Site icon Vistara News

Karnataka Election | ಬಾಂಬೇ ಬಾಯ್ಸ್‌ಗೆ 12 ಜನ ಹುಡುಗಿಯರನ್ನು ಸಪ್ಲೈ ಮಾಡಿದ್ದೇ ಸ್ಯಾಂಟ್ರೊ ರವಿ: HDK ಗಂಭೀರ ಆರೋಪ

HDK Santro ravi

ಬೆಂಗಳೂರು: ದಲಿತ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿ ವಂಚಿಸಿದ ಪ್ರಕರಣದಲ್ಲಿ ಆರೋಪಿ ಎಂದು ಗುರುತಿಸಲಾದ ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿ ಹೆಸರು ಕೇಳುತ್ತಿದ್ದಂತೆಯೇ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ (Karnataka Election) ಎದ್ದು ಕುಳಿತಿದ್ದಾರೆ!

ಬಹುಚರ್ಚಿತ ವ್ಯಕ್ತಿತ್ವ ಹೊಂದಿರುವ ಸ್ಯಾಂಟ್ರೋ ರವಿ ರಾಜ್ಯದ ಹಲವು ಪ್ರಮುಖ ರಾಜಕಾರಣಿಗಳ ಜತೆ ಸಂಬಂಧ ಹೊಂದಿರುವುದು, ಪೊಲೀಸ್‌ ಅಧಿಕಾರಿಗಳ ಜತೆ ಒನ್‌ ಟು ಒನ್‌ ಸಂಬಂಧ ಹೊಂದಿರುವುದಾಗಿ ರಾಜಾರೋಷವಾಗಿ ಹೇಳಿಕೊಂಡಿರುವುದು ಸುದ್ದಿಯಾಗುತ್ತಿರುವ ಬೆನ್ನಿಗೇ ಎಚ್‌.ಡಿ. ಕುಮಾರಸ್ವಾಮಿ ದೊಡ್ಡ ಬಾಂಬೊಂದನ್ನು ಸಿಡಿಸಿದ್ದಾರೆ.

೨೦೧೯ರಲ್ಲಿ ತನ್ನ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರ ಉರುಳಿಸಿದ ಎರಡೂ ಪಕ್ಷಗಳ ಶಾಸಕರು ಮುಂಬಯಿಯಲ್ಲಿದ್ದಾಗ ಅವರಿಗೆ ೧೨ ಜನ ಹುಡುಗಿಯರನ್ನು ಇದೇ ಸ್ಯಾಂಟ್ರೋ ರವಿ ಪೂರೈಕೆ ಮಾಡಿದ್ದ ಎಂಬ ಗಂಭೀರ ಆರೋಪವನ್ನು ಎಚ್‌.ಡಿ. ಕುಮಾರಸ್ವಾಮಿ ಮಾಡಿದ್ದಾರೆ.

ʻʻʻಈ ರಾಜ್ಯ ಬಿಜೆಪಿಯಿಂದ ಉಳಿಯಲು ಸಾಧ್ಯನಾʼʼ ಎಂದು ಪ್ರಶ್ನಿಸಿರುವ ಎಚ್‌.ಡಿ. ಕುಮಾರಸ್ವಾಮಿ ಅವರು, ಸ್ಯಾಂಟ್ರೋ ರವಿ ಜೊತೆ ಯಾವ ಮಂತ್ರಿ ಗಳ ಸಂಪರ್ಕ ಇಲ್ಲ ಅಂತಾ ಹೇಳಿ ಎಂದು ಸವಾಲು ಹಾಕಿದರು.

ʻʻಬಾಂಬೆಗೆ ಶಾಸಕರನ್ನು ಮೋಜು ಮಾಡಲಿಕ್ಕೆಂದು ಕರೆದುಕೊಂಡು ಹೋದ್ರಲ್ಲ.. ಅವರಿಗೆ ಇಲ್ಲಿಂದ 12 ಜನ ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋದ್ರಲ್ಲ. ಆ ಕೆಲಸ ಮಾಡಿದ್ದು ಈ ಸ್ಯಾಂಟ್ರೋ ರವಿನೇʼʼ ಎಂದು ಹೇಳಿದ ಅವರು, ಇದರ ಬಗ್ಗೆ ಸತ್ಯ ಹೊರಗೆ ಇಡ್ರೀರಾ ಬೊಮ್ಮಾಯಿ ಅವರೇ ಎಂದು ಸವಾಲು ಹಾಕಿದರು.

