿ ಹಲವರು ಪ್ರಚಾರ ಕೈಗೊಂಡಿದ್ದಾರೆ.

ತಾಂಡವಪುರದಲ್ಲಿ ಸಿದ್ದರಾಮಯ್ಯ ಪರ ಪ್ರಚಾರ ನಡೆಸಿದ ಶಿವರಾಜ್‌ ಕುಮಾರ್‌, ಹಾಡು ಹಾಡಿದರು. “ನಾನೆಂದು ನಿಮ್ಮವನು, ನಿಮಗಾಗಿ ಬಂದವನು” ಹಾಡು ಹಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಸ್ಯಾಂಡಲ್‌ವುಡ್‌ ಸ್ಟಾರ್‌ಗಳು ವರುಣಕ್ಕೆ ಆಗಮಿಸಿದ ಕಾರಣ ಪ್ರಚಾರ ಮತ್ತಷ್ಟು ಜೋರಾಗಿದೆ.

ಪ್ರಚಾರದ ವೇಳೆ ಮಾತನಾಡಿದ ಶಿವಣ್ಣ, “ಸಿದ್ದರಾಮಯ್ಯ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಾನು ಹೇಳುವುದು ಬೇಡ. ಎಲ್ಲ ನಿಮಗೇ ಗೊತ್ತಿದೆ. ಅಪ್ಪಾಜಿ ಯಾವಾಗಲೂ ನಮ್ಮ ಕಾಡಿನವರು ಎನ್ನುತ್ತಿದ್ದರು. ಅಪ್ಪಾಜಿ, ನಮ್ಮ ಜತೆ ಸಿದ್ದರಾಮಯ್ಯ ಅವರಿಗೆ ತುಂಬ ಒಡನಾಟ ಇದೆ. ಹಾಗಾಗಿ, ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿ” ಎಂದು ಮನವಿ ಮಾಡಿದರು. ಇದಕ್ಕೂ ಮೊದಲು, ವರುಣ ಕ್ಷೇತ್ರದ ಗೊದ್ದನಪುರಕ್ಕೆ ಶಿವಕುಮಾರ್‌ ಅವರು ಆಗಮಿಸುತ್ತಲೇ ಜನ ಅವರಿಗೆ ಪೈನಾಪಲ್‌ ಹಾರ ಹಾಕಿ ಸ್ವಾಗತಿಸಿದರು.

ಇದನ್ನೂ ಓದಿ: Karnataka Election 2023: ವರುಣದಲ್ಲಿ ಸಿದ್ದರಾಮಯ್ಯ ರೋಡ್‌ ಶೋ ಅಬ್ಬರ; ಮತ್ತೆ ಸಿಎಂ ಮಾತು

ಶಿವಣ್ಣಗೆ ಸಿದ್ದಣ್ಣ ಧನ್ಯವಾದ

‌ಪ್ರಚಾರ ಕೈಗೊಂಡ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್‌ ಅವರಿಗೆ ಸಿದ್ದರಾಮಯ್ಯ ಅವರು ಧನ್ಯವಾದ ತಿಳಿಸಿದ್ದಾರೆ. “ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರು ವರುಣಕ್ಕೆ ಬಂದು ರೋಡ್ ಶೋ ನಡೆಸಿ ನನ್ನ ಪರವಾಗಿ ಮತ ಕೇಳಿದ್ದು ನನಗೆ ಇನ್ನಷ್ಟು ಬಲ ತಂದಿದೆ. ಶಿವಣ್ಣ ಅವರ ಆಗಮನದಿಂದ ಡಾ.ರಾಜಕುಮಾರ್ ಅವರೇ ಬಂದು ನನಗೆ ಹರಸಿದಂತಾಯಿತು. ರಾಜ್ ಕುಟುಂಬಕ್ಕೆ ಧನ್ಯವಾದಗಳು” ಎಂದು ಟ್ವೀಟ್‌ ಮಾಡಿದ್ದಾರೆ.

Exit mobile version