Site icon Vistara News

Karnataka Election result 2023: ಕೊಡಗಿನ ಬಿಜೆಪಿ ಭದ್ರಕೋಟೆ ಛಿದ್ರ; ಎರಡೂ ಕಡೆ ಕಾಂಗ್ರೆಸ್‌

Karnataka Election result Kodagu

ಬೆಂಗಳೂರು: ಬಿಜೆಪಿಯ ಭದ್ರಕೋಟೆ ಎಂದೇ ಜನಜನಿತವಾಗಿದ್ದ, ಗ್ರಾಮ ಪಂಚಾಯತ್‌ನಿಂದ ಸಂಸತ್‌ವರೆಗೆ ಪ್ರತಿಹಂತದಲ್ಲೂ ಕಾಂಗ್ರೆಸನ್ನು ಸೋಲಿಸಿ ಬೀಗಿದ್ದ ಕೊಡಗಿನ ಜನರು ಈ ಬಾರಿ ಬಿಜೆಪಿಗೆ ತಡೆದುಕೊಳ್ಳಲಾಗದ ಆಘಾತ (Karnataka Election 2023) ನೀಡಿದ್ದಾರೆ. ಕಾಂಗ್ರೆಸ್‌ ಎರಡೂ ಕಡೆ ಗೆಲುವಿನ ನಗೆ ಬೀರಿದೆ.

ಮಡಿಕೇರಿ: ಅಪ್ಪಚ್ಚು ರಂಜನ್‌ ಚಕ್ರಾಧಿಪತ್ಯ ಅಂತ್ಯ, ಮಂಥರ್‌ ಗೌಡ ಗೆಲುವು

ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಡಾ. ಮಂಥರ್‌ ಗೌಡ ಅವರು ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಹಾಲಿ ಶಾಸಕ ಅಪ್ಪಚ್ಚು ರಂಜನ್‌ ವಿರುದ್ಧ ಜಯ ಸಾಧಿಸಿದರು. ಅವರಿಬ್ಬರ ನಡುವಿನ ಅಂತರ 8000ಕ್ಕಿಂತಲೂ ಹೆಚ್ಚಿದೆ. 2018ರ ಚುನಾವಣೆಯಲ್ಲಿ ಬಿಜೆಪಿಯ ಅಪ್ಪಚ್ಚು ರಂಜನ್‌ ಅವರು 70,631 ಮತ ಪಡೆದು, ಜೆಡಿಎಸ್‌ನ ಜೀವಿಜಯ ಅವರನ್ನು 16,015 ಮತಗಳಿಂದ ಸೋಲಿಸಿದ್ದರು. ಈಗ ಗೆಲುವು ಸಾಧಿಸಿರುವ ಡಾ. ಮಂಥರ್‌ ಗೌಡ, ಅರಕಲಗೂಡಿನಲ್ಲಿ ಜೆಡಿಎಸ್‌ನಿಂದ ಗೆದ್ದಿರುವ ಎ. ಮಂಜು ಅವರ ಪುತ್ರ.

ಒಕ್ಕಲಿಗ ಮತ್ತು ಲಿಂಗಾಯತ ಪ್ರಾಬಲ್ಯ ಹೊಂದಿರುವ ಈ ಕ್ಷೇತ್ರದಲ್ಲಿ ಕಡಿಮೆ ಜನಸಂಖ್ಯೆ ಹೊಂದಿರುವ ಕೊಡವ ಸಮುದಾಯದ ಶಾಸಕ ಅಪ್ಪಚ್ಚು ರಂಜನ್, ನಾಲ್ಕು ಬಾರಿ ಶಾಸಕರಾಗಿದ್ದರು.

ವಿರಾಜಪೇಟೆಯಲ್ಲಿ ಮಾಜಿ ಸ್ಪೀಕರ್ ಬೋಪಯ್ಯಗೆ ಸೋಲು, ಕಾಂಗ್ರೆಸ್​ಗೆ ಜಯ

ಕೌಟುಂಬಿಕ ಹಾಕಿ ಪಂದ್ಯಾವಳಿ ಮೂಲಕ ಪ್ರಖ್ಯಾತಿ ಪಡೆದಿರುವ ಪ್ರದೇಶವಾದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶ ಮೂಡಿ ಬಂದಿದೆ. ಬಿಜೆಪಿಯ ಭದ್ರಕೊಟೆಯಲ್ಲಿ ಕೈ ಪಕ್ಷ ಅರಳಿದೆ. ಮಾಜಿ ಸ್ಪೀಕರ್​ ಕೆ. ಜಿ ಬೋಪಯ್ಯ ಅವರನ್ನು ಕಾಂಗ್ರೆಸ್​ ಎ. ಎಸ್​ ಪೊನ್ನಣ್ಣ ಸೋಲಿಸಿದ್ದಾರೆ. 2018ರ ಚುನಾವಣೆಯಲ್ಲಿ ಕೆ.ಜಿ ಬೋಪಯ್ಯ (77944) ಅವರು ಅರುಣ್​ ಮಾಚಯ್ಯ ( 64591 ಮತಗಳು) ಬೋಪಯ್ಯ 13,359 ಮತಗಳಿಂದ ಅಂತರದಿಂದ ಗೆಲುವು ಸಾಧಿಸಿದ್ದರು.