ʻʻನಾನು ಇಲ್ಲಿವರೆಗೂ ಬಾಯಿ ಮುಚ್ಚಿಕೊಂಡು ಇದ್ದೆ. ನಾನು ಹಿಟ್ ಅಂಡ್ ರನ್ ಅಲ್ಲ. ಇದು ಹಿಟ್‌ ಎಂಡ್‌ ರನ್‌ ಕೇಸಲ್ಲ. ಈ ಸ್ಯಾಂಟ್ರೋ ರವಿಯನ್ನು ಇಟ್ಟುಕೊಂಡು ಆ ಹೆಣ್ಣು ಮಕ್ಕಳನ್ನು ಮುಂಬಯಿಗೆ ಕರೆದುಕೊಂಡು ಹೋಗಿದ್ದೀರಲ್ಲ. ಇದರ ಬಗ್ಗೆ ತನಿಖೆ ಮಾಡಿಸಿರಿ ಬೊಮ್ಮಾಯಿ ಅವ್ರೇʼʼ ಎಂದು ಎಚ್‌ಡಿಕೆ ನೇರ ಸವಾಲು ಹಾಕಿದರು. ʻʻಬಿಜೆಪಿಯವ್ರಿಗೆ ಸ್ಯಾಂಟ್ರೋ, ಆಡಿ, ಜಾಗ್ವಾರ್ ಥರದವರೇ ಕಾಣ್ತಾರೆʼʼ ಎಂದು ರೌಡಿಗಳ ಪಕ್ಷ ಸೇರ್ಪಡೆಯನ್ನು ಪರೋಕ್ಷವಾಗಿ ಕೆಣಕಿದರು.

ಎಷ್ಟು ಡ್ರಗ್ಸ್‌ ಸಪ್ಲೈ ಆಯ್ತು?
ʻʻಹೊಸ ವರ್ಷಾಚರಣೆ ಆಯ್ತಲ್ಲ. ಆಗ ಎಷ್ಟು ಡ್ರಗ್ಸ್ ಸಪ್ಲೈ ಆಗಿದೆ ಹೇಳಿʼʼ ಎಂದೂ ಸವಾಲು ಹಾಕಿರುವ ಎಚ್‌.ಡಿ.ಕೆ., ಇಲ್ಲಿ ಆಡಳಿತ ನಡೆಸುತ್ತಿರುವವರು ಪೊಲೀಸರನ್ನು ಮಾರಾಟದ ವಸ್ತುಗಳಾಗಿ ಮಾಡಿಕೊಂಡಿದ್ಸಾರೆ ಎಂದರು. ಇಂಥವರಿಂದ ರಾಜ್ಯದ ರಕ್ಷಣೆ ಸಾಧ್ಯನಾ? ಏನು ಅಮಿತ್‌ ಶಾ ಬಂದು ಈ ರಾಜ್ಯ ರಕ್ಷಣೆ ಮಾಡ್ತಾರಾ ಎಂದು ಜೆಡಿಎಸ್‌ನ್ನು ಕೌಟುಂಬಿಕ ಎಟಿಎಂ ಎಂದು ಕೆಣಕಿದ ಶಾ ಅವರನ್ನೂ ಬಿಡದೆ ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರಿಗೆ ಈಗ ಗೊತ್ತಾಗಿದೆ!
ಸಿಎಂ ಬೊಮ್ಮಾಯಿ ಅವರು ಪ್ರಧಾನಿ ಮೋದಿ ಮುಂದೆ ನಾಯಿ ಮರಿ ಥರ ಆಡ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಧ್ವನಿಗೂಡಿಸಿದ ಅವರು, ಅವರು ಹಾಗೆ ಅಂತಾ ಸಿದ್ದರಾಮಯ್ಯಗೆ ಇವಾಗ ಗೊತ್ತಾಗಿದೆ. ನಾನು ಯಾವತ್ತೋ ಈ ಮಾತನ್ನು ಹೇಳಿದ್ದೇನೆ ಎಂದು ಲೇವಡಿ ಮಾಡಿದರು.

ಇದನ್ನೂ ಓದಿ | Sexual harrassement | ದಲಿತ ಮಹಿಳೆ ಮೇಲೆ ಅತ್ಯಾಚಾರ: ಸ್ಯಾಂಟ್ರೋ ರವಿ ಮೇಲೆ ಕೇಸ್‌, ರಾಜಕೀಯ ನಾಯಕರ ಆಪ್ತನೇ ಇವನು?

Exit mobile version