Site icon Vistara News

Karnataka Election : ಹಾಸನದ ಜನರಿಗೆ ಬುದ್ಧಿ ಇಲ್ಲ ಅಂದ್ರಾ ಪ್ರೀತಂ ಗೌಡ; ಜೆಡಿಎಸ್‌ ವೈರಲ್‌ ಮಾಡಿದ ವಿಡಿಯೊದಲ್ಲೇನಿದೆ?

BJP MLA Preetham Gowda video goes viral.

ಹಾಸನ: ಹಾಸನದ ಬಿಜೆಪಿ ಶಾಸಕರಾಗಿರುವ ಜೆ. ಪ್ರೀತಂ ಗೌಡ (J Preetam Gowda) ಅವರು ʻʻಹಾಸನದ ಜನರಿಗೆ ಬುದ್ಧಿ ಇಲ್ಲʼ ಎಂದು ಹೇಳಿದ್ದಾರೆನ್ನಲಾದ ಒಂದು ವಿಡಿಯೊವನ್ನು ಜೆಡಿಎಸ್‌ ವೈರಲ್‌ ಮಾಡಿದ್ದು ಎಲ್ಲೆಡೆ ಸದ್ದು ಮಾಡುತ್ತಿದೆ. ವಿಧಾನಸಭಾ ಚುನಾವಣೆಗೆ (Karnataka Election) ಮುನ್ನ ಈ ವಿಡಿಯೊ ಬಿಡುಗಡೆ ಮಾಡುವ ಮೂಲಕ ಶಾಸಕರಿಗೆ ಮುಜುಗರ ಉಂಟು ಮಾಡಲು ಪ್ರಯತ್ನಿಸಲಾಗಿದೆ.

ಹಾಸನದಲ್ಲಿ ನಡೆದಿದ್ದ ಕರಾವಳಿ ಮಿತ್ರ ಮಂಡಳಿ ಸಭೆಯಲ್ಲಿ ಶಾಸಕರು ಮಾತನಾಡಿದ್ದಾರೆನ್ನಲಾದ ವಿಡಿಯೊ ಇದು. ಜೆಡಿಎಸ್ ಹಾಸನ ಎಂಬ ಫೇಸ್ ಬುಕ್ ಪೇಜ್‌ನಲ್ಲಿ ವಿಡಿಯೊ ಅಪ್ಲೋಡ್ ಮಾಡಲಾಗಿದೆ. ʻʻಹಾಸನದಲ್ಲಿ ನಿಂತು ಕರಾವಳಿ ಜನರೆದುರು ಹಾಸನದವರಿಗೆ ಬುದ್ದಿ ಕಮ್ಮಿ ಎನ್ನೋ ನಿಮ್ಮ ನಾಲಗೆ.. ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಜನ್ಮತಾಳಿದ ಊರನ್ನೇ ಶಾಸಕರು ಅವಮಾನಿಸಿದ್ದಾರೆಂದು ಟೀಕಿಸಲಾಗಿದೆ.

ಏನಿದೆ ವಿಡಿಯೊದಲ್ಲಿ? ಪ್ರೀತಮ್‌ ಗೌಡರು ಹೇಳಿದ್ದೇನು?

ʻʻನಮ್ಮ‌ ತಂದೆ, ತಾಯಿ ಶಿಕ್ಷಕರು ಹೇಳೋರು ಹಾಸನದ ಜನ ಒಡ್ಡ ಜನಗಳು, ಸ್ವಲ್ಪ ಬುದ್ಧಿ ಕಮ್ಮಿ ಎನ್ನೋರು. ಕಂಪ್ಯಾರಿಸನ್‌ ಮಾಡಬೇಕು ಅಂದ್ರೆ ಮಂಗಳೂರಿನವರನ್ನು ನೋಡಿ ಬುದ್ಧಿ ಕಲೀರಿ ಅನ್ನೋರುʼʼ ಎಂದು ಕರಾವಳಿ ಮಿತ್ರ ಮಂಡಳಿ ಸಭೆಯಲ್ಲಿ ಹೇಳಿದ್ದಾರೆ ಪ್ರೀತಂ ಗೌಡ.