ಹಾಲಿ ಬಿಜೆಪಿಯ ಭದ್ರ ಕೋಟೆಯಾಗಿರುವ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಆರಂಭದ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಪಾರುಪತ್ಯ ಮೆರೆದಿತ್ತು. ಆದರೆ, ಕ್ಷೇತ್ರ ಮರುವಿಂಗಡನೆ ಕಾರಣದಿಂದ ಮೂಲ ಮಡಿಕೇರಿ ಕ್ಷೇತ್ರದಲ್ಲೊಮ್ಮೆ ಗೆದ್ದಿದ್ದ ಮಾಜಿ ಸ್ಪೀಕರ್ ಕೆ ಜೆ ಬೋಪಯ್ಯ ವಿರಾಜಪೇಟಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವಿನ ಅಭಿಯಾನ ಮುಂದುರಿಸಿದ್ದರು 2008ರಿಂದ 2018 ಚುನಾವಣೆವರೆಗೂ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು.

1957ರಲ್ಲಿ ವಿಧಾನಸಭಾ ಕ್ಷೇತ್ರವಾಗಿ ರಚನೆಯಾದ ಆರಂಭದ ಮೊದಲೆರಡು ಚುನಾವಣೆಗಳಲ್ಲಿ ಸಾಮಾನ್ಯ ಕ್ಷೇತ್ರವಾಗಿದ್ದ ವಿರಾಜಪೇಟೆ ಕ್ಷೇತ್ರ, 1967ರಿಂದ 2008ರ ವರೆಗೆ ಮೀಸಲು(ಎಸ್ಟಿ) ಕ್ಷೇತ್ರವಾಗಿತ್ತು. ಕ್ಷೇತ್ರ ಮರುವಿಂಗಡಣೆ ಬಳಿಕ ಹಿಂದಿದ್ದ ಮಡಿಕೇರಿ ಕ್ಷೇತ್ರದ ಕೆಲ ಭಾಗವನ್ನು ಸೇರಿಸಿಕೊಂಡು ಸಾಮಾನ್ಯ ಕ್ಷೇತ್ರವಾಗಿ ಬದಲಾಯಿತು. ಈ ಬದಲಾವಣೆ ಬಳಿಕ ಇಲ್ಲಿ ಬಿಜೆಪಿ ಪ್ರಬಲವಾಗಿದೆ. ಆದರೆ, ಈ ಬಾರಿ ಫಲಿತಾಂಶ ಫುಲ್‌ ಉಲ್ಟಾ ಆಗಿದೆ.

ಕಾಂಗ್ರೆಸ್‌ ಇನ್ನು ಮುಂದೆ ಇಲ್ಲಿ ಗೆಲುವು ಸಾಧಿಸಲು ಸಾಧ್ಯವೇ ಇಲ್ಲ ಎನ್ನುವಷ್ಟು ಪ್ರಭುತ್ವ ಸಾಧಿಸಿದ್ದ ಬಿಜೆಪಿ ಏಕಾಏಕಿಯಾಗಿ ಹಿನ್ನಡೆ ಅನುಭವಿಸಿದೆ. ಇದು ಕಾಂಗ್ರೆಸ್‌ಗೆ ದೊಡ್ಡ ಮಟ್ಟದ ಟಾನಿಕ್‌ ಆಗಿದೆ. ಪಕ್ಕಾ ಬಿಜೆಪಿ ಮತದಾರರು ಎಂದು ಹೇಳಲಾಗಿದ್ದ ಇಲ್ಲಿನ ಜನ ಒಮ್ಮಿಂದೊಮ್ಮೆಗೇ ಬದಲಾಗಿದ್ದು ಹೇಗೆ ಎನ್ನುವುದು ಕುತೂಹಲಕಾರಿಯಾಗಿದೆ.

ಇದನ್ನೂ ಓದಿ : Karnataka Election Results Live Updates: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಬೆಳವಣಿಗೆ

Exit mobile version