ಬೆಂಗಳೂರು: ರಾಜರಾಜೇಶ್ವರಿನಗರ ಶಾಸಕ ಹಾಗೂ ಸಚಿವ ಮುನಿರತ್ನ ಅವರು ಕನ್ನಡಿಗರ ವಿರುದ್ಧ ತಮಿಳರನ್ನು ಎತ್ತಿಕಟ್ಟಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ ಆರೋಪಿಸಿದ್ದಾರೆ. ಮುನಿರತ್ನ ಅವರು ಮಾತನಾಡಿದ್ದಾರೆ ಎನ್ನಲಾದ ವಿಡಿಯೊವನ್ನೂ ಅವರು ಬಿಡುಗಡೆ ಮಾಡಿದ್ದಾರೆ.
ಸದಾಶಿವನಗರದ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರೇಶ್, ಕರ್ನಾಟಕ ಶಾಂತಿ ಪ್ರಿಯಾ ರಾಜ್ಯ. ಎಲೆಕ್ಷನ್ ಸಂದರ್ಭದಲ್ಲಿ ಗಲಾಟೆ, ಕೋಮು ಗಲಭೆ ಆಗಿಲ್ಲ. ಕನ್ನಡಿಗರು ಸ್ವಾಭಿಮಾನಗಳು. ಬೆಂಗಳೂರಿನಲ್ಲಿ ಅನೇಕ ಭಾಷಿಕರು ಇದ್ದಾರೆ. ತಮೀಳರು, ತೆಲುಗು ಸೇರಿದಂತೆ ಅನೇಕ ಭಾಷಿಕರು ಇದ್ದಾರೆ. ಎಂದೂ ಬಾಂಧವ್ಯಕ್ಕೆ ಬಂದಿಲ್ಲ. ಆದರೆ ಇದೀಗಸಚಿವ ಮುನಿರತ್ನ, ಕನ್ನಡಿಗರ ಮೇಲೆ ತಮಿಳರನ್ನು ಎತ್ತಿಕಟ್ಟಿದ್ದಾರೆ.
ಮಾರ್ಚ್ 19ನೇ ತಾರೀಖು ರಾತ್ರಿ 9:30-10 ಗಂಟೆಗೆ ಘಟನೆ ನಡೆದಿದೆ. ರಾಜರಾಜೇಶ್ವರಿ ನಗರ ಕ್ಷೇತ್ರದ ಜಾಲಹಳ್ಳಿ ವಾರ್ಡ್ನ ಖಾತಾ ನಗರದಲ್ಲಿ ಭಾಷಣ ಮಾಡಿದ್ದಾರೆ. ಆ ಪ್ರದೇಶದಲ್ಲಿ ತಮಿಳರು ಹೆಚ್ಚು ವಾಸ ಇದ್ದಾರೆ. ಯಾರೇ ಮತ ಕೇಳಲು ಬಂದರೂ, ಹೊಡೆಯಿರಿ ನಾನು ಇದ್ದೇನೆ, ಮುಂದೆ ನೋಡಿಕೊಳ್ಳುತ್ತೇನೆ ಎಂದಿದ್ದಾರೆ.
ಕನ್ನಡಿಗರ ಮೇಲೆ ತಮಿಳರನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ. ಒಬ್ಬ ಒಕ್ಕಲಿಗ ಮಹಿಳೆ ಮೇಲೆ ತಮಿಳರನ್ನು ಎತ್ತಿಕಟ್ಟಿದ್ದಾರೆ. ತಮಿಳರು ಕನ್ನಡಿಗರು ವಿಶ್ವಾಸದಿಂದ ಇದ್ದಾರೆ. ಮುನಿರತ್ನ ವ್ಯಾಪಾರಕ್ಕೆ ಬಂದವರು. ಪೊಲೀಸರ ಮುಂದೆಯೇ ಘಟನೆ ನಡೆದಿದೆ. ಸ್ವಯಂಚಾಲಿತವಾಗಿ ದೂರು ದಾಖಲು ಮಾಡಿಕೊಳ್ಳಬೇಕಿತ್ತು.
ಈ ಕುರಿತು ಸಿಎಂ ಬೊಮ್ಮಾಯಿ ಅವರಿಗೆ ಒತ್ತಾಯ ಮಾಡುತ್ತೇನೆ. ಕೂಡಲೇ ಅವರನ್ನು ಬಂಧಿಸಬೇಕು. ಹೊರಗಡೆ ಇದ್ದರೆ ಅಶಾಂತಿ ಸೃಷ್ಟಿ ಮಾಡುತ್ತಾರೆ ಎಂದರು.
ಈ ಕುರಿತು ಪೊಲೀಸ್ ಆಯುಕ್ತರಿಗೆ ರಾಜರಾಜೇಶ್ವರಿ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ದೂರು ನೀಡಿದ್ದಾರೆ. “ಯಾರಾದ್ರೂ ಒಳಗಡೆ ಬಂದ್ರೆ ಓಡಾಡಿಸಿಕೊಂಡು ಹೊಡೀರಿ. ಮಿಕ್ಕಿದ್ದು ನಾನು ನೋಡಿಕೊಳ್ತೀನಿ. ಯಾವ ತರಹ ಹೊಡೀಬೇಕು ಅಂದ್ರೆ ಅವರು ತಿರುಗಿ ನೋಡಬಾರದು. ಆ ತರಹ ಹೊಡೀರಿ. ಯಾರ್ಯಾರು ಹೊಡೀತೀರ ಕೈ ಎತ್ತಿ… ನಾಳೆ ನಮ್ಮದು.ಯಾವಾಗ ನಮ್ಮದು? ನಾಳೆ ಓಟ್ ಹಾಕುತ್ತೀರಲ್ಲ? ಆ ನಾಳೆ ನಮ್ಮದು” ಎಂದು ಮುನಿರತ್ನ ಹೇಳಿದ್ದಾರೆ ಎಂದು ಕುಸುಮಾ ದೂರಿನಲ್ಲಿ ತಿಳಿಸಿದ್ದಾರೆ.