ʻʻಕರಾವಳಿ ಜನರಲ್ಲಿ ಕೇಳಿಕೊಳ್ತೇನೆ, ನೀವು ಹಾಸನದವರ ಜೊತೆ ಸೇರಿ ಹಾಸನದವರ ರೀತಿ ಆಗಬೇಡಿ. ಹಾಸನದವರನ್ನು ಮಂಗಳೂರು ಜನರ ರೀತಿ ಮಾಡಿʼʼ ಎಂದು ಭಾಷಣ ಮಾಡಿದ್ದರು ಶಾಸಕರು.

ʻʻಕಾಂತಾರ ಮೂವಿ ಬಂದಮೇಲೆ ಕರಾವಳಿ ಇಡೀ ದೇಶದಲ್ಲಿ ಖ್ಯಾತಿ ಆಗಿದೆ. ಕರಾವಳಿ ಕೀರ್ತಿ ಉತ್ತುಂಗಕ್ಕೆ ಹೋಗಿದೆ. ಕರಾವಳಿಯ ಅಭಿವೃದ್ಧಿಯನ್ನು ನನ್ನ ಆತ್ಮೀಯ ಗೆಳೆಯ ರಿಷಬ್ ಪರಿಚಯಿಸಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆʼʼ ಎಂದಿರುವ ಅವರು, ʻʻಒಂದು ವಿಚಾರವನ್ನು ಜನರಿಗೆ ತಲುಪಲು ಸಾಕಷ್ಟು ಸಮಯ ಸಂದರ್ಭ ಇರುತ್ತೆ. ಬೇರೆ ಬೇರೆ ಕಾರಣಗಳಿಂದ ಕರಾವಳಿ ತನ್ನ ಅಸ್ತಿತ್ವವನ್ಮು ಜಗತ್ತಿಗೆ ತೋರಿಸಿದೆʼʼ ಎಂದಿದ್ದಾರೆ.

ʻʻಇತ್ತೀಚಿನ ದಿನಗಳ ಮಕ್ಕಳಿಗೆ ಈ ಜನರೇಷನ್ ಜನರಿಗೆ ಕರಾವಳಿ ಸಂಸ್ಕೃತಿ ಸಂಸ್ಕಾರ ತಿಳಿಸೋ ಉತ್ತಮ ಪ್ರಯತ್ನ ಕಾಂತಾರʼʼ ಎಂದು ಕೊಂಡಾಡಿದ್ದಾರೆ ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ.

ಹಾಸನದ ಜನರು ದಡ್ಡರು ಎಂದು ಪ್ರೀತಂ ಗೌಡ ಅವರು ಹೇಳಿದ್ದನ್ನೇ ಪ್ರಧಾನವಾಗಿಟ್ಟುಕೊಂಡು ಚುನಾವಣೆಯ ಸಮಯದಲ್ಲಿ ಜೆಡಿಎಸ್‌ ವಾಗ್ಬಾಣ ಬಿಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಅಪ್ಲೋಡ್ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ. ಇದು ಯಾವ ರೀತಿ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಾಗಿದೆ.

ಹಾಸನ ವಿಧಾನಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ನಡುವೆ ಪ್ರಬಲ ಪೈಪೋಟಿ ಇದ್ದು, ಸಣ್ಣ ಸಣ್ಣ ವಿಚಾರಗಳೂ ಕೂಡಾ ಪ್ರಮುಖವಾಗುತ್ತವೆ. ಇಲ್ಲಿ ಹಾಲಿ ಶಾಸಕ ಪ್ರೀತಂ ಗೌಡ ಅವರಿಗೆ ಜೆಡಿಎಸ್‌ನಿಂದ ಎಚ್‌.ಪಿ. ಸ್ವರೂಪ್‌ ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ.

ಇದನ್ನೂ ಓದಿ : Karnataka Election : ಮೋದಿ, ಶಾ, ಪ್ರಿಯಾಂಕಾ ಗಾಂಧಿ ಆಟ ಇಲ್ಲಿ ನಡೆಯಲ್ಲ; ಕುಮಾರಸ್ವಾಮಿ

karnataka-election: Viral video Shows BJP MLA preetam gowda quoting hasana people as not so intelligent

Exit mobile version